ಕಳ್ಳನ ಬಳಿಯೇ ಕಳ್ಳತನ: ಸಿಎಂ ಚಿನ್ನದ ಪದಕ ಗೆದ್ದ ಇನ್ಸ್ಪೆಕ್ಟರ್ ಬಾಲಕೃಷ್ಣ ವಿರುದ್ಧ ಚಿನ್ನ ಕದ್ದ ಆರೋಪ
ಮುಖ್ಯಮಂತ್ರಿ ಚಿನ್ನದ ಪದಕ ಪಡೆದ ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆದಿದ್ದು, ಈ ಸುದ್ದಿ ತಿಳಿಯುತ್ತಿದ್ದಂತೆಯೇ ಇನ್ಸ್ಪೆಕ್ಟರ್ ಕುಮಾರ್ ಎಸ್ಕೇಪ್ ಆಗಿದ್ದಾರೆ. 4 ಕೋಟಿ ರೂ. ಮೌಲ್ಯದ ಮನೆ ಮಾರಾಟದಲ್ಲಿ ಭ್ರಷ್ಟಾಚಾರ ಆರೋಪದಡಿ ಲೋಕಾಯುಕ್ತ ದಾಳಿ ನಡೆಸಿದಾಗ ಇನ್ಸ್ಪೆಕ್ಟರ್ ಆಗಿರುವ ಕುಮಾರ್ ಪರಾರಿಯಾಗಿದ್ದಾರೆ. ಭ್ರಷ್ಟಾಚಾರdಲ್ಲಿ ಭಾಗಿಯಾದ ಇನ್ಸ್ಪೆಕ್ಟರ್ಗೆ ಸಿಎಂ ಚಿನ್ನದ ಪದಕ ನೀಡಿದ್ದು ಭಾರೀ ಚರ್ಚೆಗೆ ಗ್ರಾಸವಾಗಿದೆ. ಇದರ ಬೆನ್ನಲ್ಲೇ ಸಿಎಂ ಚಿನ್ನದ ಪದಕಕ್ಕೆ ಆಯ್ಕೆಯಾದ ಮತ್ತೋರ್ವ ಪೊಲೀಸ್ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ.

ಮಂಗಳೂರು, (ಏಪ್ರಿಲ್ 05): ಮುಖ್ಯಮಂತ್ರಿ ಚಿನ್ನದ ಪದಕ (CM Gold Medal) ಪಡೆದ ಪೊಲೀಸ್ ಇನ್ಸ್ಪೆಕ್ಟರ್ ವಿರುದ್ಧ ಆರೋಪಿಯ ಮೈಮೇಲಿದ್ದ 50 ಗ್ರಾಮ್ ಚಿನ್ನ ಎಗರಿಸಿದ ಆರೋಪ ಬಂದಿದೆ. ಮಂಗಳೂರು (Mangaluru) ಮಹಿಳಾ ಠಾಣೆಯ ಇನ್ಸ್ಪೆಕ್ಟರ್ ಬಾಲಕೃಷ್ಣ ನಾಯಕ್ (Balakrishna Nayak) ಅವರು ಪ್ರಕರಣವೊಂದನ್ನು ಮುಚ್ಚಿ ಹಾಕಲು 3 ಲಕ್ಷ ರೂಪಾಯಿ ಲಂಚದ ಜೊತೆ ಆರೋಪಿಯ ಮೈಮೇಲಿದ್ದ 50 ಗ್ರಾಮ್ ಚಿನ್ನವನ್ನು ಗುಳಂ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಉಳ್ಳಾಲ ಕೋಟೆಕಾರ್ ಸಹಕಾರಿ ಬ್ಯಾಂಕ್ ದರೋಡೆ ಪ್ರಕರಣ ಭೇದಿಸಿದ ಪೊಲೀಸರ ತಂಡದಲ್ಲಿದ್ದ ಬಾಲಕೃಷ್ಣ ಅವರಿಗೆ ಸಿಎಂ ಚಿನ್ನದ ಪದಕ ಲಭಿಸಿದೆ. ಇದೇ ಸಂದರ್ಭದಲ್ಲೇ ಬಾಲಕೃಷ್ಣ ಲಂಚ ಹಾಗೂ 50 ಗ್ರಾಮ್ ಚಿನ್ನ ಎಗರಿಸಿದ್ದಾರೆ ಎಂದು ಎಸಿಪಿಗೆ ದೂರು ನೀಡಿದ ವಿಚಾರ ಬಯಲಿಗೆ ಬಂದಿದೆ.
