AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಪಹರಿಸಿ ಸ್ನೇಹಿತನ ಕೊಲೆ ಕೇಸ್: ನಾಪತ್ತೆಯಾಗಿದ್ದ ಡೆಲಿವರಿ ಬಾಯ್​​ ಮಿಸ್ಟ್ರಿ ಬಯಲು; ಐವರು ಅರೆಸ್ಟ್​​​

ಹಾಸನದಲ್ಲಿ ಸಿನಿಮೀಯ ರೀತಿಯಲ್ಲಿ ಸ್ನೇಹಿತನನ್ನ ಅಪಹರಿಸಿ ಹಲ್ಲೆ ನಡೆಸಿ ಬಳಿಕ ಸ್ನೇಹಿತರ ಗ್ಯಾಂಗ್​ನಿಂದಲೇ ಹತ್ಯೆಗೈದ ಪ್ರಕರಣವನ್ನು ಪೊಲೀಸರು ಬೇಧಿಸಿದ್ದಾರೆ. ಸದ್ಯ ಐವರನ್ನು ಬಂಧಿಸಿರುವ ಪೊಲೀಸರು ಪ್ರಮುಖ ಆರೋಪಿಗಳಿಗೆ ಬಲೆ ಬೀಸಿದ್ದಾರೆ. ಕೊಟ್ಟ ಹಣ ವಾಪಸ್​ ಕೊಟ್ಟಿಲ್ಲ ಎನ್ನುವ ಒಂದೇ ಕಾರಣಕ್ಕೆ ಗೆಳೆಯನನ್ನೇ ಕೊಲೆಗೈದು ಸುಟ್ಟು ಹಾಕಿದ್ದಾರೆ.

ಅಪಹರಿಸಿ ಸ್ನೇಹಿತನ ಕೊಲೆ ಕೇಸ್: ನಾಪತ್ತೆಯಾಗಿದ್ದ ಡೆಲಿವರಿ ಬಾಯ್​​ ಮಿಸ್ಟ್ರಿ ಬಯಲು; ಐವರು ಅರೆಸ್ಟ್​​​
ಬಂಧಿತರುImage Credit source: tv9 kannada
ಮಂಜುನಾಥ ಕೆಬಿ
| Edited By: |

Updated on: Mar 23, 2026 | 9:58 PM

Share

ಹಾಸನ, ಮಾರ್ಚ್​ 23: ಕೇವಲ 7 ಸಾವಿರ ರೂ ಹಣಕ್ಕಾಗಿ ಗಾಂಜಾ ಅಮಲಿನಲ್ಲಿ ಗೆಳೆಯನ್ನೇ ಹತ್ಯೆಗೈದ (kill) ಪ್ರಕರಣವನ್ನು ಬೇಧಿಸಿರುವ ಪೊಲೀಸರು ಐವರ ಹೆಡೆಮುರಿ ಕಟ್ಟಿದ್ದಾರೆ. ವರುಣ್​​ನ್ನ ಸಿನಿಮೀಯ ರೀತಿಯಲ್ಲಿ ಅಪಹರಿಸಿ ಕರೆತಂದು ಕೂಡಿ ಹಾಕಿ ಸ್ನೇಹಿತರ ಗ್ಯಾಂಗ್​​ ಹಲ್ಲೆ ಮಾಡಿ ಬಳಿಕ ಕೊಲೆಗೈದು ಎರಡು ದಿನ ಶವದ ಜೊತೆ ಕಳೆದು ಬಳಿಕ ಸುಟ್ಟು ಎಸ್ಕೇಪ್ ಆಗಿದ್ದವರ ಬೆನ್ನಟ್ಟಿದ ಪೊಲೀಸರು, ನಾಪತ್ತೆ ಕೇಸ್​​ನ ಮಿಸ್ಟ್ರಿಯನ್ನ ಬಯಲು ಮಾಡಿದ್ದಾರೆ. ಕೊಟ್ಟ ಸಾಲ ವಾಪಸ್ ಕೊಟ್ಟಿಲ್ಲ ಎನ್ನುವ ಒಂದೇ ಕಾರಣಕ್ಕೆ ಅಮಾನುಷವಾಗಿ ಕೊಲೆ ಮಾಡಿದವರು ಒಬ್ಬೊಬ್ಬರಾಗಿ ಪೊಲೀಸರ ಕೈಗೆ ಸಿಗುತ್ತಿದ್ದಾರೆ. ಪ್ರಮುಖ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

