AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಿಮ್ಸ್ ನಿರ್ದೇಶಕ, ಅಧೀಕ್ಷಕಿ ನಡುವೆ ಅಧಿಕಾರಕ್ಕಾಗಿ ಪೈಟ್: ಹಳಿ ತಪ್ಪಿದ ಆಡಳಿತ

ಅದು ಉತ್ತರ ಕರ್ನಾಟಕ ಭಾಗದ ಜನರ ಸಂಜೀವಿನಿ. ಸಾವಿರಾರು ಬಡವರ ಪಾಲಿನ ಜೀವ ಉಳಿಸಬೇಕಾದ ಆಸ್ಪತ್ರೆ. ಆದರೆ, ಈ ಆಸ್ಪತ್ರೆಯ ಮುಖ್ಯಸ್ಥರ ಕಿತ್ತಾಟ ತಾರಕಕ್ಕೇರಿದೆ. ಇದರಿಂದ ಆಡಳಿತ ವ್ಯವಸ್ಥೆ ಸಂಪೂರ್ಣ ಹದಗೆಟ್ಟು ಹೋಗಿದೆ. ರೋಗಿಗಳು, ಸಿಬ್ಬಂದಿಗಳ ಮೇಲೆ ಕೆಟ್ಟಪರಿಣಾಮ ಬೀರಿದೆ. ಈ ಇಬ್ಬರು ಮುಖ್ಯಸ್ಥರ ಕಿತ್ತಾಟದ ಬಗ್ಗೆ ಪ್ರಭಾರಿ ಅಧಿಕಾರಿ ಎಳೆಎಳೆಯಾಗಿ ಮಾಹಿತಿ ಬಿಚ್ಚಿಟ್ಟಿದ್ದಾರೆ. ವಿವರಗಳಿಗೆ ಮುಂದೆ ಓದಿ.

ಜಿಮ್ಸ್ ನಿರ್ದೇಶಕ, ಅಧೀಕ್ಷಕಿ ನಡುವೆ ಅಧಿಕಾರಕ್ಕಾಗಿ ಪೈಟ್: ಹಳಿ ತಪ್ಪಿದ ಆಡಳಿತ
ನಿರ್ದೇಶಕ ಡಾ. ಬಸವರಾಜ್ ಬೊಮ್ಮನಹಳ್ಳಿ, ಪ್ರಭಾರ ನಿರ್ದೇಶಕ ಡಾ. ರಾಜು ಮತ್ತು ವೈದ್ಯಕೀಯ ಅಧೀಕ್ಷಕಿ ಡಾ. ರೇಖಾ ಸೋನಾವನೆ
ಸಂಜೀವ ಕುಮಾರ್​ ಪಾಂಡ್ರೆ, ಗದಗ
| Edited By: |

Updated on: Jan 21, 2025 | 11:43 AM

Share

ಗದಗ, ಜನವರಿ 21: ಜಿಮ್ಸ್ ಆಸ್ಪತ್ರೆ ಗದಗ ಜಿಲ್ಲೆ ಅಷ್ಟೇ ಅಲ್ಲ ಹಾವೇರಿ, ಕೊಪ್ಪಳ, ಬಾಗಲಕೋಟೆಯ ಗಡಿ ಭಾಗದ ಸಾವಿರಾರು ರೋಗಿಗಳ ಚಿಕಿತ್ಸಾ ತಾಣ. ಆದರೆ, ಇತ್ತೀಚಿಗೆ ಈ ಆಸ್ಪತ್ರೆಯಲ್ಲಿ ಎಲ್ಲವೂ ಸರಿಯಿಲ್ಲ ಎಂಬ ಆರೋಪ ಕೇಳಿಬಂದಿದೆ. ಯಾಕಂದರೆ, ಮುಖ್ಯ ವೈದ್ಯಾಧಿಕಾರಿಗಳ ಕಿತ್ತಾಟದಿಂದ ಇಡೀ ಆಸ್ಪತ್ರೆಯ ಆಡಳಿತ ವ್ಯವಸ್ಥೆ ಹಳಿ ತಪ್ಪಿದ ರೈಲು ಬಂಡಿಯಂತಾಗಿದೆ. ಜಿಮ್ಸ್ ನಿರ್ದೇಶಕ ಬಸವರಾಜ್ ಬೊಮ್ಮನಹಳ್ಳಿ ಹಾಗೂ ಜಿಮ್ಸ್ ಅಧೀಕ್ಷಕಿ ರೇಖಾ ಸೋನಾವನೆ ನಡುವೆ ಕಳೆದ ಎರಡು ವರ್ಷಗಳಿಂದ ಹೊಂದಾಣಿಕೆ ಆಗದೆ, ಎತ್ತು ಏರಿಗೆ ಎಳೆದರೆ ಕೋಣ ನೀರಿಗೆ ಎಳೆಯಿತು ಎಂಬಂತೆ ಆಗಿದೆ. ಇಬ್ಬರ ನಡುವೆ ಅಧಿಕಾರಕ್ಕಾಗಿ ಕಿತ್ತಾಟ ನಡೆದಿದೆ.

