3 ಮದುವೆ, ಸಾಕಷ್ಟು ಅಫೇರ್: ಮೇಕಪ್ ಆರ್ಟಿಸ್ಟ್​​ ನವರಂಗಿ ಆಟಕ್ಕೆ ಉದ್ಯಮಿಯ ಬಲಿ?

ಕಾರ್ಕಳದಲ್ಲಿ ಉದ್ಯಮಿ ಸುದೀಪ್ ರೈ ಆತ್ಮಹತ್ಯೆ ಪ್ರಕರಣಕ್ಕೆ ಸ್ಫೋಟಕ ತಿರುವು ಲಭಿಸಿದೆ. ಮೇಕಪ್ ಆರ್ಟಿಸ್ಟ್ ಪತ್ನಿ ಸೌಮ್ಯಾ ಶೆಟ್ಟಿ ವಿರುದ್ಧ ಗಂಭೀರ ಆರೋಪ ಕೇಳಿಬಂದಿದ್ದು, ಆಕೆಗಿದು ಮೂರನೇ ಮದುವೆ ಆಗಿತ್ತು ಎನ್ನಲಾಗಿದೆ. ಪತ್ನಿಯ ಟಾರ್ಚರ್​​ಗೆ ಬೇಸತ್ತು ವಿಚಾರವನ್ನು ಹೆತ್ತವರ ಬಳಿ ಸುದೀಪ್​​ ಹೇಳಿಕೊಂಡಿದ್ದರು. ಹೀಗಾಗಿ ಮಗನ ಸಾವು ಕೊಲೆಯಾಗಿರಬಹುದು ಎಂದು ಪೋಷಕರು ಅನುಮಾನಿಸಿದ್ದು, ಈ ಬಗ್ಗೆ ಉನ್ನತ ತನಿಖೆಗೆ ಆಗ್ರಹಿಸಿದ್ದಾರೆ.

3 ಮದುವೆ, ಸಾಕಷ್ಟು ಅಫೇರ್: ಮೇಕಪ್ ಆರ್ಟಿಸ್ಟ್​​ ನವರಂಗಿ ಆಟಕ್ಕೆ ಉದ್ಯಮಿಯ ಬಲಿ?
ಮೃತ ಸುದೀಪ್​​
Image Credit source: Tv9 Kannada
Edited By:

Updated on: Mar 31, 2026 | 2:13 PM

ಮಂಗಳೂರು, ಮಾರ್ಚ್​​ 31: ಮದುವೆಯಾದ ಒಂದೇ ತಿಂಗಳಿಗೆ ಪುತ್ತೂರು ತಾಲೂಕಿನ ನೆಲ್ಯಾಡಿ ನಿವಾಸಿ, ಉದ್ಯಮಿ ಸುದೀಪ್ ರೈ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉಡುಪಿಯ ಕಾರ್ಕಳದಲ್ಲಿ ನಡೆದಿತ್ತು. ಈ ಪ್ರಕರಣಕ್ಕೀಗ ಸ್ಫೋಟಕ ತಿರುವು ಸಿಕ್ಕಿದ್ದು ಪತ್ನಿ ಸೌಮ್ಯಾಳ ನವರಂಗಿ ಆಟವೇ ಸುದೀಪ್ ಸಾವಿಗೆ ಕಾರಣ ಎಂಬ ಅನುಮಾನ ವ್ಯಕ್ತವಾಗಿದೆ. ಮದುವೆಯಾಗಿ ಕೆಲವೇ ದಿನಗಳಲ್ಲಿ ಪತ್ನಿಯ ಸರಣಿ ಮ್ಯಾರೇಜ್ ಕಹಾನಿ ಬಯಲಾಗಿತ್ತು. ಹೀಗಾಗಿ ಮದುವೆಯಾದ ಒಂದು ತಿಂಗಳ ಬಳಿಕ ತನ್ನ ತಂದೆ-ತಾಯಿ ಮನೆಗೆ ಬಂದಿದ್ದ ಸುದೀಪ್​​ ಪತ್ನಿ ಹಣ ಒಡವೆ ಕಿತ್ತುಕೊಂಡಿದ್ದಾಳೆ, ತುಂಬಾ ಟಾರ್ಚರ್ ಕೊಡುತ್ತಿದ್ದಾಳೆ ಎಂದು ಅಲವತ್ತುಕೊಂಡಿದ್ದರು ಎನ್ನಲಾಗಿದೆ.

