‘ಗೃಹಸಚಿವರೇ ನೆಟ್ಟಗಿಲ್ಲ’ ಎಂದು ಎಕ್ಸ್ ಪೋಸ್ಟ್: ದಾಖಲಾಯ್ತು ಸುಮೋಟೋ ಕೇಸ್
ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರಿಗೆ ಸೇರಿದ ಕಾಲೇಜಿನಲ್ಲಿ ನಡೆದ ವಿವಾದಾತ್ಮಕ ಘಟನೆಗೆ ಸಂಬಂಧಿಸಿದಂತೆ 'ಹಿಂದೂ ಜಾಗೃತನಾಗು' ಎಕ್ಸ್ ಖಾತೆಯ ಪೋಸ್ಟ್ ವಿರುದ್ಧ ಬೆಂಗಳೂರು ಸೈಬರ್ ಕ್ರೈಂ ಪೊಲೀಸರು ಸುಮೋಟೋ ಕೇಸ್ ದಾಖಲಿಸಿದ್ದಾರೆ. ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆರೋಪದ ಮೇಲೆ ಐಟಿ ಆ್ಯಕ್ಟ್ ಹಾಗೂ BNS U/S 299 ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಪ್ರೊಫೆಸರ್ ವಿದ್ಯಾರ್ಥಿನಿಗೆ ಪ್ರಪೋಸ್ ಮಾಡಿದ ಘಟನೆ ಕುರಿತು ಪೋಸ್ಟ್ ಮಾಡಲಾಗಿತ್ತು.

ಬೆಂಗಳೂರು, ಮಾರ್ಚ್ 31: ಗೃಹಸಚಿವರೇ ನೆಟ್ಟಗಿಲ್ಲ, ಅವರ ಕಾಲೇಜಿನ ಪ್ರೊಫೆಸರ್ ನೆಟ್ಟಗಿರ್ತಾನಾ? ಎಂದು ಎಕ್ಸ್ ಖಾತೆ ಮೂಲಕ ಗೃಹ ಸಚಿವ ಡಾ. ಜಿ. ಪರಮೆಶ್ವರ್ ಕುರಿತು ಆಕ್ಷೇಪಾರ್ಹ ಪೋಸ್ಟ್ ಸಂಬಂಧ ಬೆಂಗಳೂರಿನ ಸೈಬರ್ ಕ್ರೈಂ ಠಾಣೆಯಲ್ಲಿ ಸುಮೋಟೋ ಕೇಸ್ ದಾಖಲಾಗಿದೆ. ಹಿಂದೂ ಜಾಗೃತನಾಗು ಎಂಬ ಎಕ್ಸ್ ಖಾತೆಯಲ್ಲಿ ಈ ಆಕ್ಷೇಪಾರ್ಹ ಪೋಸ್ಟ್ ಮಾಡಲಾಗಿದ್ದು, ಉದ್ದೇಶಪೂರ್ವಕ ದ್ವೇಷ ಭಾವನೆ ಮೂಡಿಸುವ ಆರೋಪ ಸಂಬಂಧ ಐಟಿ ಆ್ಯಕ್ಟ್ ಹಾಗೂ BNS U/S 299ರಡಿ ಪ್ರಕರಣ ದಾಖಲಾಗಿದೆ. ಹಿಂಮದೂ ಮತ್ತು ಮುಸ್ಲಿಂ ಧರ್ಮದವರ ಭಾವನೆಗಳಿಗೆ ನಿಂದನೆ ಆರೋಪವೂ ಕೇಳಿಬಂದಿದೆ.
ಎಕ್ಸ್ ಪೋಸ್ಟ್ನಲ್ಲಿ ಏನಿದೆ?
