AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಧಿಕ ಕೂಲಿ ಕೊಟ್ಟರೂ ಭತ್ತ ನಾಟಿಗೆ ಸಿಗದ ಕೂಲಿ ಕಾರ್ಮಿಕರು; ಉತ್ತರ ಭಾರತದ ಕಾರ್ಮಿಕರ ಮೊರೆ ಹೋದ ಮಾಲೀಕರು, ಕೂಲಿ ಎಷ್ಟು?

ಬೆಣ್ಣೆ ನಗರಿ ದಾವಣಗೆರೆ ಜಿಲ್ಲೆಯ ಜನ ವರ್ಷಕ್ಕೆ ಎರಡು ಬಾರಿ ಭತ್ತವನ್ನ ಬೆಳೆಯುತ್ತಾರೆ. ಆದರೆ, ಇತ್ತೀಚೆಗೆ ಕೂಲಿ ಕಾರ್ಮಿಕರ ಕೊರತೆ ಹೆಚ್ಚಾಗಿದ್ದು, ಭತ್ತ ನಾಟಿ ಮಾಡಲು ಸ್ಥಳೀಯರೇ ಸಿಗುತ್ತಿಲ್ಲ. ಇದಕ್ಕಾಗಿ ಉತ್ತರಪ್ರದೇಶ, ಪಶ್ಚಿಮ ಬಂಗಾಳ ಹಾಗೂ ಬಿಹಾರ ಕಾರ್ಮಿಕರು ದಾವಣಗೆರೆಗೆ ಲಗ್ಗೆ ಇಟ್ಟಿದ್ದಾರೆ. ಈ ಕುರಿತು ಒಂದು ಸ್ಟೋರಿ ಇಲ್ಲಿದೆ.

ಅಧಿಕ ಕೂಲಿ ಕೊಟ್ಟರೂ ಭತ್ತ ನಾಟಿಗೆ ಸಿಗದ ಕೂಲಿ ಕಾರ್ಮಿಕರು; ಉತ್ತರ ಭಾರತದ ಕಾರ್ಮಿಕರ ಮೊರೆ ಹೋದ ಮಾಲೀಕರು, ಕೂಲಿ ಎಷ್ಟು?
ಭತ್ತ ನಾಟಿಗೆ ದಾವಣಗೆರೆಗೆ ಲಗ್ಗೆ ಇಟ್ಟ ಉತ್ತರ ಭಾರತದ ಕಾರ್ಮಿಕರು
ಬಸವರಾಜ್​ ದೊಡ್ಡಮನಿ, ದಾವಣಗೆರೆ
| Edited By: |

Updated on:Sep 04, 2024 | 5:43 PM

Share

ದಾವಣಗೆರೆ, ಸೆ.04: ಜಿಲ್ಲೆಯಲ್ಲಿ ಭತ್ತ ನಾಟಿ ಮಾಡಲು ಕೂಲಿ ಕಾರ್ಮಿಕರ ಕೊರತೆ ಎದುರಾಗಿದೆ. ಅಧಿಕ ಕೂಲಿ ಕೊಡ್ತೀವಿ ಅಂದರೂ ಯಾರು ಬರುತ್ತಿಲ್ಲ. ಇಡೀ ದಾವಣಗೆರೆ (Davanagere) ಜಿಲ್ಲೆಯಲ್ಲಿ ಇಷ್ಟೊತ್ತಿಗೆ ಭತ್ತ ನಾಟಿ ಕಾರ್ಯ ಮುಗಿಯಬೇಕಾಗಿತ್ತು.‌ ದುರಂತ ಎಂದರೆ ಕಾರ್ಮಿಕರ ಕೊರತೆ ಹಿನ್ನೆಲೆಯಲ್ಲಿ ಬಿತ್ತನೆ ಕಾರ್ಯ ಮಾತ್ರ ಮುಗಿದಿಲ್ಲ. ಇದರಿಂದ ಜಿಲ್ಲೆಯ ರೈತರು ಉತ್ತರಪ್ರದೇಶ, ಪಶ್ಚಿಮ ಬಂಗಾಳ, ಬಿಹಾರಿ ಕಾರ್ಮಿಕರ ಮೊರೆ ಹೋಗಿದ್ದಾರೆ. ಇನ್ನು ಬಿಹಾರಿ ಕಾರ್ಮಿಕರು ಕೂಡ ನೀಟ್ ಆಗಿ ಕೆಲಸ ಮಾಡುತ್ತಿದ್ದು, ರೈತರು ಅವರ ಕೆಲಸದಿಂದ ಫಿದಾ ಆಗಿದ್ದಾರೆ.

