ವಿಪಕ್ಷ ನಾಯಕ ಆರ್ ಅಶೋಕ್ ಬೆಂಗಾವಲು ವಾಹನ ಚಾಲಕ ಆತ್ಮಹತ್ಯೆ, ಕಾರಣ?
ಬಿಜೆಪಿ ಶಾಸಕ, ಕರ್ನಾಟಕ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಅವರ ಬೆಂಗಾವಲು ವಾಹನ (ಎಸ್ಕಾರ್ಟ್) ಚಾಲಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಬೆಂಗಳೂರಿನ ಬಾಪೂಜಿನಗರದ ಮನೆಯಲ್ಲಿ ಯಾರು ಇಲ್ಲದ ವೇಳೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಹಾಗಾದ್ರೆ, ಶರಣಗೌಡ ಆತ್ಮಹತ್ಯೆಗೆ ಕಾರಣವೇನು ಎನ್ನುವುದೇ ನಿಗೂಢವಾಗಿದೆ.

ಬೆಂಗಳೂರು, (ಅಕ್ಟೋಬರ್ 08): ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್ ಅಶೋಕ್ (R Ashoka) ಅವರ ಬೆಂಗಾವಲು ವಾಹನ (ಎಸ್ಕಾರ್ಟ್) ಚಾಲಕ ಆತ್ಮಹತ್ಯೆ (Suicide) ಮಾಡಿಕೊಂಡಿದ್ದಾರೆ. ಬೆಂಗಳೂರಿನ ಬಾಪೂಜಿನಗರದ ಮನೆಯಲ್ಲಿ ಶರಣಗೌಡ ರಾಮಗೋಳ್ (33) ನೇಣಿಗೆ ಶರಣಾಗಿದ್ದಾರೆ. ಇಂದು (ಅಕ್ಟೋಬರ್ 08) ಮನೆಯಲ್ಲಿ ಯಾರು ಇಲ್ಲದ ಸಂದರ್ಭದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶರಣಗೌಡಗೆ ಎರಡು ಹೆಣ್ಣ ಮಕ್ಕಳು ಇದ್ದಾರೆ. ಇನ್ನು ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.
ಶರಣಗೌಡ ಅವರಿಗೆ ಈಗಾಗಲೇ ಮದುವೆಯಾಗಿದ್ದು ಎರಡು ಮಕ್ಕಳು ಸಹ ಇದ್ದು, ಪತ್ನಿ ಶೈಲಶ್ರೀ ಅವರು ಮಾಗಡಿ ಸಂಚಾರ ಠಾಣೆಯಲ್ಲಿ ಕಾನ್ಸ್ಟೇಬಲ್ ಆಗಿದ್ದಾರೆ. ಇನ್ನು ಶರಣಗೌಡ ಸಹ ಪೊಲೀಸ್ ಬೆಂಗಾವಲು ವಾಹನ ಚಾಲಕರಾಗಿದ್ದು, ಕಳೆದ ಐದು ವರ್ಷಗಳಿಂದ ಅಶೋಕ್ ಅವರ ಬೆಂಗಾವಲು ವಾಹನ ಚಾಲಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಆದ್ರೆ, ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ.
ಇದನ್ನೂ ನೋಡಿ: ಬೆಂಗಾವಲು ವಾಹನ ಡ್ರೈವರ್ ಆತ್ಮಹತ್ಯೆ: ಆಸ್ಪತ್ರೆಗೆ ಬಂದು ಕಣ್ಣೀರಿಟ್ಟ ಅಶೋಕ್
ಸದ್ಯ ಶರಣಗೌಡ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಇನ್ನು ವಿಷಯ ತಿಳಿಯುತ್ತಿದ್ದಂತೆಯೇ ಆರ್ ಅಶೋಕ್ ಸಹ ವಿಕ್ಟೋರಿಯಾ ಆಸ್ಪತ್ರೆಯತ್ತ ದೌಡಾಯಿಸಿದ್ದು, ಪೊಲೀಸ್ ತನಿಖೆಯಲ್ಲಿ ಶರಣಗೌಡ ಆತ್ಮಹತ್ಯೆಗೆ ಕಾರಣ ತಿಳಿದುಬರಬೇಕಿದೆ.
ಎಸ್ಕಾರ್ಟ್ ಚಾಲಕ ಸಾವಿಗೆ ಅಶೋಕ್ ಹೇಳಿದ್ದಿಷ್ಟು
ಇನ್ನು ಈ ಬಗ್ಗೆ ಆರ್.ಅಶೋಕ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಇವಾಗ ವಿಚಾರ ಗೊತ್ತಾಯ್ತು. ನಾನು ಎರಡು ದಿನ ಊರಲ್ಲಿ ಇರಲಿಲ್ಲ. ವಿಚಾರ ತಿಳಿದ ಕೂಡಲೇ ಇಲ್ಲಿಗೆ ಬಂದೆ. ನನ್ನ ಜೊತೆ ಎರಡು ವರ್ಷಗಳಿಂದ ಕೆಲಸ ಮಾಡಿದ್ದಾರೆ. ತುಂಬಾ ಸೈಲೆಂಟ್ ವ್ಯಕ್ತಿ. ಮಾತು ಬಹಳ ಕಡಿಮೆ. ತನ್ನ ಕೆಲಸ ಆಯ್ತು, ತಾನಾಯ್ತು ಅಂತ ಇದ್ದವರು. ಇವತ್ತು ಡ್ಯೂಟಿಗೆ ಬರಲ್ಲ, ಮಂತ್ರಾಲಯಕ್ಕೆ ಹೋಗುತ್ತೇನೆ ಎಂದು ಹೇಳಿದ್ದರಂತೆ ಎಂದು ಬೇಸರ ವ್ಯಕ್ತಪಡಿಸಿದರು.
ಫ್ಯಾಮಿಲಿ ವೆಲ್ ಆಫ್ ಇದೆ, ಹಣಕಾಸಿನ ಸಮಸ್ಯೆ ಇರಲಿಲ್ಲ. ಈ ನವರಾತ್ರಿ ಹಬ್ಬಕ್ಕೆ ನಾನು ಸ್ವೀಟ್ಸ್ , ಬಟ್ಟೆ ಕೊಟ್ಟಿದ್ದೆ, ಆಗ ಅಚಾನಕ್ ಆಗಿ ನನಗೆ ನಮಸ್ಕಾರ ಮಾಡಿದ್ರು, ಸಾಮಾನ್ಯವಾಗಿ ಪೊಲೀಸ್ ಹಾಗೆ ಯಾರು ಕಾಲಿಗೆ ಬೀಳಲ್ಲ. ಆದರೆ ಅವತ್ತು ನನಗೆ ನಮಸ್ಕಾರ ಮಾಡಿದ್ರು. ಅಂತಹ ಒಳ್ಳೆಯ ವ್ಯಕ್ತಿಯನ್ನು ಇಂದು ಕಳೆದುಕೊಂಡಿದ್ದೇವೆ. ಡಿಸಿಪಿ ಜೊತೆ ಮಾತನಾಡಿದ್ದೇನೆ. ಡೆತ್ ನೋಟ್ ಏನಾದ್ರೂ ಸಿಕ್ಕಿದೆಯಾ ಎಂದು ನೋಡಬೇಕು ಎಂದು ಹೇಳಿದರು.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:24 pm, Wed, 8 October 25



