ಬೆಂಗಳೂರಿನ 8 ಕಡೆ ಇಡಿ ಅಧಿಕಾರಿಗಳ ದಿಢೀರ್ ದಾಳಿ: ಐಸಿಸ್ ನೆರವು ಹಾಗೂ ಅಕ್ರಮ ಹಣ ವರ್ಗಾವಣೆ ಜಾಲ ಬಯಲು!
ಬಂಧಿತ ಉಗ್ರ ಸಂಘಟನೆ ಐಸಿಸ್ಗೆ ಹಣಕಾಸಿನ ನೆರವು ನೀಡಿದ ಹಾಗೂ ಯುವಕರನ್ನು ಕಾನೂನುಬಾಹಿರವಾಗಿ ಸಿರಿಯಾಗೆ ಕಳುಹಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ಬೆಂಗಳೂರಿನ 8 ಸ್ಥಳಗಳಲ್ಲಿ ದಾಳಿ ನಡೆಸಿದ್ದಾರೆ. 'ಇಕ್ರಾ ಕ್ಯಾಂಪ್' ಹಾಗೂ ವಿವಿಧ ಟ್ರಸ್ಟ್ಗಳ ಮೂಲಕ ಹಣ ಸಂಗ್ರಹಿಸಿ, ಯುವಕರನ್ನು ಉಗ್ರ ಸಂಘಟನೆಗೆ ನೇಮಕಾತಿ ಮಾಡುತ್ತಿದ್ದ ಜಾಲದ ವಿರುದ್ಧ ಎನ್ಐಎ ದಾಖಲಿಸಿದ್ದ ಚಾರ್ಜ್ಶೀಟ್ ಆಧರಿಸಿ ಈ ತನಿಖೆ ತೀವ್ರಗೊಂಡಿದೆ.

ಮುಖ್ಯಾಂಶಗಳು
- ಐಸಿಸ್ ನೆರವು ಪ್ರಕರಣದಲ್ಲಿ ಬೆಂಗಳೂರಿನ 8 ಸ್ಥಳಗಳಲ್ಲಿ ಇಡಿ ದಾಳಿ.
- ಇಕ್ರಾ ಕ್ಯಾಂಪ್ ಮೂಲಕ ಯುವಕರ ಬ್ರೇನ್ವಾಶ್ ಮಾಡಿ ಸಿರಿಯಾಗೆ ರವಾನೆ.
- ಎನ್ಐಎ ತನಿಖೆ ಬೆನ್ನಲ್ಲೇ ಹಣಕಾಸು ಜಾಲ ಜಾಲಾಡುತ್ತಿರುವ ಇಡಿ ಅಧಿಕಾರಿಗಳು.
ಬೆಂಗಳೂರು, ಜುಲೈ 21: ಬಂಧಿತ ಉಗ್ರ ಸಂಘಟನೆ ಐಸಿಸ್ಗೆ (ISIS) ಹಣಕಾಸಿನ ನೆರವು ನೀಡಿದ ಹಾಗೂ ಯುವಕರನ್ನು ಕಾನೂನುಬಾಹಿರವಾಗಿ ವಿದೇಶಕ್ಕೆ ಕಳುಹಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ (ED) ಅಧಿಕಾರಿಗಳು ಮಂಗಳವಾರ ಬೆಳಿಗ್ಗೆ ಬೆಂಗಳೂರಿನ 8 ಪ್ರಮುಖ ಸ್ಥಳಗಳಲ್ಲಿ ದಿಢೀರ್ ದಾಳಿ ನಡೆಸಿದ್ದಾರೆ. ರಾಷ್ಟ್ರೀಯ ತನಿಖಾ ಸಂಸ್ಥೆ (NIA) ದಾಖಲಿಸಿದ್ದ ಎಫ್ಐಆರ್ ಹಾಗೂ ಚಾರ್ಜ್ಶೀಟ್ ಆಧರಿಸಿ ಜಾರಿ ನಿರ್ದೇಶನಾಲಯವು ಪ್ರಕರಣವನ್ನು ಕೈಗೆತ್ತಿಕೊಂಡು ಈ ಕಾರ್ಯಾಚರಣೆ ನಡೆಸಿದೆ.
