AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವರ್ಷದಿಂದ ಹಾರಾಡದ ವಿಮಾನ​​: ಮುಚ್ಚುವ ಭೀತಿಯಲ್ಲಿ ಬೀದರ್ ಏರ್​ಪೋರ್ಟ್​!

ಬೀದರ್​ನಿಂದ ಬೆಂಗಳೂರಿಗೆ ಆರಂಭವಾದ ವಿಮಾನ ಸೇವೆಗಳು ಟ್ರೂ ಜೆಟ್ ಮತ್ತು ಸ್ಟಾರ್ ಏರ್ ಕಂಪನಿಗಳಿಂದ ನಿಲ್ಲಿಸಲ್ಪಟ್ಟಿವೆ. ಪ್ರಯಾಣಿಕರ ಕೊರತೆ ಮತ್ತು ಆರ್ಥಿಕ ನಷ್ಟ ಇದಕ್ಕೆ ಕಾರಣ ಎನ್ನಲಾಗಿದೆ. ಇದರಿಂದ ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದು, ಬೀದರ್ ವಿಮಾನ ನಿಲ್ದಾಣ ಮುಚ್ಚುವ ಭೀತಿ ಎದುರಾಗಿದೆ. ಜಿಲ್ಲಾಧಿಕಾರಿಗಳು ಮತ್ತೆ ವಿಮಾನ ಸೇವೆ ಆರಂಭಿಸುವ ಭರವಸೆ ನೀಡಿದ್ದಾರೆ.

ವರ್ಷದಿಂದ ಹಾರಾಡದ ವಿಮಾನ​​: ಮುಚ್ಚುವ ಭೀತಿಯಲ್ಲಿ ಬೀದರ್ ಏರ್​ಪೋರ್ಟ್​!
ವರ್ಷದಿಂದ ಹಾರಾಡದ ವಿಮಾನ​​: ಮುಚ್ಚುವ ಭೀತಿಯಲ್ಲಿ ಬೀದರ್ ಏರ್​ಪೋರ್ಟ್​!
ಸುರೇಶ ನಾಯಕ
| Updated By: ಗಂಗಾಧರ​ ಬ. ಸಾಬೋಜಿ|

Updated on: Jan 30, 2025 | 7:10 PM

Share

ಬೀದರ್, ಜನವರಿ 30: ಆ ಜಿಲ್ಲೆಯಿಂದ ರಾಜ್ಯದ ರಾಜ್ಯಧಾನಿ ಬೆಂಗಳೂರಿಗೆ ವಿಮಾನ ಹಾರಾಡಬೆಕೆಂಬ ಕನಸನ್ನು ಅಲ್ಲಿನ ಜನ ಕಂಡಿದ್ದರು. ಆ ಜಿಲ್ಲೆಯ ನಾಗರಿಕರ ಕನಸಿನಂತೆ ಗಡಿ ಜಿಲ್ಲೆ ಬೀದರ್​ನಿಂದ ಬೆಂಗಳೂರಿಗೆ ಲೋಹದ ಹಕ್ಕಿಯ ಹಾರಾಟ ಶುರುವಾಯಿತು. ಆದರೆ ಒಂದು ವರ್ಷದಿಂದ ವಿಮಾನ ಹಾರಾಟ ನಿಲ್ಲಿಸಿದ್ದು, ಬೀದರ್ ವಿಮಾನ ನಿಲ್ದಾಣ (Bidar Airport) ಮುಚ್ಚುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ.

ಪ್ರಯಾಣಿಕರ ಕೊರತೆ, ಆರ್ಥಿಕ ನಷ್ಟ

ಬೀದರ್ ಜಿಲ್ಲೆಯಿಂದ ರಾಜ್ಯದ ರಾಜ್ಯದಾನಿ ಬೆಂಗಳೂರು, ದೆಹಲಿಗೆ ವಿಮಾನ ಹಾರಾಡಬೇಕೆಂಬ ಆಸೆ ಎರಡು ರಾಜ್ಯದ ಗಡಿ ಹಂಚಿಕೊಂಡಿರುವ ಬೀದರ್ ಜಿಲ್ಲೆಯ ಜನರ ಬಹುದೊಡ್ಡ ಆಸೆಯಾಗಿತ್ತು. ಇದಕ್ಕಾಗಿ ಹತ್ತಾರು ಹೋರಾಟಗಳನ್ನ ಸಹ ಮಾಡಿದ್ದರು. ಜನರ ಹೋರಾಟಕ್ಕೆ ಮಣಿದ ಕೇಂದ್ರ ಸರಕಾರ 7 ಫೆಬ್ರುವರಿ 2020 ರಂದು ಬೀದರ್​ನಿಂದ ಬೆಂಗಳೂರಿಗೆ 72 ಸೀಟ್​ನ ಟ್ರೂ ಜೆಟ್ ವಿಮಾನದ ಹಾರಾಟ ಆರಂಭಿಸಿತು. ಆದರೆ ಪ್ರಯಾಣಿಕರ ಕೊರತೆ, ಆರ್ಥಿಕ ನಷ್ಟದಿಂದಾಗಿ ಟ್ರೂ ಜೆಟ್ ವಿಮಾನ ಕೆಲವು ತಿಂಗಳಲ್ಲಿಯೇ ತನ್ನ ಹಾರಾಟವನ್ನ ನಿಲ್ಲಿಸಿತು.

