AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಡಿಜಿಲ್ಲೆಯಲ್ಲಿ ಗಂಧದ ಕಂಪು: ಬೀದರ್​ ರೈತರ ಚಿತ್ತ ಈಗ ಚಂದನ ಬೆಳೆಸುವತ್ತ

ಜಿಲ್ಲೆಯ ರೈತರು ಹೊಸದೊಂದು ಸಾಹಸಕ್ಕೆ ಕೈ ಹಾಕಿದ್ದಾರೆ. ಇಷ್ಟು ದಿನ ಕಬ್ಬು,ಸೋಯಾ, ತೊಗರಿ ಬೆಳೆಯುತ್ತಿದ್ದವರು ಈಗ ವಾಣಿಜ್ಯ ಉದ್ದೇಶದಿಂದ ಶ್ರೀಗಂಧವನ್ನು ಬೆಳೆಯಲು ಮುಂದಾಗಿದ್ದಾರೆ. ಇದಕ್ಕೆ ಸರ್ಕಾರವೂ ಪ್ರೋತ್ಸಾಹ ನೀಡುತ್ತಿದೆ.

ಗಡಿಜಿಲ್ಲೆಯಲ್ಲಿ ಗಂಧದ ಕಂಪು: ಬೀದರ್​ ರೈತರ ಚಿತ್ತ ಈಗ ಚಂದನ ಬೆಳೆಸುವತ್ತ
ಬೀದರ್​ನಲ್ಲಿ ಶ್ರೀಗಂಧ ಬೆಳೆಯುತ್ತಿರುವ ರೈತರು
Lakshmi Hegde
|

Updated on:Dec 17, 2020 | 2:27 PM

Share

ಬೀದರ್​: ಜಿಲ್ಲೆಯ ರೈತರು ಹೊಸದೊಂದು ಸಾಹಸಕ್ಕೆ ಕೈ ಹಾಕಿದ್ದಾರೆ. ಇಷ್ಟು ದಿನ ಕಬ್ಬು,ಸೋಯಾ, ತೊಗರಿ ಬೆಳೆಯುತ್ತಿದ್ದವರು ಈಗ ವಾಣಿಜ್ಯ ಉದ್ದೇಶದಿಂದ ಶ್ರೀಗಂಧವನ್ನು ಬೆಳೆಯಲು ಮುಂದಾಗಿದ್ದಾರೆ. ಇದಕ್ಕೆ ಸರ್ಕಾರವೂ ಪ್ರೋತ್ಸಾಹ ನೀಡುತ್ತಿದೆ.

ಶ್ರೀಗಂಧ ಬೆಳೆಸಲು ಒಲವು ತೋರಿಸುತ್ತಿರುವ ರೈತರು ಸರ್ಕಾರದ ಪ್ರೋತ್ಸಾಹ ಮತ್ತು ಇತರೆ ಸೌಲಭ್ಯಗಳನ್ನು ಬಳಸಿಕೊಳ್ಳುತ್ತಿರುವ ರೈತರು ಜಿಲ್ಲೆಯ 500 ಹೆಕ್ಟೇರ್​ಗೂ ಹೆಚ್ಚು ಪ್ರದೇಶದಲ್ಲಿ ಶ್ರೀಗಂಧ ಬೆಳೆಯಲು ಮುಂದಾಗಿದ್ದಾರೆ. ಇನ್ನು ಕೆಲವೇ ವರ್ಷಗಳಲ್ಲಿ ಕೋಟಿ ಕೋಟಿ ರೂಪಾಯಿ ಆದಾಯ ಪಡೆಯುವ ನಿರೀಕ್ಷೆಯಲ್ಲಿದ್ದಾರೆ. ಅಂದ ಹಾಗೆ, ಕನ್ನಡ ನಾಡಿಗೂ ಶ್ರೀಗಂಧಕ್ಕೂ ಶತಮಾನಗಳ ನಂಟು. ಸಿರಿಗಂಧದ ಬೀಡು ಎಂದೇ ಹೆಸರು ಕೂಡ ಪಡೆದಿದೆ. ಆದರೆ, ಜಿಲ್ಲೆಯಲ್ಲಿ ಶ್ರೀಗಂಧದ ಮರಗಳನ್ನು ಬೆಳೆಯುವುದು ತೀರಾ ಕಡಿಮೆ. ಇದಕ್ಕೆ ಕಾರಣ ಇಲ್ಲಿನ ಹವಾಮಾನ. ಆದರೆ, ಇತ್ತೀಚೆಗೆ ಇಲ್ಲಿನ ರೈತರು ಶ್ರೀಗಂಧ ಬೆಳೆಯಲು ಮನಸು ಮಾಡುತ್ತಿದ್ದಾರೆ.

