AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮತ್ತಷ್ಟು ಕ್ಷೀಣಿಸಿದ ಮುಂಗಾರು: ಕರ್ನಾಟಕದ ಡ್ಯಾಂಗಳ ಒಳ ಹರಿವಿನಲ್ಲಿ ಭಾರಿ ಏರುಪೇರು!

ರಾಜ್ಯದಲ್ಲಿ ಮುಂಗಾರು ಮಳೆ ಕ್ಷೀಣಿಸಿದ ಪರಿಣಾಮ ಕೆಆರ್‌ಎಸ್ ಸೇರಿದಂತೆ ಪ್ರಮುಖ ಜಲಾಶಯಗಳ ಒಳಹರಿವಿನಲ್ಲಿ ಇಳಿಕೆಯಾಗಿದೆ. ಒಳಹರಿವು ಕಡಿಮೆಯಿದ್ದರೂ ತಮಿಳುನಾಡಿಗೆ ನೀರು ಹರಿಸುತ್ತಿರುವುದರಿಂದ ಕೆಆರ್‌ಎಸ್ ಡ್ಯಾಂ ನೀರಿನ ಮಟ್ಟ ಕುಸಿಯುತ್ತಿದೆ. ರಾಜ್ಯದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಸಂಗ್ರಹ ಪ್ರಮಾಣದ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ.

ಮತ್ತಷ್ಟು ಕ್ಷೀಣಿಸಿದ ಮುಂಗಾರು: ಕರ್ನಾಟಕದ ಡ್ಯಾಂಗಳ ಒಳ ಹರಿವಿನಲ್ಲಿ ಭಾರಿ ಏರುಪೇರು!
ಕೆಆರ್​​ಎಸ್​​ ಜಲಾಶಯImage Credit source: PTI
ಪ್ರಸನ್ನ ಹೆಗಡೆ
|

Updated on:Sep 03, 2026 | 12:06 PM

Share

ಮುಖ್ಯಾಂಶಗಳು

  • ರಾಜ್ಯದಲ್ಲಿ ಮುಂಗಾರು ಮಳೆ ಅಭಾವದ ಎಫೆಕ್ಟ್​​
  • ಡ್ಯಾಂಗಳ ಒಳ ಹರಿವಿನ ಪ್ರಮಾಣದಲ್ಲಿ ಏರುಪೇರು
  • ಈ ನಡುವೆಯೂ ತಮಿಳುನಾಡಿಗೆ ಹರಿಯುತ್ತಿದೆ ನೀರು

ಬೆಂಗಳೂರು, ಸೆಪ್ಟೆಂಬರ್​​ 03: ಕರ್ನಾಟಕದಾದ್ಯಂತ ಮುಂಗಾರು ಮಳೆಯ ಆರ್ಭಟ ಕ್ಷೀಣಿಸಿದ ಪರಿಣಾಮ ರಾಜ್ಯದ ಪ್ರಮುಖ ಜಲಾಶಯಗಳ ಒಳಹರಿವಿನಲ್ಲಿಯೂ ವ್ಯತ್ಯಾಸ ಕಂಡುಬಂದಿದೆ. ಮುಂದಿನ 7 ದಿನಗಳ ಕಾಲ ರಾಜ್ಯದ ಅಲ್ಲಲ್ಲಿ ಮಳೆಯ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆಯಾದರೂ ಡ್ಯಾಂಗಳ ನೀರಿನ ಮಟ್ಟದ ಮೇಲೆ ಅದರ ಪರಿಣಾಮ ಅಷ್ಟೇನೂ ಆಗಲ್ಲ ಎಂದು ಅಂದಾಜಿಸಲಾಗಿದೆ. ಕರ್ನಾಟಕ ರಾಜ್ಯದ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಅಲ್ಲಲ್ಲಿ ಜೋರಾದ ಗಾಳಿಯೊಂದಿಗೆ ಹಗುರದಿಂದ ಸಾಧಾರಣ ಮಳೆಯ ಎಚ್ಚರಿಕೆ ನೀಡಲಾಗಿದೆ.

