ಮೋದಿ ಹಾಡಿ ಹೊಗಳಿದ ಸೋಲಿಗರ ಗ್ರಾಮಕ್ಕೆ ಸ್ವಾತಂತ್ರ್ಯ ದೊರೆತು 76 ವರ್ಷಗಳ ನಂತರ ವಿದ್ಯತ್ ಸಂಪರ್ಕ
ಚಾಮರಾಜನಗರ ಜಿಲ್ಲೆಯ ಪಾಲಾರ್ ಗ್ರಾಮದ ಜನರು ರಾತ್ರಿಯಾಗುತ್ತಿದ್ದಂತೆ ಮನೆ ಸೇರಿಕೊಳ್ಳಬೇಕಿತ್ತು. ರಾತ್ರಿ ಅಡುಗೆ, ಊಟ, ಮಕ್ಕಳ ಓದು ಎಲ್ಲವು ಬೆಂಕಿಯ ಬೆಳಕಲ್ಲೇ ನಡೆಸಬೇಕಿತ್ತು. ಹೊರಗೆ ಬಂದರೆ ಕಾಡು ಪ್ರಾಣಿಗಳ ಕಾಟ ಬೇರೆಯಿತ್ತು. ಇದೀಗ ಈ ಎಲ್ಲ ಸಮಸ್ಯೆಗಳಿಗೆ ಮುಕ್ತಿ ಸಿಕ್ಕಿದೆ. ಟಿವಿ9 ವರದಿ ಫಲ ಕೊಟ್ಟಿದ್ದು,ಹಾಡಿ ಜನರ ಬದುಕಲ್ಲಿ ಬೆಳಕು ಹರಿದಿದೆ.ಈ ಕುರಿತು ಒಂದು ಸ್ಟೋರಿ ಇಲ್ಲಿದೆ ನೋಡಿ.

ಚಾಮರಾಜನಗರ, ಮಾರ್ಚ್ 03: ಚಾಮರಾಜನಗರ (Chamarajanagar) ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ಕಟ್ಟ ಕಡೆಯ ಗ್ರಾಮ ಪಾಲಾರ್. ಈ ಸೋಲಿಗರ ಹಾಡಿ ಈವರೆಗೂ ವಿದ್ಯುತ್ ಸಂಪರ್ಕ ಇಲ್ಲದೆ ಅಂಧಕಾರದಲ್ಲಿ ಮುಳುಗಿತ್ತು. ಮಹದೇಶ್ವರ ಬೆಟ್ಟದ ಅರಣ್ಯದೊಳಗೆ 75 ಕ್ಕೂ ಹೆಚ್ಚು ಸೋಲಿಗರು ಇರುವ ಈ ಹಾಡಿಗೆ ಸ್ವಾಂತಂತ್ರ್ಯ ದೊರೆತು 76 ವರ್ಷದ ಬಳಿಕ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ.
ವಿದ್ಯುತ್ ಸೌಲಭ್ಯ ಕಲ್ಪಿಸಲು ಅರಣ್ಯ ಇಲಾಖೆಯ ನಿಯಮಾವಳಿ ಅಡ್ಡಿಯಾಗಿತ್ತು. ಸ್ವಾತಂತ್ರ್ಯ ಬಂದು 76 ವರ್ಷ ಕಳೆದರೂ ವಿದ್ಯುತ್ ಸಂಪರ್ಕ ಇಲ್ಲದೆ ಗ್ರಾಮಸ್ಥರ ಪಾಡು ಹೇಳತೀರದಾಗಿತ್ತು. ಸಂಜೆಯಾಗುತ್ತಿದಂತೆ ಮನೆ ಸೇರಿಕೊಳ್ಳಬೇಕಿತ್ತು. ರಾತ್ರಿ ಅಡುಗೆ, ಊಟ ದೀಪದ ಬೆಳಕಲ್ಲೇ ಮಾಡಬೇಕಿತ್ತು. ಮಕ್ಕಳಂತೂ ದೀಪದ ಬೆಳಕಲ್ಲೇ ಓದಿಕೊಳ್ಳಬೇಕಿತ್ತು. ಕಾಡು ಪ್ರಾಣಿಗಳ ಕಾಟ ಇರುವುದರಿಂದ ರಾತ್ರಿ ವೇಳೆ ಶೌಚಕ್ಕೆ ಹೊರಬರಲು ಸಾಧ್ಯವಾಗುತ್ತಿರಲಿಲ್ಲ. ಜೋಳ ಅಥವಾ ರಾಗಿ ಹಿಟ್ಟು ಮಾಡಿಸಲು ಗಡಿಯಂಚಿನಲ್ಲಿರುವ ತಮಿಳುನಾಡಿನ ಕೊಳತ್ತೂರು ಗ್ರಾಮಕ್ಕೆ ಹೋಗಬೇಕಿತ್ತು. ಹೀಗೆ ಹತ್ತಾರು ಸಮಸ್ಯೆಗಳಿಂದ ಅಂಧಕಾರದಲ್ಲಿ ಮುಳುಗಿದ್ದ ಪಾಲಾರ್ಗ್ರಾ ಮಕ್ಕೆ ಇದೀಗ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ.
