ಅನ್ನ ನೀರಿಲ್ಲದೆ 33 ದಿನ ಬಳಿಕ ಶಿವಯೋಗ ಸಮಾಧಿಯಿಂದ ಹೊರಬಂದು ದರ್ಶನ: ವಿಜ್ಞಾನ-ತಂತ್ರಜ್ಞಾನಕ್ಕೆ ಸವಾಲೊಡ್ಡಿ ಆಧ್ಯಾತ್ಮಿಕ ಶಕ್ತಿ ತೋರಿಸಿದ ಶ್ರೀಗಳು
ಗದಗ ಜಿಲ್ಲೆಯ ರಾಚೋಟೇಶ್ವರ ಸ್ವಾಮೀಜಿಗಳು 33 ದಿನಗಳ ಕಠಿಣ ಶಿವಯೋಗ ಸಮಾಧಿ ಹಾಗೂ ಮೌನ ಅನುಷ್ಠಾನವನ್ನು ಪೂರ್ಣಗೊಳಿಸಿದ್ದಾರೆ. ಬೆಳಕು, ಗಾಳಿ, ನೀರು, ಆಹಾರವಿಲ್ಲದೆ ಲೋಕ ಕಲ್ಯಾಣಕ್ಕಾಗಿ ಕೈಗೊಂಡ ಈ ಪವಾಡ ಸದೃಶ ವ್ರತ ಇಂದು ಅಂತ್ಯಗೊಂಡಿದ್ದು, ಲಕ್ಷಾಂತರ ಭಕ್ತರಿಗೆ ದರ್ಶನ ನೀಡಿದ್ದಾರೆ. ಇಂದು ಗದಗದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.

ಗದಗ, ಜುಲೈ 05: ಲೋಕ ಕಲ್ಯಾಣಕ್ಕಾಗಿ ಬೂದೀಶ್ವರ ಮಠದ ಪೀಠಾಧಿಪತಿ ರಾಚೋಟೇಶ್ವರ ಶ್ರೀಗಳು ಕಠಿಣ ವ್ರತ ಕೈಗೊಂಡಿದ್ದರು. ಬೆಳಕು, ಗಾಳಿ, ನೀರು, ಆಹಾರ ಇಲ್ಲದೆ 33 ದಿನಗಳ ಕಾಲ ಮೌನ ಅನುಷ್ಠಾನ ಹಾಗೂ ಶಿವಯೋಗ ಸಮಾಧಿ (ShivaYoga Samadhi) ಆಗಿದ್ದರು. ಇಂದು ಆ ಕಠಿಣ ವ್ರತ ಅಂತ್ಯವಾಗಿದ್ದು, ಶ್ರೀಗಳು ಗರ್ಭಗುಡಿಯಿಂದ ಹೊರ ಬಂದು ಭಕ್ತರಿಗೆ ದರ್ಶನ ನೀಡಿದರು. ಶ್ರೀಗಳನ್ನ ನೋಡಲು ರಾಜ್ಯದ ನಾನಾ ಭಾಗದಿಂದ ಲಕ್ಷಾಂತರ ಭಕ್ತರ ಸಮೂಹವೇ ಆಗಮಿಸಿತ್ತು. ಶ್ರೀಗಳ ಕೌತುಕದ ಕ್ಷಣವನ್ನ ಕಣ್ತುಂಬಿಕೊಂಡರು.
33 ದಿನಗಳ ಮೌನಾನುಷ್ಠಾನ, ಶಿವಯೋಗ ಸಮಾಧಿ ಅಂತ್ಯ
ಗದಗ ತಾಲೂಕಿನ ಅಂತೂರ ಬೆಂತೂರ ಗ್ರಾಮದ ಬೂದೀಶ್ವರ ಮಠದ ಪೀಠಾಧಿಪತಿ ರಾಚೋಟೇಶ್ವರ ಶ್ರೀಗಳು ಬೆಳಕು, ಗಾಳಿ, ನೀರು, ಆಹಾರ ಇಲ್ಲದೆ ಕಲ್ಲಿನಿಂದ ನಿರ್ಮಾಣ ಮಾಡಿದ ಗರ್ಭಗುಡಿಯಲ್ಲಿ 33 ದಿನಗಳ ಶಿವಯೋಗ ಸಮಾಧಿ, ಮೌನ ಅನುಷ್ಠಾನ ಮಾಡಿ ಪವಾಡ ಸೃಷ್ಠಿ ಮಾಡಿದ್ದಾರೆ. ಕಠಿಣವಾದ ಶಿವಯೋಗ ಸಮಾಧಿ ಯೋಗವನ್ನು ಮಾಡಿದ್ದಾರೆ. ಇಂದು ಶ್ರೀಗಳ 33 ದಿನಗಳ ಮೌನಾನುಷ್ಠಾನ, ಶಿವಯೋಗ ಸಮಾಧಿ ಅಂತ್ಯವಾಗಿದೆ.
