ನೀಟ್ ನಿಷೇಧಕ್ಕೆ ಆಗ್ರಹಿಸಿ ಟ್ವಿಟರ್​ನಲ್ಲಿ ಕರವೇ ಅಭಿಯಾನ: 35 ಸಾವಿರ ಟ್ವೀಟ್

ಕರ್ನಾಟಕದಲ್ಲಿ ನೀಟ್ (Campaign for NEET Ban) ನಿಷೇಧಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ನಾರಾಯಣಗೌಡ (Narayana Gowda) ಬಣದಿಂದ ಟ್ವಿಟರ್‌ನಲ್ಲಿ ಅಭಿಯಾನ ನಡೆಯುತ್ತಿದೆ.

ನೀಟ್ ನಿಷೇಧಕ್ಕೆ ಆಗ್ರಹಿಸಿ ಟ್ವಿಟರ್​ನಲ್ಲಿ ಕರವೇ ಅಭಿಯಾನ: 35 ಸಾವಿರ ಟ್ವೀಟ್
ನೀಟ್ ಬ್ಯಾನ್ ಮಾಡಲು ಒತ್ತಾಯಿಸಿ ವಿದ್ಯಾರ್ಥಿಗಳು ಪ್ರತಿಭಟಿಸಿದರು (ಪ್ರಾತಿನಿಧಿಕ ಚಿತ್ರ)
Follow us
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Mar 12, 2022 | 10:39 AM

ಬೆಂಗಳೂರು: ಕರ್ನಾಟಕದಲ್ಲಿ ನೀಟ್ (Campaign for NEET Ban) ನಿಷೇಧಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ನಾರಾಯಣಗೌಡ (Narayana Gowda) ಬಣದಿಂದ ಟ್ವಿಟರ್‌ನಲ್ಲಿ ಅಭಿಯಾನ ನಡೆಯುತ್ತಿದೆ. ನೀಟ್ ನಿಷೇಧಿಸುವಂತೆ ಆಗ್ರಹಿಸಿ ಈವರೆಗೆ 35 ಸಾವಿರಕ್ಕೂ ಹೆಚ್ಚು ಜನರು ಟ್ವೀಟ್ ಮಾಡಿದ್ದಾರೆ. ಕರ್ನಾಟಕ ರಕ್ಷಣಾ ವೇದಿಕೆ ನಾಯಕರು, ಶಿಕ್ಷಣ ತಜ್ಞರು, ಸಾಹಿತಿ, ಚಿಂತಕರು‌, ಲೇಖಕರು ಸೇರಿದಂತೆ ಹಲವರೊಂದಿಗೆ ಮಾರ್ಚ್ 21ರಂದು ಸಭೆ ನಡೆಸುವ ಸಾಧ್ಯತೆಯಿದೆ. ಸಭೆ ಬಳಿಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಲು ಕರವೇ ನಿರ್ಧರಿಸಿದೆ.

ಕರ್ನಾಟಕದಲ್ಲಿ ನೀಟ್ ನಿಷೇಧಕ್ಕೆ ಒತ್ತಾಯ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ರಷ್ಯಾ ದಾಳಿ ವೇಳೆ ಉಕ್ರೇನ್​ನಲ್ಲಿ ಕನ್ನಡಿಗ ಸಾವು ಪ್ರಕರಣದ ಬಳಿಕ ರಾಜ್ಯದಲ್ಲಿ ನೀಟ್ ನಿಷೇಧಿಸಬೇಕೆಂಬ ಪ್ರಸ್ತಾವ ಚರ್ಚೆಗೆ ಗ್ರಾಸವಾಗಿದೆ. ಕರವೇ ನಡೆಸುತ್ತಿರುವ ಬ್ಯಾನ್ ನೀಟ್ ಆನ್​ಲೈನ್ ಕ್ಯಾಂಪೇನ್​ನಲ್ಲಿ 35 ಸಾವಿರಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದಾರೆ. ಜನರ ಅಭಿಪ್ರಾಯವನ್ನು ಈಗಾಗಲೇ ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ ಗಮನಕ್ಕೆ ತರಲಾಗಿದೆ ಎಂದು ಕರವೇ ರಾಜ್ಯ ಘಟಕದ ಅಧ್ಯಕ್ಷ ನಾರಾಯಣ ಗೌಡ ಹೇಳಿದ್ದಾರೆ.

