ಹುಬ್ಬಳ್ಳಿ-ಧಾರವಾಡ ಮಂದಿಗೆ ಪಾಲಿಕೆಯಿಂದ ಆಸ್ತಿ ತೆರಿಗೆ ಹೊರೆ: ಎಷ್ಟು ಏರಿಕೆ? ಇಲ್ಲಿದೆ ವಿವರ
ರಾಜ್ಯದಲ್ಲಿ ದಿನದಿಂದ ದಿನಕ್ಕೆ ಎಲ್ಲ ವಸ್ತುಗಳ ದರ ಏರುತ್ತಲೇ ಇದೆ. ಈಗಾಗಲೇ ಬಸ್ ದರ, ಹಾಲಿನ ದರ ಏರಿಕೆಯ ಬಿಸಿ ಮಧ್ಯೆ ಇದೀಗ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಅವಳಿ ನಗರದ ಜನರಿಗೆ ತೆರಿಗೆ ಶಾಕ್ ನೀಡಿದೆ. ಒಮ್ಮಿಂದೊಮ್ಮೆಲೇ ವಿಪರೀತ ತೆರೆಗೆ ಏರಿಸಿರುವ ಪಾಲಿಕೆ, ಸ್ವಂತ ಮನೆಗಿಂತ ಬಾಡಿಗೆ ಮನೆಯಲ್ಲಿಯೇ ಇರುವುದು ವಾಸಿ ಅನ್ನುವಂತೆ ಮಾಡಿದೆ. ಅಷ್ಟಕ್ಕೂ ಪಾಲಿಕೆ ಏರಿಸಿರೋ ತೆರಿಗೆ ಪ್ರಮಾಣ ಎಷ್ಟು? ಇಲ್ಲಿದೆ ವಿವರ

ಧಾರವಾಡ, ಏಪ್ರಿಲ್ 18: ಹುಬ್ಬಳ್ಳಿ-ಧಾರವಾಡ (Hubballi-Dharwad) ಮಹಾನಗರದಲ್ಲಿ ಸ್ವಂತ ಮನೆಯಲ್ಲಿ ವಾಸಿಸುವವರು ಇದೀಗ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದೇವೆ ಎಂಬಂತೆ ಭಾಸವಾಗುತ್ತಿದೆ. ಇದು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯು (Hubballi-Dharwad Municipal Corporation) ಪ್ರಸಕ್ತ ಸಾಲಿನಲ್ಲಿ ಸಂಗ್ರಹಿಸುತ್ತಿರುವ ಆಸ್ತಿ ತೆರಿಗೆ ಕುರಿತಂತೆ ಸಾರ್ವಜನಿಕರು ನೊಂದು ನುಡಿಯುತ್ತಿರುವ ಮಾತಾಗಿದೆ. ಇದಕ್ಕೆ ಕಾರಣ, ಮಹಾನಗರ ಪಾಲಿಕೆ ಏಕಾಏಕಿ ಆಸ್ತಿ ಕರ (Property Tax) ಹೆಚ್ಚಳ ಮಾಡಿರುವುದು.
ಸರ್ಕಾರದ ನಿಯಮದಂತೆ ಆಸ್ತಿ ಕರ ಹೆಚ್ಚಳವಾಗಿದೆ. ಇದರಲ್ಲಿ ಏನು ಮಾಡಲು ಆಗದು ಎಂದು ಪಾಲಿಕೆ ಅಧಿಕಾರಿಗಳು ಹೇಳಿದರೇ, ಆಡಳಿತದಲ್ಲಿರುವ ಬಿಜೆಪಿ ಸದಸ್ಯರೇ ಇದೀಗ ಆಸ್ತಿ ಕರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಈ ನಡುವೆ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯೂ ಇದರ ವಿರುದ್ಧ ಸಭೆ ನಡೆಸಿ, ಮುಂದಿನ 15 ದಿನಗಳವರೆಗೆ ತೆರಿಗೆ ಕಟ್ಟಬೇಡಿ ಅಂತ ಅವಳಿ ನಗರದ ಜನರಿಗೆ ಮನವಿ ಮಾಡಿದೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಹೋರಾಟ ನಡೆಸಿ, ಆಡಳಿತಕ್ಕೆ ಚುರುಕು ಮುಟ್ಟಿಸೋಣ ಅಂತ ಹೇಳಿದೆ.