ಜಿಮ್ಸ್ ನಿರ್ದೇಶಕ ಬಸವರಾಜ್ ಬೊಮ್ಮನಹಳ್ಳಿ, ‘ನನ್ನಿಂದ ಎಲ್ಲ ಅಧಿಕಾರಗಳನ್ನ ಕಿತ್ತುಕೊಂಡಿದ್ದಾರೆ’ ಎಂದು ಜಿಮ್ಸ್ ಅಧೀಕ್ಷಕಿ ರೇಖಾ ಸೋನಾವನೆ ಅಸಮಾಧಾನ ಹೊರಹಾಕುತ್ತಿದ್ದಾರೆ. ಇತ್ತ, ‘ನಾವೇನೂ ಕಿತ್ತುಕೊಂಡಿಲ್ಲ, ಎಲ್ಲ ಅಧಿಕಾರ ಅವರಿಗೆ ಕೊಟ್ಟಿದ್ದೇನೆ’ ಎಂದು ಜಿಮ್ಸ್ ನಿರ್ದೇಶಕರ ಪರ ಪ್ರಭಾರಿ ನಿರ್ದೇಶಕ ರಾಜು ಜಿಎಂ ಹೇಳಿದ್ದಾರೆ. ಜಿಮ್ಸ್ ಅಧೀಕ್ಷಕಿ ಹಿಂದೆ ಜಿಮ್ಸ್ ನಿರ್ದೇಶಕರ ಹುದ್ದೆಯಲ್ಲಿ ಇದ್ದರು. ಮೂರೇ ತಿಂಗಳಲ್ಲಿ ಹುದ್ದೆಯಿಂದ ಕೆಳಗಿಳಿಸಿದರು ಎಂಬ ಅಸಮಾಧಾನ ಅವರಲ್ಲಿ ಇದೆ. ಹೀಗಾಗಿ ಇಲ್ಲಸಲ್ಲದ ಆರೋಪಗಳನ್ನ ಮಾಡುತ್ತಿದ್ದಾರೆ. ಅವರಿಗೆ ಎಲ್ಲ ಅನುದಾನ ಮತ್ತು ಅಧಿಕಾರ ಕೊಡಲಾಗಿದೆ ಎಂದು ನಿರ್ದೇಶಕ ಬಸವರಾಜ್, ಬೊಮ್ಮನಹಳ್ಳಿಯನ್ನು ಸಮರ್ಥನೆ ಮಾಡಿಕೊಂಡಿದ್ದಾರೆ.

ಇನ್ನು ಪ್ರಬಾರಿ ನಿರ್ದೇಶಕರ ಹೇಳಿಕೆಯಿಂದ ರೊಚ್ಚಿಗೆದ್ದ ಅಧೀಕ್ಷಕಿ ರೇಖಾ ಸೋನಾವನೆ, ಜಿಮ್ಸ್ ಪ್ರಭಾರಿ ನಿರ್ದೇಶಕ ರಾಜು ಜಿಎಂಗೆ ಪೋನ್ ಮೂಲಕವೇ ತರಾಟೆಗೆ ತೆಗೆದುಕೊಂಡಿದ್ದಾರೆ. ಎರಡು ವರ್ಷಗಳಿಂದಲೇ ಜಿಮ್ಸ್ ನಿರ್ದೇಶಕರು ಎಲ್ಲವನ್ನೂ ನನ್ನ ತಲೆಗೆ ಕಟ್ಟುತ್ತಿದ್ದಾರೆ. ಜಿಮ್ಸ್​​​ನಲ್ಲಿ ಆಗಿರುವ ಪ್ರಮಾದಗಳನ್ನು ಅಧೀಕ್ಷಕಿಯ ಹೆಸರಿಗೆ ತಳಕು ಹಾಕುತ್ತಿರುವುದು ಯಾಕೆ? ಇರುವ ವಿಷಯನ್ನು ಮಾಧ್ಯಮದವರ ಮುಂದೆ ಹೇಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ರೇಖಾ ಸೋನಾವನೆ ಹೇಳುವುದೇನು?

ಎರಡು ವರ್ಷಗಳಿಂದ ನನಗೆ ಅನ್ಯಾಯ ಆಗಿದ್ದರೂ ಸಂಸ್ಥೆಯ ಹೆಸರು ಕೆಡಬಾರದು ಎಂದು ಮಾಧ್ಯಮದ ಮುಂದೆ ಏನೂ ಹೇಳಿಲ್ಲ. ಈಗ ನಿರ್ದೇಶಕರ ಹುದ್ದೆಯಿಂದ ಕೆಳಗಿಳಿಸಿದ್ದಕ್ಕೆ ನನಗೆ ಅಸಮಾಧಾನ ಇದೆ ಎಂದು ಅವರು ಹೇಳುತ್ತಿದ್ದಾರೆ. ಹಾಗಾದರೆ, ನಾನು ಮತ್ತೆ ನಾನು ನಿರ್ದೇಶಕರ ಹುದ್ದೆಗೆ ಬಂದರೆ ಎಂಬ ಭಯ ಅವರನ್ನ ಕಾಡ್ತಿರಬಹುದು. ಇದರಿಂದಲೇ ನನಗೆ ಯಾವುದೇ ಅನುದಾನ ಕೊಡ್ತಿಲ್ಲ. ನನಗೆ ಹಿನ್ನಡೆ ಆಗುವಂತೆ ನೋಡಿಕೊಳ್ತಿದ್ದಾರೆ ಎಂದು ರೇಖಾ ಸೋನಾವನೆ ಆರೋಪಿಸಿದ್ದಾರೆ.

