ಕೊನೆಗೂ ಮಲೆಮಹದೇಶ್ವರ ಬೆಟ್ಟದಲ್ಲಿ ಕ್ಯಾಬಿನೆಟ್ ಮೀಟಿಂಗ್ಗೆ ಮುಹೂರ್ತ ಫಿಕ್ಸ್
ಅಂತೂ ಇಂತೂ ಮಲೆ ಮಹದೇಶ್ವರ ಬೆಟ್ಟದಲ್ಲಿ ಸಚಿವ ಸಂಪುಟ ಸಭೆಯ ಮುಹೂರ್ತ ಫಿಕ್ಸ್ ಆಗಿದೆ. ಇದೇ ತಿಂಗಳ 17 ರಂದು ಮಲೆ ಮಹದೇಶ್ವರ ಬೆಟ್ಟದಲ್ಲಿ ಕ್ಯಾಬಿನೆಟ್ ಮೀಟಿಂಗ್ ನಡೆಯಲಿದೆ. ಸದ್ಯ ಸಿದ್ದು ಸಂಪುಟ ಸಭೆಯ ಮೇಲೆ ಗಡಿ ನಾಡ ಜನರ ಚಿತ್ತ ನೆಟ್ಟಿದೆ. ಇದರಿಂದ ಹಿಂದುಳಿದ ಜಿಲ್ಲೆಗೆ ಎಷ್ಟರ ಮಟ್ಟಿಗೆ ಅನುಕೂಲ ಆಗಲಿದೆ? ವಿವರಗಳಿಗೆ ಮುಂದೆ ಓದಿ.

ಚಾಮರಾಜನಗರ, ಫೆಬ್ರವರಿ 7: ಹಿಂದುಳಿದ ಜಿಲ್ಲೆ, ಅಭಿವೃದ್ಧಿ ಕಾಣದ ಜಿಲ್ಲೆ ಎಂಬ ಹಣೆ ಪಟ್ಟಿ ಪಡೆದ ಚಾಮರಾಜನಗರಕ್ಕೆ ಸಿಎಂ ಸಿದ್ದರಾಮಯ್ಯ ಸರ್ಕಾರ ಬಿಗ್ ಗಿಫ್ಟ್ ಕೊಡಲು ಮುಂದಾಗಿದೆ. 1997 ರಲ್ಲಿ ಅಖಂಡ ಮೈಸೂರು ಜಿಲ್ಲೆಯಿಂದ ಬೇರ್ಪಟ್ಟ ಬಳಿಕ ಚಾಮರಾಜನಗರ ಜಿಲ್ಲೆ ಅಬಿವೃದ್ಧಿ ಕುಂಟಿತವಾಯ್ತು. ಶೇಕಡ 48 ಕಾಡನ್ನೆ ಹೊಂದಿರುವ ಈ ಜಿಲ್ಲೆ ಕೇರಳ ಹಾಗೂ ಹಾಗೂ ತಮಿಳುನಾಡಿನ ಗಡಿಯನ್ನು ಹಂಚಿಕೊಂಡಿದೆ. ಟೈಗರ್ ರಿಸರ್ವ್ ಫಾರೆಸ್ಟ್ ಹೊಂದಿರುವ ಬಿಆರ್ಟಿ ಹಾಗೂ ಬಂಡೀಪುರ ಇಡೀ ದೇಶದ ಚಿತ್ತವನ್ನು ತನ್ನತ್ತ ಸೆಳೆಯುವುದರ ಜೊತೆಗೆ ಅಪಾರ ಪ್ರಾಣಿ ವನ್ಯ ಮೃಗ ಹಾಗೂ ಸಸ್ಯಕಾಶಿಯನ್ನು ಹೊಂದಿದೆ.