ಇದನ್ನೂ ಓದಿ: ಬೀದರ್‌ನ ಜಾನುವಾರು ಸಂಶೋಧನೆ ಹಾಗೂ ಮಾಹಿತಿ ಕೇಂದ್ರಕ್ಕೆ ರಾಷ್ಟ್ರೀಯ ಪ್ರಶಸ್ತಿ

ಇದಾದ ಬಳಿಕ ಒಂದು ವರ್ಷಗಳ ಕಾಲ ವಿಮಾನ ಹಾರಾಡಲೇ ಇಲ್ಲಾ, ಪ್ರಯಾಣಿಕರು ಹೈದ್ರಾಬಾದ್​​ಗೆ ಹೋಗಿ ಅಲ್ಲಿಂದ ವಿಮಾಣದ ಮೂಲಕ ಬೆಂಗಳೂರು ಹೀಗೆ ಬೇರೆ ಬೇರೆ ರಾಜ್ಯಗಳಿಗೆ ಪ್ರಯಾಣ ಮಾಡುವಂತಾಯಿದೆ. ಇದು ಪ್ರಯಾಣಿಕರಿಗೆ ಕಷ್ಟವಾಗತೊಡಗಿದಾಗ ಪ್ರಯಾಣಿಕರ ಒತ್ತಾಯದ ಮೇರೆಗೆ ಮತ್ತೆ 2022 ಜೂನ್ 15 ರಂದು ಸ್ಟಾರ್ ಏರ್ ವಿಮಾನ ತನ್ನ ಹಾರಾಟವನ್ನ ಆರಂಭಿಸಿತು. ಆದರೆ ಕಳೆದೊಂದು ವರ್ಷದಿಂದ ಇದು ಕೂಡ ಆರ್ಥಿಕ ನಷ್ಟದಿಂದಾಗಿ ತನ್ನ ಸೇವೆಯನ್ನ ನಿಲ್ಲಿಸಿದೆ. ಹೀಗಾಗಿ ಇಲ್ಲಿ ಸುಸ್ಸಜ್ಜಿತಏರ್​ಪೋರ್ಟ್​ ಇದ್ದರು ಕೂಡ ಜಿಲ್ಲೆಯ ಜನರಿಗೆ ವಿಮಾನ ಸೌಲಭ್ಯ ಸಿಗದಂತಾಗಿದೆ. ಇದು ಸಹಜವಾಗಿಯೇ ಜಿಲ್ಲೆಯ ಜನರಿಗೆ ನಿರಾಸೆಯುಂಟು ಮಾಡಿದೆ.

ಕೋವಿಡ್ ಸಮಯದಲ್ಲಿಯೇ ಬೀದರ್ ವಿಮಾನ ನಿಲ್ದಾಣ ಆರಂಭವಾಗಿದ್ದರು ಕೂಡ ಅವತ್ತಿನಿಂದಾ ಇವತ್ತಿನ ವರೆಗೆ ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿಯೇ ಓಡಾಡಿದ್ದಾರೆ. ಆದರೂ ಕೂಡ ಟ್ರೂ ಜೆಟ್ ಹಾಗೂ ಸ್ಟಾರ್ ಏರ್ ನವರು ನಷ್ಟವಾಗುತ್ತಿದೆಂದು ಹೇಳಿ ತಮ್ಮ ಸೇವೆಯನ್ನ ನಿಲ್ಲಿಸಿದ್ದು, ಇದು ಪ್ರಯಾಣಿಕರಿಗೆ ಸಾಕಷ್ಟು ಸಮಸ್ಯೆಯನ್ನುಂಟು ಮಾಡಿದೆ.