ಐವರ ಬಂಧನ

ನಿನ್ನೆ ನಡೆದಿದ್ದ ಭೀಕರ ಕೊಲೆಗೆ ಇಡೀ ಹಾಸನ ಜಿಲ್ಲೆಯೇ ಬೆಚ್ಚಿಬಿದ್ದಿತ್ತು. ಅರಸೀಕೆರೆ ತಾಲ್ಲೂಕಿನ ಕಾಡಯ್ಯನಕೊಪ್ಪಲು ಗ್ರಾಮದ ವರುಣ್(22) ನನ್ನ ಆತನ ಸ್ನೇಹಿತ ಶಶಾಂಕ್ ಹಾಗೂ ಇತರೆ 7 ಜನರು ಸೇರಿ ಮಾರ್ಚ್ 10ರಂದು ಅಪಹರಿಸಿದ್ದಾರೆ. 7 ಸಾವಿರ ರೂ ಸಾಲದ ಹಣ ಕೊಟ್ಟಿಲ್ಲ ಎಂದು ಕರೆದೊಯ್ದು ಕಿರಣ್ ಎಂಬಾತನ ತೋಟದ ಮನೆಯಲ್ಲಿಟ್ಟು ಕೂಡಿ ಹಾಕಿ ಹಲ್ಲೆ ಮಾಡಿದ್ದಾರೆ. ಮಾರ್ಚ್ 12ರವರೆಗೆ ಎರಡು ದಿನ ಮನಸೋ ಇಚ್ಛೆ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ. ಬಳಿಕ ಮಾರ್ಚ್ 13ರ ಮುಂಜಾನೆ ಅರಸೀಕೆರೆ ತಾಲ್ಲೂಕಿನ ಜೇನುಕಲ್ ಸಿದ್ದೇಶ್ವರ ಸ್ವಾಮಿ ಬೆಟ್ಟದ ಸಮೀಪ ಶವವನ್ನು ಸಂಪೂರ್ಣವಾಗಿ ಸುಟ್ಟು ಎಸ್ಕೇಪ್ ಆಗಿದ್ದಾರೆ.

ಇದನ್ನೂ ಓದಿ: ಗಾಂಜಾ ಅಮಲು: ಸಿನಿಮೀಯ ರೀತಿಯಲ್ಲಿ ಅಪಹರಿಸಿ ಸ್ನೇಹಿತನನ್ನೇ ಕೊಂದು ಶವ ಸುಟ್ಟ ದುಷ್ಟರು

ಮಾರ್ಚ್ 10ರಿಂದ ಮಗ ಕಾಣುತ್ತಿಲ್ಲ ಎಂದು ವರುಣ್ ತಾಯಿ ಕಲಾವತಿ ಮಾರ್ಚ್ 15ರಂದು ಗಂಡಸಿ ಠಾಣೆಗೆ ದೂರು ನೀಡಿದ್ದಾರೆ. ಕೇಸ್ ದಾಖಲಿಸಿಕೊಂಡು ತನಿಖೆಗಿಳಿದ ಪೊಲೀಸರಿಗೆ ಭೀಕರ ಕೊಲೆ ರಹಸ್ಯ ಬಯಲಾಗಿತ್ತು. ಮಾರ್ಚ್ 19ರಂದು ದುದ್ದಾ ಠಾಣೆಯಲ್ಲಿ ಕೊಲೆ ಕೇಸ್ ದಾಖಲು ಮಾಡಿಕೊಂಡು ತನಖೆ ನಡೆಸಿ ಸದ್ಯ ಸತೀಶ್, ಉಮರ್, ವಿಜಯ್, ಚೇತನ್ ಹಾಗೂ ಮನು ಎಂಬುವವರನ್ನು ಬಂಧಿಸಲಾಗಿದೆ ಎಂದು ಮಾಹಿತಿ ನೀಡಿರುವ ಪೊಲೀಸ್ ವರಿಷ್ಠಾಧಿಕಾರಿ, ಕೊಲೆಯ ಪ್ರಮುಖ ಆರೋಪಿ ಶಶಾಂಕ್ ಹಾಗೂ ಇನ್ನು ಹಲವರ ಬಂಧನಕ್ಕೆ ಬಲೆಬೀಸಲಾಗಿದೆ ಎಂದಿದ್ದಾರೆ.