ಗೃಹಮಂತ್ರಿಗಳೇ ನೆಟ್ಟಗಿಲ್ಲ ಇನ್ನು ಅವರ ಕಾಲೇಜಿನ ಪ್ರೊಪೆಸರ್ ನೆಟ್ಟಗೆ ಇರ್ತಾನಾ ?pic.twitter.com/gXzJ52jtnU
— 🚩ಸಭ್ಯಸ್ಥ 🚩 ( ಹಿಂದೂ ಜಾಗ್ರತನಾಗು )🚩 (@sabhyastha) March 26, 2026
ಗೃಹಮಂತ್ರಿಗಳೇ ನೆಟ್ಟಗಿಲ್ಲ, ಇನ್ನು ಅವರ ಕಾಲೇಜಿನ ಪ್ರೊಪೆಸರ್ ನೆಟ್ಟಗೆ ಇರ್ತಾನಾ? ಎಂಬ ಶೀರ್ಷಿಕೆ ಸಮೇತ ಹಿಂದೂ ಜಾಗೃತನಾಗು ಎಂಬ ಎಕ್ಸ್ ಖಾತೆಯಲ್ಲಿ ವಿಡಿಯೋ ಸಮೇತ ಪೋಸ್ಟ್ ಒಂದನ್ನು ಮಾಡಲಾಗಿದೆ. ಮೆಡಿಕಲ್ ಕಾಲೇಜಿನ ಹಿಂದೂ ಯುವತಿಗೆ ಪ್ರೇಮ ನಿವೇದನೆ ಮಾಡಿದ ಅಬ್ದುಲ್ಲಾನಿಗೆ ಬಿತ್ತು ಚಪ್ಪಲಿ ಏಟು. ಅಟ್ಟಾಡಿಸಿ ಹೊಡೆದ ವಿದ್ಯಾರ್ಥಿಗಳು ಎಂಬ ಬರಹವೂ ಈ ಪೋಸ್ಟ್ನಲ್ಲಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಚಾಕಲೇಟ್ ನೀಡಿ ವಿದ್ಯಾರ್ಥಿನಿಗೆ ಪ್ರಪೋಸ್ ಮಾಡಿದ ಪ್ರಾಧ್ಯಾಪಕ ಅಬ್ದುಲ್ಗೆ ಚಪ್ಪಲಿ ಏಟು
ಮಾರ್ಚ್ 23ರಂದು ಸಿದ್ಧಾರ್ಥ ವೈದ್ಯಕೀಯ ವಿಜ್ಞಾನ ಸಂಸ್ಥೆ ಮತ್ತು ಸಂಶೋಧನಾ ಕೇಂದ್ರ ಕಾಲೇಜಿನಲ್ಲಿ ಡಾ. ಅಬ್ದುಲ್ ರೆಹಮಾನ್ ಷರೀಫ್ ಎಂಬ ಪ್ರಾಧ್ಯಾಪಕ, ತರಗತಿ ನಡೆಯುತ್ತಿದ್ದಾಗಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್ ಮಾಡಿದ್ದ. ಇದರಿಂದ ಆಕ್ರೋಶಗೊಂಡ ವಿದ್ಯಾರ್ಥಿನಿ ತರಗತಿಯಲ್ಲೇ ಪ್ರಶ್ನೆ ಮಾಡಿದ್ದಳು. ಈ ಹಿಂದೆ ನೀನು ನನಗೆ ಪ್ರಪೋಸ್ ಮಾಡಿಲ್ವಾ ಎಂದು ಪ್ರಾಧ್ಯಾಪಕ ವಿದ್ಯಾರ್ಥಿನಿಯನ್ನು ಕೇಳಿದ್ದು, ಸಾಕ್ಷಿಗೆ ಸಿಸಿಟಿವಿ ದೃಶ್ಯವಿದೆ ಎಂದಿದ್ದ. ಕೋಪಗೊಂಡ ವಿದ್ಯಾರ್ಥಿನಿ ಸಿಸಿಟಿವಿ ವಿಡಿಯೋ ತೋರಿಸು ಎಂದಿದ್ದಾಳೆ. ಈ ಬಗ್ಗೆ ನಾಳೆ ಮಾತನಾಡುತ್ತೇನೆ ಎಂದು ಹೇಳಿ ಪ್ರಾಧ್ಯಾಪಕ ಕ್ಲಾಸ್ನಿಂದ ಹೊರಗೆ ಹೋಗಿದ್ದ. ಘಟನೆಯಿಂದ ತೀವ್ರವಾಗಿ ಆಕ್ರೋಶಗೊಂಡ ವಿದ್ಯಾರ್ಥಿಗಳು ಪ್ರಾಧ್ಯಾಪಕನ ಮೇಲೆ ಹಲ್ಲೆ ನಡೆಸಿದ್ದರು. ಗೃಹ ಸಚಿವರಿಗೆ ಸೇರಿದ ಕಾಲೇಜಿನಲ್ಲಿಯೇ ಈ ರೀತಿಯ ಘಟನೆ ನಡೆದಿರೋದು ಭಾರೀ ಚರ್ಚೆಗೆ ಕೂಡ ಗ್ರಾಸವಾಗಿತ್ತು.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 1:05 pm, Tue, 31 March 26