ಪ್ರಕರಣದ ಹಿನ್ನೆಲೆ
ಆರೋಪಿಗಳು ಬೆಂಗಳೂರಿನ ಮುಸ್ಲಿಂ ಯುವಕರನ್ನು ಐಸಿಸ್ ಸಿದ್ಧಾಂತದತ್ತ ಆಕರ್ಷಿಸಲು ‘ಇಕ್ರಾ ಕ್ಯಾಂಪ್’ ಎಂಬ ವ್ಯಕ್ತಿತ್ವ ವಿಕಾಸ ಕಾರ್ಯಾಗಾರವನ್ನು ಆಯೋಜಿಸುತ್ತಿದ್ದರು. ಇದರ ಮೂಲಕ ಬೆಳೆದ ‘ಕುರ್ಆನ್ ಸರ್ಕಲ್’ ಎಂಬ ವಾರಾಂತ್ಯದ ಅಧ್ಯಯನ ಕೂಟಗಳ ಮೂಲಕ ಯುವಕರನ್ನು ಗುರುತಿಸಿ ಬ್ರೇನ್ವಾಶ್ ಮಾಡಲಾಗುತ್ತಿತ್ತು. ತಮ್ಮ ಸ್ವಂತ ಉಳಿತಾಯ, ಖಾಸಗಿ ವ್ಯಕ್ತಿಗಳು ಹಾಗೂ ‘ಇಕ್ರಾ ವೆಲ್ಫೇರ್ ಟ್ರಸ್ಟ್’ ಮತ್ತು ‘GFM ಟ್ರಸ್ಟ್’ ಗಳ ಮೂಲಕ ಅಕ್ರಮವಾಗಿ ಹಣ ಸಂಗ್ರಹಿಸುತ್ತಿದ್ದರು. ಈ ಹಣವನ್ನು ಯುವಕರ ನೇಮಕಾತಿ ಮತ್ತು ಪ್ರಯಾಣದ ವೆಚ್ಚಕ್ಕೆ ಬಳಸಲಾಗುತ್ತಿತ್ತು ಎಂಬುದು ತನಿಖೆಯಲ್ಲಿ ಪತ್ತೆಯಾಗಿದೆ.
ಟರ್ಕಿ ಮಾರ್ಗವಾಗಿ ಸಿರಿಯಾಗೆ ರವಾನೆ
ಬ್ರೇನ್ವಾಶ್ಗೊಳಗಾದ ಯುವಕರನ್ನು ಟರ್ಕಿಯ ಮಾರ್ಗವಾಗಿ ಸಿರಿಯಾಗೆ ಅಕ್ರಮವಾಗಿ ಕಳುಹಿಸಿ, ಭಾರತ ಸರ್ಕಾರದೊಂದಿಗೆ ಮೈತ್ರಿ ಹೊಂದಿರುವ ಸಿರಿಯಾ ಸರ್ಕಾರದ ವಿರುದ್ಧ ಐಸಿಸ್ ಪರವಾಗಿ ಯುದ್ಧ ಮಾಡಲು ನೆರವು ನೀಡಲಾಗುತ್ತಿತ್ತು ಎಂದು ಎನ್ಐಎ ತನ್ನ ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಿದೆ.
ಸಿಎಎ (CAA) ಮತ್ತು ಎನ್ಆರ್ಸಿ (NRC) ವಿರೋಧಿ ಪ್ರತಿಭಟನೆಗಳ ಸಂದರ್ಭದಲ್ಲಿ ಯುವಕರ ಭಾವನೆಗಳನ್ನು ದುರುಪಯೋಗಪಡಿಸಿಕೊಂಡು ಮುಸ್ಲಿಮೇತರರ ವಿರುದ್ಧ ಪ್ರಚೋದನೆ ನೀಡಲಾಗಿತ್ತು. ಜೊತೆಗೆ ಸುರಕ್ಷಿತ ಸಾಮಾಜಿಕ ಮಾಧ್ಯಮ ವೇದಿಕೆಗಳ ಮೂಲಕ ಐಸಿಸ್ ಸಿದ್ಧಾಂತವನ್ನು ಪಸರಿಸಲು ಸಂಚು ರೂಪಿಸಲಾಗಿತ್ತು. ಪ್ರಸ್ತುತ ಇಡಿ ಅಧಿಕಾರಿಗಳು ವಿವಿಧ ಟ್ರಸ್ಟ್ಗಳು ಹಾಗೂ ಶಂಕಿತರ ನಿವಾಸಗಳಲ್ಲಿ ದಾಖಲೆಗಳನ್ನು ಪರಿಶೀಲಿಸುತ್ತಿದ್ದು, ತನಿಖೆ ತೀವ್ರಗೊಳಿಸಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