ಭತ್ತ ನಾಟಿಗೆ ದಾವಣಗೆರೆಗೆ ಲಗ್ಗೆ ಇಟ್ಟ ಉತ್ತರ ಭಾರತದ ಕಾರ್ಮಿಕರು

ಸಧ್ಯ ದಾವಣಗೆರೆ ಜಿಲ್ಲೆಯಲ್ಲಿ ಭತ್ತ ನಾಟಿ ಮಾಡುವ ಸುಗ್ಗಿ ಜೋರಾಗಿದೆ.‌ ಆಗಸ್ಟ್ ಅಂತ್ಯಕ್ಕೆ ಭತ್ತ ನಾಟಿ ಮಾಡುವುದು ಸಂಪೂರ್ಣವಾಗಿ ಮುಗಿಯಬೇಕಿತ್ತು.‌ ಆದರೆ, ಕಾರ್ಮಿಕರ ಕೊರತೆಯಿಂದ ಸೆಪ್ಟೆಂಬರ್ ತಿಂಗಳಲ್ಲಿ ಆರಂಭ ಆಗಿದ್ದು, ಭತ್ತ ನಾಟಿ ಕಾರ್ಯ ಮಾತ್ರ ಮಂದಗತಿಯಲ್ಲಿ ಸಾಗಿದೆ. ಈ ಹಿನ್ನಲೆ ಶೇಕಡಾ 80% ರಷ್ಟು ಕೂಡ ದಾಟಿಲ್ಲ.‌ ಜಮೀನುಗಳಲ್ಲಿ ನಾಟಿ ಮಾಡಲು ಸರಿಯಾದ ಸಮಯಕ್ಕೆ ರೈತರಿಗೆ ಕೂಲಿ ಕಾರ್ಮಿಕರು ಸಿಗದೆ ಇರುವುದೇ ದೊಡ್ಡ ತಲೆಬಿಸಿಯಾಗಿದೆ. ಸ್ಥಳೀಯ ಕಾರ್ಮಿಕರಿಗೆ ಡಿಮ್ಯಾಂಡ್ ಹೆಚ್ಚಾದ ಬೆನ್ನಲ್ಲೇ ದಾವಣಗೆರೆ ಜಿಲ್ಲೆಯ ರೈತರು ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಬಿಹಾರ್, ಅಸ್ಸಾಂ, ಮಧ್ಯ ಪ್ರದೇಶ ರಾಜ್ಯದ ಕಾರ್ಮಿಕರ ಮೊರೆ ಹೋಗಿದ್ದಾರೆ.

ಇದನ್ನೂ ಓದಿ:ಜನಪ್ರತಿನಿಧಿಗಳ ನಿರ್ಲಕ್ಷ್ಯ; ಕೆಸರುಗದ್ದೆಯಂತಾಗಿರೋ ಗ್ರಾಮೀಣ ಭಾಗದ ರಸ್ತೆಗಳಲ್ಲಿ ಭತ್ತ ನಾಟಿ ಮಾಡಿ ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು

ನೀಟ್ ಹಾಗೂ ಸ್ವಚ್ಛ ಕೆಲಸಕ್ಕೆ ದಾವಣಗೆರೆ ರೈತರು ಫಿದಾ

ಜಿಲ್ಲೆಯಲ್ಲಿ ಒಟ್ಟು 200 ಕಾರ್ಮಿಕರು ನಾಲ್ಕು ಗುಂಪಿನಂತೆ ಭತ್ತದ ನಾಟಿ ಮಾಡಲು ಬಂದು ಇಲ್ಲೇ ಬೀಡುಬಿಟ್ಟಿದ್ದಾರೆ. ಜಿಲ್ಲೆಯ ಹರಿಹರ ತಾಲೂಕಿನ ನಿಟ್ಟೂರು, ಮಲ್ಲನಾಯಕನಹಳ್ಳಿ, ಮಲೇಬೆನ್ನೂರು ಭಾಗದಲ್ಲಿ ಗ್ರಾಮದಲ್ಲಿ ನಾಟಿ ಆರಂಭಿಸಿದ್ದಾರೆ. ಒಂದು ದಿನಕ್ಕೆ ಈ ಉತ್ತರ ಭಾರತದ ಕಾರ್ಮಿಕರು ಕನಿಷ್ಟ ಎಂದರು 8 ರಿಂದ 10 ಎಕರೆ ನಾಟಿ ಮಾಡುತ್ತಾರೆ. ಇವರ ನೀಟ್ ಹಾಗೂ ಸ್ವಚ್ಛ ಕೆಲಸಕ್ಕೆ ದಾವಣಗೆರೆ ರೈತರು ಫಿದಾ ಆಗಿದ್ದಾರೆ. ಏಜೆಂಟ್​ಗಳ ಮೂಲಕ ದೂರದ ಊರುಗಳಿಂದ ಆಗಮಿಸುವ ಈ ಉತ್ತರ ಭಾರತದ ಕಾರ್ಮಿಕರ ಕೆಲಸ ನೀಟಾಗಿರುತ್ತದೆ. ಅಲ್ಲದೆ, ಗೆರೆ ಒಡೆದು ನಾಟಿ ಮಾಡುವುದೇ ಇವರ ಕೆಲಸದ ವಿಶೇಷ ಆಗಿದೆ.

