ಅಣ್ಣನ ಕಣ್ಣೆದುರೇ ತಮ್ಮ ಸಿಡಿಲಿಗೆ ಬಲಿ: ಮೃತದೇಹವನ್ನ ಹೆಗಲ ಮೇಲೆ ಹೊತ್ತು ತಂದ ಸಹೋದರ
ಗದಗ ಜಿಲ್ಲೆಯಲ್ಲಿ ಮನಕಲಕುವ ಘಟನೆಯೊಂದು ನಡೆದಿದೆ. ಸಿಡಿಲು ಬಡಿದು ಅಣ್ಣನ ಕಣ್ಣೆದುರೇ ತಮ್ಮ ಸಾವನ್ನಪ್ಪಿದ್ದಾನೆ. ಕೂದಲೆಳೆ ಅಂತರದಲ್ಲಿ ಬಚಾವ್ ಆದ ಅಣ್ಣ ಬಳಿಕ ತನ್ನ ತಮ್ಮನ ಶವವನ್ನು ಹೊತ್ತು ಮನೆಗೆ ಬಂದಿದ್ದಾರೆ. ಸದ್ಯ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಗಜೇಂದ್ರಗಢ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗದಗ, ಜೂನ್ 05: ಅಣ್ಣನ ಕಣ್ಣೆದುರೇ ಸಿಡಿಲು (lightning) ಬಡಿದು ತಮ್ಮ ಸಾವನ್ನಪ್ಪಿದ (death) ದಾರುಣ ಘಟನೆಯೊಂದು ಜಿಲ್ಲೆಯ ಗಜೇಂದ್ರಗಡ ತಾಲೂಕಿನ ರಾಜೂರು ಗ್ರಾಮದಲ್ಲಿ ನಡೆದಿದೆ. ಪ್ರಶಾಂತ್ ಹುಡೇದ(19) ಮೃತ ಯುವಕ. ಜಾನುವಾರು ಮೇಯಿಸಲು ಹೋಗಿದ್ದ ಸಂದರ್ಭದಲ್ಲಿ ದುರಂತ ಸಂಭವಿಸಿದ್ದು, ತಮ್ಮನ ಶವವನ್ನು ಹೊತ್ತು ಅಣ್ಣ ಊರಿಗೆ ಬಂದಿದ್ದಾರೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಗದಗ ಜಿಲ್ಲೆಯ ಗಜೇಂದ್ರಗಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಮುಖ್ಯಾಂಶಗಳು
- ಗದಗ ಜಿಲ್ಲೆಯ ಹಲವೆಡೆ ಗುಡುಗು ಸಹಿತ ಭಾರಿ ಮಳೆ
- ಸಿಡಿಲು ಬಡಿದು ಅಣ್ಣನ ಎದುರೇ ತಮ್ಮ ಸಾವು
- ಗಜೇಂದ್ರಗಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು
ನಡೆದಿದ್ದೇನು?
ಗದಗ ಜಿಲ್ಲೆಯಾದ್ಯಂತ ಕಳೆದ ಕೆಲವು ದಿನಗಳಿಂದ ಬಿಡುವು ನೀಡಿದ್ದ ವರುಣರಾಯ ಇಂದು ಸಾಯಂಕಾಲ ಗುಡುಗು-ಸಿಡಿಲು ಭಾರಿ ಗಾಳಿ ಸಮೇತ ಆರ್ಭಟಿಸಿದ್ದಾನೆ. ಆದರೆ, ಇದೇ ಮಳೆರಾಯ ಗಜೇಂದ್ರಗಢ ತಾಲೂಕಿನ ರಾಜೂರು ಗ್ರಾಮದ ಕುಟುಂಬವೊಂದಕ್ಕೆ ಕರಾಳ ಶೋಕವನ್ನು ತಂದಿದೆ. ಯಮಸ್ವರೂಪಿ ಸಿಡಿಲಿನ ಹೊಡೆತಕ್ಕೆ ಕೇವಲ 19 ವರ್ಷದ ಪ್ರಶಾಂತ್ ಹುಡೇದ ಎಂಬ ಯುವಕ ಬಲಿಯಾಗಿದ್ದಾನೆ. ಕಣ್ಣು ಮುಚ್ಚಿ ಬಿಡುವುದರೊಳಗೆ ಒಡಹುಟ್ಟಿದ ತಮ್ಮ ಹೆಣವಾಗಿದ್ದು ಕಂಡು ಅಣ್ಣ ಅಕ್ಷರಶಃ ದಿಗ್ಭ್ರಾಂತರಾಗಿದ್ದಾರೆ.
