ಯಶವಂತಪುರ-ಮಂಗಳೂರು ವಂದೇ ಭಾರತ್ ಎಕ್ಸ್ಪ್ರೆಸ್ ಟ್ರಯಲ್ ರನ್: ಘಾಟ್ ರಸ್ತೆಯಲ್ಲಿ ಬಿರುಸಿನ ಪರಿಶೀಲನೆ
ಯಶವಂತಪುರ-ಮಂಗಳೂರು ವಂದೇ ಭಾರತ್ ಎಕ್ಸ್ಪ್ರೆಸ್ನ ಮೊದಲ ಪ್ರಾಯೋಗಿಕ ಸಂಚಾರ ಯಶಸ್ವಿಯಾಗಿ ಆರಂಭಗೊಂಡಿದೆ. ದಕ್ಷಿಣ ಪಶ್ಚಿಮ ರೈಲ್ವೆಯು ಪಶ್ಚಿಮ ಘಟ್ಟದ ಕಠಿಣ ಮಾರ್ಗದಲ್ಲಿ ರೈಲಿನ ವೇಗ, ಸುರಕ್ಷತೆ ಮತ್ತು ವೇಳಾಪಟ್ಟಿಯನ್ನು ಪರಿಶೀಲಿಸುತ್ತಿದೆ. ಇದು ಕರಾವಳಿ ಮತ್ತು ರಾಜಧಾನಿ ಜನರ ಬಹುದಿನಗಳ ಕನಸಾಗಿದ್ದು, ಶೀಘ್ರದಲ್ಲೇ ಸಾರ್ವಜನಿಕ ಸೇವೆಗೆ ಲಭ್ಯವಾಗುವ ನಿರೀಕ್ಷೆಯಿದೆ.

ಬೆಂಗಳೂರು, ಸೆ.5: ಕರಾವಳಿ ಹಾಗೂ ರಾಜಧಾನಿ ಜನರ ದೀರ್ಘಕಾಲದ ಕನಸಾಗಿರುವ ‘ಯಶವಂತಪುರ – ಮಂಗಳೂರು ಸೆಂಟ್ರಲ್’ ವಂದೇ ಭಾರತ್ ಎಕ್ಸ್ಪ್ರೆಸ್ (Vande Bharat Express) ರೈಲಿನ ಮೊದಲ ಟ್ರಯಲ್ ರನ್ (ಪ್ರಾಯೋಗಿಕ ಸಂಚಾರ) ಇಂದು ಯಶವಂತಪುರ ರೈಲು ನಿಲ್ದಾಣದಿಂದ ಅಧಿಕೃತವಾಗಿ ಆರಂಭವಾಗಿದೆ. ದಕ್ಷಿಣ ಪಶ್ಚಿಮ ರೈಲ್ವೆಯು (SWR) 16 ಬೋಗಿಗಳ ಅತ್ಯಾಧುನಿಕ ವಂದೇ ಭಾರತ್ ರೈಲಿನ ವೇಳಾಪಟ್ಟಿ, ವೇಗ ಹಾಗೂ ಕಾಲಮಿತಿಯನ್ನು ಕರಾರುವಾಕ್ಕಾಗಿ ಪರಿಶೀಲಿಸಲು ಈ ಟ್ರಯಲ್ ರನ್ ಆಯೋಜಿಸಿದೆ.
ಇಂದು (ಸೆ.5) ಬೆಳಿಗ್ಗೆ 6:05ಕ್ಕೆ ಯಶವಂತಪುರದಿಂದ ಹೊರಟ ರೈಲು, ಮಧ್ಯಾಹ್ನ 2:25ರ ವೇಳೆಗೆ ಮಂಗಳೂರು ಸೆಂಟ್ರಲ್ ತಲುಪುವ ಗುರಿ ಹೊಂದಲಾಗಿದೆ. ಪ್ರಾಯೋಗಿಕ ಸಂಚಾರದ ವೇಳೆ ಹಾಸನ, ಸಕಲೇಶಪುರ ಹಾಗೂ ಸುಬ್ರಹ್ಮಣ್ಯ ರೋಡ್ ನಿಲ್ದಾಣಗಳಲ್ಲಿ ರೈಲು ನಿಂತಿಲ್ಲ, ವೇಗವಾಗಿ ಚಲಿಸಿದೆ.