ಈ ಕುರಿತು ಉತ್ತರ ಪ್ರದೇಶದ ಕಾರ್ಮಿಕ ನಿತೀಶ್ ಕುಮಾರ್ ಎಂಬಾತ ಪ್ರತಿಕ್ರಿಯಿಸಿ, ‘ನಾವು ಯುಪಿಯಿಂದ ಆಗಮಿಸಿದ್ದೇನೆ, ನಮ್ಮ ಬ್ಯಾಚ್​ನಲ್ಲಿ 14 ಜನರಿದ್ದೇವೆ. ಬೆಳಿಗ್ಗೆ 6 ರಿಂದ ಸಂಜೆ 6ರ ತನಕ ಬರೋಬ್ಬರಿ 6 ರಿಂದ 7 ಎಕರೆ ನಾಟಿ ಮಾಡುತ್ತೇವೆ‌. ಓರ್ವ ಏಜೆಂಟ್ ನಮ್ಮನ್ನು ಕರೆತಂದಿದ್ದಾರೆ. ಗ್ಯಾಸ್, ರೂಮ್, ಊಟ ಎಲ್ಲಾ ಕೊಟ್ಟಿದ್ದಾರೆ. ಏಜೆಂಟ್ ನಮಗೆ ಹಣವನ್ನು ಶೇಖರಿಸಿ ಕೊಡುತ್ತಾರೆ. ನಾವು ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಬಿಹಾರ ಹಾಗೂ ಮಧ್ಯಪ್ರದೇಶದಿಂದ ಬಂದಿದ್ದೇವೆ. ಒಂದು ದಿನಕ್ಕೆ 1000 ರೂಪಾಯಿ ನಮಗೆ ಸಿಕ್ಕೆ ಸಿಗುತ್ತದೆ‌ ಎಂದರು.

ಇದನ್ನೂ ಓದಿ:ಬಳ್ಳಾರಿ: ನೀರಿನ‌ ಕೊರೆತೆ, ಭತ್ತ ನಾಟಿ ಬದಲು ಕೂರಿಗೆ ಬಿತ್ತನೆ ಮಾಡುವಂತೆ ರೈತರಿಗೆ ಸಲಹೆ ನೀಡಿದ ಕೃಷಿ ಇಲಾಖೆ

ರಾಜ್ಯದಲ್ಲಿ ಸಧ್ಯ ಭತ್ತ ನಾಟಿ ಮಾಡಲು ಕೂಲಿ ಕಾರ್ಮಿಕರನ್ನು ರೈತರು ಹುಡುಕುವುದೇ ದೊಡ್ಡ ಕೆಲಸ ಆಗಿದೆ.‌ ಇದರಿಂದ ರೈತರು ಏಜೆಂಟ್​ಗಳ ಮುಖೇನಾ ಉತ್ತರ ಭಾರತದ ಕಾರ್ಮಿಕರ ಮೊರೆ ಹೋಗಿದ್ದಾರೆ. ಸ್ಥಳೀಯ ಕಾರ್ಮಿಕರ ಕೊರತೆ ಎದುರಾದ ಬೆನ್ನಲ್ಲೇ ದೂರದ ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಬಿಹಾರ, ಮಧ್ಯಪ್ರದೇಶ, ಅಸ್ಸಾಂ ನಿಂದ ಕಾರ್ಮಿಕರು ಏಜೆಂಟ್ ಮೂಲಕ ಕರೆತರಲಾಗುತ್ತದೆ. ಈ ಕಾರ್ಮಿಕರು ಹೆಚ್ಚಾಗಿ ಪಕ್ಕದ ತೆಲುಗು ರಾಜ್ಯಗಳಲ್ಲೇ ಈ ನಾಟಿ ಕೆಲಸ ಮಾಡುತ್ತಿದ್ದರು. ಇದೀಗ ಕರ್ನಾಟಕದ ದಾವಣಗೆರೆಗೆ ಲಗ್ಗೆ ಇಟ್ಟಿದ್ದಾರೆ.