ಎಸ್ಪಿ ಶುಭಾನ್ವಿತ ಹೇಳಿದ್ದಿಷ್ಟು 

ವರುಣ್​ನಿಂದ ಗಾಂಜಾ ಪಡೆಯಲು ಶಶಾಂಕ್ 7 ಸಾವಿರ ರೂ ಹಣ ನೀಡಿದ್ದ. ಆದರೆ ವರುಣ್ ಗಾಂಜಾ ನೀಡಿರಲಿಲ್ಲ. ಹೀಗಾಗಿ ಶಶಾಂಕ್​ ತನ್ನ ಸ್ನೇಹಿತರ ಜೊತೆ ಸೇರಿ ಈ ಕೃತ್ಯ ಎಸಗಿದ್ದಾನೆ ಎನ್ನಲಾಗುತ್ತಿದೆ. ಈ ಬಗ್ಗೆ ಕೂಡ ತನಿಖೆ ನಡೆಸಲಾಗುತ್ತಿದೆ ಎಂದು ಎಸ್ಪಿ ಶುಭಾನ್ವಿತ ಹೇಳಿದ್ದಾರೆ.

ಆರು ತಿಂಗಳ ಹಿಂದೆ ತಂದೆ ಮೃತಪಟ್ಟಿದ್ದರಿಂದ ಕೆಲಸಕ್ಕೆಂದು ಬೆಂಗಳೂರು ಸೇರಿಕೊಂಡಿದ್ದ ವರುಣ್, ಡೆಲಿವರಿ ಬಾಯ್ ಆಗಿ ಕೆಲಸ ಮಾಡಿಕೊಂಡಿದ್ದ. ಯುಗಾದಿ ಹಿನ್ನೆಲೆ ತಾಯಿ ಜೊತೆಗೆ ಊರಿಗೆ ಬಂದಿದ್ದ. ಬೈಕ್ ರಿಪೇರಿ ಮಾಡಿಸಿಕೊಂಡು ಬರುವುದಾಗಿ ಹೇಳಿ ಹೋದವನು ವಾಪಸ್ ಬರಲಿಲ್ಲ. ಎಲ್ಲೆಡೆ ಹುಡುಕಾಡಿದ್ದ ತಾಯಿ ಕಡೆಗೆ ನಾಪತ್ತೆ ಕೇಸ್ ನೀಡಿದ್ದರು. ಆದರೆ ಅಷ್ಟರಲ್ಲಿ ಶಶಾಂಕ್​ ಗ್ಯಾಂಗ್​​ ವರುಣ್ ಹಾಗೂ ಆತನ ಸ್ನೇಹಿತ ಲೋಹಿತ್​ನನ್ನ ಕಿಡ್ನ್ಯಾಪ್​​ ಮಾಡಿ ಬಳಿಕ ಕೊಂದೇ ಬಿಟ್ಟಿದ್ದಾರೆ.

