ಹುಬ್ಬಳ್ಳಿ: ಮಹಿಳಾ ಕ್ರಿಕೆಟ್​ಗೆ ಕೆಎಸ್​ಸಿಎ ಅಸಡ್ಡೆ?

ಹುಬ್ಬಳ್ಳಿ(Hubballi) ಮಹಾನಗರದಲ್ಲಿ ಕಾರ್ಯನಿರ್ವಹಿಸುತ್ತಿರುವ ಕೆಎಸ್​ಸಿಎ (ಕರ್ನಾಟಕ ರಾಜ್ಯ ಕ್ರಿಕೆಟ್ ಅಕಾಡೆಮಿ) ಮಹಿಳಾ ಕ್ರಿಕೆಟ್​ಗೆ ಅಸಡ್ಡೆ ಭಾವನೆ ತೋರುತ್ತಿದೆ. ಇಂತದೊಂದು ಆಕ್ರೋಶದ ದನಿ ಉತ್ತರ ಕರ್ನಾಟಕದಾದ್ಯಂತ ಕೇಳಿ ಬರಲಾರಂಭಿಸಿದೆ. ಈ ಕುರಿತು ಒಂದು ಸ್ಟೋರಿ ಇಲ್ಲಿದೆ.

ಹುಬ್ಬಳ್ಳಿ: ಮಹಿಳಾ ಕ್ರಿಕೆಟ್​ಗೆ ಕೆಎಸ್​ಸಿಎ ಅಸಡ್ಡೆ?
ಮಹಿಳಾ ಕ್ರಿಕೆಟ್​ಗೆ ಕೆಎಸ್​ಸಿಎ ಅಸಡ್ಡೆ
Edited By:

Updated on: Aug 14, 2024 | 7:21 PM

ಹುಬ್ಬಳ್ಳಿ, ಆ.14: ವಾಣಿಜ್ಯನಗರಿ-ವಿದ್ಯಾಕಾಶಿ ಎಂದು ಖ್ಯಾತಿಪಡೆದಿರುವ ಹುಬ್ಬಳ್ಳಿ(Hubballi) ಮಹಾನಗರದಲ್ಲಿ ಕಾರ್ಯನಿರ್ವಹಿಸುತ್ತಿರುವ ಕೆಎಸ್​ಸಿಎ (ಕರ್ನಾಟಕ ರಾಜ್ಯ ಕ್ರಿಕೆಟ್ ಅಕಾಡೆಮಿ) ಮಹಿಳಾ ಕ್ರಿಕೆಟ್​ಗೆ ಅಸಡ್ಡೆ ಭಾವನೆ ತೋರುತ್ತಿದೆ. ಇಂತದೊಂದು ಆಕ್ರೋಶದ ದನಿ ಉತ್ತರ ಕರ್ನಾಟಕದಾದ್ಯಂತ ಕೇಳಿ ಬರಲಾರಂಭಿಸಿದೆ. ಇದಕ್ಕೆ ಸಕಾರಣವೂ ಇಲ್ಲದ್ದಂತಿಲ್ಲ. ಕೆಎಸ್​ಸಿಎ ನಿಮಂತ್ರಿಕರಾಗಿ ನಿಖೀಲ್ ಭೂಸದ ಅಧಿಕಾರವಹಿಸಿಕೊಂಡ ನಂತರ ಮಹಿಳಾ ಕ್ರಿಕೆಟ್​ಗೆ ಎಳ್ಳಷ್ಟು ಕಾಳಜಿ ವಹಿಸಿಲ್ಲ ಎಂದರೆ ತಪ್ಪಾಗಲಾರದು.

ಅಂತರಾಷ್ಟ್ರೀಯ ಮಟ್ಟದಲ್ಲಿ ಇತ್ತೀಚಿಗಷ್ಟೇ ಮಹಿಳಾ ಐಪಿಎಲ್​ನಲ್ಲಿ ಕಲಬುರಗಿ ಜಿಲ್ಲೆಯ ಕ್ರೀಡಾಪಟು ರಾಯಲ್ ಚಾಲೆಂಜರ್ಸ್ ತಂಡವನ್ನು ಸಂಯುಕ್ತಾ ಪಾಟೀಲ್​ ಪ್ರತಿನಿಧಿಸಿ ಅಮೋಘ ಸಾಧನೆಗೈಯುವ ಮೂಲಕ ಇಡೀ ದೇಶದಲ್ಲಿ ಮಾತ್ರವಲ್ಲದೇ ಅಂತರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕದ ಕೀರ್ತಿ ಪತಾಕೆ ಹಾರಿಸಿದ್ದರು. ಇದೇ ರೀತಿಯಾಗಿ ರಾಜ್ಯದ ವಿಜಯಪುರ ಜಿಲ್ಲೆಯ ಅನಿತಾ ಕಾಮತ್, ರಾಜೇಶ್ವರಿ ಗಾಯಕವಾಡ ದೇಶದ ಕ್ರಿಕೆಟ್ ಇತಿಹಾಸದಲ್ಲೇ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಆದರೆ, ಕೆಎಸ್​ಸಿಎ ಹುಬ್ಬಳ್ಳಿ ಘಟಕದ ನಿಮಂತ್ರಿಕರಾಗಿ ನಿಖೀಲ್ ಭೂಸದ ಆಯ್ಕೆಗೊಂಡ ನಂತರ ಮಹಿಳಾ ಕ್ರಿಕೆಟ್ ಪಟುಗಳನ್ನು ಉತ್ತೇಜನ ನೀಡುವತ್ತ ಒಂದೇ ಒಂದು ಕ್ರಮವಹಿಸದೇ ಇರುವುದು ಹುಬ್ಬಳ್ಳಿಯ ಕೆಎಸ್​ಸಿಎ ಘಟಕದಲ್ಲಿ ಎಲ್ಲವೂ ಸರಿಯಾಗಿ ನಡೆಯುತ್ತಿಲ್ಲ ಎಂದು ಸಾರಿ ಹೇಳುವಂತಿದೆ.

