
ಕಲಬುರಗಿ, ಮಾರ್ಚ್ 16: ಕಲಬುರಗಿ (Kalaburagi) ನಗರದಲ್ಲಿ ಭಯಾನಕ ಮತ್ತು ನಾಗರಿಕ ಸಮಾಜವೇ ತಲೆ ತಗ್ಗಿಸುವಂತೆ ದೃಶ್ಯ ನಡೆದಿದೆ. ಮಂಗಳಮುಖಿಯೊಬ್ಬರನ್ನು (Transgender) ಆಕೆಯ ಸಹವರ್ತಿಗಳೇ ಬೆತ್ತಲೆಗೊಳಿಸಿ ಹಲ್ಲೆ ಮಾಡಿ ಕ್ರೌರ್ಯ ಮೆರೆದಿದ್ದಾರೆ. ಶಿವಾನಿ, ಭವಾನಿ, ಮಾಲಾ, ಶಿಲಾ ಎಂಬ ಮಂಗಳಮುಖಿಯರು ಸೇರಿಕೊಂಡು ಅಂಕಿತಾ ಚವ್ಹಾಣ ಎಂಬ ಮತ್ತೊಬ್ಬ ಮಂಗಳ ಮುಖಿಯ ಮೇಲೆ ಕ್ರೌರ್ಯ ಮೆರೆದಿದ್ದಾರೆ. ತಮ್ಮ ಜೊತೆಯಲ್ಲೇ ನಿತ್ಯವೂ ಭಿಕ್ಷಾಟನೆ ಮಾಡುತ್ತಿದ್ದ ಅಂಕಿತಾ ಎಂಬವರ ಮೇಲೆ ಹಾಡಹಗಲೇ ಏಕಾಕಿ ಹಲ್ಲೆ ಮಾಡಿದ್ದಾರೆ. ಮನಸೋಇಚ್ಛೆ ಥಳಿಸಿರುವ ಆರು ಜನ ಮಂಗಳ ಮುಖಿಯರು, ನಂತರ ಇಡೀ ನಾಗರಿಕ ಸಮಾಜವೇ ತಲೆ ತಗ್ಗಿಸುವ ರೀತಿ ಅಂಕಿತಾಳನ್ನು ಬೆತ್ತಲೆ ಮಾಡಿ, ತಲೆಗೂದಲು ಕಟ್ ಮಾಡಿ ಅಮಾನವೀಯವಾಗಿ ವರ್ತಿಸಿದ್ದಾರೆ. ಇನ್ನು ಈ ರೀತಿಯ ಅಮಾನವೀಯ ಘಟನೆಗೆ ಅಂಕಿತಾ ತನ್ನ ಹಣ ವಾಪಸ್ ಕೇಳಿದ್ದೇ ಕಾರಣವಂತೆ.
ಕಳೆದ ಹಲವಾರು ದಿನಗಳಿಂದ ಮಾಲಾ ಎಂಬವರ ಜೊತೆಯಲ್ಲಿ ಇರುತ್ತಿದ್ದ ಅಂಕಿತಾ, ತಾನು ಭಿಕ್ಷಾಟನೆ ಮಾಡಿದ ಹಣವೆಲ್ಲಾ ಮಾಲಾಳಿಗೆ ನೀಡುತ್ತಿದ್ದಳಂತೆ. ಪ್ರತಿ ದಿನ 2-3 ಸಾವಿರ ರೂ. ಹಣ ನೀಡುತ್ತಾ ಬಂದಿದ್ದಾಳೆ. ಸದ್ಯ ಕೊಟ್ಟ ಹಣ ವಾಪಸ್ ಕೇಳಿದ್ದಕ್ಕೆ ಹಲ್ಲೆ ಮಾಡಿದ್ದಾಳೆಂದು ಅಂಕಿತಾ ‘ಟಿವಿ9’ ಎದರು ಅಳಲು ತೋಡಿಕೊಂಡಿದ್ದಾಳೆ. ತನ್ನ ಮೇಲೆ ಹಲ್ಲೆ ಮಾಡಿದವರಿಗೆ ಕಠಿಣ ಶಿಕ್ಷೆಯಾಗಬೇಕು ಎಂದಿದ್ದಾರೆ.
