ಅಭಿವೃದ್ಧಿ ಬೇಕಾ? ಧರ್ಮ ಪ್ರಚೋದನಾಕಾರಿ ಮಾತುಗಳು ಬೇಕಾ; ಇದನ್ನು ಜನರ ಮುಂದಿಡುತ್ತೇವೆ: ದಿನೇಶ್ ಗುಂಡೂರಾವ್

ಲೋಕಸಭೆ ಚುನಾವಣೆಗೆ ಇನ್ನೇನು ಕೆಲವೇ ತಿಂಗಳು ಬಾಕಿ ಉಳಿದಿರುವಂತೆ ಬಿಜೆಪಿ ಹಾಗೂ ಹಿಂದುತ್ವದ ಭದ್ರಕೋಟೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರಾಜ್ಯ ಮಟ್ಟದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ನಡೆಯುತ್ತಿದೆ. ಸಮಾವೇಶದಲ್ಲಿ ಮಾತನಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಲೋಕಸಭೆ ಚುನಾವಣೆಯಲ್ಲಿ ಇಲ್ಲಿ ನಾವು ಗೆಲ್ಲಲು ಆಗಲಿಲ್ಲ. ಆದರೆ, ನಮ್ಮ ಪ್ರಯತ್ನ ಮಾಡುತ್ತೇವೆ. ಅಭಿವೃದ್ಧಿ, ಶಾಂತಿ ನೆಮ್ಮದಿ ಬೇಕಾ ಅಥವಾ ಧರ್ಮ, ಜಾತಿ, ಸ್ವಾರ್ಥ ಪ್ರಚೋದನಾಕಾರಿ ಮಾತುಗಳು ಬೇಕಾ ಎಂದು ಕಾರ್ಯಕರ್ತರನ್ನು ಪ್ರಶ್ನಿಸಿದರು.

ಅಭಿವೃದ್ಧಿ ಬೇಕಾ? ಧರ್ಮ ಪ್ರಚೋದನಾಕಾರಿ ಮಾತುಗಳು ಬೇಕಾ; ಇದನ್ನು ಜನರ ಮುಂದಿಡುತ್ತೇವೆ: ದಿನೇಶ್ ಗುಂಡೂರಾವ್
ಅಭಿವೃದ್ಧಿ ಬೇಕಾ? ಧರ್ಮ ಪ್ರಚೋದನಾಕಾರಿ ಮಾತುಗಳು ಬೇಕಾ; ಇದನ್ನು ಜನರ ಮುಂದಿಡುತ್ತೇವೆ: ದಿನೇಶ್ ಗುಂಡೂರಾವ್
Follow us
| Updated By: Rakesh Nayak Manchi

Updated on: Feb 17, 2024 | 10:26 AM

ಮಂಗಳೂರು, ಫೆ.17: ಅಭಿವೃದ್ಧಿ, ಶಾಂತಿ ನೆಮ್ಮದಿ ಬೇಕಾ ಅಥವಾ ಧರ್ಮ, ಜಾತಿ, ಸ್ವಾರ್ಥ ಪ್ರಚೋದನಾಕಾರಿ ಮಾತುಗಳು ಬೇಕಾ ಎಂದು ಮಂಗಳೂರಿಗರನ್ನು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ಕೇಳಿದರು. ಲೋಕಸಭೆ ಚುನಾವಣೆಗೆ ಇನ್ನೇನು ಕೆಲವೇ ತಿಂಗಳು ಬಾಕಿ ಉಳಿದಿರುವಂತೆ ಬಿಜೆಪಿ ಹಾಗೂ ಹಿಂದುತ್ವದ ಭದ್ರಕೋಟೆ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ (Mangaluru) ಆಯೋಜಿಸಿದ ರಾಜ್ಯ ಮಟ್ಟದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ಇಲ್ಲಿ ನಾವು ಲೋಕಸಭೆ ಚುನಾವಣೆಯಲ್ಲಿ ಗೆಲ್ಲಲು ಆಗಲಿಲ್ಲ. ಇದನ್ನ ಒಪ್ಪಿಕೊಳ್ಳುತ್ತೇವೆ. ಆದರೆ ನಮ್ಮ ಪ್ರಯತ್ನವನ್ನು ನಾವು ಮಾಡುತ್ತೇವೆ ಎಂದರು.