ವಿಜ್ಞಾನಕ್ಕೆ ಸವಾಲು
ಇಂದು ಬೆಳಗ್ಗೆ 10.30 ಗಂಟೆ ಸುಮಾರಿಗೆ ವಿವಿಧ ಮಠಾಧೀಶರು, ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಶ್ರೀಗಳು ಹೊರಬಂದಿದ್ದಾರೆ. ಜೂನ್ 3ರಂದು ಮಧ್ಯರಾತ್ರಿ 3 ಗಂಟೆಗೆ ಗರ್ಭಗುಡಿಯನ್ನು ಪ್ರವೇಶ ಮಾಡಿದ್ದರು. ಗರ್ಭಗುಡಿಯಲ್ಲಿನ ಶಿವಲಿಂಗದ ಮುಂದೆ ಕಠಿಣವಾದ ತಪಸ್ಸು ಮಾಡಿದ ಶ್ರೀಗಳು ಇಂದು ಹೊರಬಂದು ಸಹಸ್ರಾರು ಭಕ್ತರಿಗೆ ದರ್ಶನ ನೀಡಿದರು. ಶ್ರೀಗಳ ಮೌನಾನುಷ್ಠಾನ ಮುಗಿಸಿ ಹೊರ ಬರುತ್ತಿದ್ದಂತೆ ಭಕ್ತರ ಜಯಘೋಷ ಮುಗಿಲು ಮುಟ್ಟಿತು. ಗರ್ಭಗುಡಿಯ ಕಗ್ಗತ್ತಲಲ್ಲಿ ಅನ್ನ, ನೀರು ಇಲ್ಲದೇ 33 ದಿನಗಳ ಶಿವಯೋಗ ಸಮಾಧಿ ಹಾಗೂ ಮೌನಾನುಷ್ಠಾನ ಮಾಡಿ ಪವಾಡ ಸೃಷ್ಠಿಮಾಡಿದ್ದಾರೆ. ಮೂಲಕ ವಿಜ್ಞಾನಕ್ಕೆ ಸವಾಲು ಹಾಕಿದ್ದಾರೆ.
ಹರಿದು ಬಂದ ಲಕ್ಷಾಂತರ ಭಕ್ತರ ದಂಡು
ಈ ಗ್ರಾಮದಲ್ಲಿ ಇಂದು ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಗದಗ, ಧಾರವಾಡ, ಬಾಗಲಕೋಟೆ, ಕೊಪ್ಪಳ, ಹಾವೇರಿ, ಯಾದಗಿರಿ, ಬಳ್ಳಾರಿ ಸೇರಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಲಕ್ಷಾಂತರ ಭಕ್ತರ ದಂಡು ಹರಿದು ಬಂದಿತ್ತು. ಇನ್ನು ಕೇವಲ ಬೇವಿನ ರಸ, ಪತ್ರಿ ರಸ ಮಾತ್ರ ಸೇವನೆ ಮಾಡಿ ಅನುಷ್ಠಾನ ಮಾಡಿದ್ದಾರೆ ಅಂತ ಶ್ರೀಗಳು ಹೇಳಿದ್ದಾರೆ.

ಶ್ರೀಗಳಿಗೆ ಪಂಚಾಮೃತ ಅಭಿಷೇಕ
ಇದನ್ನೂ ಓದಿ: ಮಳೆಗಾಗಿ ಕಠಿಣ ನಿರ್ಧಾರ ಕೈಗೊಂಡ ಅನ್ನದಾತ: ಕೃಪೆ ತೋರುವನೇ ವರುಣ ದೇವ?
ರಾಚೋಟೇಶ್ವರ ಸ್ವಾಮೀಜಿಗಳು ಲೋಕ ಕಲ್ಯಾಣಕ್ಕಾಗಿ ಈ ಹಿಂದೆ ಕೂಡ ಶಿವಯೋಗ ಸಮಾಧಿ ವ್ರತ ಮಾಡಿದ್ದರು. ಈ ಭಾರಿ ಕೂಡ ಲೋಕ ಕಲ್ಯಾಣಕ್ಕಾಗಿ ಶಿವಯೋಗ ಸಮಾಧಿ ವೃತ ಮಾಡಿ ಯಶಸ್ವಿಯಾಗಿದ್ದಾರೆ. ಸ್ವಾಮೀಜಿಗಳ ಈ ನಡೆ ಭಕ್ತರಲ್ಲಿ ಭಕ್ತಿ ಮತ್ತು ಭರವಸೆಯನ್ನು ಹೆಚ್ಚಿಸಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.