ಪ್ರಮುಖ ಡ್ಯಾಂಗಳ ನೀರಿನ ಮಟ್ಟ

ಕೆಆರ್​​ಎಸ್​​ ಜಲಾಶಯ

ಮಂಡ್ಯದಲ್ಲಿರುವ ಕೆಆರ್​​ಎಸ್​​ ಜಲಾಶಯಕ್ಕೆ ಒಳಹರಿವು ತಗ್ಗಿರುವ ನಡುವೆಯೂ ಡ್ಯಾಂ ಹೊರಹರಿವಿನಲ್ಲಿ ಮತ್ತೆ ಏರಿಕೆ ಕಂಡುಬಂದಿದೆ. ಎರಡು ದಿನಗಳ ಹಿಂದೆ 7,697 ಕ್ಯೂಸೆಕ್ ಇದ್ದ ಹೊರಹರಿವು ಇಂದು 9,253 ಕ್ಯೂಸೆಕ್‌ಗೆ ಹೆಚ್ಚಿದೆ. ಆ ಮೂಲಕ ತಮಿಳುನಾಡಿಗೆ ಕೆಆರ್‌ಎಸ್ ಡ್ಯಾಂನಿಂದ ಅಧಿಕ ಪ್ರಮಾಣದ ನೀರು ಬಿಡುಗಡೆ ಮಾಡಲಾಗ್ತಿದೆ. ಡ್ಯಾಂಗೆ ಕೇವಲ 3,028 ಕ್ಯೂಸೆಕ್ ಒಳಹರಿವಿದ್ದು, ಹೇಮಾವತಿ ಜಲಾಶಯದಿಂದ ನೀರನ್ನು ಕೆಆರ್​​ಎಸ್​​ ಡ್ಯಾಂಗೆ ಬಿಡಿಸಿಕೊಂಡು ತಮಿಳುನಾಡಿಗೆ ನೀರುಹರಿಸಲಾಗ್ತಿದೆ. 111 ಅಡಿಗೆ ತಲುಪಿದ್ದ ಕೆಆರ್‌ಎಸ್ ಡ್ಯಾಂ ಮಟ್ಟ ಇದೀಗ 108.76 ಅಡಿಗೆ ಕುಸಿತ‌ ಕಂಡಿದ್ದು, ಜಲಾಶಯದಲ್ಲಿ ಸದ್ಯ 30.493 ಟಿಎಂಸಿ ನೀರು ಸಂಗ್ರಹವಿದೆ.

ಇದನ್ನೂ ಓದಿ: ಕಬಿನಿ ಜಲಾಶಯಕ್ಕೆ ರೈತರ ಮುತ್ತಿಗೆ: ತಮಿಳುನಾಡಿಗೆ ನೀರು ಹರಿಸುವುದಕ್ಕೆ ತೀವ್ರ ಆಕ್ರೋಶ!

ಆಲಮಟ್ಟಿ ಡ್ಯಾಂ

ಗರಿಷ್ಟ ಮಟ್ಟ 519.60 ಮೀಟರ್ ಸಾಮರ್ಥ್ಯ ಹೊಂದಿರುವ ವಿಜಯಪುರ ಜಿಲ್ಲೆ ನಿಡಗುಂದಿ ತಾಲೂಕಿನ ಆಲಮಟ್ಟಿ ಡ್ಯಾಂನಲ್ಲಿ 519.59 ಮೀಟರ್ ನೀರಿನ ಸಂಗ್ರಹವಿದ್ದು, 22,009 ಕ್ಯೂಸೆಕ್ ಒಳಹರಿವು ಮತ್ತು 19,984 ಕ್ಯೂಸೆಕ್​​ ಹೊರ ಹರಿವನ್ನು ಜಲಾಶಯ ಹೊಂದಿದೆ.

ಬಸವಸಾಗರ ಅಣೆಕಟ್ಟೆ

ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರ ಬಳಿಯ ಬಸವಸಾಗರ ಜಲಾಶಯದಲ್ಲಿ ಇಂದು 492.23 ಮೀಟರ್ ನೀರಿನ ಸಂಗ್ರಹವಿದ್ದು, ಡ್ಯಾಂನ ಗರಿಷ್ಠ ಸಾಮರ್ಥ್ಯ 492.25 ಮೀಟರ್ ಆಗಿದೆ. ಜಲಾಶಯದ ಒಳಹರಿವು 18,000 ಕ್ಯೂಸೆಕ್ ಇದ್ದರೆ ಹೊರ ಹರಿವು 18,000 ಕ್ಯೂಸೆಕ್ ಇದೆ.

ಹೇಮಾವತಿ ಜಲಾಶಯ

ಹಾಸನ ತಾಲೂಕಿನ ಗೊರೂರು ಸಮೀಪದ ಹೇಮಾವತಿ ಜಲಾಶಯ ಗರಿಷ್ಠ 2922 ಅಡಿ(37 TMC) ಸಾಮರ್ಥ್ಯ ಹೊಂದಿದ್ದು, ಇಂದಿನ ನೀರಿನ ಸಂಗ್ರಯ 2911.20 ಅಡಿ (27.598TMC) ಇದೆ. 4220 ಕ್ಯೂಸೆಕ್ ಒಳಹರಿವು ಮತ್ತು 4000 ಕ್ಯೂಸೆಕ್ ಹೊರ ಹರಿವನ್ನು ಡ್ಯಾಂ ಹೊಂದಿದೆ.

ಕಬಿನಿ ಡ್ಯಾಂ

ಗರಿಷ್ಠ 84.00 ಅಡಿ ಸಾಮರ್ಥ್ಯ ಹೊಂದಿರುವ ಮೈಸೂರು ಜಿಲ್ಲೆಯಲ್ಲಿರುವ ಕಬಿನಿ ಜಲಾಶಯದಲ್ಲಿ ಇಂದು 69.73 ಅಡಿ ನೀರಿನ ಸಂಗ್ರಹವಿದೆ. ಜಲಾಶಯಕ್ಕೆ 3,526 ಕ್ಯೂಸೆಕ್ ಒಳಹರಿವಿದ್ದರೆ, ನದಿಗೆ ಹೊರಹರಿವು 3,000 ಕ್ಯೂಸೆಕ್ ಇದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 12:01 pm, Thu, 3 September 26

Follow Us