ಜನರ ಮುಂದೆ ಕೊಟ್ಟಿರುವ ಮಾತು ಉಳಿಸಿಕೊಂಡಿರುವ ಸರ್ಕಾರ ನಮ್ಮದು. ಒಳ್ಳೆಯ ಕೆಲಸ ಮಾಡಲು ಮುಖ್ಯಮಂತ್ರಿಗಳು ಮುಂದೆ ಹೆಜ್ಜೆ ಇಡುತ್ತಿದ್ದಾರೆ. ಕರ್ನಾಟಕಕ್ಕೆ ಆಗಿರುವ ಅನ್ಯಾಯದ ಬಗ್ಗೆ ಪ್ರತಿಪಾಧನೆ ಮಾಡುತ್ತಿದ್ದಾರೆ. ಜನರ ವಿಶ್ವಾಸ ಗಳಿಸಲು ನಮ್ಮ ಪ್ರಾಮಾಣಿಕ ಪ್ರಯತ್ನ ಇರುತ್ತದೆ. ಕೊಡಗಿನಲ್ಲಿ ನಾವು ಗೆದ್ದೆ ಇಲ್ಲ ಗೆದ್ದೆ ಇಲ್ಲ ಅಂತಿದ್ದರು. ಮೊನ್ನೆ ಎರಡು ಶಾಸಕ‌ ಸ್ಥಾನಗಳನ್ನು ಗೆದ್ದಿದೇವೆ. ಅದೇ ರೀತಿ ಜ‌ನರ ಮನಸ್ಸನ್ನು ನಾವು ಗೆಲ್ಲಬೇಕು ಎಂದರು.

ಈ ಬಾರಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದು ಬದಲಾವಣೆ ಆಗುತ್ತದೆ. ಜನರಿಗೂ ಇದನ್ನು‌ ನೋಡಿ‌ನೋಡಿ‌ ಅವರಿಗೂ ಸಾಕಾಗಿ ಹೋಗಿದೆ. ಬರೀ ಧರ್ಮ, ಜಾತಿ, ಸ್ವಾರ್ಥ, ಪ್ರಚೋದನಕಾರಿ ಮಾತು ಇದೇ ಅಗಿದೆ. ಈ ಬಗ್ಗೆ ಜನರಿಗೆ ಅರ್ಥವಾಗುವ ರೀತಿ ನಾವು ಪ್ರಚಾರ ಮಾಡುತ್ತೇವೆ. ನಿಮಗೆ ಅಭಿವೃದ್ಧಿ, ಶಾಂತಿ, ನೆಮ್ಮದಿ ಬೇಕಾ ಅಥವಾ ಈ ಮಾತುಗಳನ್ನೇ ಕೇಳಿಕೊಂಡು ಹೋಗಬೇಕಾ ಎಂಬ ಪ್ರಶ್ನೆಯನ್ನು ಜನರ ಮುಂದಿಡುತ್ತೇವೆ ಎಂದರು.