ಮಂಗಳೂರು ಸೆಂಟ್ರಲ್ನಿಂದ ಮಧ್ಯಾಹ್ನ 3:00 ಗಂಟೆಗೆ ಹೊರಟು, ರಾತ್ರಿ 11:00 ಗಂಟೆಗೆ ಯಶವಂತಪುರ ತಲುಪಲಿದೆ. ಕಳೆದ ತಿಂಗಳು ಪಶ್ಚಿಮ ಘಟ್ಟದ ಕಠಿಣ ಮಲೆನಾಡು ಹಾಗೂ ಹಸಿರು ಘಾಟ್ ಮಾರ್ಗದಲ್ಲಿ ವಂದೇ ಭಾರತ್ ರೈಲಿನ ಸ್ವಯಂಚಾಲಿತ ತುರ್ತು ಬ್ರೇಕಿಂಗ್ ಸಿಸ್ಟಮ್ ಅನ್ನು ಯಶಸ್ವಿಯಾಗಿ ಪರೀಕ್ಷಿಸಲಾಗಿತ್ತು. ಇದೀಗ 8 ಗಂಟೆಗಳ ಈ ಪ್ರಯಾಣವು ಪ್ರಯಾಣಿಕರಿಗೆ ಅತ್ಯಂತ ಆರಾಮದಾಯಕ ಅನುಭವ ನೀಡಲಿದೆಯಾದರೂ, ರಸ್ತೆ ಮಾರ್ಗಕ್ಕೆ ಹೋಲಿಸಿದರೆ ಸಮಯದ ಉಳಿತಾಯದ ಬಗ್ಗೆ ಸಾರ್ವಜನಿಕರಲ್ಲಿ ಚರ್ಚೆಗಳು ನಡೆಯುತ್ತಿವೆ.
ಇಲ್ಲಿದೆ ನೋಡಿ ವಿಡಿಯೋ:
A trial run of the 16-car Vande Bharat Express from Yesvantpur to Mangaluru Central commenced from Yesvantpur today to assess the timings of the run. pic.twitter.com/sgqm0EGHlB
— DRM Bengaluru (@drmsbc) September 5, 2026
ಪಶ್ಚಿಮ ಘಟ್ಟದ ಕಡಿದಾದ ಭೂಪ್ರದೇಶದಲ್ಲಿ ರೈಲಿನ ಸುರಕ್ಷತೆ, ವೇಗ ಹಾಗೂ ಸುಗಮ ಸಂಚಾರವನ್ನು ಖಚಿತಪಡಿಸಿಕೊಂಡ ನಂತರವೇ ಸಾರ್ವಜನಿಕ ಸೇವೆಗೆ ಅಧಿಕೃತ ಚಾಲನೆ ನೀಡಲು ರೈಲ್ವೆ ಅಧಿಕಾರಿಗಳು ಸೂಕ್ತ ವೇಳಾಪಟ್ಟಿಯನ್ನು ಅಂತಿಮಗೊಳಿಸುತ್ತಿದ್ದಾರೆ.
ಇದನ್ನೂ ಓದಿ: ರೈಲ್ವೆ ಇಲಾಖೆಯಲ್ಲಿ ಬೃಹತ್ ನೇಮಕಾತಿ: 5,165 NTPC ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ
ಸಕಲೇಶಪುರ-ಸುಬ್ರಹ್ಮಣ್ಯ ಘಾಟ್ನಲ್ಲಿ ವಂದೇ ಭಾರತ್ ವೈಭವ
ಪಶ್ಚಿಮ ಘಟ್ಟಗಳ ಸಾಲಿನ ಅಪ್ರತಿಮ ಹಾಗೂ ದಟ್ಟ ಹಸಿರಿನ ನಡುಮಧ್ಯೆ ಪ್ರಕೃತಿಯ ಸೌಂದರ್ಯವನ್ನು ಸೀಳಿಕೊಂಡು ಸಾಗುವ ಅತ್ಯಾಕರ್ಷಕ ‘ಕಿತ್ತಳೆ’ ಬಣ್ಣದ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿನ ಡ್ರೋನ್ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಲಕ್ಷಾಂತರ ನೆಟ್ಟಿಗರ ಮನಸೂರೆಗೊಳಿಸಿದೆ. ಈ ಮನಮೋಹಕ ದೃಶ್ಯಾವಳಿಯನ್ನು ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರು ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ಭಾರತೀಯ ರೈಲ್ವೇಯ ಸೌಂದರ್ಯ ಹಾಗೂ ತಾಂತ್ರಿಕ ಪ್ರಗತಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಗಿರಿಶಿಖರಗಳು, ಬೃಹತ್ ಸೇತುವೆಗಳು ಹಾಗೂ ದಟ್ಟ ಕಾಡಿನ ಮಧ್ಯೆ ಕಿತ್ತಳೆ ಮತ್ತು ಬೂದು ಬಣ್ಣದ ಸುಂದರ ವಂದೇ ಭಾರತ್ ರೈಲು ಸಾಗುವ ದೃಶ್ಯವನ್ನು ಡ್ರೋನ್ ಕೆಮೆರಾ ಮೂಲಕ ಅತ್ಯಂತ ಕಲಾತ್ಮಕವಾಗಿ ಸೆರೆಹಿಡಿಯಲಾಗಿದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