ಅಷ್ಟೆ ಅಲ್ಲದೇ ಇತ್ತಿಚಗೆ ಅಂಕಿತಾ, ಮಾಲಾ ಜೊತೆ ಇರುವುದನ್ನು ಬಿಟ್ಟಿದ್ದಳಂತೆ. ಅಲ್ಲದೇ ನಿತ್ಯ ಹಣ ಕೋಡುವುದನ್ನು ಕೂಡಾ ನಿಲ್ಲಿಸಿದ್ದಳಂತೆ. ಈ ಕಾರಣಕ್ಕಾಗಿ ಹಲವು ಭಾರಿ ಅಂಕಿತಾ ಮೇಲೆ ಹಲ್ಲೆ ಮಾಡಲಾಗಿದೆ ಎಂದೂ ಆರೋಪಿಸಲಾಗಿದೆ. ಅದು ವಿಕೋಪಕ್ಕೆ ಹೋಗಿ ಇದೀಗ ನಾಗರಿಕ ಸಮಾಜವೇ ತಲೆ ತಗ್ಗಿಸುವ ರೀತಿ ಮಾಡಿದ್ದಾರೆ.
ಈ ಘಟನೆ ಕಲಬುರಗಿ ನಗರದಲ್ಲಾದರೆ, ಅತ್ತ ಪ್ರಸಿದ್ದ ಧಾರ್ಮಿಕ ಕ್ಷೇತ್ರ ಗಾಣಗಾಪುರದ ದತ್ತಾತ್ರೇಯ ದೇವಸ್ಥಾನದಲ್ಲಿ ಮಂಗಳಮುಖಿಯ ಮತ್ತೊಂದು ತಂಡ ಪರಸ್ಪರ ಜುಟ್ಟು ಹಿಡಿದುಕೊಂಡು ಹೊಡೆದಾಡಿಕೊಂಡಿದೆ. ಬೇರೆ ಕಡೆಯಿಂದ ಬಂದು ದೇವಸ್ಥಾನದಲ್ಲಿ ಭಿಕ್ಷಾಟನೆ ಮಾಡುತ್ತಿದ್ದಾರೆಂದು ಮಂಗಳಮುಖಿಯರು ಥಳಿಸಿದ್ದಾರೆ. ಒಟ್ಟಿನಲ್ಲಿ ಎರಡೂ ಘಟನೆಗಳಿಂದ ಉಳಿದ ಮಂಗಳ ಮುಖಿಯರು ಆತಂಕಗೊಂಡಿದ್ದು, ನಾವು ಒಬ್ಬೊಬ್ಬರೇ ಭಿಕ್ಷಾಟನೆ ಮಾಡುತ್ತೇವೆ. ನಮ್ಮ ಮೇಲೆ ಈ ರೀತಿ ಹಲ್ಲೆಯಾಗುತ್ತಿದೆ. ನಮಗೆ ನ್ಯಾಯ ಕೊಡಿಸಬೇಕು ಎನ್ನುತ್ತಿದ್ದಾರೆ.
ಇದನ್ನೂ ಓದಿ: ಮನೆಗಾಗಿ ಮನವಿ ಮಾಡಿದ ಮಹಿಳೆಯನ್ನು ಮಂಚಕ್ಕೆ ಕರೆದ ಗ್ರಾಮ ಪಂಚಾಯ್ತಿ ಸದಸ್ಯ
ಸದ್ಯ ಕಲಬುರಗಿಯ ಅಶೋಕ ನಗರ ಪೊಲೀಸರು ಜಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದಾರೆ. ಘಟನೆಗೆ ಅಸಲಿ ಕಾರಣ ಬೇರೇನಾದರೂ ಇದೆಯೇ ಎಂಬುದು ಪೊಲೀಸರ ತನಿಖೆಯಿಂದ ತಿಳಿದುಬರಬೇಕಿದೆ.
Published On - 4:45 pm, Sun, 16 March 25