ಇದನ್ನೂ ಓದಿ:Stale food at KSCA: ಆರ್​​ಸಿಬಿ ಪಂದ್ಯದ ವೇಳೆ ಹಳಸಿದ ಆಹಾರ ಸರಬರಾಜು – ಕೆಎಸ್‌ಸಿಎ ವಿರುದ್ಧ ಎಫ್‌ಐಆರ್ ದಾಖಲು

ಏಕೈಕ ಅಕಾಡಮೆ!

ಧಾರವಾಡ ಜಿಲ್ಲಾ ಕ್ರಿಕೆಟ್ ವಲಯ ಒಟ್ಟು 5 ಜಿಲ್ಲೆಗಳನ್ನೊಂಡಿದ್ದು, ಈ ವ್ಯಾಪ್ತಿಯಲ್ಲಿ ಖಾಸಗಿ ಒಡೆತನದಲ್ಲಿರುವ ಒಂದೇ
‘ಹುಬ್ಬಳ್ಳಿ ವುಮೇನ್ಸ ಕ್ರಿಕೆಟ್ ಅಕಾಡೆಮಿ ಕಾರ್ಯನಿರ್ವಹಿಸುತ್ತಿದೆ. ಮಹಿಳಾ ಕ್ರೀಡಾಪಟುಗಳಿಗೆ ಉತ್ತಮ ನೀಡುವಂತಹ ಯಾವುದೇ ಕಾರ್ಯಕ್ರಮಗಳನ್ನು ಕೆಎಸ್ ಸಿಎ ಹಮ್ಮಿಕೊಂಡಿರುವ ಉದಾಹರಣೆಗಳಿಲ್ಲ. ಇದರಿಂದಾಗಿ ಸಮಸ್ತ ಉತ್ತರ ಕರ್ನಾಟಕದ ಅದೆಷ್ಟೋ ಉದೋನ್ಮುಖ ಕ್ರೀಡಾಪಟುಗಳು ಅವಕಾಶದಿಂದ ವಂಚಿತರಾಗುವಂತೆ ಮಾಡಿದೆ.

ಬೆಂಗಳೂರಿಗರಿಗಷ್ಟೇ ಮಹಿಳಾ ಕ್ರಿಕೆಟ್ ತಂಡಕ್ಕೆ 15 ಮತ್ತು 19 ವಯೋಮಿತಿಯ ಕ್ರೀಡಾಪಟುಗಳನ್ನು ಆಯ್ಕೆ ಮಾಡಲಾಗುತ್ತಿದೆ. ಆದರೆ, ಸಮಗ್ರ ಉತ್ತರ ಕರ್ನಾಟಕದಿಂದ ಪ್ರತಿನಿಧಿಸುವ ಕ್ರಿಕೆಟ್ ಪಟುಗಳು ಕಾಣಸಿಗುವುದೇ ಅಪರೂಪ ಎಂಬಂತಾಗಿದೆ. ಇದೇ ಕಾರಣಕ್ಕೆ ರಾಜ್ಯ ಮಹಿಳಾ ಕ್ರಿಕೆಟ್ ತಂಡದಲ್ಲಿ ಉ.ಕ ದಲ್ಲಿ ಪ್ರತಿಭಾವಂತ ಕ್ರೀಡಾಪಟುಗಳೇ ಇಲ್ಲವೇ ಎಂಬ ಪ್ರಶ್ನೆ ಮೂಡಿಸುತ್ತಿದೆ.

ಭೇಟಿಯೇ ನೀಡಿಲ್ಲ?

ಕೆಎಸ್ ಸಿಎ ನಿಮಂತ್ರಿಕರಾಗಿ ನೇಮಕಗೊಂಡ ನಂತರ ನಿಖೀಲ್ ಭೂಸದ ಈವರೆಗೆ ಉತ್ತರ ಕನ್ನಡ ಹಾಗೂ ಹಾವೇರಿಯ ಕೆಎಸ್ ಸಿಎ ಘಟಕಗಳಿಗೆ ಭೇಟಿಯೇ ನೀಡಿಲ್ಲ. ಇದರಿಂದಾಗಿ ಈ ಭಾಗದ ಕ್ರಿಕೆಟ್ ಪಟುಗಳ ಭವಿಷ್ಯದ ಮೇಲೆ ಕಾರ್ಮೋಡ ಕವಿದಂತಾಗಿದೆ.

