ಬೆಂಗಳೂರಿನಲ್ಲಿ ಲಕ್ಷಾಂತರ ರೂ. ವಂಚನೆ: ಇಮೇಜ್ ಸರ್ಚ್ ಟೂಲ್​ಗಳನ್ನು ಬಳಸಿ 20 ವರ್ಷಗಳ ನಂತರ ಆರೋಪಿಯ ಬಂಧಿಸಿದ ಸಿಬಿಐ!

20 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಬ್ಯಾಂಕ್ ವಂಚನೆ ಆರೋಪಿ ಮಣಿ ಎಂ ಶೇಖರ್ ಎಂಬಾಕೆಯನ್ನು ಇಮೇಜ್ ಸರ್ಚ್ ಟೂಲ್​ಗಳ ನೆರವಿನಿಂದ ಪತ್ತೆ ಮಾಡಿ ಸಿಬಿಐ ಬಂಧಿಸಿದೆ. ಆರೋಪಿಯು ಮಧ್ಯಪ್ರದೇಶದ ಇಂದೋರ್‌ನಲ್ಲಿ ವಾಸಿಸುತ್ತಿದ್ದರು. ಎಸ್​​ಬಿಐ ಬ್ಯಾಂಕ್​ನ ಬೆಂಗಳೂರಿನ ಶಾಖೆಗೆ 8 ಲಕ್ಷ ರೂಪಾಯಿಗಳ ವಂಚನೆ ಪ್ರಕರಣ ಇದಾಗಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಮಣಿ ಎಂ ಶೇಖರ್ ಪತಿ ರಾಮಲಿಂಗಂ ಶೇಖರ್ ಈಗಾಗಲೇ ಮೃತಪಟ್ಟಿರುವುದು ಗೊತ್ತಾಗಿದೆ.

ಬೆಂಗಳೂರಿನಲ್ಲಿ ಲಕ್ಷಾಂತರ ರೂ. ವಂಚನೆ: ಇಮೇಜ್ ಸರ್ಚ್ ಟೂಲ್​ಗಳನ್ನು ಬಳಸಿ 20 ವರ್ಷಗಳ ನಂತರ ಆರೋಪಿಯ ಬಂಧಿಸಿದ ಸಿಬಿಐ!
ಸಾಂದರ್ಭಿಕ ಚಿತ್ರ
Updated By: Ganapathi Sharma

Updated on: Jul 18, 2025 | 10:01 AM

ಬೆಂಗಳೂರು, ಜುಲೈ 18: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಬೆಂಗಳೂರಿನ (Bengaluru) ಶಾಖೆಯೊಂದಕ್ಕೆ ಸುಮಾರು 8 ಲಕ್ಷ ರೂ. ವಂಚಿಸಿದ ಪ್ರಕರಣದಲ್ಲಿ 20 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಸಿಬಿಐ (CBI) ಕೊನೆಗೂ ಬಂಧಿಸಿದೆ. ಆಧುನಿಕ ಇಮೇಜ್ ಸರ್ಚ್ ಟೂಲ್​ಗಳನ್ನು ಬಳಸಿಕೊಂಡು ಸಿಬಿಐ ಆರೋಪಿಯ ಜಾಡು ಪತ್ತೆಹೆಚ್ಚಿರುವುದು ವಿಶೇಷ. ಆರೋಪಿ ಮಣಿ ಎಂ ಶೇಖರ್ ರನ್ನು ಮಧ್ಯಪ್ರದೇಶದ ಇಂದೋರ್‌ನಲ್ಲಿ ಬಂಧಿಸಲಾಗಿದೆ. ಆಕೆ ಅಲ್ಲಿ ಗುಪ್ತನಾಮ ಇಟ್ಟುಕೊಂಡು ವಾಸಿಸುತ್ತಿದ್ದರು.

