ಚರ್ಚ್​ ಎದುರು ನಿಂತು ಮತಾಂತರದ ಬಗ್ಗೆ ಪ್ರಶ್ನಿಸಿದ ಶಾಸಕ ಗೂಳಿಹಟ್ಟಿ ಶೇಖರ್

ಚರ್ಚ್​ನಿಂದ ಪ್ರಾರ್ಥನೆ ಮುಗಿಸಿ ಹೊರಬರುತ್ತಿದ್ದವರನ್ನು ನೀವು ಮತಾಂತರವಾಗಿ ಎಷ್ಟು ವರ್ಷಗಳಾಗಿವೆ ಎಂದು ಶಾಸಕ ಗೂಳಿಹಟ್ಟಿ ಶೇಖರ್ ಪ್ರಶ್ನಿಸಿದರು.

ಚರ್ಚ್​ ಎದುರು ನಿಂತು ಮತಾಂತರದ ಬಗ್ಗೆ ಪ್ರಶ್ನಿಸಿದ ಶಾಸಕ ಗೂಳಿಹಟ್ಟಿ ಶೇಖರ್
ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್
Edited By:

Updated on: Dec 19, 2021 | 3:56 PM

ಚಿತ್ರದುರ್ಗ: ಕರ್ನಾಟಕದಲ್ಲಿ ಮತಾಂತರದ ಚರ್ಚೆ ಕಾವೇರಿದೆ. ಮತಾಂತರ ನಿಷೇಧ ಕಾನೂನು ಜಾರಿಗೆ ತರಲು ಮುಂದಾಗಿರುವ ರಾಜ್ಯ ಸರ್ಕಾರ ಈ ಸಂಬಂಧ ಮಸೂದೆ ಮಂಡಿಸಲು ಸಿದ್ಧತೆ ಮಾಡಿಕೊಳ್ಳುತ್ತಿದೆ. ಕಳೆದ ಬಾರಿಯ ವಿಧಾನಸಭಾ ಅಧಿವೇಶನದಲ್ಲಿ ‘ನನ್ನ ತಾಯಿಯೇ ಮತಾಂತರವಾಗಿದ್ದಾರೆ’ ಎಂದು ತಿಳಿಸುವ ಮೂಲಕ ಸಂಚಲನ ಮೂಡಿಸಿದ್ದ ಹೊಸದುರ್ಗ ಕ್ಷೇತ್ರದ ಗೂಳಿಹಟ್ಟಿ ಶೇಖರ್ ಇದೀಗ ಮತ್ತೊಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಚರ್ಚ್​ ಎದುರು ನಿಂತು ನೀವು ಮತಾಂತರವಾಗಿ ಎಷ್ಟು ವರ್ಷಗಳಾಗಿವೆ ಎಂದು ಪ್ರಶ್ನಿಸಿದ್ದಾರೆ. ಹೊಸದುರ್ಗದ ಶಾಂತಿನಗರ ಚರ್ಚ್​ ಎದುರು ನಿಂತ ಗೂಳಿಹಟ್ಟಿ ಶೇಖರ್, ಪ್ರಾರ್ಥನೆ ಮುಗಿಸಿ ಹೊರಗೆ ಬಂದವರನ್ನು ‘ನೀವು ಯಾವ ಊರಿನವರು, ಯಾವ ಸಮುದಾಯ, ಎಷ್ಟು ವರ್ಷಗಳ ಹಿಂದೆ ಕ್ರೈಸ್ತ ಧರ್ಮಕ್ಕೆ ಮತಾಂತರ ಆದಿರಿ’ ಎಂದು ಕೇಳಿದರು. ‘ನಾವು ಹಲವು ವರ್ಷಗಳಿಂದ ಚರ್ಚ್​ಗೆ ಬರುತ್ತಿದ್ದೇವೆ. ಬಹಳ ಹಿಂದೆಯೇ ಮತಾಂತರ ಆಗಿದ್ದೇವೆ. ಚರ್ಚ್​ಗೆ ಬರಲು ಶುರುಮಾಡಿದ ನಂತರ ಆರೋಗ್ಯ ಸುಧಾರಿಸಿದೆ’ ಎಂದು ಹಲವಾರು ಜನರು ಉತ್ತರಿಸಿದರು. ಚರ್ಚ್​ ಬಳಿ ಗೂಳಿಹಟ್ಟಿ ಶೇಖರ್​ ಪ್ರಶ್ನಿಸುತ್ತಿರುವ ವಿಡಿಯೊ ಇದೀಗ ವೈರಲ್​ ಆಗಿದೆ.