ಪ್ರಚೋದನೆ ಮಾಡುವುದೇ ಬಿಜೆಪಿ ಅಭ್ಯಾಸ

ರಾಜ್ಯ ಬಜೆಟ್​ ಬಗ್ಗೆ ಬಿಜೆಪಿ ನಾಯಕರಿಂದ ಟೀಕೆ ವಿಚಾರವಾಗಿ ಮಾತನಾಡಿದ ಗುಂಡೂರಾವ್, ಬಿಜೆಪಿಯವರು ಬಾಯಿ ತೆರೆದರೆ ಬರೀ ಸುಳ್ಳೇ ಹೊರಗೆ ಬರುತ್ತಿದೆ. ಕೇವಲ ಪ್ರಚೋದನೆ ಮಾಡುವುದೇ ಬಿಜೆಪಿಯವರ ಅಭ್ಯಾಸ ಆಗಿದೆ. ಹಿಂದೂಗಳಿಗೆ ಅನ್ಯಾಯವಾಗುತ್ತಿದೆ ಎಂದು ಹೇಳಿಕೊಂಡೆ ರಾಜಕಾರಣ ಮಾಡುತ್ತಿದೆ ಎಂದರು.

ಇದನ್ನೂ ಓದಿ: ಫೆ.17 ರಂದು ಮಂಗಳೂರಿನಲ್ಲಿ ಕಾಂಗ್ರೆಸ್ ಸಮಾವೇಶ, ಲೋಕಸಭಾ ಚುನಾವಣೆಗೆ ರಣಕಹಳೆ ಮೊಳಗಿಸಿದ ಕೈ ಪಡೆ

ವಿರೋಧ ಪಕ್ಷದ ನಾಯಕರಾಗಿ ಆರ್.ಅಶೋಕ್ ಟೀಕೆ ಮಾಡುತ್ತಿದ್ದಾರೆ. ಪ್ರತಿಪಕ್ಷಗಳು ಬಜೆಟ್ ಸಂದರ್ಭದಲ್ಲಿ ಆ ರೀತಿ ಹೇಳುವುದು ಸಹಜ. ಗ್ಯಾರಂಟಿ ಜಾರಿ ಬಳಿಕ ಏನೂ ಮಾಡಲು ಆಗಲ್ಲ ಅಂದುಕೊಂಡಿದ್ದರು. ಆದರೆ ಈಗ ಇದೆಲ್ಲ ಮಾಡಿರುವುದು ಬಿಜೆಪಿಯವರಿಗೆ ಆಶ್ಚರ್ಯ ಆಗಿದೆ. ಹೇಗೆ ರಿಯಾಕ್ಟ್ ಮಾಡಬೇಕು ಅಂತಾ ಬಿಜೆಪಿಯವರಿಗೆ ಗೊತ್ತಾಗುತ್ತಿಲ್ಲ ಎಂದರು.

ರೌಡಿಸಂ ರೀತಿ ಭಯದ ವಾತವರಣ ಸೃಷ್ಟಿ

ಜೆರೋಸಾ ಶಾಲೆಯಲ್ಲಿ ಹಿಂದೂ ಧರ್ಮದ ಬಗ್ಗೆ ಅವಹೇಳನ ಮಾಡಿದ ವಿವಾದ ವಿಚಾರವಾಗಿ ಮಾತನಾಡಿದ ಗುಂಡೂರಾವ್, ಬಿಜೆಪಿಯವರು ಈ ವಿಚಾರದಲ್ಲಿ ಹೇಗೆ ನಡೆದುಕೊಂಡಿದ್ದಾರೆಂದು ಇಡೀ ದೇಶವೇ ನೋಡಿದೆ. ಮತ್ತೊಮ್ಮೆ ದಕ್ಷಿಣ ಕನ್ನಡ ಜಿಲ್ಲೆಗೆ ಕೆಟ್ಟ ಹೆಸರು ತರುವ ಕೆಲಸ ಬಿಜೆಪಿಯವರು ಮಾಡುತ್ತಿದ್ದಾರೆ. ಯಾವುದೇ ಘಟನೆ ಆದರೂ ಅದರ ಬಗ್ಗೆ ತನಿಖೆಯಾಗಿ ಕ್ರಮ ತೆಗೆದುಕೊಳ್ಳುವುದು ಬೇರೆ. ಆದರೆ ರೌಡಿಸಂ ರೀತಿ ಭಯದ ವಾತವರಣ ಸೃಷ್ಟಿ ಮಾಡುವುದು, ಪ್ರಚೋದನಕಾರಿ ಹೇಳಿಕೆ ನೀಡುವುದು, ಧರ್ಮ ಧರ್ಮಗಳ ನಡುವೆ ವೈಷಮ್ಯ ಹೆಚ್ಚು ಮಾಡುವುದು ಖಂಡಿತವಾಗಿ ಅಪರಾಧ ಎಂದರು.