ಇವರ ಕೆಲಸ ನೀಟ್, ಮೊದಲೇ ಹೇಳಿದಂತೆ ಬಿಹಾರಿ ಕಾರ್ಮಿಕರ ನಾಟಿ, ಪಟ್ಟಿ ಇರಿಸಿ ಗೆರೆ ಹೊಡೆದಷ್ಟು ನೀಟಾಗಿರುತ್ತದೆ. ಸ್ಥಳೀಯ ಕಾರ್ಮಿಕರು ಸಸಿಗಳ ಬೇರುಗಳಲ್ಲಿನ ಮಣ್ಣಿನ ಸಮೇತ ಗದ್ದೆಯಲ್ಲಿ ಊರುತ್ತಾರೆ. ಬಿಹಾರಿಗಳು ಸಸಿಗಳನ್ನು ಕಾಲಿಗೆ ಹೊಡೆದುಕೊಂಡು ಬೇರಲ್ಲಿನ ಮಣ್ಣನ್ನೆಲ್ಲ ಕೊಡವಿ ನಾಟಿ ಮಾಡುತ್ತಾರೆ. ಇದು ಭತ್ತದ ಸಸಿಗಳ ಉತ್ತಮ ಬೆಳವಣಿಗೆಗೆ ನೆರವಾಗುತ್ತದೆ. ಸಾಲುಗಳು ನೀಟಾಗುವ ಜತೆಗೆ ಪ್ರತಿ ಸಾಲಿನ ನಡುವೆ ನಿರ್ದಿಷ್ಟ ಅಂತರ ಇರುವ ಹಿನ್ನಲೆ ಗಾಳಿ-ಬೆಳಕು ಸುಗಮವಾಗಿರುತ್ತದೆ.

ಈ ಕುರಿತ ರೈತ ದಿನೇಶ್ ಪ್ರತಿಕ್ರಿಯಿಸಿ, ‘ಕಾರ್ಮಿಕರ ಸಮಸ್ಯೆ ಆಗಿದ್ದು, ಯುಪಿ, ಬಿಹಾರ, ಪಶ್ಚಿಮ ಬಂಗಾಳ, ಮಧ್ಯಪ್ರದೇಶ ಕಾರ್ಮಿಕರು ಬರುತ್ತಿದ್ದರಿಂದ ಅನುಕೂಲ ಆಗುತ್ತಿದೆ. ಕೂಲಿ, ಸಮಯ ಉಳಿಯುತ್ತಿದೆ.‌ ಒಂದು ಎಕರೆಗೆ ಸ್ಥಳೀಯ ಕಾರ್ಮಿಕರು 4-5 ಎಕರೆ ನಾಟಿ ಮಾಡುತ್ತಾರೆ. ಉತ್ತರ ಭಾರತದ ಕಾರ್ಮಿಕರು ಒಂದು ದಿನಕ್ಕೆ 8 ರಿಂದ 10 ಎಕರೆ ಭತ್ತ ನಾಟಿ ಮಾಡುತ್ತಾರೆ. ಮಲೇಬೆನ್ನೂರು, ನಿಟ್ಟೂರು, ಭಾಗದಲ್ಲಿ 200 ಜನ ಕೂಲಿ ಕಾರ್ಮಿಕರು ಬಂದಿದ್ದಾರೆ‌. ಇವರು ನಾಟಿ ಹಚ್ಚುವುದ್ದರಿಂದ ಇಳುವರಿ ಹೆಚ್ಚು ಬರಲಿದೆ. ಸ್ಥಳೀಯರು ಒಂದು ಎಕರೆಗೆ 3500 ಕೂಲಿ ಪಡೆದರೆ, ಇವರು 4500 ಕೂಲಿ ಪಡೆಯುತ್ತಾರೆ. ಏಜೆಂಟ್ ಪಡೆದು ಬಳಿಕ ಕೂಲಿ ಕಾರ್ಮಿಕರಿಗೆ ಕೂಲಿ ಎಷ್ಟು ತಲುಪುತ್ತದೆ ಗೊತ್ತಿಲ್ಲ ಎಂಬುದು ಮಾತ್ರ ದುರಂತ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:42 pm, Wed, 4 September 24