ಸರ್ಕಾರವು ಪ್ರಸ್ತಾಪಿಸಿರುವ ಮತಾಂತರ ನಿಷೇಧ ಮಸೂದೆಯಲ್ಲಿ ಈ ಕೆಳಕಂಡ ಅಂಶಗಳಿವೆ…
1) ಬಲವಂತದ ಮತಾಂತರ ಶಿಕ್ಷಾರ್ಹ ಎಂಬ ಪ್ರಕಾರವೇ ವಿಧೇಯಕ ಸಿದ್ಧತಾ ಹಂತದಲ್ಲಿದೆ
2) ಯಾವುದೇ ವ್ಯಕ್ತಿ ಅಥವಾ ಸಮುದಾಯದ ಬಲವಂತದ ಮತಾಂತರ ಮಾಡುವಂತಿಲ್ಲ
3) ವ್ಯಕ್ತಿ ಮತಾಂತರ ಹೊಂದಬೇಕಾದರೆ ಸಕ್ಷಮ ಪ್ರಾಧಿಕಾರದ ಮುಂದೆ 2 ತಿಂಗಳ ಮೊದಲು ಅರ್ಜಿ ಸಲ್ಲಿಸಬೇಕು
4) ಮತಾಂತರ ಪ್ರಕ್ರಿಯೆ ನಡೆಸಬೇಕಾದರೂ ಸಕ್ಷಮ‌ ಪ್ರಾಧಿಕಾರದ ಮುಂದೆ 2 ತಿಂಗಳ ಮೊದಲು ಅರ್ಜಿ ಸಲ್ಲಿಸಬೇಕು
5) ಅರ್ಜಿ ಸಲ್ಲಿಸಿದ ವ್ಯಕ್ತಿ ತನ್ನ ಇಚ್ಛೆಗೆ ಅನುಗುಣವಾಗಿ ನೀಡಿರುವ ಅರ್ಜಿ ಹಿಂಪಡೆಯಲು ಸ್ವತಂತ್ರ
6) ಮತಾಂತರ ಆಗಲು ಬಯಸುವ ವ್ಯಕ್ತಿಯ ಖಾಸಗಿತನ ಕಾಪಾಡಲು ಮತ್ತು ಧಾರ್ಮಿಕ ಹಕ್ಕನ್ನು ಕಾಪಾಡಲು ಮತಾಂತರ ಪ್ರಕ್ರಿಯೆ ಗೌಪ್ಯವಾಗಿಡುವಂತಿಲ್ಲ
7) ಮತಾಂತರ ಪ್ರಕ್ರಿಯೆಯೊಳಗೆ ಯಾವುದೇ ವ್ಯಕ್ತಿಯನ್ನು ಬಲವಂತವಾಗಿ ತೊಡಗುವಂತೆ ಮಾಡಲು ಅವಕಾಶವಿಲ್ಲ
8) ಬಲವಂತದ ಮತಾಂತರ ಮಾಡುವ ಅಥವಾ ಮತಾಂತರಕ್ಕೆ ಪ್ರಚೋದನೆ ನೀಡುವ ವ್ಯಕ್ತಿಯನ್ನು ಬಂಧಿಸಲು ಅವಕಾಶ
9) ಬಂಧಿತನಾಗುವ ವ್ಯಕ್ತಿಗೆ ಜಾಮೀನು ಪಡೆಯಲು ಅವಕಾಶ ಇಲ್ಲದಂತೆ, ಜಾಮೀನುರಹಿತ ಎಂದು ಪರಿಗಣಿಸುವುದು
10) ಮತಾಂತರ ಪ್ರಕ್ರಿಯೆ ಯಾವುದೇ ಧಾರ್ಮಿಕ ಕಟ್ಟಡಗಳು, ಪ್ರಾರ್ಥನಾ ಕೇಂದ್ರಗಳಲ್ಲಿ ಮಾಡುವಂತಿಲ್ಲ
11) ಮತಾಂತರ ಪ್ರಕ್ರಿಯೆ ಕಾನೂನುಬದ್ಧವಾಗಿ ನಡೆಯುತ್ತಿದ್ದಲ್ಲಿ ನಿಗದಿತ ಪ್ರಕ್ರಿಯೆಯನ್ನು ತಟಸ್ಥ ಪ್ರದೇಶದಲ್ಲಿ ಮಾಡುವುದು ಕಡ್ಡಾಯ

ಇದನ್ನೂ ಓದಿ: ನನ್ನ ತಾಯಿಯಿಂದಲೇ ಮರಳಿ ಹಿಂದೂ ಧರ್ಮಕ್ಕೆ ಸೇರುವ ಅಭಿಯಾನ ಆರಂಭ; ಶಾಸಕ ಗೂಳಿಹಟ್ಟಿ ಶೇಖರ್
ಇದನ್ನೂ ಓದಿ: ಕ್ರೈಸ್ತ ಧರ್ಮಕ್ಕೆ ಮತಾಂತರ ವಿವಾದ ಹಿನ್ನೆಲೆ: ಹೊಸದುರ್ಗ ತಹಶೀಲ್ದಾರ್ ತಿಪ್ಪೇಸ್ವಾಮಿ ದಿಢೀರ್ ವರ್ಗಾವಣೆ

Loading...
Unable to load recommendations.
Follow Us