AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಾಸನದಲ್ಲಿ ತಪ್ಪಿದ ಭಾರಿ ದುರಂತ: ಕೆರೆ ಪಕ್ಕದ ಮರಕ್ಕೆ ಗುದ್ದಿ ನಿಂತ ಸ್ಕೂಲ್ ​​ಬಸ್​​

ಕೆರೆ ಏರಿಯ ಮೇಲೆ ತೆರಳುತ್ತಿದ್ದ ವೇಳೆ ಚಾಲಕನ ನಿಯಂತ್ರಣ ಸಪ್ಪಿ ಸ್ಕೂಲ್​​ಬಸ್​​ ಮರಕ್ಕೆ ಗುದ್ದಿರುವ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ. ಕೂದಲೆಳೆ ಅಂತರದಲ್ಲಿ ಕೆರೆಗೆ ಬಸ್​​ ಬೀಳುವುದು ತಪ್ಪಿದೆ. ಅಪಘಾತದ ಬಳಿಕ ಈ ಬಸ್‌ಗೆ ವಿಮಾ ಮತ್ತು ಎಫ್‌ಸಿ ಇಲ್ಲದಿರುವುದು ಬಹಿರಂಗವಾಗಿದೆ. ಅತ್ತ ಮಂಗಳೂರಿನಲ್ಲಿ ನಡೆದಿರುವ ಮತ್ತೊಂದು ಶಾಲಾ ಬಸ್ ಅಪಘಾತದಲ್ಲಿ ವಿದ್ಯಾರ್ಥಿಗಳಿಗೆ ಗಾಯಗಳಾಗಿವೆ. ಕ್ಯಾಂಟರ್​​ ಹಿಂದಿನಿಂದ ಬಸ್​​ಗೆ ಗುದ್ದಿದ ಪರಿಣಾಮ 7 ಮಂದಿ ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.

ಹಾಸನದಲ್ಲಿ ತಪ್ಪಿದ ಭಾರಿ ದುರಂತ: ಕೆರೆ ಪಕ್ಕದ ಮರಕ್ಕೆ ಗುದ್ದಿ ನಿಂತ ಸ್ಕೂಲ್ ​​ಬಸ್​​
ಕೆರೆ ಬಳಿ ಮರಕ್ಕೆ ಗುದ್ದಿರುವ ಶಾಲಾ ಬಸ್​​Image Credit source: Tv9 Kannada
ಮಂಜುನಾಥ ಕೆಬಿ
| Edited By: |

Updated on:Feb 16, 2026 | 12:34 PM

Share

ಹಾಸನ/ಮಂಗಳೂರು, ಫೆಬ್ರವರಿ 16: ಖಾಸಗಿ ಶಾಲೆಗೆ ಮಕ್ಕಳನ್ನು ಕರೆದೊಯ್ಯುತ್ತಿದ್ದ ಬಸ್​​ ಕೆರೆಯ ಏರಿ ಮೇಲೆ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದು ಕೆರೆ ಕಡೆಗೆ ವಾಲಿನಿಂತ ಘಟನೆ ಅರಕಲಗೂಡು ತಾಲೂಕಿನ ಹಳ್ಳಿಮೈಸೂರು ಹೋಬಳಿಯ ಮುಕ್ಕನಹಳ್ಳಿ ಗ್ರಾಮದ ಬಳಿ ನಡೆದಿದೆ. ಕೂದಲೆಳೆ ಅಂತರದಲ್ಲಿ ಬಸ್​​ ಕೆರೆಗೆ ಬೀಳುವುದು ತಪ್ಪಿದ್ದು, 40 ವಿದ್ಯಾರ್ಥಿಗಳು ಈ ಶಾಲಾ ಬಸ್​​ನಲ್ಲಿದ್ದರು ಎನ್ನಲಾಗಿದೆ.