ಈ ಬಗ್ಗೆ ಸೋಷಿಯಲ್ ಮೀಡಿಯಾ, ಮಾಧ್ಯಮದಲ್ಲಿ ಇವರ ಹೇಳಿಕೆ ನೋಡಿದಾಗ ದೂರು ತೆಗೆದುಕೊಳ್ಳಲೇಬೇಕು. ಇವರು ಎಷ್ಟು ಪ್ರಕರಣಗಳನ್ನು ನಮ್ಮ ಮೇಲೆ ಹಾಕಿದ್ದಾರೆ? ಯಾವುದೋ ಒಂದು ಭಾಷಣ ಮಾಡಿದಕ್ಕೆ ರಾಹುಲ್ ಗಾಂಧಿ ಅವರ ಮೇಲೆ ಎಫ್​ಐಆರ್ ಹಾಕಿದ್ದಾರೆ. ಅವರ ಸಂಸದ ಸದಸ್ಯತ್ವನ್ನು ತೆಗೆದುಹಾಕುವ ಕೆಲಸ ಬಿಜೆಪಿಯವರು ಮಾಡಿದ್ದರು ಎಂದರು.

ಜೆರೋಸಾ ಶಾಲಾ ಆವರಣದಲ್ಲಿ ಬಹಿರಂಗವಾಗಿ ಪ್ರಚೋದನಕಾರಿ, ದ್ವೇಷದ ರೌಡಿಗಳ ರೀತಿ ವರ್ತಿಸುವ ಕೆಲಸ ಶಾಸಕ ವೇದವ್ಯಾಸ ಕಾಮತ್ ಮಾಡಿದ್ದಾರೆ. ಶಾಲೆಯ ಮಕ್ಕಳನ್ನು ಸಹ ಉಪಯೋಗಿಸಿರುವುದು ಅಪರಾಧ. ಅದೆಲ್ಲವನ್ನು ಪೊಲೀಸರು ತನಿಖೆ ಮಾಡುತ್ತಾರೆ ಎಂದರು.

ಶಾಲೆ ವಿಚಾರದಲ್ಲಿ ಶಿಕ್ಷಣ ಇಲಾಖೆಯವರು ಸಹ ತನಿಖೆಗೆ ಆದೇಶ ಮಾಡಿದ್ದಾರೆ. ಅವತ್ತು ಒತ್ತಡದಿಂದ ಶಾಲೆಯವರು ತೀರ್ಮಾನ ಮಾಡಿದ್ದಾರೆ. ತನಿಖೆಯಲ್ಲಿ ತಪ್ಪು ಮಾಡಿರುವುದು ಕಂಡುಬಂದರೆ ಕ್ರಮ ತೆಗೆದುಕೊಳ್ಳಲಿ. ಆದರೆ ವಾತಾವರಣವನ್ನು ಕೆಡಿಸಿ ತೀರ್ಮಾನಕ್ಕೆ ಬರುವುದಕ್ಕೆ ಸಾಧ್ಯನಾ? ಭಾವನೆ ಕೆರಳಿಸಬೇಕು ರಾಜಕಾರಣಕ್ಕೆ ಅನುಕೂಲ ಮಾಡಿಕೊಳ್ಳಬೇಕು ಎಂಬ ಭಾವನೆ ಬಿಜೆಪಿಯವರಿಗೆ ಇದೆ ಎಂದರು.