ಪತಿ ಸುದೀಪ್​​ ತನ್ನ ತಂದೆ-ತಾಯಿ ಬಳಿ ಬಂದಿರುವ ವಿಷಯ ತಿಳಿದ ಸೌಮ್ಯಾ ಸ್ಕೂಟಿಯಲ್ಲೇ ನೂರು ಕಿಲೋಮೀಟರ್ ಪ್ರಯಾಣ ಮಾಡಿ ಬಂದಿದ್ದಳು. ನೆಲ್ಯಾಡಿಯಲ್ಲಿ ತಾಯಿ ಜೊತೆ ಕಾರಿನಲ್ಲಿ ತರೆಳುತ್ತಿದ್ದ ಸುದೀಪ್​​ರನ್ನು ಅಡ್ಡಗಟ್ಟಿ, ಗ್ರಾಮಸ್ಥರ ಎದುರು ಗಲಾಟೆ ಮಾಡಿದ್ದಳು ಬಳಿಕ ಪತಿ ಕಾರು ಹತ್ತಿದ್ದ ಈಕೆ ಅರ್ಧ ದಾರಿಯಲ್ಲೇ ತಾಯಿಯನ್ನು ಇಳಿಸುವಂತೆ ಹಿಂಸಿಸಿದ್ದಳು. ಆಕೆಯ ಕಾಟ ತಾಳಲಾರದೆ ಸುದೀಪ್​​ ರಾತ್ರಿ ವೇಳೆ ತಾಯಿಯನ್ನು ರಸ್ತೆಯಲ್ಲಿ ಇಳಿಸಿ ಪತ್ನಿ ಮನೆಗೆ ತೆರಳಿದ್ದರು. ಈ ವಿಚಾರವಾಗಿ ಅವರು ಬಹಳ ನೊಂದಿದ್ದರು ಎಂಬ ವಿಚಾರವೀಗ ಬಯಲಾಗಿದೆ.

ಇದನ್ನೂ ಓದಿ: ಮದ್ವೆಯಾದ ಒಂದೇ ತಿಂಗಳಲ್ಲಿ ವಿರಸ; ಮೇಕಪ್ ಆರ್ಟಿಸ್ಟ್​​ನ ವಿವಾಹವಾಗಿದ್ದ ಉದ್ಯಮಿ ದುರಂತ ಸಾವು