ಸಿಡಿಲು ಬಡಿದು ತಮ್ಮ ಸಾವು: ಅಣ್ಣ ಜಸ್ಟ್ ಮಿಸ್
ಅಷ್ಟಕ್ಕೂ ಜಮೀನಿನಲ್ಲಿ ಎಂದಿನಂತೆ ಜಾನುವಾರುಗಳನ್ನು ಮೇಯಿಸಲು ಸಹೋದರರಿಬ್ಬರು ಹೋಗಿದ್ದರು. ಗುಡುಗು ಸಹಿತ ಭಾರಿ ಮಳೆ ಸುರಿದಿದೆ. ಈ ವೇಳೆ ಸಿಡಿಲು ಬಡಿದು ಪ್ರಶಾಂತ್ ಬಲಿಯಾಗಿದ್ದು, 60 ಮೀಟರ್ ದೂರದಲ್ಲಿದ್ದ ಅಣ್ಣ ಅಪಾಯದಿಂದ ಪಾರಾಗಿದ್ದಾರೆ. ಬಳಿಕ ಅಣ್ಣ ತನ್ನ ತಮ್ಮನ ಶವವನ್ನು ಹೊತ್ತುಕೊಂಡು ಊರಿಗೆ ಬಂದಿದ್ದಾರೆ.
ಹಲಸಿನ ಹಣ್ಣಿನ ಆಸೆಗೆ ಜೀವ ಕಳೆದುಕೊಂಡ ವಿದ್ಯಾರ್ಥಿ
ಹಲಸಿನ ಹಣ್ಣಿನ ಆಸೆಗೆ ವಿದ್ಯಾರ್ಥಿ ಜೀವ ಕಳೆದುಕೊಂಡ ಘಟನೆ ಬೆಂಗಳೂರಿನ ಯಲಹಂಕದ ಜಿಕೆವಿಕೆ ಆವರಣದಲ್ಲಿ ನಡೆದಿದೆ. ಹಲಸಿನ ಹಣ್ಣು ಕೀಳಲು ಹೋಗಿ ಮರದಿಂದ ಬಿದ್ದು ಆಕಾಶ್(23) ದುರ್ಮರಣ ಹೊಂದಿದ್ದಾನೆ. ಸದ್ಯ ಘಟನಾ ಸ್ಥಳಕ್ಕೆ ಯಲಹಂಕ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಇದನ್ನೂ ಓದಿ: ವನ್ಯಜೀವಿ ಬೇಟೆಗಾರರನ್ನು ಬಂಧಿಸಲು ಹೋದ ಅರಣ್ಯಾಧಿಕಾರಿಗಳ ಮೇಲೆ ಹಲ್ಲೆ! ನಾಲ್ವರ ಬಂಧನ
ವಿಜಯನಗರ ಜಿಲ್ಲೆಯ ಕೂಡ್ಲಿಗಿ ಮೂಲದ ವಿದ್ಯಾರ್ಥಿ ಆಕಾಶ್, ಜಿಕೆವಿಕೆಯಲ್ಲಿ ಸರ್ಕಾರಿ ಸೀಟ್ ಪಡೆದು ಎಂಎಸ್ಸಿ ಕೃಷಿ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದ. ರಾತ್ರಿ 12ರಿಂದ 1 ಗಂಟೆ ಅವಧಿಯಲ್ಲಿ ಮರದಿಂದ ಬಿದ್ದಿದ್ದಾನೆ. ಗಂಭೀರ ಗಾಯಗೊಂಡಿದ್ದ ಆಕಾಶ್ನನ್ನು ಸ್ನೇಹಿತರು ಆಸ್ಪತ್ರೆಗೆ ಸೇರಿಸಿದ್ದರು. ಆದರೆ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಇನ್ನು ಆಕಾಶ್ ಎನ್ಎಸ್ಎಸ್ನಲ್ಲಿ ರಾಷ್ಟ್ರಪತಿಯಿಂದ ಉತ್ತಮ ಸ್ವಯಂಸೇವಕ ಪ್ರಶಸ್ತಿ ಪಡೆದಿದ್ದ. 2024ರ ಗಣರಾಜ್ಯೋತ್ಸವ ಪರೇಡ್ನಲ್ಲಿ ಕರ್ನಾಟಕ ಪ್ರತಿನಿಧಿಸಿದ್ದ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.