ಎರಡು ವರ್ಷಗಳಿಂದ ನಮಗೆ ಅನುದಾನವನ್ನೇ ಕೊಡುತ್ತಿಲ್ಲ. ಹೀಗಾಗಿ ನಮ್ಮ ಬ್ಯಾಂಕ್ ಅಕೌಂಟನ್ನೇ ರದ್ದುಗೊಳಿಸಿದ್ದೇನೆ. ಒಂದು ಸಣ್ಣಪುಟ್ಟ ಸಂಪನ್ಮೂಲಗಳಿಗೂ ಪತ್ರ ಬರೆದರೂ ಯಾವುದಕ್ಕೂ ನಿರ್ದೇಶಕ ಡಾ. ಬಸವರಾಜ್ ಅನುದಾನ ಕೊಡುತ್ತಿಲ್ಲ ಎಂದು ಸೋನಾವನೆ ಆರೋಪಿಸಿದ್ದಾರೆ. ನಮ್ಮ ಮಾತಿಗೆ ಯಾವುದೇ ಕಿಮತ್ತಿಲ್ಲ ಯಾವ ಅಧಿಕಾರವನ್ನೂ ಕೊಟ್ಟಿಲ್ಲ. ಇದರಿಂದ ರೋಗಿಗಳಿಗೆ, ಸಿಬ್ಬಂದಿಗೆ ಸಾಕಷ್ಟು ಸಮಸ್ಯೆ ಆಗ್ತಿದೆ ಎಂದು ನಿರ್ದೇಶಕ ಬೊಮ್ಮನಹಳ್ಳಿ ವಿರುದ್ಧ ಕೆಂಡಕಾರಿದ್ದಾರೆ.

ಒಪಿಡಿಯಲ್ಲಿದ್ದ ಚೇರ್​ಗಳನ್ನೇ ಕಿತ್ತುಕೊಂಡು ಹೋದರು!

ಇಷ್ಟೆಲ್ಲ ಗೊಂದಲ ಇರುವುದು, ಒಪಿಡಿ ಸೆಕ್ಷನ್​​ನಲ್ಲಿದ್ದ ಚೇರ್​​ಗಳನ್ನು ಕಿತ್ತುಕೊಂಡು ಹೋಗಿದ್ದರಿಂದ ಬಯಲಿಗೆ ಬಂದಿದೆ. ಕಳೆದ ಮೂರು ದಿನಗಳಿಂದ ಅಲ್ಲಿನ ಸಿಬ್ಬಂದಿ ನಿಂತುಕೊಂಡೇ ಕೆಲಸ ಮಾಡುತ್ತಿದ್ದಾರೆ. ಇದರಿಂದ ಹಲವು ಸಿಬ್ಬಂದಿ ಬೆನ್ನುನೋವಿನ ಸಮಸ್ಯೆಯಿಂದ ಬಳಲುವಂತಾಗಿದೆ. ಇತ್ತ ಒಪಿಡಿಗೆ ಕುರ್ಚಿಗಳು ಬೇಕು ಎಂದು ಅಲ್ಲಿನ ಸಿಬ್ಬಂದಿ ಜಿಮ್ಸ್ ನಿರ್ದೇಶಕರಿಗೆ ಪತ್ರ ಬರೆದಿದ್ದರೂ ಕ್ಯಾರೇ ಅಂದಿಲ್ಲ ಎನ್ನಲಾಗಿದೆ. ಹೀಗಾಗಿ ಈ ಇಬ್ಬರು ಅಧಿಕಾರಿಗಳಿಂದ ಏನೂ ನಿರೀಕ್ಷೆ ಉಳಿದಿಲ್ಲ. ಜಿಮ್ಸ್​​ಗೆ ಸರಕಾರ ನೂರಾರು ಕೋಟಿ ರೂ. ಸುರಿದರೂ ಸಣ್ಣಪುಟ್ಟ ಸಂಪನ್ಮೂಲಗಳು ಕೂಡ ಸಿಬ್ಬಂದಿಗೆ ಸಿಗುತ್ತಿಲ್ಲ ಎಂಬ ಅಳಲು ಕೇಳಿಬಂದಿದೆ. ಅಲ್ಲದೆ, ಸರ್ಕಾರ ನೀಡುವ ನೂರಾರು ಕೋಟಿ ರೂ. ಯಾರ ಜೇಬು ತುಂಬಿತ್ತಿದೆ ಎಂಬ ಪ್ರಶ್ನೆ ಉದ್ಭವಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us