ಇದನ್ನೂ ಓದಿ:RCB VS ಡೆಲ್ಲಿ ಪಂದ್ಯದ ವೇಳೆ‌ ಕಳಪೆ ಅಹಾರ ನೀಡಿದ ಆರೋಪ, ಕೆಎಸ್​ಸಿಎ ವಿರುದ್ಧ ಎಫ್​ಐಆರ್

ಕಾರ್ಯಾನುಭವದ ಕೊರತೆ

ಕ್ರಿಕೆಟ್​ನ ಗಂಧಗಾಳಿಯೂ ಅರಿಯದ ನಿಖೀಲ್ ಭೂಸದ, ತಮ್ಮ ತಂದೆ ಬಾಬಾ ಭೂಸದ ಅವರ‌ ವರ್ಚಿಸ್​ವೊಂದೆ ಹಿಡಿದುಕೊಂಡು ಕೆಎಸ್​ಸಿಎ ಅಧಿಕಾರದ ಗದ್ದುಗೆ ಏರಿದ್ದಾರೆ. ಬಾಬಾ ಭೂಸದ ಸತತ 18 ವರ್ಷಗಳ ಕಾಲ ಕೆಎಸ್​ಸಿಎ ನೂಗ ಹೊತ್ತಿ ಸಾಗಿದ್ದರಲ್ಲದೇ, ಸಾಕಷ್ಟು ಅನುಭವ ಹೊಂದಿದ್ದರು. ಇವರ ಅಧಿಕಾರಾವಧಿಯಲ್ಲಿ ಕೆಎಸ್​ಸಿಎ ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್ ಪಂದ್ಯಾವಳಿಗಳನ್ನು ಆಯೋಜಿಸಲು ಸಾಧ್ಯವಾಗುವಂತಹ ಕ್ರಿಕೆಟ್ ಮೈದಾನವನ್ನು ಹೊಂದಲು ಸಾಧ್ಯವಾಯಿತು.

ಸಮಿತಿಗಳಿಗೆ ತೀಲಾಂಜಲಿ

ಕೆಎಸ್​ಸಿಎ ಈ ಮೊದಲು ಪಂದ್ಯಾವಳಿ ಸಮಿತಿ, ಆಯ್ಕೆ ಸಮಿತಿ ಹೀಗೆ ಅನೇಕ ಸಮಿತಿಗಳ ಮೂಲಕ ಕಾರ್ಯನಿರ್ವಹಿಸುವ ಮೂಲಕ ಕ್ರೀಡಾಪಟುಗಳ ಉಜ್ವಲ್ ಭವಿಷ್ಯಕ್ಕೆ ಮುಂದಾಗುತ್ತಿತ್ತು. ಆದರೆ, ನಿಖೀಲ್ ಭೂಸದ ಅಧ್ಯಕ್ಷರಾಗಿ ಆಯ್ಕೆಯಾಗುತ್ತಿದ್ದಂತೆಯೇ ಇಂತಹ ಅನೇಕ ಸಮಿತಿಗಳನ್ನು ವಿಸರ್ಜಿಸುವ ಮೂಲಕ ಅಧಿಕಾರ ದರ್ಪ ಮೆರೆದಿದ್ದಾರೆ. ಅಲ್ಲದೇ, ಇಡೀ ಕೆಎಸ್​ಸಿಎಯಲ್ಲಿ ಒನ್ ಮ್ಯಾನ್ ಶೋ ಪ್ರದರ್ಶಿಸುತ್ತಿದ್ದಾರೆ ಎಂದು ಹೆಸರು ಹೇಳಲು ಇಚ್ಛಿಸದ ಕೆಎಸ್​ಸಿಎ ಮಾಜಿ ಕಾರ್ಯಕಾರಣಿ ಸದಸ್ಯರೊಬ್ಬರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಮಸ್ತ ಉತ್ತರ ಕರ್ನಾಟಕದ ಭವಿಷ್ಯದ ಕ್ರಿಕೆಟ್ ಕಲಿಗಳಿಗೆ ವೇದಿಕೆಯಾಗಬೇಕಿದ್ದ ಕೆಎಸ್​ಸಿಎ ಭೂಸದ ಅವರ ಸ್ವಪ್ರತಿಷ್ಠೆಗೆ ಸೊರಗುತ್ತಿರುವುದು ನಿಜಕ್ಕೂ ವಿಷಾದನೀಯ. ಈಗಲಾದರೂ, ಕೆಎಸ್​ಸಿಎಯಲ್ಲಿ ನಡೆದಿರುವ ಈ ಅದ್ವಾನಗಳನ್ನು ಹೋಗಲಾಡಿಸುವ ಮೂಲಕ ಈ ಭಾಗದ ಕ್ರೀಡಾಪಟುಗಳಿಗೆ ಆಸರೆಯಾಗಲು ಸಂಬಂಧಪಟ್ಟವರು ಗಮನಹರಿಸುವರೇ ಕಾದುನೋಡಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