ಚಿಕ್ಕಬಳ್ಳಾಪುರ: ಮಹಾಶಿವರಾತ್ರಿ ಸಂಭ್ರಮದ ಮಧ್ಯೆ ಈಶಾ ಫೌಂಡೇಷನ್ ಬಳಿ ಬೆಂಕಿ
ಚಿಕ್ಕಬಳ್ಳಾಪುರದ ಈಶಾ ಫೌಂಡೇಷನ್ನಲ್ಲಿ ಮಹಾಶಿವರಾತ್ರಿ ಸಂಭ್ರಮ ಮನೆ ಮಾಡಿದ್ದು, ಲಕ್ಷಾಂತರ ಜನ ಸೇರಿದ್ದಾರೆ. ಹೀಗಾಗಿ ಎಲ್ಲೆಡೆ ಟ್ರಾಫಿಕ್ ಜಾಮ್ ಕೂಡ ಉಂಟಾಗಿದ್ದು, ವಾಹನ ಸವಾರರು ಪರದಾಡುತ್ತಿದ್ದಾರೆ. ಇದರ ಮಧ್ಯೆ ಈಶಾ ಫೌಂಡೇಷನ್ ಬಳಿಯ ಅರಣ್ಯದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಜನರಲ್ಲಿ ಆತಂಕ ಸೃಷ್ಟಿಸಿದೆ.

ಚಿಕ್ಕಬಳ್ಳಾಪುರ, ಫೆಬ್ರವರಿ 15: ಕರ್ನಾಟದಲ್ಲಿ ಮಹಾಶಿವರಾತ್ರಿಯ (Maha Shivratri) ಸಡಗರ ಸಂಭ್ರಮ ಮನೆ ಮಾಡಿದೆ. ದೇವಸ್ಥಾನಗಳಲ್ಲಿ ಹಬ್ಬದ ವಾತಾವರಣ ಕಳೆಗಟ್ಟಿದೆ. ಇತ್ತ ಚಿಕ್ಕಬಳ್ಳಾಪುರ ತಾಲೂಕಿನ ಅವಲಗುರ್ಕಿ ಗ್ರಾಮದ ಬಳಿ ಇರುವ ಇಶಾ ಫೌಂಡೇಷನ್ನಲ್ಲೂ ಸಡಗರ ಜೋರಾಗಿದೆ. ಲಕ್ಷಾಂತರ ಭಕ್ತರು 112 ಅಡಿಯ ಆದಿಯೋಗಿ ದರ್ಶನಕ್ಕೆ ಮುಗಿಬಿದ್ದರು. ಇದೇ ವೇಳೆ ನಾಗಮಂಟಪದ ಎದುರುಗಡೆ ಇರುವ ಅರಣ್ಯ ಪ್ರದೇಶದಲ್ಲಿ ಬೆಂಕಿ (Fire) ಕಾಣಿಸಿಕೊಂಡಿದ್ದು, ಆತಂಕ ಸೃಷ್ಟಿಸಿದೆ.
ಮಹಾಶಿವರಾತ್ರಿ ಸಂಭ್ರಮ ಮಧ್ಯೆ ಇಶಾ ಫೌಂಡೇಷನ್ ಬಳಿಯ ನಾಗಮಂಟಪದ ಎದುರುಗಡೆ ಇರುವ ಬೆಟ್ಟದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಅರಣ್ಯದಲ್ಲಿ ದುಷ್ಕರ್ಮಿಗಳು ಬೆಂಕಿ ಹಚ್ಚಿರುವ ಶಂಕೆ ವ್ಯಕ್ತವಾಗಿದೆ. ಮೊದಲೇ ಜನ ಹಾಗೂ ವಾಹನ ಸಂದಣಿಯಿಂದ ತುಂಬಿ ತುಳುಕುತ್ತಿರುವ ಈಶಾ ಫೌಂಡೇಷನ್ನಲ್ಲಿ ಸ್ಥಳಕ್ಕೆ ಬರುವಂತೆ ಅರಣ್ಯ ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿಗೆ ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ಮನವಿ ಮಾಡಿದ್ದಾರೆ.
ಈಶಾ ಫೌಂಡೇಷನ್ಗೆ ಹೋಗಲು ಜನರು ಪರದಾಟ
ಈಶಾ ಫೌಂಡೇಷನ್ಗೆ ಹೋಗಲು ಜನರು ಪರದಾಡಿದ ಘಟನೆ ನಡೆದಿದೆ. ನೂರಕ್ಕೂ ಹೆಚ್ಚು ಬಸ್ಗಳನ್ನು ಬಿಟ್ಟರೂ ಚಿಕ್ಕಬಳ್ಳಾಪುರ ksrtc ಬಸ್ ನಿಲ್ದಾಣದಲ್ಲಿ ಬಸ್ಗಳು ಸಿಗದೆ ಪರದಾಡಿದ್ದಾರೆ. ಬಸ್ ಹತ್ತಲು ಕಿಲೋ ಮೀಟರ್ಗಟ್ಟಲೇ ಕ್ಯೂ ಇತ್ತು. ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಜನರು ಆಗಮಿಸಿದ ಹಿನ್ನಲೆ ಎಷ್ಟು ಬಸ್ಗಳನ್ನು ಬಿಟ್ಟರೂ ಸಾಲದಂತಾಗಿದೆ.
ಎಲ್ಲೆಡೆ ಟ್ರಾಫಿಕ್ ಜಾಮ್
ಈಶಾದ ಆದಿಯೋಗಿ ದರ್ಶನಕ್ಕೆ ಭಕ್ತ ಸಾಗರ ಹರಿದು ಬರುತ್ತಿದೆ. ಈಶಾ ಫೌಂಡೇಷನ್ ಸುತ್ತಮುತ್ತ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ. ಸ್ಥಳೀಯ ಆಡಳಿತ ಮತ್ತು ಪೊಲೀಸರು ಈಶಾ ಫೌಂಡೇಷನ್ ಕಡೆಗೆ ಬಾರದಂತೆ ಸೂಚನೆ ನೀಡಿದ್ದರೂ, ಜನರು ಲೆಕ್ಕಿಸದೆ ಅಲ್ಲಿಗೆ ತೆರಳಲು ಪ್ರಯತ್ನಿಸುತ್ತಿದ್ದಾರೆ. ಇನ್ನು ಕೆಲವರು ಪೊಲೀಸರ ಸೂಚನೆಯನ್ನು ಧಿಕ್ಕರಿಸಿ ಬಲವಂತವಾಗಿ ಒಳನುಗ್ಗಲು ಯತ್ನಿಸಿದ ಪರಿಣಾಮ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.
ಇದನ್ನೂ ಓದಿ: ರಂಗೋಲಿಯಲ್ಲಿ ಅರಳಿದ ಶಿವ: ಡ್ರೋಣ್ ನಲ್ಲಿ ಶಿವನ ಚಿತ್ರ ಸೆರೆ
ನೂರಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿರುವ ವಾಹನ ಪಾರ್ಕಿಂಗ್ ಪುಲ್ ಆಗಿದೆ. ಪೊಲೀಸರೊಂದಿಗೆ ಕೆಲವರು ವಾಗ್ವಾದಕ್ಕೂ ಇಳಿದಿದ್ದಾರೆ. ಜನಸಂದಣಿ ನಿಯಂತ್ರಣಕ್ಕೆ ಪೊಲೀಸರು ಹಾಗೂ ಈಶಾ ಸಿಬ್ಬಂದಿ ಹರಸಾಹಸ ಪಡುವಂತಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:44 pm, Sun, 15 February 26