ಪ್ರಕರಣ ಹಿನ್ನೆಲೆ
2024ರ ಜೂ. 28ರಂದು ಉಳ್ಳಾಲದಲ್ಲಿ ವೃದ್ಧರೊಬ್ಬರು ತನ್ನ ಮನೆಯಿಂದ 15 ಲಕ್ಷ ರೂ. ಬೆಲೆಯ 32 ಪವನ್ ಚಿನ್ನಾಭರಣ ಕಳವಾದ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ತನಿಖೆ ಕೈಗೊಂಡಿದ್ದ ಇನ್ಸ್ಪೆಕ್ಟರ್ ಬಾಲಕೃಷ್ಣ ದೂರು ನೀಡಿದ ವ್ಯಕ್ತಿಯ ಮಗ ಪಿಯುಸಿ ವಿದ್ಯಾರ್ಥಿ ಸಹಿತ ಇಬ್ಬರು ಅಪ್ರಾಪ್ತರು ಮತ್ತು ಆತನ ಮೂವರು ವಯಸ್ಕ ಗೆಳೆಯರನ್ನು ಬಂಧಿಸಿದ್ದರು. ಕಳವಾದ ಚಿನ್ನಾಭರಣವನ್ನು ನಗರದ ಜುವೆಲ್ಲರಿಗಳಿಗೆ ಮಾರಾಟ ಮಾಡಿದ್ದು, ಇದನ್ನು ಪೊಲೀಸರು ಮುಟ್ಟುಗೋಲು ಹಾಕಿಕೊಂಡಿದ್ದರು.
ಇದನ್ನೂ ಓದಿ: ಸಿಎಂ ಚಿನ್ನದ ಪದಕಕ್ಕೆ ಆಯ್ಕೆಯಾದ ಇನ್ಸ್ಪೆಕ್ಟರ್ಗೆ ಲೋಕಾ ಶಾಕ್: ಬಂಧನದ ಭೀತಿಯಲ್ಲಿ ಪಿಐ ಎಸ್ಕೇಪ್
ಮಾರ್ಚ್ 13ರಂದು ಈ ಪ್ರಕರಣದಲ್ಲಿ ಆರೋಪಿಯಾಗಿದ್ದ ಬೆಳ್ತಂಗಡಿ ಮೂಲದ ಯುವಕನೊಬ್ಬನ ತಾಯಿ ಇನ್ಸ್ಪೆಕ್ಟರ್ ಬಾಲಕೃಷ್ಣ ವಿರುದ್ಧ ಮಂಗಳೂರು ದಕ್ಷಿಣ ಉಪ ವಿಭಾಗದ ಎಸಿಪಿ ಧನ್ಯಾ ನಾಯಕ್ ಅವರಿಗೆ ದೂರು ನೀಡಿದಾಗ ಕಳವು ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿತ್ತು. “ಕಳವು ಪ್ರಕರಣದಲ್ಲಿ ಇದ್ದ ಎಂದು ನನ್ನ ಮಗನನ್ನು ಉಳ್ಳಾಲ ಪೊಲೀಸರು 2024ರ ಜೂನ್ 28ರಂದು ವಶಕ್ಕೆ ಪಡೆದಿದ್ದರು. ಈ ಸಂಬಂಧ ಮಾತನಾಡಲೆಂದು ಮರುದಿನ ಉಳ್ಳಾಲ ಠಾಣೆಗೆ ತನ್ನನ್ನು ಕರೆಸಿಕೊಂಡಿದ್ದರು. ಪ್ರಕರಣದಲ್ಲಿ ಕಳವಾದ ಚಿನ್ನದ ರಿಕವರಿ ಆಗಬೇಕಿದೆ ಎಂದು ಹೇಳಿದ ಇನ್ಸ್ಪೆಕ್ಟರ್, ಪ್ರಕರಣ ಮುಚ್ಚಿ ಹಾಕಲು 3 ಲಕ್ಷ ರೂ. ಬೇಡಿಕೆ ಇಟ್ಟಿದ್ದರು. ಅದರಂತೆ ಜು. 1ರಂದು ಉಳ್ಳಾಲ ಠಾಣೆಯಲ್ಲೇ ಅವರಿಗೆ ಹಣ ನೀಡಿದ್ದೇನೆ.