ಆಸ್ತಿಗಳಿಗೆ ಪರಿಷ್ಕೃತ ಎಸ್ಆರ್ (ಮಾರುಕಟ್ಟೆ) ದರವನ್ನು ಮೌಲ್ಯಮಾಪನ ಮಾಡಿ, ಅದಕ್ಕೆ ತಕ್ಕಂತೆ ಆಸ್ತಿ ಕರ ವಿಧಿಸಲಾಗುತ್ತದೆ. ಈ ಕೆಲಸ 2019ರಿಂದ ಆಗಬೇಕಿತ್ತು. ಆದರೆ, ಇನ್ನೂವರೆಗೂ ಆಗದಿರುವುದು ಸಮಸ್ಯೆಗೆ ಕಾರಣವಾಗಿದೆ. ಕೆಲ ಪ್ರದೇಶಗಳಲ್ಲಿ ಮಾರುಕಟ್ಟೆ ಬೆಲೆ ದುಪ್ಪಟ್ಟು, ಮೂರು ಪಟ್ಟು ಆಗಿದೆ. ಅದಕ್ಕೆ ತಕ್ಕಂತೆ ಆಯಾ ಆಸ್ತಿಗಳ ತೆರಿಗೆ ಹೆಚ್ಚಿದೆ.
ಜೊತೆಗೆ ಪ್ರತಿವರ್ಷ ಪಾಲಿಕೆಯೂ ಶೇ. 3ರಷ್ಟು ಆಸ್ತಿ ಕರ ಹೆಚ್ಚಳ ಮಾಡಬಹುದಾಗಿದೆ. ಇದನ್ನು ಸ್ಥಳೀಯ ಅವಕಾಶ, ಅಭಿವೃದ್ಧಿಯನ್ನು ಗಣನೆಗೆ ತೆಗೆದುಕೊಂಡು ಶೇ. 5ರಷ್ಟು ಹೆಚ್ಚಳ ಮಾಡುವ ಅವಕಾಶವೂ ಇದೆ. ಕಳೆದ 2022, 2023, 2024 ರಲ್ಲಿ ಆಸ್ತಿ ಕರ ಹೆಚ್ಚಳ ಮಾಡಿರಲಿಲ್ಲ. ಆಗ ಏಕೆ ಮಾಡಿರಲಿಲ್ಲ ಎಂಬ ಪ್ರಶ್ನೆಗೆ ವಿಧಾನಸಭೆ, ಲೋಕಸಭೆ ಚುನಾವಣೆಯ ನೆಪ ಹೇಳಲಾಗುತ್ತಿದೆ.
ಆಗ ಹೆಚ್ಚಳ ಮಾಡಿದರೆ ಸಾರ್ವಜನಿಕರ ಮೇಲೆ ಪರಿಣಾಮ ಬೀರಬಹುದು ಎಂಬ ಕಾರಣಕ್ಕೆ ಮಾಡಿರಲಿಲ್ಲ ಅನ್ನೋದು ಇದೀಗ ಗುಟ್ಟಾಗಿ ಉಳಿದಿಲ್ಲ. ಇದೀಗ, ಆ ಮೂರೂ ವರ್ಷಗಳ ಜೊತೆಗೆ ಈ ವರ್ಷದ ಶೇ. 3 ರಷ್ಟನ್ನು ಸೇರಿಸಿ ಹೆಚ್ಚಳ ಮಾಡಲಾಗಿದೆ. ಇದರಿಂದ ಶೇ. 18 ರಷ್ಟು ತೆರಿಗೆ ಹೆಚ್ಚಳವಾದಂತಾಗಿದೆ. ಜೊತೆಗೆ ಮಾರುಕಟ್ಟೆ ಬೆಲೆಗೆ ತಕ್ಕಂತೆ ತೆರಿಗೆ ಹಾಕುವುದರಿಂದ ಆಯಾ ಆಸ್ತಿಗಳ ತೆರಿಗೆ ಹೆಚ್ಚಳವಾಗಿದೆ.
