ಮತದಾರರ ಪಟ್ಟಿ ಪರಿಷ್ಕರಣೆ ವೇಳೆ ಮತ್ತೊಂದು ದುರಂತ: ಹೃದಯಾಘಾತದಿಂದ ಬೀದರ್ನಲ್ಲಿ BLO ಸಾವು
ಮತದಾರರ ಪಟ್ಟಿ ಪರಿಷ್ಕರಣೆ ವೇಳೆ ರಾಜ್ಯದಲ್ಲಿ ಮತ್ತೊಂದು ದುರಂತ ಸಂಭವಿಸಿದೆ. ಎಸ್ಐಆರ್ ಕರ್ತವ್ಯದ ವೇಳೆ ಬಿಎಲ್ಒ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಬೀದರ್ನಲ್ಲಿ ನಡೆದಿದೆ. ಇತ್ತ ತುಮಕೂರಿನಲ್ಲಿ ವಿಎಒ ಭುವನಾ ಸಾವಿಗೆ ಅಧಿಕಾರಿಗಳ ಒತ್ತಡವೇ ಕಾರಣ ಎಂದು ಕಂದಾಯ ನೌಕರರ ಪ್ರತಿಭಟನೆ ತೀವ್ರಗೊಂಡಿದೆ. ಹೋರಾಟಕ್ಕೆ ದೊಡ್ಡ ಮಟ್ಟದ ಬೆಂಬಲವೂ ವ್ಯಕ್ತವಾಗಿದೆ.

ಮುಖ್ಯಾಂಶಗಳು
- ಮತದಾರರ ಪಟ್ಟಿ ಪರಿಷ್ಕರಣೆ ನಡೆಸುತ್ತಿದ್ದ BLO ಹೃದಯಾಘಾತದಿಂದ ಸಾವು
- ಬೀದರ್ ತಾಲೂಕಿನ ಅಮಲಾಪುರದಲ್ಲಿ ನಡೆದಿರುವ ಆಘಾತಕಾರಿ ಘಟನೆ
- ಸರ್ವೇ ನಡೆಸುತ್ತಿದ್ದ ವೇಳೆ ತೀವ್ರ ಎದೆನೋವಿನಿಂದ ಸುಸ್ತಾಗಿ ಬಿದ್ದಿದ್ದ ಬಿಎಲ್ಒ
ಬೀದರ್/ ತುಮಕೂರು, ಜುಲೈ 05: SIR ಕರ್ತವ್ಯಕ್ಕೆ ತೆರಳುವಾಗ ಬೈಕ್ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ವಿಎಒ ಭುವನಾ ಮೃತಪಟ್ಟಿರುವ ವಿಚಾರವಾಗಿ ತುಮಕೂರಲ್ಲಿ (Tumakuru) ಪ್ರತಿಭಟನೆ ನಡುವೆ ಮತದಾರರ ಪಟ್ಟಿ ಪರಿಷ್ಕರಣೆ ನಡೆಸುತ್ತಿದ್ದ BLO ಹೃದಯಾಘಾತದಿಂದ ಮೃತಪಟ್ಟಿರುವ ಆಘಾತಕಾರಿ ಘಟನೆ ಬೀದರ್ ತಾಲೂಕಿನ ಅಮಲಾಪುರದಲ್ಲಿ ನಡೆದಿದೆ. ಮೃತರನ್ನು ಬೀದರ್ ಜಿಲ್ಲೆಯ ಭಾಲ್ಕಿ ಮೂಲದವರಾಗಿರುವ ಸುನೀಲ್ ಎಂದು ಗುರುತಿಸಲಾಗಿದೆ.
ಆಗಿದ್ದೇನು?