ಕಾರ್ಕಳದ ಪರಶುರಾಮನ ವಿಗ್ರಹದಲ್ಲಿ ಏನಾಗಿದೆ ಇವತ್ತು? ಅದರ ಬಗ್ಗೆ ಯಾಕೆ ವೇದವ್ಯಾಸ ಕಾಮತ್ ಹೋರಾಟ ಮಾಡುತ್ತಿಲ್ಲ? ಪರಶುರಾಮರನ್ನು ಅಲ್ಲಿ ಅರ್ಧ ಶರೀರದಲ್ಲಿ ನಿಲ್ಲಿಸಿದ್ದಾರೆ. ಹಿಂದೂ ಧರ್ಮಕ್ಕೆ ಇದು ದೊಡ್ಡ ಕಳಂಕ. ಅದರ ಬಗ್ಗೆ ಬಿಜೆಪಿಯವರು ಯಾರೋಬ್ಬರು ಮಾತನಾಡುತ್ತಿಲ್ಲ. ಸುನೀಲ್ ಕುಮಾರ್ ಇದಕ್ಕೆ ಕಾರಣಕರ್ತರಲ್ವಾ? ಆವಾಗ ಹಿಂದೂ‌ ಧರ್ಮ ಜ್ಞಾಪಕಕ್ಕೆ ಬರಲ್ವಾ ಎಂದು ಪ್ರಶ್ನಿಸಿದರು.

ಇದನ್ನೂ ಓದಿ: ಇಂದಿನಿಂದ ದೆಹಲಿಯಲ್ಲಿ ಬಿಜೆಪಿ ಬೃಹತ್ ರಾಷ್ಟ್ರೀಯ ಸಮಾವೇಶ: ಲೋಕಸಭೆ ಚುನಾವಣೆಗೆ ಭರ್ಜರಿ ತಾಲೀಮು

ಇವಾಗ ಲೋಕಸಭಾ ಚುನಾವಣೆ ಬರುತ್ತಿದೆ. ಧರ್ಮಾಧರಿತವಾಗಿ ವೋಟ್ ಗಳಿಸಬೇಕೆಂದು ಈ ರೀತಿ ಮಾಡುತ್ತಿದ್ದಾರೆ. ಇದು ಜಿಲ್ಲೆಗೆ ದೊಡ್ಡ ಡ್ಯಾಮೇಜ್. ಹೊರಗಿನ ಜನ ಮಂಗಳೂರಿನಲ್ಲಿ ದಿನ ಇದೇ ಕಥೆ ಅಲ್ವಾ ಅಂತಾ ನೋಡುತ್ತಿದ್ದಾರೆ. ಸಮಾಜವನ್ನು ಒಡೆಯುತ್ತಿರುವ ಕೆಲಸ ವೇದವ್ಯಾಸ ಕಾಮತ್, ಭರತ್ ಶೆಟ್ಟಿ, ಶರಣ್ ಪಂಪುವೆಲ್ ಮಾಡುತ್ತಿದ್ದಾರೆ. ಸ್ವಾರ್ಥಕ್ಕಾಗಿ ಹಿಂದೂ ಧರ್ಮವನ್ನು ಪ್ರಚೋದಿಸಿ ಉಪಯೋಗಿಸುತ್ತಿದ್ದಾರೆ ಎಂದರು.

ಭರತ್ ಶೆಟ್ಟಿ ಸ್ಥಳದಲ್ಲಿ ಇಲ್ಲದಿದ್ದರೂ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ. ಕ್ರಿಶ್ಚಿಯನ್ ಶಾಲೆಗಳಿಗೆ ಹಿಂದೂಗಳು ಹೋಗಬಾರದೆಂದು ಸಹ ಹೇಳಿದ್ದಾರೆ. ಕೆಟ್ಟ ವಾತಾವರಣ ನಿರ್ಮಾಣ ಮಾಡಲು ಅವರ ಪಾತ್ರವು ಇದೆ. ಇದಕ್ಕೆ ಸಾಕ್ಷಿಯು ಸಹ ಇದೆ. ಅವರು ಲಂಡನ್​ನಲ್ಲಿ ಕೂತು ಆ ರೀತಿಯ ಹೇಳಿಕೆ ಕೊಟ್ಟರೂ ತಪ್ಪು. ಪೊಲೀಸ್ ತನಿಖೆ ಮೇಲೆ ನಾವು ಹಸ್ತಕ್ಷೇಪ ಮಾಡಲ್ಲ ಎಂದರು.