ಬ್ಯಾಂಕ್​ಗೆ ವಂಚನೆ ಪ್ರಕರಣದ ಹಿನ್ನೆಲೆ

ಇಂಡೋ ಮಾರ್ಕ್ಸ್ ಪ್ರೈವೇಟ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ರಾಮಾನುಜಂ ಮುತ್ತು ರಾಮಲಿಂಗಂ ಶೇಖರ್ ಅಲಿಯಾಸ್ ಆರ್‌ಎಂ ಶೇಖರ್ ಮತ್ತು ಇಂಡೋ ಮಾರ್ಕ್ಸ್ ಆ್ಯಂಡ್ ಬಿಟಿಸಿ ಹೋಮ್ ಪ್ರಾಡಕ್ಟ್ಸ್ ಪ್ರೈವೇಟ್ ಲಿಮಿಟೆಡ್‌ನ ನಿರ್ದೇಶಕಿ ಮಣಿ ಎಂ ಶೇಖರ್ ವಿರುದ್ಧ 2006 ರ ಆಗಸ್ಟ್ 1 ರಂದು ಕೇಂದ್ರೀಯ ತನಿಖಾ ದಳದ ಬೆಂಗಳೂರು ಘಟಕ ಹಾಗೂ ಬ್ಯಾಂಕ್ ಭದ್ರತೆ ಮತ್ತು ವಂಚನೆಗಳ ಕೋಶ (ಬಿಎಸ್‌ಎಫ್‌ಬಿ) ಪ್ರಕರಣ ದಾಖಲಿಸಿದ್ದವು. ಆರೋಪಿಗಳು 2002 ಮತ್ತು 2005 ರ ಅವಧಿಯಲ್ಲಿ ಕ್ರಿಮಿನಲ್ ಪಿತೂರಿಯಲ್ಲಿ ತೊಡಗಿದ್ದ ಮತ್ತು ಇಂಡೋ ಮಾರ್ಕ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ಅದರ ಸಹೋದರ ಕಂಪನಿಗಳ ಹೆಸರಿನಲ್ಲಿ ನಿಧಿ-ಆಧಾರಿತವಲ್ಲದ ಮಿತಿಗಳನ್ನು ದುರುಪಯೋಗಪಡಿಸಿಕೊಳ್ಳುವ ಮೂಲಕ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಬೆಂಗಳೂರಿನ ಸಾಗರೋತ್ತರ ಶಾಖೆಗೆ 800 ಲಕ್ಷ ರೂ.ಗಳಷ್ಟು ವಂಚನೆ ಮಾಡಿದ್ದರು ಎಂದು ಸಿಬಿಐ ತಿಳಿಸಿದೆ.

ಆರೋಪಿಗಳ ವಿರುದ್ಧ ಸಿಬಿಐ 2007 ರ ಡಿಸೆಂಬರ್ 10 ರಂದು ಆರೋಪಪಟ್ಟಿ ಸಲ್ಲಿಸಿತ್ತು. ಆರೋಪಿಗಳಿಬ್ಬರೂ ವಿಚಾರಣೆಗೆ ಹಾಜರಾಗಲು ಅಥವಾ ಸಮನ್ಸ್, ವಾರೆಂಟ್‌ಗಳಿಗೆ ಪ್ರತಿಕ್ರಿಯಿಸಲು ವಿಫಲರಾಗಿದ್ದರು. ಹೀಗಾಗಿ ಅವರನ್ನು 2009 ರ ಫೆಬ್ರವರಿ 27 ರಂದು ಘೋಷಿತ ಅಪರಾಧಿಗಳೆಂದು ಅಧಿಸೂಚನೆ ಹೊರಡಿಸಲಾಗಿತ್ತು ಎಂದು ಸಿಬಿಐ ತಿಳಿಸಿದೆ.

ಇದನ್ನೂ ಓದಿ
ಎರಡು ವಾರಗಳ ಹಿಂದೆ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದ ಬಾಲಕಿ ಆತ್ಮಹತ್ಯೆ
ಎಲ್ಲ ಬಿ ಖಾತಾದಾರರಿಗೆ ಸಿಗಲಿದೆ ಎ ಖಾತಾ ಮಾನ್ಯತೆ ನೀಡಲು ಸಂಪುಟ ನಿರ್ಧಾರ
ಶುಶ್ರುತಿ ಸಹಕಾರ ಬ್ಯಾಂಕ್ ವಂಚನೆ: ಇಡಿ ತನಿಖೆ ವೇಳೆ ಆಘಾತಕಾರಿ ಅಂಶ ಬಯಲಿಗೆ
ವಿಡಿಯೋ: ಆಟೋ ಡ್ರೈವರ್ ಮೇಲೆ ಬಸ್ ಹರಿಸಲು ಮುಂದಾದ ಬಿಎಂಟಿಸಿ ಚಾಲಕ

ಹಲವು ವರ್ಷಗಳಿಂದ ಆರೋಪಿಗಳ ಪತ್ತೆಗೆ ನಿರಂತರ ಪ್ರಯತ್ನಿಸಲಾಗಿತ್ತು. ಆದರೂ, ತಲೆಮರೆಸಿಕೊಂಡಿದ್ದ ಅವರು ಪತ್ತೆಯಾಗದೆ ಉಳಿದಿದ್ದರು. ಹೀಗಾಗಿ ಸಿಬಿಐ, ಅವರ ಸುಳಿವು ನೀಡಿದವರಿಗೆ 50,000 ರೂ. ಬಹುಮಾನವನ್ನೂ ಘೋಷಿಸಿತ್ತು. ಪ್ರಕರಣ ಸಂಬಂಧ ಇತರ ಅಪರಾಧಿಗಳಿಗೆ ಶಿಕ್ಷೆ ವಿಧಿಸಲಾಗಿದ್ದು, ಕೆಲವು ಮಂದಿ ಆರೋಪಿಗಳು ಖುಲಾಸೆಗೊಂಡಿದ್ದರು. ಆದರೆ, ಆರ್‌ಎಂ ಶೇಖರ್ ಮತ್ತು ಮಣಿ ಶೇಖರ್ ದಂಪತಿ ವಿರುದ್ಧದ ವಿಚಾರಣೆ ಬಾಕಿ ಉಳಿದಿತ್ತು.