ಈ ಹಿಂದೆ, ಯಾವುದೇ ಪ್ರದೇಶದಲ್ಲಿ ಶ್ರೀಗಂಧದ ಮರವನ್ನು ಬೆಳೆಸಿದರೆ ಅದು ಸರ್ಕಾರದ ಸ್ವತ್ತಾಗಿರುತ್ತಿತ್ತು. ತದ ನಂತರ, ಕರ್ನಾಟಕ ಅರಣ್ಯ ಕಾಯ್ದೆ 2001ರ ಸೆಕ್ಷನ್​ 83ರ ಅಡಿಯಲ್ಲಿ ಮಾಡಲಾದ ತಿದ್ದುಪಡಿ ಅನ್ವಯ ಯಾರ ಜಮೀನಿನಲ್ಲಿ ಶ್ರೀಗಂಧದ ಮರವಿರುತ್ತದೋ ಅದು ಅವರ ಸ್ವತ್ತಾಗುತ್ತದೆ. ಹೀಗಾಗಿ, ಈಗ ಯಾರು ಬೇಕಾದರೂ ನಿರಾಂತಕವಾಗಿ ಶ್ರೀಗಂಧ ಬೆಳೆಯಬಹುದು. ಅಷ್ಟೇ ಅಲ್ಲ, ಈ ನಿಟ್ಟಿನಲ್ಲಿ ಅರಣ್ಯ ಇಲಾಖೆಯಿಂದ ಸಹಕಾರವೂ ಸಿಗುತ್ತದೆ.

ನೀಲಗಿರಿಗೆ ಪರ್ಯಾಯವಾಗಿ ಎಂಟ್ರಿ ಕೊಟ್ಟ ಶ್ರೀಗಂಧ ತೋಟಗಾರಿಕಾ ಇಲಾಖೆಯು ಕೇಂದ್ರ ವಲಯ ಔಷಧಿ ಮತ್ತು ಸುಗಂಧ ಬೆಳೆಗಳ ಅಭಿವೃದ್ಧಿ ಯೋಜನೆಯಡಿಯಲ್ಲಿ ಪ್ರತಿ ಫಲಾನುಭವಿಗೆ ಉಚಿತವಾಗಿ ಗಂಧದ ಸಸಿ ನೀಡಲು ಯೋಜನೆ ಹಾಕಿಕೊಂಡಿದೆ. ಇದರಿಂದ, ರೈತರು ತೋಟಗಳಲ್ಲಿ ಶ್ರೀಗಂಧ ಮರವನ್ನು ಬೆಳೆಯಬಹುದು. ನೀಲಗಿರಿ ಮರಗಳ ಹಾವಳಿ ತಪ್ಪಿಸಿ ಶ್ರೀಗಂಧ ಮರ ಬೆಳೆಸುವುದ್ದಕ್ಕೆ ಸರ್ಕಾರ ಉತ್ತೇಜನ ನೀಡುತ್ತಿದೆ. ಹೀಗಾಗಿ, ರೈತರು ಹೆಚ್ಚು ಹೆಚ್ಚು ಶ್ರೀಗಂಧದ ಮರ ಬೆಳೆಸಿ ಲಾಭ ಗಳಿಸಬಹುದಾಗಿದೆ. ಸದ್ಯ, ಗಂಧದ ಮರದ ಬೆಲೆ ಒಂದು ಟನ್‌ಗೆ 7.5 ಲಕ್ಷ ರೂಪಾಯಿಯ ಆಸುಪಾಸಿನಲ್ಲಿದೆ. ಇದರ ಎಣ್ಣೆ ಕೆ.ಜಿಗೆ 19,500 ರಿಂದ 20 ಸಾವಿರ ರೂ.ವರೆಗೆ ಮಾರಾಟವಾಗುತ್ತಿದೆ. ಆದ್ದರಿಂದ, ರೈತರು ನೀಲಗಿರಿಗೆ ಬದಲಾಗಿ ಶ್ರೀಗಂಧ ಬೆಳೆಯುವುದರಿಂದ ಹೆಚ್ಚಿನ ಆದಾಯ ಗಳಿಸಬಹುದು.

ಶ್ರೀಗಂಧದಲ್ಲಿ ಹೆಸರಿಸುವಂಥ ಯಾವುದೇ ತಳಿ ಇಲ್ಲ. ಆದರೆ, ಕರ್ನಾಟಕದಲ್ಲಿ ನೈಸರ್ಗಿಕವಾಗಿ ಬೆಳೆಯುತ್ತಿರುವ ಜಾತಿಯು ಉತ್ಕೃಷ್ಟ ಪರಿಮಳದಿಂದ ಕೂಡಿರುವುದರಿಂದ ವಿಶ್ವವಿಖ್ಯಾತವಾಗಿದೆ. ಬೆಳೆಯುವ ವಿಧಾನ, ಔಷಧೋಪಚಾರ ಮತ್ತಿತರ ಸಲಹೆಗಳಿಗಾಗಿ ರೈತರು ಅರಣ್ಯ ಮತ್ತು ತೋಟಗಾರಿಕೆ ಇಲಾಖೆಯಿಂದ ಉಚಿತ ಮಾಹಿತಿ ಪಡೆಯಬಹುದು. ಶ್ರೀಗಂಧದವನ್ನು 15 ವರ್ಷ ಬೆಳೆಸಿದರೆ ಕನಿಷ್ಠವೆಂದರೂ 2 ಲಕ್ಷ ರೂ.ವರೆಗಿನ ಬೆಲೆಗೆ ಮಾರಾಟ ಮಾಡಬಹುದು. ಈ ಎಲ್ಲ ಲಾಭ, ಅನುಕೂಲತೆಗಳನ್ನು ಗಮನದಲ್ಲಿ ಇಟ್ಟುಕೊಂಡೇ ರೈತರು ಈ ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ.

