ಚಾಮರಾಜನಗರ: ಕೆಎಸ್ಆರ್ಟಿಸಿ ಬಸ್ ಡಿಕ್ಕಿ; ಸೈಕಲ್ ಸವಾರ ಸ್ಥಳದಲ್ಲೇ ಸಾವು
ಪ್ರತ್ಯೇಕ ಘಟನೆ: ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ(Kollegala) ತಾಲೂಕಿನ ಕಾಮಗೆರೆಯಲ್ಲಿ ಕೆಎಸ್ಆರ್ಟಿಸಿ ಬಸ್(KSRTC Bus) ಡಿಕ್ಕಿಯಾಗಿ ಸೈಕಲ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ. ಇತ್ತ ನೆಲಮಂಗಲ ತಾಲೂಕಿನ ದಾಬಸ್ಪೇಟೆ ಬಳಿ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಓವರ್ಟೇಕ್ ಮಾಡುವಾಗ ಎರಡು ಕಾರುಗಳ ಮಧ್ಯೆ ಡಿಕ್ಕಿಯಾದ ಘಟನೆ ನಡೆದಿದೆ.

ಚಾಮರಾಜನಗರ, ಮಾ.05: ಕೆಎಸ್ಆರ್ಟಿಸಿ ಬಸ್(KSRTC Bus) ಡಿಕ್ಕಿಯಾಗಿ ಸೈಕಲ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ(Kollegala) ತಾಲೂಕಿನ ಕಾಮಗೆರೆಯಲ್ಲಿ ನಡೆದಿದೆ. ಮಹದೇಶ್ವರ ಬೆಟ್ಟದಿಂದ ಬರುತ್ತಿದ್ದ ಕೊಳ್ಳೇಗಾಲ ನಿವಾಸಿ ನಿಂಗಪ್ಪ(60) ಮೃತ ರ್ದುದೈವಿ. ಮಂಡ್ಯ ಜಿಲ್ಲೆಯ ನಾಗಮಂಗಲ ಡಿಪೋಗೆ ಸೇರಿದ ಬಸ್ ಡಿಕ್ಕಿಯಾಗಿ ಈ ದುರ್ಘಟನೆ ನಡೆದಿದೆ. ಈ ಕುರಿತು ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದ್ದು, ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನ ಕೊಳ್ಳೆಗಾಲ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಕಾರುಗಳ ಮಧ್ಯೆ ಡಿಕ್ಕಿ; ಮೂವರು ಪೊಲೀಸ್ ಸಿಬ್ಬಂದಿ ಅದೃಷ್ಟವಶಾತ್ ಪಾರು
ಬೆಂಗಳೂರು ಗ್ರಾಮಾಂತರ: ಜಿಲ್ಲೆಯ ನೆಲಮಂಗಲ ತಾಲೂಕಿನ ದಾಬಸ್ಪೇಟೆ ಬಳಿ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಓವರ್ಟೇಕ್ ಮಾಡುವಾಗ ಎರಡು ಕಾರುಗಳ ಮಧ್ಯೆ ಡಿಕ್ಕಿಯಾದ ಘಟನೆ ನಡೆದಿದೆ. ಈ ವೇಳೆ ಶೇಷಾದ್ರಿಪುರಂ ಠಾಣೆಯ ಹೆಡ್ ಕಾನ್ಸ್ಟೇಬಲ್ ಯದುಬಾಬು ಸೇರಿ ಮೂವರು ಪೊಲೀಸ್ ಸಿಬ್ಬಂದಿ ಅದೃಷ್ಟವಶಾತ್ ಪಾರಾಗಿದ್ದರೆ, ಮತ್ತೊಂದು ಕಾರಿನಲ್ಲಿದ್ದ ಮಹೇಶ್ ಎಂಬುವವರಿಗೆ ಸಣ್ಣಪುಟ್ಟ ಗಾಯವಾಗಿದ್ದು, ಆಸ್ಪತ್ರೆಗೆ ಸೇರಿಸಲಾಗಿದೆ. ಇನ್ನು ಅಪಘಾತದಿಂದ ಕಾರುಗಳು ಜಖಂ ಆಗಿದ್ದು, ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ರಾಯಚೂರು-ತೆಲಂಗಾಣ ಮಧ್ಯದ ಕೃಷ್ಣಾ ಸೇತುವೆ ಮೇಲೆ 2 ಬೈಕ್ಗಳ ನಡುವೆ ಅಪಘಾತ
ರಾಯಚೂರು: ರಾಯಚೂರು-ತೆಲಂಗಾಣ ಮಧ್ಯದ ಕೃಷ್ಣಾ ಸೇತುವೆ ಮೇಲೆ ಎರಡು ಬೈಕ್ಗಳ ನಡುವೆ ಮುಖಾಮುಖಿ ಡಿಕ್ಕಿಯಾದ ಘಟನೆ ರಾಯಚೂರು ತಾಲ್ಲೂಕಿನಲ್ಲಿ ಶಕ್ತಿನಗರ ಬಳಿಯ ಕೃಷ್ಣಾ ಬ್ರಿಡ್ಜ್ ಮೇಲೆ ನಡೆದಿದೆ. ಸಧ್ಯ ನಾಲ್ವರ ಸ್ಥಿತಿ ಗಂಭೀರವಾಗಿದ್ದು, ಗಾಯಾಳುಗಳನ್ನು ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇನ್ನು ರಸ್ತೆ ದುರಸ್ಥಿ ಬಳಿಕ ಮಾರ್ಚ್ 2 ರಂದು ಪುನರಾರಂಭವಾಗಿದ್ದ ಅಂತರರಾಜ್ಯ ಸೇತುವೆ ಇದಾಗಿತ್ತು. ಅತೀ ವೇಗವಾಗಿ ಹೊರಟಿದ್ದ ಯುವಕರ ಬೈಕ್ ನಿಯಂತ್ರಣ ತಪ್ಪಿ ಈ ಅಪಘಾತ ಸಂಭವಿಸಿದೆ. ರಾಯಚೂರಿನ ಶಕ್ತಿನಗರ ಹಾಗೂ ತೆಲಂಗಾಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:07 pm, Tue, 5 March 24



