RSS ಕಾರ್ಯಕರ್ತನಿಗೆ ಮಹತ್ವದ ಹುದ್ದೆ: ಸಿದ್ದರಾಮಯ್ಯ ವಿರುದ್ಧ ಸಿಡಿದೆದ್ದ ಕೈ ಕಾರ್ಯಕರ್ತರು
ಸಚಿವ ಪ್ರಿಯಾಂಕ್ ಖರ್ಗೆ ಪತ್ರ ಬೆನ್ನಲ್ಲೇ ಸಿದ್ದರಾಮಯ್ಯ ಸರ್ಕಾರ, ಆರ್ಎಸ್ಎಸ್ ಅನ್ನ ಗುರಿಯಾಗಿಸಿಕೊಂಡು ಇತರೆ ಸಂಘ, ಸಂಸ್ಥೆಗಳಿಗೆ ಮೂಗುದಾರ ಹಾಕಿದೆ. ಅಲ್ಲದೇ ಆರ್ಎಸ್ಎಸ್ ಪಥಸಂಚಲನದಲ್ಲಿ ಭಾಗವಹಿಸಿದ ಸರ್ಕಾರಿ ಹಾಗೂ ಗುತ್ತಿಗೆ ನೌಕರರನ್ನು ಸಸ್ಪೆಂಡ್ ಮಾಡಲಾಗಿದೆ. ಈ ಎಲ್ಲಾ ಬೆಳವಣಿಗೆಗಳ ನಡುವೆ ಇದೀಗ ಅದೇ ಆರ್ಎಸ್ಎಸ್ ಕಾರ್ಯಕರ್ಯರೊಬ್ಬರಿಗೆ ಸರ್ಕಾರ ಮಹತ್ವದ ಹುದ್ದೆ ನೀಡಿದ್ದು, ಇದು ಕಾಂಗ್ರೆಸ್ನಲ್ಲಿ ಸಂಚಲನ ಮೂಡಿಸಿದ್ದು, ಕೈ ಕಾರ್ಯಕರ್ತರು ತಮ್ಮದೇ ಸರ್ಕಾರದ ನಡೆಗೆ ಸಿಡಿದೆದ್ದಿದ್ದಾರೆ.

ಬೆಂಗಳೂರು,(ಅಕ್ಟೋಬರ್ 26): ಸಾರ್ವಜನಿಕ ಸ್ಥಳಗಳಲ್ಲಿ ಆರ್ಎಸ್ಎಸ್ (RSS) ಕಾರ್ಯಚಟುವಟಿಕೆಗಳನ್ನು ರದ್ದುಗೊಳಿಡಿಸುವಂತೆ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಸಿಎಂ ಸಿದ್ದರಾಮಯ್ಯಗೆ (CM Siddaramaiah) ಪತ್ರ ಬರೆದ ಬೆನ್ನಲ್ಲೇ ರಾಜ್ಯ ಕಾಂಗ್ರೆಸ್ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ಆರ್ಎಸ್ಎಸ್ ಸೇರಿದಂತೆ ಇತರೆ ಸಂಘ, ಸಂಸ್ಥೆಗಳು ಸರ್ಕಾರಿ ಸ್ಥಳಗಳಲ್ಲಿ ಕಾರ್ಯಕ್ರಮ ಆಯೋಜನೆಗೆ ಬ್ರೇಕ್ ಹಾಕಿದೆ. ಬಳಿಕ ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿದ್ದು, ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರ ಆರೋಪ ಪ್ರತ್ಯಾರೋಪಗಳು ಜೋರಾಗಿವೆ. ಇದರ ನಡುವೆ ಆರ್ಎಸ್ಎಸ್ ಕಾರ್ಯಕರ್ತರೊಬ್ಬರನ್ನ ಯಶಸ್ವಿನಿ ಸಹಕಾರಿ ಸದಸ್ಯರ ಆರೋಗ್ಯ ರಕ್ಷಣಾ ಟ್ರಸ್ಟ್ಗೆ ಸದಸ್ಯರನ್ನಾಗಿ ನೇಮಕ ಮಾಡಿದ್ದು, ಇದೀಗ ಕಾಂಗ್ರೆಸ್ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ.
ತಿಪಟೂರಿನ RSS ಸದಸ್ಯ ಡಾ.ಶ್ರೀಧರ್ ಕುಮಾರ್ ಅವರನ್ನು ಯಶಸ್ವಿನಿ ಸಹಕಾರಿ ಸದಸ್ಯರ ಆರೋಗ್ಯ ರಕ್ಷಣಾ ಟ್ರಸ್ಟ್ ಸದಸ್ಯರನ್ನಾಗಿ ಸರ್ಕಾರ ನೇಮಕ ಮಾಡಿದೆ. ಕೆಎನ್ ರಾಜಣ್ಣ ರಾಜೀನಾಮೆ ಬಳಿಕ ಸಹಕಾರ ಇಲಾಖೆ ಸಿಎಂ ಸಿದ್ದರಾಮಯ್ಯ ಬಳಿಯೇ ಇದೆ. ಇದೀಗ ಅವರೇ ನೇಮಕ ಮಾಡಿದ್ದಾರೆ ಎಂದು ಕಾಂಗ್ರೆಸ್ ಕಾರ್ಯಕರ್ತರ ಆಕ್ರೋಶ ಭುಗಿಲೆದ್ದಿದ್ದು, ಟ್ರಸ್ಟ್ನ ಮಹಾಪೋಷಕರಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೂಡಲೇ ಟ್ರಸ್ಟ್ ಸದಸ್ಯತ್ವ ವಾಪಸ್ ಪಡೆಯುಂತೆ ಆಗ್ರಹಿಸಿದ್ದಾರೆ.