ಪಕ್ಷದ ಬೆಳವಣಿಗೆ ದೃಷ್ಟಿಯಿಂದ ಮಹತ್ವ ಪಡೆದ ಸಮಾವೇಶ

ಮತೀಯವಾದ VS ಜಾತ್ಯಾತೀತವಾದದ ನಡುವೆ ಈ ಭಾರೀಯ ಲೋಕಸಭಾ ಚುನಾವಣೆ ನಡೆಯಲಿದೆ. ಅದಕ್ಕಾಗಿ ಮಂಗಳೂರಿನಲ್ಲಿ ಈ ಭಾರೀಯ ಮೊದಲ ಸಮಾವೇಶ ನಡೆಯುತ್ತಿದೆ ಎಂದು ಟಿವಿ9 ಗೆ ಮಾಜಿ ಸಚಿವ ರಾಮಾನಾಥ ರೈ ಹೇಳಿದ್ದಾರೆ. ಸಮಾವೇಶ ಮೈದಾನದ ಬಳಿ ಮಾತನಾಡಿದ ಅವರು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರಾಜ್ಯಮಟ್ಟದ ಸಮಾವೇಶ ವ್ಯವಸ್ಥೆ ಮಾಡಲಾಗಿದೆ. ಮುಂದಿನ ಪಕ್ಷದ ಬೆಳವಣಿಗೆ ದೃಷ್ಟಿಯಿಂದ ಇದು‌‌ ಮಹತ್ವ ಪಡೆದಿದೆ ಎಂದರು.

ಕಾಂಗ್ರೆಸ್​ಗೆ ಪ್ರಬಲವಾಗಿದ್ದ ಜಿಲ್ಲೆ ಇದು, ಆದರೆ ಸದ್ಯ ಸ್ವಲ್ಪ ಹಿನ್ನಡೆಯಾಗಿದೆ. ಆದರೆ ಸಂಘಪರಿವಾರ ಇಲ್ಲಿ ಮತೀಯವಾದದ ಲ್ಯಾಬೋರೇಟರಿ ಮಾಡಿ ಯಶಸ್ವಿಯಾಗಿದೆ. ಇಲ್ಲಿ ಮತೀಯವಾದ ಹಾಗೂ ಜಾತ್ಯಾತೀತ ಸಿದ್ದಾಂತ ಇದೆ. ನಾವು ಜಾತ್ಯತೀತ ವಾದವಾದರೆ ಬಿಜೆಪಿ ಮತೀಯವಾದ ಪ್ರತಿನಿಧಿಸುತ್ತದೆ. ಅವರು ಭಾವನಾತ್ಮಕ ವಿಚಾರದಲ್ಲಿ ಪ್ರಚೋದಿಸುತ್ತಾರೆ ಎಂದರು.

ಲೋಕಸಭಾ ಟಿಕೇಟ್ ವಿಚಾರವಾಗಿ ಮಾತನಾಡಿದ ಅವರು, ನಾನು ಇಲ್ಲಿವರೆಗೂ ಯಾವುದೇ ಬೇಡಿಕೆ ಇಟ್ಟಿಲ್ಲ. ಪಕ್ಷ ಹೇಳಿದ ಕೆಲಸವನ್ನು ನಿಷ್ಠೆಯಿಂದ ಮಾಡುತ್ತೇನೆ ಎಂದು ರಮಾನಾಥ ರೈ ಸ್ಪಷ್ಟನೆ ನೀಡಿದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