ಇಷ್ಟೆಲ್ಲ ಅಪಾರ ನೈಸರ್ಗಿಕ ಸಂಪತ್ತು ಹೊಂದಿರುವ ಗಡಿನಾಡು ಚಾಮರಾಜನಗರಕ್ಕೆ ಕಾಲಿಟ್ಟರೆ ಮುಖ್ಯಮಂತ್ರಿಗಳು ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬ ಅಪಖ್ಯಾತಿ ಕೂಡ ಇದೆ. ಈ ಹಣೆಪಟ್ಟಿ ಪಡೆದಿರುವ ಚಾಮರಾಜನಗರದ ಕಳಂಕ ಅಳಿಸಲು ಸಿದ್ದರಾಮಯ್ಯ ಹಾಗೂ ಅವರ ಸರ್ಕಾರ ಮುಂದಾಗಿದೆ. ಇದೇ ಫೆಬ್ರವರಿ 17 ಕ್ಕೆ ಮಲೆಮಹದೇಶ್ವರ ಬೆಟ್ಟದಲ್ಲಿ ಸಚಿವ ಸಂಪುಟ ಸಭೆ ನಡೆಸುವ ಮೂಲಕ ಚಾಮರಾಜನಗರ ಜಿಲ್ಲೆಗೆ ಕೆಲವು ಉಡುಗೊರೆ ನೀಡಲು ಮುಂದಾಗಿದೆ.
ಇತಿಹಾಸದಲ್ಲೇ ಮೊದಲ ಬಾರಿಗೆ ಮಲೆಮಹದೇಶ್ವರ ಬೆಟ್ಟದಲ್ಲಿ ಪೂರ್ಣ ಪ್ರಮಾಣದ ಸಂಪುಟ ಸಭೆ
ಸಿದ್ದರಾಮಯ್ಯ ಮುಖ್ಯಮಂತ್ರಿ ಆದಮೇಲೆ 20ಕ್ಕೂ ಹೆಚ್ಚು ಬಾರಿ ಚಾಮರಾಜನಗರಕ್ಕೆ ಭೇಟಿ ನೀಡಿ ಈ ಮೌಢ್ಯ ತೊಲಗಿಸುವ ಪ್ರಯತ್ನ ಕೂಡ ಪಟ್ಟಿದ್ದಾರೆ. ಅಷ್ಟೇ ಯಾಕೆ, ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಮಲೆಮಹದೇಶ್ವರ ಬೆಟ್ಟದಲ್ಲಿ ಪೂರ್ಣ ಪ್ರಮಾಣದ ಸಂಪುಟ ಸಭೆ ನಡೆಸುವ ಮೂಲಕ ಚಾಮರಾಜನಗರ ಜಿಲ್ಲೆಯ ಅಭಿವೃದ್ಧಿಗೆ ಒತ್ತು ಕೊಡಲು ಮುಂದಾಗಿದ್ದಾರೆ. ಈ ಸಚಿವ ಸಂಪುಟ ಸಭೆಯಲ್ಲಿ ಉದ್ಯೋಗ, ಆಕ್ಸಿಜನ್ ದುರಂತ ಸೇರಿದಂತೆ ಹತ್ತು ಹಲವು ಪ್ರಮುಖ ವಿಚಾರಗಳು ಚರ್ಚೆಯಾಗಲಿವೆ.
ಇದನ್ನೂ ಓದಿ: ಯುವಕರ ಹಠಾತ್ ಸಾವುಗಳ ಆತಂಕ: ಸಂಶೋಧನೆಗೆ ತಜ್ಞರ ಸಮಿತಿ ರಚಿಸಲು ಸಿಎಂ ಸಿದ್ದರಾಮಯ್ಯ ಸೂಚನೆ
ಈ ಕ್ಯಾಬಿನೆಟ್ ಮೀಟಿಂಗ್ ಗಡಿ ನಾಡ ಜನರಿಗೆ ಭಾರೀ ನಿರೀಕ್ಷೆ ಹುಟ್ಟಿಸಿದ್ದು ಚಾಮರಾಜನಗರದ ಸರ್ವಾಂಗೀಣ ಅಭಿವೃದ್ಧಿಗೆ ಈ ಸಚಿವ ಸಂಪುಟ ಸಭೆ ಎಷ್ಟರ ಮಟ್ಟಿಗೆ ಎಷ್ಟರ ಮಟ್ಟಿಗೆ ಅನುಕೂಲ ಆಗಲಿದೆ ಕಾದು ನೋಡಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



