ಕೇಂದ್ರ ಸರ್ಕಾರದ ಜನಗಣತಿ ಜೊತೆಗೆ ಜಾತಿಗಣತಿ ನಿರ್ಧಾರ ಸ್ವಾಗತಿಸುವೆ: ಸಿದ್ದರಾಮಯ್ಯ
ಸಿದ್ದರಾಮಯ್ಯನವರು ಕೇಂದ್ರ ಸರ್ಕಾರದ ಜಾತಿ ಗಣತಿ ನಿರ್ಧಾರವನ್ನು ಸ್ವಾಗತಿಸಿದ್ದು, ರಾಹುಲ್ ಗಾಂಧಿಯವರನ್ನು ಶ್ಲಾಘಿಸಿದ್ದಾರೆ. ಬಿಜೆಪಿಯನ್ನು ತೀವ್ರವಾಗಿ ಟೀಕಿಸಿದ ಅವರು, ಜಾತಿ ಗಣತಿ ಜೊತೆಗೆ ಆರ್ಥಿಕ ಮತ್ತು ಸಾಮಾಜಿಕ ಸಮೀಕ್ಷೆ ನಡೆಸುವಂತೆ ಒತ್ತಾಯಿಸಿದ್ದಾರೆ. ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹೆಚ್ಚಳದ ಅಗತ್ಯವನ್ನು ಅವರು ಪ್ರಸ್ತಾಪಿಸಿದ್ದಾರೆ.

ಬೆಂಗಳೂರು, ಮೇ 01: ಕೇಂದ್ರ ಸರ್ಕಾರ (Central Government) ಜನಗಣತಿ ಜೊತೆಗೆ ಜಾತಿ ಗಣತಿ (Caste census) ಮಾಡುಲು ಕೈಗೊಂಡಿರುವ ನಿರ್ಧಾರವನ್ನು ಸ್ವಾಗತಿಸುತ್ತೇನೆ. ಈ ವಿಚಾರದಲ್ಲಿ ಸಂಸದ ರಾಹುಲ್ ಗಾಂಧಿ ಹಾಗೂ ಕೇಂದ್ರ ಸರ್ಕಾರವನ್ನು ನಾನು ಅಭಿನಂದಿಸುವೆ. ಪ್ರಧಾನಿ ಮೋದಿ ಅವರಿಗಿಂತ ರಾಹುಲ್ ಗಾಂಧಿಯವರನ್ನು ನಾನು ಅಭಿನಂದಿಸುತ್ತೇನೆ. ಕಳೆದ ಎರಡೂವರೆ ವರ್ಷಗಳಿಂದ ಜಾತಿಗಣತಿಗೆ ರಾಹುಲ್ ಗಾಂಧಿಯವರು ಒತ್ತಾಯಿಸಿದ್ದರು. ನಾಯಕ ರಾಹುಲ್ ಗಾಂಧಿಯವರನ್ನು ಅಭಿನಂದಿಸುವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹೇಳಿದರು.
ಕಾವೇರಿ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜನಸಂಖ್ಯೆ ಅನುಗುಣವಾಗಿ ಮೀಸಲಾತಿ ಪ್ರಮಾಣ ಹೆಚ್ಚಿಸಬೇಕು. ಇದನ್ನೇ ನಾವು ಪ್ರಣಾಳಿಕೆಯಲ್ಲಿ ಭರವಸೆ ನೀಡಿದ್ದೆವು. ರಾಹುಲ್ ಗಾಂಧಿಯವರು ಪದೇಪದೆ ಒತ್ತಡ ಹಾಕಿದ್ದರಿಂದ ನಿರ್ಧಾರ ಕೈಗೊಂಡಿದ್ದಾರೆ. ಬಿಹಾರ ಚುನಾವಣೆ ಹಿನ್ನೆಲೆಯಲ್ಲಿ ಆತುರವಾಗಿ ನಿರ್ಧಾರ ಕೈಗೊಂಡಿದ್ದಾರೆ. ಕೇವಲ ಜನಗಣತಿ ಜೊತೆಗೆ ಜಾತಿಗಣತಿ ನಡೆಸಿದರೆ ಸಾಲದು, ಕೇಂದ್ರ ಸರ್ಕಾರ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯನ್ನೂ ನಡೆಸಲಿ ಎಂದು ಒತ್ತಾಯಿಸಿದರು.