ಬೀದರ್​ನಲ್ಲಿ ವಿಮಾನ ಹಾರಾಟ ಸ್ಥಗಿತವಾಗಿದ್ದರಿಂದ ಜಿಲ್ಲೆಯ ಜನರು ಅನಿವಾರ್ಯವಾಗಿ ಕಲಬುರಗಿ ಅಥವಾ ಹೈದ್ರಾಬಾದ್​ಗೆ ಹೋಗಿ ವಿಮಾನದ ಮೂಲಕ ಬೆಂಗಳೂರಿಗೆ ಹೋಗವಂತಾ ಸ್ಥಿತಿ ಉಂಟಾಗಿದೆ. ಪಕ್ಕದ ಕಲಬುರ್ಗಿಯಿಂದ ದಿನಕ್ಕೆ ಐದಾರು ವಿಮಾನಗಳು ಹಾರಾಟ ಮಾಡುತ್ತಿವೆ. ಜೊತೆಗೆ ಅನ್ಯ ರಾಜ್ಯಕ್ಕೂ ಕೂಡ ಇಲ್ಲಿಂದ ವಿಮಾನ ಹಾರಾಟ ಮಾಡುತ್ತಿದೆ. ಆದರೆ ಬೀದರ್​ನಲ್ಲಿ ಮಾತ್ರ ಇದ್ದ ಒಂದೇ ಒಂದು ವಿಮಾನವೂ ಕೂಡ ಹಾರಾಟ ನಡೆಸದೆ ಇರೋದು ಜಿಲ್ಲೆಯ ಜನರ ಅಸಮಾಧಾನ ಹೆಚ್ಚುವಂತೆ ಮಾಡಿದೆ.

ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಹೇಳಿದ್ದಿಷ್ಟು

ಬಡವರು ಸಹ ವಿಮಾನ ಪ್ರಯಾಣ ಮಾಡಲಿ ಅನ್ನೋ ಉದ್ದೇಶದಿಂದ‌ ಕೇಂದ್ರ ಸರ್ಕಾರ ಉಡಾನ್ ಯೋಜನೆ ಜಾರಿಗೆ ತಂದಿದೆ. ಅಡೆತಡೆಗಳ ನಡುವೆಯೋ ಗಡಿನಾಡಿನಲ್ಲಿ ವಿಮಾನ ನಿಲ್ದಾಣ ಲೋಕಾರ್ಪಣೆಗೊಂಡು ಐದು ವರ್ಷ ಕಳೆಯಿತು ಎನ್ನುವಷ್ಟರಲ್ಲಿ ವಿಮಾನ ಹಾರಾಟ ನಿಲ್ಲಿಸಿದೆ. ಇನ್ನೂ ವಿಚಾರ ಬಗ್ಗೆ ಬೀದರ್ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾರನ್ನು ಕೇಳಿದರೆ, ವಿಮಾನ ನಿಲ್ದಾಣ ಬಂದ್ ಆಗಿಲ್ಲ. ವಿಮಾನ ಹಾರಾಟ ಮಾತ್ರ ಸ್ಥಗಿತವಾಗಿದೆ. ಈಗಾಗಲೇ ಎರಡು ಕಂಪನಿಗಳ ಜೊತೆಗೆ ಮಾತುಕತೆ ನಡೆದಿದೆ ಶೀಘ್ರದಲ್ಲಿಯೇ ಮತ್ತೆ ವಿಮಾನ ಹಾರಾಟ ಮಾಡಲಿದೆ ಎಂದಿದ್ದಾರೆ.

ಇದನ್ನೂ ಓದಿ: ಬೀದರ್​ನ ಬಡ ಕೂಲಿ ಕಾರ್ಮಿಕರ ಕೈ ಹಿಡಿದ ಉದ್ಯೋಗ ಖಾತ್ರಿ ಯೋಜನೆ

ಬೀದರ್​ನಿಂದ ವಿಮಾನ ಹಾರಾಟ ಆರಂಭವಾಗಿ ಐದು ವರ್ಷದಲ್ಲಿಯೇ ಎರಡು ಕಂಪನಿಯವರು ವಿಮಾನ ಹಾರಾಟ ನಿಲ್ಲಿಸಿವೆ. ಇನ್ನೂ ಮುಂದೆ ಬೀದರ್​ನಿಂದ ಬೆಂಗಳೂರಿಗೆ ವಿಮಾನ ಹಾರಾಟ ನಡೆಸುವುದು ಅನುಮಾನವಾಗಿದ್ದು ಬೀದರ್ ವಿಮಾನ ನಿಲ್ದಾಣ ಮುಚ್ಚುವ ಎಲ್ಲಾ ಲಕ್ಷಣಗಳು ಇಲ್ಲಿ ಗೋಚರಿಸುತ್ತಿವೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.