ಆರೋಪಿಗಳು ತಮ್ಮ ಗುರುತನ್ನು ಬದಲಾಯಿಸಿಕೊಂಡಿದ್ದರು ಮತ್ತು ಹಳೆಯ ಕೆವೈಸಿ ವಿವರಗಳನ್ನು ಎಂದಿಗೂ ಬಳಸಿರಲಿಲ್ಲ. ಅವರು ತಮ್ಮ ಹೆಸರುಗಳನ್ನು ಕೃಷ್ಣ ಕುಮಾರ್ ಗುಪ್ತಾ ಮತ್ತು ಗೀತಾ ಕೃಷ್ಣ ಕುಮಾರ್ ಗುಪ್ತಾ ಎಂದು ಬದಲಾಯಿಸಿಕೊಂಡಿದ್ದರು. ಅವರ ಮೊಬೈಲ್ ಸಂಖ್ಯೆಗಳು, ಇಮೇಲ್‌ಗಳು, ಪ್ಯಾನ್ ಸಂಖ್ಯೆಗಳು ಮತ್ತು ಇತರ ಮಾಹಿತಿಯನ್ನು ಚಾರ್ಜ್‌ಶೀಟ್ ಸಲ್ಲಿಸುವ ಮೊದಲು ಬಳಸಲಾಗಿತ್ತು ಎಂದು ಸಿಬಿಐ ಹೇಳಿದೆ.

ಹೆಸರು, ಗುರುತು ಬದಲಾಯಿಸಿ ತಲೆಮರೆಸಿದ್ದ ಆರೋಪಿಗಳು

ಆಧುನಿಕ ಡಿಜಿಟಲ್ ಪರಿಕರಗಳು ಮತ್ತು ಸರ್ಚ್​ ಟೂಲ್​ಗಳ ಬಳಕೆಯಿಂದ ಇಂದೋರ್‌ನಲ್ಲಿ ಹೆಸರು ಮತ್ತು ಗುರುತು ಬದಲಿಸಿ ವಾಸಿಸುತ್ತಿರುವ ಆರೋಪಿಯನ್ನು ಗುರುತಿಸಲು ಕಾರಣವಾಯಿತು. ಶೇಕಡಾ 90 ಕ್ಕಿಂತ ಹೆಚ್ಚಿನ ಫೋಟೋ ಹೊಂದಾಣಿಕೆಯೊಂದಿಗೆ, ಇಮೇಜ್ ಸರ್ಚ್ ಪರಿಕರಗಳು ಅವರ ನಿಖರವಾದ ಗುರುತನ್ನು ನೀಡಿದವು ಎಂದು ಸಿಬಿಐ ತಿಳಿಸಿದೆ.

ಇದನ್ನೂ ಓದಿ: ಶುಶ್ರುತಿ ಸಹಕಾರ ಸೌಹಾರ್ದ ಬ್ಯಾಂಕ್ ಕೋಟ್ಯಂತರ ರೂ. ವಂಚನೆ ಪ್ರಕರಣಕ್ಕೆ ಇಡಿ ಎಂಟ್ರಿ: ತನಿಖೆ ವೇಳೆ ಆಘಾತಕಾರಿ ಮಾಹಿತಿ ಬಯಲಿಗೆ

ಆರೋಪಿ ಆರ್‌ಎಂ ಶೇಖರ್ 2008 ರಲ್ಲಿ ಮೃತಪಟ್ಟಿರುವುದು ತನಿಖೆಯಿಂದ ತಿಳಿದುಬಂದಿದೆ. ಹೆಸರು ಹಾಗೂ ಗುರುತು ಬದಲಾಯಿಸಿ ಬದುಕುತ್ತಿದ್ದ ಸಂದರ್ಭದಲ್ಲಿ ಆತ ಮೃತಪಟ್ಟಿದ್ದಾನೆ. ಸದ್ಯ ಆತನ ಪತ್ನಿ ಮಣಿ ಶೇಖರ್​​ ರನ್ನು ಜುಲೈ 12 ರಂದು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ನ್ಯಾಯಾಲಯವು ಆಕೆಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ ಎಂದು ಸಿಬಿಐ ತಿಳಿಸಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