ಬೀದರ್ ತಾಲೂಕಿನ ಅಮಲಾಪುರ ಗ್ರಾಮದಲ್ಲಿ ಸರ್ವೇ ನಡೆಸುತ್ತಿದ್ದ ವೇಳೆ ತೀವ್ರ ಎದೆನೋವಿನಿಂದ ಸುಸ್ತಾಗಿ ಸುನೀಲ್ ಕುಸಿದು ಬಿದ್ದಿದ್ದಾರೆ. ಕೂಡಲೇ ಅಲ್ಲಿದ್ದ ಸ್ಥಳೀಯರ ಸಹಾಯದಿಂದ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ದುರದೃಷ್ಟವಶಾತ್ ಅಲ್ಲಿ ಸ್ಟಂಟ್ ಅಳವಡಿಸುವ ವೇಳೆ ಹೃದಯಾಘಾತದಿಂದ ಅವರು ಮೃತಪಟ್ಟಿದ್ದಾರೆ. ಗಾಂಧಿಗಂಜ್ ಪೊಲೀಸ್ ಠಾಣಾ ವ್ತಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ: SIR ಕರ್ತವ್ಯಕ್ಕೆ ತೆರಳುವಾಗ ಭೀಕರ ಅಪಘಾತ: ಚಿಕಿತ್ಸೆ ಫಲಿಸದೆ ಭುವನಾ ಸಾವು
ತುಮಕೂರಲ್ಲಿ ಮುಂದುವರಿದ ಪ್ರತಿಭಟನೆ
ಮತ್ತೊಂದೆಡೆ ಇತ್ತ ತುಮಕೂರಿನಲ್ಲಿ ವಿಎಒ ಭುವನಾ ಸಾವು ಖಂಡಿಸಿ ಡಿಸಿ ಕಚೇರಿ ಬಳಿ ಕಂದಾಯ ನೌಕರರ ಪ್ರತಿಭಟನೆ ಮುಂದುವರಿದಿದೆ. ನಿನ್ನೆ ತಿಪಟೂರು ತಾಲೂಕಿನಲ್ಲಿ ಕರ್ತವ್ಯದ ವೇಳೆ ಅಪಘಾತದವಾಗಿ ಗಾಯಗೊಂಡಿದ್ದ ವಿಎಒ ಯಶಸ್ವಿನಿ ಕೂಡ ಪ್ರತಿಭಟನೆಯಲ್ಲಿ ಭಾಗಿಯಾಗಿ ಗಮನ ಸೆಳೆದಿದ್ದಾರೆ. ಕಾಲಿಗೆ ಗಂಭೀರ ಗಾಯವಾಗಿದ್ದರೂ, ಹೋರಾಟದಲ್ಲಿ ಭಾಗವಹಿಸುವ ಮೂಲಕ ಭುವನಾ ಸಾವಿಗೆ ನ್ಯಾಯ ಕೊಡುವಂತೆ ಅವರು ಆಗ್ರಹಿಸಿದ್ದಾರೆ. ಈ ನಡುವೆ ಧರಣಿಯಲ್ಲಿ ಭಾಗಿಯಾಗುವಂತೆ ಸಂಘದಿಂದ ಎಲ್ಲಾ ನೌಕರರಿಗೆ ಬುಲಾವ್ ನೀಡಲಾಗಿದ್ದು, ಮೇಲಧಿಕಾರಿಗಳ ಒತ್ತಡವೇ ಭುವನಾ ಸಾವಿಗೆ ಕಾರಣ ಎಂದು ಪ್ರತಿಭಟನಾಕಾರರು ಮೇಲಿಂದ ಮೇಲೆ ಹೇಳುತ್ತಿದ್ದಾರೆ.
ನಿನ್ನೆ ಬೆಳಗ್ಗೆ 6 ಗಂಟೆಗೆ ಕೆಲಸಕ್ಕೆ ಹಾಜರಾಗುವಂತೆ ಒತ್ತಡ ಹೇರಲಾಗಿದ್ದು, ಆರೋಪ ಸಂಬಂಧ ಆಡಿಯೋವನ್ನು ಸಹ ಹೋರಾಟಗಾರರು ಹೊಂದಿದ್ದಾರೆ. ತಹಶೀಲ್ದಾರ್ ಮಾತಾಡಿದ್ದಾರೆ ಎನ್ನಲಾದ ಆಡಿಯೋ ಇರುವ ಮಾಹಿತಿ ಇದ್ದು, ಆಡಿಯೋದಲ್ಲಿ ಬೆಳಗ್ಗೆ 6.30ಕ್ಕೆ ಕೆಲಸಕ್ಕೆ ಬರುವಂತೆ ಅಧಿಕಾರಿ ಹೇಳಿದ್ದಾರೆ. ಇದು ತಹಶೀಲ್ದಾರ್, ಎಸಿ ನಿರ್ಧಾರವೋ? ಅಥವಾ ಡಿಸಿ ನಿರ್ಧಾರವೋ? ಎಂಬ ಪ್ರಶ್ನೆಯೂ ಉದ್ಭವವಾಗಿದ್ದು, ಈ ರೀತಿ ಸೂಚನೆ ಕೊಟ್ಟು ಕಿರುಕುಳ ನೀಡಿದವರ ವಿರುದ್ಧ ಕ್ರಮಕ್ಕೆ ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 2:07 pm, Sun, 5 July 26