ಶವದೊಂದಿಗೆ ಒಂದು ದಿನ ಕಳೆದ ಕಿರಾತಕರು

ವರುಣ್ ಶವವನ್ನು ಹಾಸನದ ಗುಡ್ಡೇಗೌಡನ ಕೊಪ್ಪಲಿನ ಶಶಾಂಕ್ ರೂಮ್​ನಲ್ಲಿಟ್ಟು ಒಂದು ದಿನ ಶವ ಎಲ್ಲಿ ವಿಲೇವಾರಿ ಮಾಡುವುದು ಎಂದು ಹುಡುಕಾಡಿದ್ದಾರೆ. ಕಡೆಗೆ ದೂರದ ಅರಸೀಕೆರೆಗೆ ಕೊಂಡೊಯ್ದು ಶವ ಸಂಪೂರ್ಣ ಸುಟ್ಟು ಹೋಗುವವರೆಗೆ ಅಲ್ಲೆ ಇದ್ದು ಬಳಿಕ ಎಲ್ಲರೂ ಎಸ್ಕೇಪ್ ಆಗಿದ್ದಾರೆ. ಆದರೆ ಯಾವಾಗ ಮಿಸ್ಸಿಂಗ್ ಕೇಸ್​ನಲ್ಲಿ ಸಿಕ್ಕ ಕೆಲ ಸಾಕ್ಷಿಗಳನ್ನ ವಿಚಾರಣೆ ಮಾಡಿದ ಪೊಲೀಸರಿಗೆ ಪ್ರಕರಣದಲ್ಲಿ ಬೇರೆಯ ಸುಳಿವು ಸಿಕ್ಕಿದೆ. ತಕ್ಷಣ ಅಲರ್ಟ್ ಆಗಿ ತನಿಖೆಗಿಳಿದಾಗ ಕೊಲೆ ರಹಸ್ಯ ಬಯಲಾಗಿದೆ.

ಸದ್ಯ ಐವರು ಆರೋಪಿಗಳ ಬಂಧನವಾಗಿದೆ. ಕೊಲೆ ಮಾಡಿ ಶವ ಸುಟ್ಟಿರು ಸಂಬಂಧ ಕೆಲ ಸಾಕ್ಷಿಗಳ ಸುಳಿವು ಸಿಕ್ಕಿದೆ. ಇದನ್ನೆ ಸಂಗ್ರಹ ಮಾಡಿ ತನಿಖೆ ನಡೆಸಲಾಗುತ್ತಿದೆ. ಕೊಲೆ ಎಲ್ಲಿ ಮಾಡಲಾಯ್ತು, ಕೊಲೆಗೆ ಬೇರೆ ಏನಾದರು ಕಾರಣ ಇದೆಯಾ ಎಲ್ಲವೂ ಪ್ರಮುಖ ಆರೋಪಿ ಶಶಾಂಕ್ ಬಂಧನದ ಬಳಿಕ ತಿಳಿಯಲಿದ್ದು, ಸದ್ಯ 8 ಜನರ ಮೇಲೆ ಎಫ್​ಐಆರ್ ದಾಖಲಾಗಿದೆ. ಬೇರೆ ಯಾರಾದರೂ ಕೊಲೆಯಲ್ಲಿ ಭಾಗಿಯಾಗಿದ್ದರೆ ಅವರ ವಿರುದ್ದವೂ ಕಠಿಣ ಕ್ರಮ ಎಂದು ಎಸ್ಪಿ ಖಡಕ್ ವಾರ್ನಿಂಗ್ ನೀಡಿದ್ದಾರೆ.

ಇದನ್ನೂ ಓದಿ: ಬೆಳಗಾವಿ: ಪ್ರೀತಿಸಿ ಮದುವೆಯಾದ ಹೆಂಡತಿಗೆ ಚಟ್ಟಕಟ್ಟಿದ ಪತಿ

ಕೊಟ್ಟ ಸಾಲ ವಾಪಸ್ ಕೇಳಿದ್ದಕ್ಕೆ ಹಲ್ಲೆ ಮಾಡಿ ಕೊಲೆಗೈಯಲಾಗಿದೆಯೋ, ಇಲ್ಲಾ ಗಾಂಜಾ ವ್ಯವಹಾರದ ಸಲುವಾಗಿ ಶುರುವಾದ ಕಿತ್ತಾಟ ಕೊಲೆಯಲ್ಲಿ ಕೊನೆಯಾಗಿದೆಯೋ ತನಿಖೆಯಲ್ಲೇ ಬಯಲಾಗಬೇಕಿದೆ. ಸದ್ಯ ಪೊಲೀಸರು ಎಲ್ಲಾ ಆಯಾಮದಲ್ಲಿ ತನಿಖೆ ನಡೆಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us