2015ರಲ್ಲೇ 192 ಕೋಟಿ ರೂ. ಖರ್ಚು ಮಾಡಿ ಸಮೀಕ್ಷೆ ನಡೆಸಿದ್ದೇವೆ. ಜಾತಿಗಣತಿ ವರದಿಯನ್ನು ಸ್ವೀಕರಿಸಿ ಸಂಪುಟದಲ್ಲಿ ಮಂಡಿಸಲಾಗಿದೆ. ಸಚಿವರ ಅಭಿಪ್ರಾಯವನ್ನು ಪಡೆದು ಮುಂದೆ ನಿರ್ಧಾರ ಕೈಗೊಳ್ಳುತ್ತೇವೆ. ಬಿಜೆಪಿಯವರು ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿರುವವರು. ಎಲ್ಲ ಆಯೋಗಗಳ ವರದಿಯನ್ನೂ ಬಿಜೆಪಿಯವರು ವಿರೋಧಿಸಿದ್ದಾರೆ. ಇತಿಹಾಸ ನೋಡಿದರೆ ಎಂದೂ ಸಾಮಾಜಿಕ ನ್ಯಾಯದ ಪರವಾಗಿ ಬಿಜೆಪಿಯವರು ಇಲ್ಲ ಎಂದು ವಾಗ್ದಾಳಿ ಮಾಡಿದರು.
ನಿರ್ದಿಷ್ಟ ಸಮಯದೊಳಗೆ ಕೇಂದ್ರ ಸರ್ಕಾರ ಜಾತಿಗಣತಿ ಮುಗಿಸಲಿ. ಕೇಂದ್ರ ಸರ್ಕಾರ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯನ್ನು ನಡೆಸಲಿ. ತಮಿಳುನಾಡಿನಲ್ಲಿ ಶೇ 63 ರಷ್ಟು ಮೀಸಲಾತಿ ಇದೆ, ಜಾರ್ಖಂಡ್ನಲ್ಲಿ ಶೇ 77 ರಷ್ಟು ಮೀಸಲಾತಿ ಇದೆ.ಅನೇಕ ರಾಜ್ಯಗಳಲ್ಲಿ ಮೀಸಲಾತಿ 50% ಮೀರಿ ಹೋಗಿದೆ ಎಂದು ತಿಳಿಸಿದರು.
ಇದನ್ನೂ ನೋಡಿ: ಜಾತಿ ಗಣತಿ: ಕೇಂದ್ರ ಸರ್ಕಾರದ ನಿರ್ಧಾರವನ್ನು ನಮ್ಮ ಸರ್ಕಾರ ಸ್ವಾಗತಿಸುತ್ತದೆ ಎಂದ ಡಿಕೆ ಶಿವಕುಮಾರ್
ಹೀಗಾಗಿ, ಜನಸಂಖ್ಯೆಗೆ ಅನುಗುಣವಾಗಿ ಬಡತನ ಸಾಮಾಜಿಕ ಪರಿಸ್ಥಿತಿ ನೋಡಬೇಕು, ಸಾಮಾಜಿಕ, ಶೈಕ್ಷಣಿಕವಾಗಿ ಹಿಂದುಳಿದವರು ಮೀಸಲಾತಿಗೆ ಅರ್ಹರು. ಕೇಂದ್ರ ಸರ್ಕಾರ ಇದನ್ನು ಆರ್ಥಿಕವಾಗಿ ಹಿಂದುಳಿದವರು ಅಂತಾ ಹೇಳಬೇಕು. ಜಾತಿಗಣತಿ ಸರ್ವೆ ಆಗಲೇಬೇಕು, ಇದು ಪಕ್ಷ ಮತ್ತು ಮಲ್ಲಿಕಾರ್ಜುನ ಖರ್ಗೆಯವರ ನಿಲುವಾಗಿದೆ ಎಂದರು.
ವರದಿ: ಈರಣ್ಣ ಬಸವ