ಮಹದೇಶ್ವರ ಬೆಟ್ಟಕ್ಕೆ ಕಾವೇರಿ ನದಿಯಿಂದ ನೀರು ಪೂರೈಸಲು ಅಳವಡಿಸಲಾಗಿದ್ದ ವಿದ್ಯುತ್ ಮಾರ್ಗದಿಂದ ಪ್ರತ್ಯೇಕ ಟಿಸಿ ಅಳವಡಿಸಿ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಕೆ ವೆಂಕಟೇಶ್, ಮಹದೇವಪ್ಪ ಶಾಸಕರಾದ ಮಂಜುನಾಥ್, ಕೃಷ್ಣಮೂರ್ತಿ ವಿದ್ಯುತ್ ಸಂಪರ್ಕಕ್ಕೆ ಚಾಲನೆ ನೀಡುವ ಮೂಲಕ ಗ್ರಾಮಕ್ಕೆ ವಿದ್ಯುತ್ ಬೆಳಕು ಹರಿದಿದೆ.
ಇನ್ನು, ವಿದ್ಯುತ್ ಸಂಪರ್ಕ ಇಲ್ಲದೆ ಹತ್ತಾರು ಸಮಸ್ಯೆ ಎದುರಿಸುತ್ತಿದ್ದ ಬುಡಕಟ್ಟು ಸೋಲಿಗರ ಮೊಗದಲ್ಲಿ ಮಂದಹಾಸ ಮೂಡಿದೆ. ಈವರೆಗೂ ವಿದ್ಯುತ್ ಬೆಳಕನ್ನೇ ಕಾಣದ ಪಾಲಾರ್ ಗ್ರಾಮದಲ್ಲಿ ಸಂತಸದ ವಾತಾವರಣ ನಿರ್ಮಾಣವಾಗಿದೆ. ಟಿವಿ9 ಪಾಲಾರ್ ಗ್ರಾಮದ ವ್ಯವಸ್ಥೆ ಹಾಗೂ ಮಲೆ ಮಹದೇಶ್ವರ ಬೆಟ್ಟದ ಹಾಡಿಗಳಲ್ಲಿದ್ದ ಕಗ್ಗತ್ತಲ ಬಗ್ಗೆ ವಿಸ್ತ್ರತ ವರದಿ ಕೂಡ ಪ್ರಸಾರ ಮಾಡಿತ್ತು. ವರದಿ ಪ್ರಸಾರ ಬೆನ್ನಲ್ಲೇ ಗ್ರಾಮಕ್ಕೆ ವಿದ್ಯುತ್ ಸಂಪರ್ಕ ನೀಡಲಾಗಿದ್ದು, ಗ್ರಾಮಸ್ಥರು ಟಿವಿ9ಗೆ ಧನ್ಯವಾದ ಹೇಳಿದ್ದಾರೆ.
ಇದನ್ನೂ ಓದಿ: ಕರ್ನಾಟಕದ ಅರಣ್ಯ ಸಂರಕ್ಷಣೆಗೆ ಶ್ವಾನ ಬಲ: ನಾಯಿಗಳಿಗೆ ಶುರುವಾಯ್ತು ತರಬೇತಿ!
ಸೋಲಿಗರನ್ನು ಶ್ಲಾಘಿಸಿದ್ದ ಪ್ರಧಾನಿ ಮೋದಿ
ಬಿಆರ್ಟಿ ಹುಲಿ ಅಭಯಾರಣ್ಯದಲ್ಲಿ ಹುಲಿಗಳ ಸಂತತಿ ಹೆಚ್ಚಳವಾಗಲು ಸೋಲಿಗ ಬುಡಕಟ್ಟು ಜನಾಂಗದವರ ಕೊಡುಗೆ ಗಣನೀಯವಾಗಿದೆ ಎಂದು ಕಳೆದ ತಿಂಗಳ ಮನ್ ಕಿ ಬಾತ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಡಿ ಹೊಗಳಿದ್ದರು.
ಒಟ್ಟಿನಲ್ಲಿ ಮೊದಲ ಹಂತದಲ್ಲಿ ಪಾಲಾರ್ ಗ್ರಾಮಕ್ಕೆ ವಿದ್ಯುತ್ ಸಂಪರ್ಕ ನೀಡಲಾಗಿದ್ದು, ಮುಂದೆ 48 ಕೋಟಿ ವೆಚ್ಚದಲ್ಲಿ ಚಾಮರಾಜನಗರ ಜಿಲ್ಲೆಯ 22 ಸೋಲಿಗ ಹಾಡಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಜಿಲ್ಲಾಡಳಿತ ಕ್ರಮ ವಹಿಸಿದೆ. ಟಿವಿ9 ವರದಿಯಿಂದ ವಿದ್ಯುತ್ ಸಿಕ್ಕಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:50 am, Mon, 3 March 25