ಕೆಲವೊಂದಿಷ್ಟು ಆಸ್ತಿಗಳ ತೆರಿಗೆ ದುಪ್ಪಟ್ಟು ಕೂಡ ಆಗಿದೆ. ಜೊತೆಗೆ ಘನತ್ಯಾಜ್ಯ ನಿರ್ವಹಣಾ ಶುಲ್ಕ, ಯುಜಿಡಿ ನಿರ್ವಹಣಾ ಶುಲ್ಕ ಎಂದು ಸಂಗ್ರಹಿಸಲಾಗುತ್ತಿದೆ. ಇದೆಲ್ಲವೂ ಇದೀಗ ಜನಾಕ್ರೋಶಕ್ಕೆ ಕಾರಣವಾಗುತ್ತಿದೆ.
ಕೆಎಂಸಿ ಕಾಯ್ದೆ ತಿದ್ದುಪಡಿ ಮಾಡಿ, ಆಸ್ತಿಗೆ ಅಂದಿನ ಮಾರುಕಟ್ಟೆ ದರದಂತೆ ತೆರಿಗೆ ನಿಗದಿಪಡಿಸಬೇಕು ಎಂಬ ರಾಜ್ಯ ಸರಕಾರ ನಿಯಮವನ್ನು ಜಾರಿಗೊಳಿಸಿದೆ. ಹೀಗಾಗಿ, ಈ ವಿಷಯದಲ್ಲಿ ಪಾಲಿಕೆಗೆ ಏನೂ ಮಾಡಲು ಆಗುತ್ತಿಲ್ಲ. ಸಾರ್ವಜನಿಕರಿಗೆ ಹೊರೆಯಾಗುತ್ತಿದೆ ಎಂದೆನಿಸಿದರೂ ಆಡಳಿತ ಮಂಡಳಿ ಅಸಹಾಯಕತೆಯಿಂದ ಕೈ ಕಟ್ಟಿ ಕುಳಿತುಕೊಳ್ಳುವಂತಾಗಿದೆ.
ಇದನ್ನೂ ಓದಿ: ವ್ಯಾನಿಟಿ ಬ್ಯಾಗ್ನಲ್ಲಿ ತ್ರಿಶೂಲ ಇಟ್ಟುಕೊಳ್ಳಿ: ಮಹಿಳೆಯರಿಗೆ ಮುತಾಲಿಕ್ ಕಿವಿಮಾತು
ಆದರೂ, ಇದಕ್ಕೆ ಸಂಬಂಧಪಟ್ಟಂತೆ ಪಾಲಿಕೆಯಿಂದ ಏನು ಮಾಡಲು ಸಾಧ್ಯ ಎಂಬುದರ ಬಗ್ಗೆ ಚರ್ಚಿಸಲು ಹಿರಿಯ ಸದಸ್ಯರ ಸಭೆ ನಡೆಸಲು ಮೇಯರ್ ಮುಂದಾಗಿದ್ದಾರೆ. ಏನೇ ಆಗಲಿ ಈಗಾಗಲೇ ಎಲ್ಲ ಪದಾರ್ಥಗಳ ದರ ಏರಿಕೆ ಮಾಡಿರುವ ಮಧ್ಯೆಯೇ ಪಾಲಿಕೆಯು ಆಸ್ತಿ ತೆರಿಗೆಯನ್ನು ಹೆಚ್ಚಳ ಮಾಡಿರುವುದಕ್ಕೆ ತೀವ್ರ ಆಕ್ರೋಶವಂತೂ ವ್ಯಕ್ತವಾಗುತ್ತಿದೆ.