ಇನ್ನು ಸಾಮಾಜಿಕ ಜಾಲತಾಣದ ಮೂಲಕ ಸುದೀಪ್​​ಗೆ ಸೌಮ್ಯಾ ಪರಿಚಯ ಆಗಿತ್ತು. ಇವರಿಬ್ಬರೂ ಮದುವೆಯ ಬಗ್ಗೆ ನಿರ್ಧರಿಸಿದಾಗ ಅವಸರ ಮಾಡಬೇಡ. ತಾಳ್ಮೆಯಿಂದಿರು, ಎಲ್ಲಾ ವಿಚಾರಿಸಿ ಮದುವೆ ಮಾಡುತ್ತೇವೆ ಎಂದು ಪೋಷಕರು ಹೇಳಿದ್ದರು. ಹೀಗಿದ್ದರೂ ಆತುರಕ್ಕೆ ಬಿದ್ದ ಸುದೀಪ್​​ ಪೋಷಕರಿಗೆ ತಿಳಿಸದೆ ಫೆ.16ಕ್ಕೆ ದೇವಸ್ಥಾನದಲ್ಲಿ ಮದುವೆಯಾಗಿದ್ದರೆ, ಫೆ.17ರಂದು ರಿಜಿಸ್ಟರ್ ಮ್ಯಾರೇಜ್ ಆಗಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿರುವ ಸುದೀಪ್​​ ಪೋಷಕರು, ಆಕೆಗೆ ಇದು ಮೂರನೇ ಮದುವೆ ಅಂತಾ ನಮಗೆ ಗೊತ್ತಿರಲಿಲ್ಲ. ಮಾ.16ಕ್ಕೆ ಮಗ ಮನೆಗೆ ಬಂದು ಆಕೆಯ ಟಾರ್ಚರ್ ಬಗ್ಗೆ ಹೇಳಿಕೊಂಡಿದ್ದ. ಮಾ.17ಕ್ಕೆ ನೆಲ್ಯಾಡಿಯಲ್ಲಿ ಬಂದು ಗಲಾಟೆ ಮಾಡಿ ಸುದೀಪ್​​ನ ಆಕೆ ಕರೆದುಕೊಂಡು ಹೋಗಿದ್ದಳು. ಬಳಿಕ ಅಲ್ಲಿ ಏನಾಯ್ತು ಗೊತ್ತಿಲ್ಲ. ಮಾ.22ಕ್ಕೆ ಆತ ಆಸ್ಪತ್ರೆಯಲ್ಲಿರೋದು ನಮಗೆ ತಿಳಿಯಿತು. ಆಸ್ಪತ್ರೆಗೆ ಹೋಗಿ ಕೇಳಿದಾಗ ಫುಡ್ ಪಾಯಿಸನ್, ಜಾಂಡೀಸ್ ಅಂತಾ ಕತೆ ಹೇಳಿದ್ರು. ಇದ್ರಲ್ಲಿ ಕೊಲೆ ಸಂಶಯ ಇರೋದ್ರಿಂದ ಉನ್ನತ ಮಟ್ಟದ ತನಿಖೆ ಆಗಬೇಕು ಎಂದವರು ಕಣ್ಣೀರು ಹಾಕಿದ್ದಾರೆ.

ಇನ್ನು ಸೌಮ್ಯ ಶೆಟ್ಟಿಯ ವಿಷವರ್ತುಲದಲ್ಲಿ ಸಿಲುಕಿ ಹೈರಾಣಾಗಿ ಹೊರಬಂದಿದ್ದ ಕಲಾವಿದ, ದೈವದ ಆರಾಧಕ ವೇಣು ಶೆಟ್ಟಿ ಕೂಡ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಆಕೆಯಿಂದ ಬಹಳ ಟಾರ್ಚರ್ ಅನುಭವಿಸಿ ಊರು ಬಿಟ್ಟು ಹೋಗಿದ್ದೆ. ಆಕೆಯ ಜೊತೆಗಿನ ಮದುವೆ ಕ್ಯಾನ್ಸಲ್ ಮಾಡಿದ್ರಿಂದ ಇನ್ನಿಲ್ಲದ ರೀತಿಯಲ್ಲಿ ಕಿರುಕುಳ ಅನುಭವಿಸಿದ್ದು, ಜೀವನದಲ್ಲಿ ಮದುವೆಯೇ ಬೇಡ ಎಂದು ನಿರ್ಧರಿಸಿದ್ದೇನೆ. ಸೈಕಾಲಜಿ ಓದಿದ್ದರೂ ಆಕೆಯ ಕಾಟಕ್ಕೆ ಮಾನಸಿಕವಾಗಿ ಕುಗ್ಗಿದ್ದೆ ಎಂದು ಹೇಳುವ ಮೂಲಕ ಸೌಮ್ಯಾಳ ನಿಜ ರೂಪವನ್ನು ಬಿಚ್ಚಿಟ್ಟಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Loading...
Unable to load recommendations.
Follow Us