ಅಪಘಾತಕ್ಕೀಡಾಗಿರುವ ಬಸ್​​ ಶ್ರೀ ಸಿದ್ದರಾಮೇಶ್ವರ ಶಾಲೆಗೆ ಸೇರಿದ್ದಾಗಿದ್ದು, ಬೆಳಿಗ್ಗೆ ಶಾಲೆಗೆ ಮಕ್ಕಳನ್ನು ಕರೆದೊಯ್ಯುವ ವೇಳೆ ಅಪಘಡ ನಡೆದಿದೆ. ಮರಕ್ಕೆ ಬಸ್ ಡಿಕ್ಕಿ ಹೊಡೆಯುತ್ತಿದ್ದಂತೆ ಬಸ್‌ನಿಂದ ವಿದ್ಯಾರ್ಥಿಗಳು ಕೆಳಗಿಳಿದ ಪರಿಣಾಮ ಅದೃಷ್ಟವಶಾತ್ ಭಾರಿ ಅನಾಹುತ ತಪ್ಪಿದೆ. ಸುದ್ದಿ ತಿಳಿಯುತ್ತಿದ್ದಂತೆ ಘಟನಾ ಸ್ಥಳದಲ್ಲಿ ವಿದ್ಯಾರ್ಥಿಗಳ ಪೋಷಕರು ಜಮಾಯಿಸಿದ್ದು, ಘಟನೆ ಬಳಿಕ ಸ್ಕೂಲ್​​ ಬಸ್​​ಗೆ ಎಫ್‌ಸಿ ಹಾಗೂ ಇನ್ಶೂರೆನ್ಸ್ ಇಲ್ಲದಿರುವುದು ಬೆಳಕಿಗೆ ಬಂದಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹಳ್ಳಿಮೈಸೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: ನೆಲಮಂಗಲ ಬಳಿ ಡಿವೈಡರ್​​ ಹಾರಿ KSRTC ಬಸ್​​ಗೆ ಗುದ್ದಿದ ಕಾರು; ಐವರು ಸಾವು

ಶಾಲಾ ಬಸ್​ಗೆ ಕ್ಯಾಂಟರ್ ಡಿಕ್ಕಿ

Mangaluru School Bus Accident

ಅಪಘಾತದಲ್ಲಿ ಜಖಂಗೊಂಡ ವಾಹನಗಳು

ಮಂಗಳೂರು ಹೊರವಲಯದ ಕಾಪಿಕಾಡು ಬಳಿ ಶಾಲಾ ಬಸ್​ಗೆ ಕ್ಯಾಂಟರ್ ಡಿಕ್ಕಿಯಾದ ಪರಿಣಾಮ 7 ವಿದ್ಯಾರ್ಥಿಗಳಿಗೆ ಗಾಯಗೊಂಡಿದ್ದಾರೆ. ತಲಪಾಡಿಯ ಶಾರದಾ ವಿದ್ಯಾನಿಕೇತನ ಶಾಲೆಗೆ ಸೇರಿದ ಬಸ್​ಗೆ ಗೋವಾದಿಂದ ಕೇರಳದ ಕಡೆಗೆ ಹೊರಟಿದ್ದ ಮೀನು ಸಾಗಾಟದ ಕ್ಯಾಂಟರ್ ಹಿಂದಿನಿಂದ ಡಿಕ್ಕಿ ಹೊಡೆದೆದಿದೆ. ಉಡುಪಿ ಜಿಲ್ಲೆ ಕುಂದಾಪುರ ಮೂಲದ ಕ್ಯಾಂಟರ್ ಚಾಲಕ ಸಂಜೀವ್ ನಿದ್ರೆಯ ಮಂಪರಿನಲ್ಲಿದ್ದ ಎನ್ನಲಾಗಿದ್ದು, ಗಾಯಾಳು ವಿದ್ಯಾರ್ಥಿಗಳನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ. ಘಟನಾ ಸ್ಥಳಕ್ಕೆ ಉಳ್ಳಾಲ ಪೊಲೀಸರು ಭೇಟಿ ನೀಡಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 12:34 pm, Mon, 16 February 26