ಹಣ ಪಡೆದರೂ ಮಗನನ್ನು ಆರೋಪಿಯಾಗಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಈ ವೇಳೆ, ಮಗನ ಮೈಯಲ್ಲಿದ್ದ ಬಂಗಾರದ ಸರ, ಒಂದು ಬ್ರಾಸ್ಲೇಟ್, ಒಂದು ಕಡಗ, ಮೂರು ಉಂಗುರ, ಒಂದು ಕಿವಿಯ ಓಲೆ ಸೇರಿ ಒಟ್ಟು 50 ಗ್ರಾಮ್ ಚಿನ್ನಾಭರಣವನ್ನು ಮುಟ್ಟುಗೋಲು ಹಾಕಿಕೊಂಡಿದ್ದರು. ಇದರ ಲೆಕ್ಕವನ್ನು ಚಾರ್ಜ್ ಶೀಟ್ನಲ್ಲಿ ಹಾಕುತ್ತೇನೆ, ಆಮೇಲೆ ರಿಕವರಿ ಮಾಡಿಕೊಳ್ಳಬಹುದು ಎಂದಿದ್ದರು. ಆದರೆ ಈಗ ಕೋರ್ಟಿಗೆ ಸಲ್ಲಿಸಿರುವ ಚಾರ್ಜ್ ಶೀಟಿನಲ್ಲಿ ನನ್ನ ಮಗನ ಮೈಮೇಲಿದ್ದ ಚಿನ್ನಾಭರಣದ ಬಗ್ಗೆ ಉಲ್ಲೇಖಿಸಿಲ್ಲ. ಅದೂ ಅಲ್ಲದೆ ಮಗನಿಂದ ಖಾಲಿ ಕಾಗದಗಳಿಗೆ ಸಹಿ ಮಾಡಿಸಿದ್ದಾರೆ. ಆರೋಪಿ ಇನ್ಸ್ಪೆಕರ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು” ಎಂದು ತಾಯಿ ಲಿಖಿತ ದೂರು ನೀಡಿದ್ದರು.
ಉಳ್ಳಾಲ ಠಾಣೆಯಿಂದ ಹೊರ ದಬ್ಬಲ್ಪಟ್ಟಿದ್ದರೂ ಮತ್ತೆ ನಗರದ ಪಾಂಡೇಶ್ವರ ಮಹಿಳಾ ಠಾಣೆಯ ಇನ್ಸ್ ಪೆಕ್ಟರ್ ಆಗಿ ನಿಯೋಜನೆಗೊಂಡಿದ್ದರು. ಅಷ್ಟೇ ಅಲ್ಲದೇ ಈ ಹಿಂದೆ ಬಾಲಕೃಷ್ಣ ಮೈಸೂರು ಜಿಲ್ಲೆಯ ವಿಜಯನಗರದಲ್ಲಿ ಕರ್ತವ್ಯದಲ್ಲಿದ್ದಾಗ ಎಸಿಬಿ ದಾಳಿಯಾಗಿತ್ತು. ಆದಾಯಕ್ಕಿಂತ ಅಧಿಕ ಆಸ್ತಿ ಗಳಿಸಿದ ಆರೋಪದಲ್ಲಿ ಎಸಿಬಿ ದಾಳಿಯಾಗಿತ್ತು. ಇಷ್ಟೆಲ್ಲಾ ಆರೋಪಗಳು ಇದ್ದರೂ ಸಹ ಇನ್ಸ್ಪೆಕ್ಟರ್ ಬಾಲಕೃಷ್ಣಗೆ ಮುಖ್ಯಮಂತ್ರಿ ಪದಕಕ್ಕೆ ಶಿಫಾರಸ್ಸು ಮಾಡಿದ್ದು ಚರ್ಚೆಗೆ ಗ್ರಾಸವಾಗಿದೆ
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:59 am, Sat, 5 April 25