ವಕ್ಫ್ ವಿವಾದ: ಉಳಿಮೆ ಮಾಡುತ್ತಿದ್ದ ರೈತರ ವಿರುದ್ಧ ಕೇಸ್ ದಾಖಲು
ಚಿಕ್ಕಬಳ್ಳಾಪುರದ ತಿಮ್ಮಸಂದ್ರದಲ್ಲಿ ವಕ್ಫ್ ಆಸ್ತಿ ವಿವಾದದಿಂದ ರೈತರು ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ. ರೈತರ ಜಮೀನುಗಳ ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ನಮೂದು ಆಗಿದೆ. ತಮ್ಮ ಜಮೀನಿನಲ್ಲಿ ರೈತರು ಉಳುಮೆ ಮಾಡಲು ಹೋದಾಗ ಪೊಲೀಸರು ಟ್ರಾಕ್ಟರ್ ವಶಕ್ಕೆ ಪಡೆದುಕೊಂಡಿದ್ದಾರೆ. ಈ ವಿವಾದದಿಂದ ರೈತರಲ್ಲಿ ಆಕ್ರೋಶ ಹೆಚ್ಚಾಗಿದೆ.

ಚಿಕ್ಕಬಳ್ಳಾಪುರ, ನವೆಂಬರ್ 15: ಕರ್ನಾಟಕದಲ್ಲಿ (Karnataka) ವಕ್ಫ್ ಆಸ್ತಿ ವಿವಾದ (Waqf Board Controversy) ಜೋರಾಗಿದೆ. ವಕ್ಫ್ ಆಸ್ತಿ ವಿವಾದ ಚಿಕ್ಕಬಳ್ಳಾಪುರಕ್ಕೂ ಕಾಲಿಟ್ಟಿದೆ. ಚಿಂತಾಮಣಿ ತಾಲೂಕಿನ ತಿಮ್ಮಸಂದ್ರ ಗ್ರಾಮದಲ್ಲಿ ರೈತರ ಜಮೀನ ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ನಮೂದು ಆಗಿದೆ. ಇದರಿಂದ ರೈತರು ಸರ್ಕಾರದ ವಿರುದ್ಧ ಆಕ್ರೋಶಗೊಂಡಿದ್ದಾರೆ. ವಕ್ಫ್ ಆಸ್ತಿ ಅಂತ ನಮೂದಾದ ಜಮೀನಿನಲ್ಲಿ ಉಳಿಮೆ ಮಾಡಲು ಮುಂದಾಗಿದ್ದ ರೈತರ ಟ್ರ್ಯಾಕ್ಟರ್ ಅನ್ನು ವಶಕ್ಕೆ ಪಡೆದು ದೂರು ದಾಖಲಿಸಿಕೊಂಡಿದ್ದಾರೆ.
ರೈತರಾದ ಟಿ.ಎನ್ ಬೈರಾರೆಡ್ಡಿ, ಎನ್.ಮುನಿರೆಡ್ಡಿ, ಎನ್ ಚನ್ನಕೃಷ್ಣಪ್ಪ, ಲಕ್ಷ್ಮಿದೇವಮ್ಮ, ನಾರಾಯಣಪ್ಪ, ವೆಂಕಟರೆಡ್ಡಿ, ಶ್ರೀರಾಮರೆಡ್ಡಿ, ನಾಗಮ್ಮ, ಕೆ.ಲಕ್ಷ್ಮಮ್ಮ, ಮುನಿಲಕ್ಷ್ಮಮ್ಮ ಸೇರಿದಂತೆ 10ಕ್ಕೂ ಹೆಚ್ಚು ರೈತರಿಗೆ ಸೇರಿದ ಸರ್ವೆ ನಂಬರ್ 13/1ರಲ್ಲಿ 2 ಎಕರೆ 21 ಗುಂಟೆ, 13/3 ರಲ್ಲಿ 20 ಗುಂಟೆ, ಸರ್ವೆ ನಂಬರ್ 20ರಲ್ಲಿರುವ 1 ಎಕರೆ 36 ಗುಂಟೆ ಜಮೀನಿನ ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ನಮೂದು ಆಗಿದೆ.
ಇದನ್ನೂ ಓದಿ: ಧಾರವಾಡ ತಾಲೂಕಿನಲ್ಲಿ ಉಂಟಾಗಿದ್ದ ವಕ್ಫ್ ಆಸ್ತಿ ಗೊಂದಲಗಳಿಗೆ ಕೊನೆಗೂ ತೆರೆ: ನಿಟ್ಟುಸಿರು ಬಿಟ್ಟ ರೈತರು
ಇದರಿಂದ ಆಕ್ರೋಶಗೊಂಡ ರೈತರು, ಚಿಂತಾಮಣಿ ಜಾಮಿಯಾ ಮಸೀದಿ ಸದಸ್ಯರು ಮತ್ತು ಪೊಲೀಸರ ಜೊತೆ ವಾಗ್ವಾದ ನಡೆಸಿದರು. ನಂತರ 10ಕ್ಕೂ ಹೆಚ್ಚು ರೈತರು ವಿವಾದಿತ ಜಮೀನುಗಳಲ್ಲಿ ಉಳುಮೆ ಮಾಡಲು ಮುಂದಾಗಿದ್ದಕ್ಕೆ ಚಿಂತಾಮಣಿ ಜಾಮಿಯಾ ಮಸೀದಿ ಕಾರ್ಯಾದರ್ಶಿ ದೂರಿನ ಆಧಾರದ ಮೇಲೆ BNS ಸೆಕ್ಷನ್ 324(4), 329(3)ರಡಿ ಪ್ರಕರಣ ದಾಖಲಾಗಿದೆ.
ತಿಮ್ಮಸಂದ್ರ ಗ್ರಾಮಕ್ಕೆ ಚಿಕ್ಕಬಳ್ಳಾಪುರ ಎಸ್ಪಿ ಕುಶಲ್ ಚೌಕ್ಸೆ ಹಾಗೂ ಎಎಸ್ಪಿ ಆರ್.ಐ.ಕಾಸಿಂ ಭೇಟಿ ಪರಿಶೀಲನೆ ನಡೆಸಿದರು. ಗ್ರಾಮದಲ್ಲಿ ಪೊಲೀಸರು ಠಿಕಾಣಿ ಹೂಡಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:12 pm, Fri, 15 November 24