ಇದನ್ನೂ ಓದಿ: RSS ಪಥ ಸಂಚಲನದಲ್ಲಿ ಭಾಗಿಯಾಗಿದ್ದ ಮತ್ತೋರ್ವ ಸಿಬ್ಬಂದಿ ಸಸ್ಪೆಂಡ್: ಸರ್ಕಾರಿ ನೌಕರಲ್ಲೀಗ ಆತಂಕ
ಕರ್ನಾಟಕದ ಕೆಲವು ರಾಜ್ಯ ಸರ್ಕಾರಿ ನೌಕರರು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಪಥಸಂಚಲನದಲ್ಲಿ ಭಾಗವಹಿಸಿರುವ ವಿಷಯವು ರಾಜ್ಯ ಸರ್ಕಾರದ ಸಂಪುಟದಲ್ಲಿ ಬಿರುಸಿನ ಚರ್ಚೆಗೆ ಕಾರಣವಾಗಿದ್ದು, ಇದೀಗ ಆರ್ಎಸ್ಎಸ್ ಹೆಸರು ಉಲ್ಲೇಖಿಸದೇ ನಿಯಮ ಜಾರಿ ಮಾಡಿದೆ. ಇದರ ಬೆನ್ನಲ್ಲೇ ಆರ್ಎಸ್ಎಸ್ ಪಥಸಂಚಲನದಲ್ಲಿ ಭಾಗಿಯಾಗಿದ್ದ ಸರ್ಕಾರಿ ಹಾಗೂ ಗುತ್ತಿಗೆ ನೌಕರರನ್ನು ಸಸ್ಪೆಂಡ್ ಮಾಡಲಾಗಿದ್ದು, ಆಡಳಿತರೂಢ ಕಾಂಗ್ರೆಸ್ ಹಾಗೂ ವಿಪಕ್ಷ ಬಿಜೆಪಿ ನಾಯಕರ ನಡುವಿನ ಕಿತ್ತಾಟ ತಾರಕಕ್ಕೇರಿದೆ. ಈ ಎಲ್ಲಾ ಬೆಳವಣಿಗಳ ನಡುವೆ ಸರ್ಕಾರದ ಈ ನೇಮಕ ರಾಜ್ಯದ ರಾಜಕೀಯದಲ್ಲಿ ಹೊಸ ಚರ್ಚೆಗೆ ಎಡೆಮಾಡಿಕೊಟ್ಟಿದೆ.
ಪ್ರಿಯಾಂಕ್ ಖರ್ಗೆ ಪತ್ರ ಬರೆದ ಬೆನ್ನಲ್ಲೇ ಸರ್ಕಾರ, ಆರ್ಎಸ್ಎಸ್ಗೆ ಪರೋಕ್ಷವಾಗಿ ಅಂಕುಶ ಹೇರಿದೆ. ಸರ್ಕಾರ ಈ ನಿಯಮವನ್ನು ಆರ್ಎಸ್ಎಸ್ ಸೇರಿ ಸಾಮಾನ್ಯವಾಗಿ ಎಲ್ಲ ಸಂಘಟನೆಗಳಿಗೆ ಅನ್ವಯವಾಗುವಂತೆ ರೂಪಿಸಿದೆ. ಈ ಮೂಲಕ ಇದರಿಂದ ರಾಜಕೀಯ ವಿವಾದವನ್ನು ತಪ್ಪಿಸಲು ಸರ್ಕಾರ ಎಚ್ಚರಿಕೆ ವಹಿಸಿದೆ. ಸರ್ಕಾರಿ ಆಸ್ತಿಗಳನ್ನು ಇತರೆ ಕಾರ್ಯಕ್ರಮಗಳಿಗೆ ದುರುಪಯೋಗವನ್ನು ತಡೆಯುವುದು ಸರ್ಕಾರದ ಜವಾಬ್ದಾರಿ ಎಂದು ಸುತ್ತೋಲೆಯಲ್ಲಿ ಇದ್ದರೂ ಸಹ ಈ ನಿಯಮ ಆರ್ಎಸ್ಎಸ್ ಚಟುವಟಿಕೆ ಬ್ಯಾನ್ ಮಾಡುವ ಆದೇಶದಂತಿದ್ದು, ಇದು ಮತ್ತಷ್ಟು ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.