ಶ್ರೀಗಂಧ ಬೆಳೆಸಲು ಡ್ರಿಪ್​ ನೀರಾವರಿಯೇ ಸಾಕು! ಶ್ರೀಗಂಧದ ಸಸಿಗಳನ್ನು ಮಳೆಗಾಲದಲ್ಲಿ ನೆಟ್ಟರೆ ಬೇಸಿಗೆಯವರೆಗೂ ನೀರಿನ ಅವಶ್ಯಕತೆ  ಬರುವುದಿಲ್ಲ. ಗಿಡ ನೆಟ್ಟ ಮೊದಲು 3 ವರ್ಷ ಬೇಸಿಗೆಯಲ್ಲಿ ನೀರು ಹರಿಸಬೇಕು. ಡ್ರಿಪ್​ ನೀರಾವರಿ ಪದ್ಧತಿಯ ಮೂಲಕವೇ ಗಿಡಗಳನ್ನು ಕಾಪಾಡಬಹುದು ಎನ್ನುತ್ತಾರೆ ರೈತರು. ಶ್ರೀಗಂಧ ನಿಧಾನವಾಗಿ ಬೆಳೆಯುವ ಅರೆ ಪರಾವಲಂಬಿ ಮರ. ಮಾವು, ನುಗ್ಗೆ, ಸಪೋಟ ಮರಗಳ ನಡುವೆಯೇ ಮಿಶ್ರ ತೋಟಗಾರಿಕಾ ಬೆಳೆಯಾಗಿ ಶ್ರೀಗಂಧವನ್ನು ಬೆಳೆಯಬಹುದಾಗಿದೆ. ಇದರಿಂದ ಸಸ್ಯ ವೈವಿಧ್ಯತೆಯನ್ನೂ ಕಾಪಾಡಬಹುದು. ಇನ್ನು ಗಿಡಗಳು ಹೆಚ್ಚೆಚ್ಚು ಬೆಳೆದಂತೆ ಒಟ್ಟು ತೋಟದ ಮೌಲ್ಯವೂ ಅಧಿಕವಾಗುತ್ತದೆ. 10-20ವರ್ಷಗಳಲ್ಲಿ ಅತ್ಯಧಿಕ ಲಾಭ ಗಳಿಸಬಹುದು ಎಂಬುದು ರೈತರ ಬಲವಾದ ನಂಬಿಕೆ.

ಶ್ರೀಗಂಧ ಮಾರಾಟಕ್ಕೆ ಎದುರಾಯ್ತು ಸಣ್ಣ ತೊಡಕು ಆದರೂ ಇಲ್ಲಿ ಒಂದು ಸಣ್ಣ ತೊಡಕಿದೆ. ಶ್ರೀಗಂಧ ಬೆಳೆದ ರೈತ ಇಲಾಖೆ ಅನುಮತಿಯೊಂದಿಗೆ ಮಾರಾಟ ಮಾಡುವ ಕಾನೂನು ಇದ್ದರೂ, ಮುಕ್ತ ಮಾರುಕಟ್ಟೆ ಸದ್ಯಕ್ಕೆ ಲಭ್ಯವಿಲ್ಲ. ಸರ್ಕಾರ ಸೂಚಿಸಿರುವ ಕೆಲವು ಕೇಂದ್ರಗಳಲ್ಲಿ ಮಾತ್ರ ಶ್ರೀಗಂಧ ಮಾರಾಟ ಮಾಡಬೇಕಿದೆ. ಇದರಿಂದಾಗಿ ರೈತರ ಸ್ವಾತಂತ್ರ್ಯ ಕಸಿದುಕೊಂಡಂತಾಗಿದೆ.

ಹಾಲು ಉತ್ಪಾದನೆಯಲ್ಲಿ ನಾಡಿಗೆ ಸ್ಪೂರ್ತಿಯಾಗುತ್ತಿದೆ ಮಾರ್ಕಂಡಪುರದ ಮಹಿಳೆಯರ ಮಾದರಿ

Published On - 2:26 pm, Thu, 17 December 20