ಭಾರತಕ್ಕೆ ಬಂದ ಸಂತ್ರಸ್ತರ ಮುಂದಿದೆ ಸವಾಲು

ರಷ್ಯಾ-ಉಕ್ರೇನ್​ ಯುದ್ಧದಿಂದ ಭಾರತದ ವೈದ್ಯಕೀಯ ವಿದ್ಯಾರ್ಥಿಗಳು ಅತಂತ್ರರಾಗಿದ್ದಾರೆ. ಐದನೇ ವರ್ಷದಲ್ಲಿಯೂ ಶಿಕ್ಷಣ ಪೂರ್ಣಗೊಳ್ಳದೆ ತೊಂದರೆ ಅನುಭವಿಸುವಂತಾಗಿದೆ. ಉಕ್ರೇನ್​ನಲ್ಲಿದ್ದ ಸುಮಾರು 20 ಸಾವಿರ ಎಂಬಿಬಿಎಸ್ ವಿದ್ಯಾರ್ಥಿಗಳು ಭಾರತದಲ್ಲಿ ವಿದ್ಯಾಭ್ಯಾಸ ಮುಂದುವರಿಸುವುದು ಹೇಗೆ ಎಂಬ ಪ್ರಶ್ನೆ ಕಾಡುತ್ತಿದೆ. ಈಗಾಗಲೇ ಕೇಂದ್ರ ಸರ್ಕಾರವು ನ್ಯಾಷನಲ್‌ ಮೆಡಿಕಲ್ ಕೌನ್ಸಿಲ್ ಜೊತೆ ಚರ್ಚೆ ನಡೆಸಿದ್ದು, ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಚಿಂತನೆ ನಡೆಸಿದೆ. ಕೆಲವೇ ದಿನಗಳಲ್ಲಿ ಈ ಕುರಿತು ಮಹತ್ವದ ನಿರ್ಧಾರ ಹೊರಬೀಳುವ ಸಾಧ್ಯತೆಯಿದೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈ ನಿಟ್ಟಿನಲ್ಲಿ ಗಟ್ಟಿ ನಿರ್ಧಾರ ತೆಗೆದುಕೊಂಡರೆ, ಎಲ್ಲ ವೈದ್ಯಕೀಯ ಕಾಲೇಜುಗಳು ಸಹಕಾರ ನೀಡಿದರೆ ಯಾವುದೇ ತೊಂದರೆಯಾಗದಂತೆ ಭಾರತದಲ್ಲಿಯೇ 20 ಸಾವಿರ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡಬಹುದು ಎಂದು ರಾಜೀವ್ ಗಾಂಧಿ ಆರೋಗ್ಯ ವಿವಿ ವಿಶ್ರಾಂತಿ ಕುಲಪತಿ ಪ್ರೊ.ಎಸ್.ಸಚ್ಚಿದಾನಂದ‌ ಪ್ರತಿಕ್ರಿಯಿಸಿದರು.

ಇದು ಸಾಧ್ಯವಾಗಲು ಭಾರತದಲ್ಲಿರುವ 520 ಮೆಡಿಕಲ್ ಕಾಲೇಜುಗಳಲ್ಲಿ ಸೀಟುಗಳ ಸಂಖ್ಯೆ ಹೆಚ್ಚಿಸಬೇಕಿದೆ. ಇದರಲ್ಲಿ 280 ಸರ್ಕಾರಿ ಸ್ವಾಯತ್ತ ಸಂಸ್ಥೆಯ ಮೆಡಿಕಲ್‌ ಕಾಲೇಜು, 240 ಖಾಸಗಿ ಮೆಡಿಕಲ್ ಕಾಲೇಜುಗಳಿವೆ. ಕರ್ನಾಟಕದಲ್ಲಿ ಒಟ್ಟು 60 ಮೆಡಿಕಲ್‌ ಕಾಲೇಜುಗಳಿವೆ. ಈ ಪೈಕಿ 18 ಸರ್ಕಾರಿ ಸ್ವಾಯುತ್ತ ಮೆಡಿಕಲ್‌ ಕಾಲೇಜುಗಳಿವೆ. ಉಕ್ರೇನ್​ನಲ್ಲಿ ವಿದ್ಯಾಭ್ಯಾಸ ಮಾಡಿದ ಭಾರತೀಯ ಮೆಡಿಕಲ್ ವಿದ್ಯಾರ್ಥಿಗಳಿಗೆ ಮುಂದಿನ ವಿದ್ಯಾಭ್ಯಾಸ ನಡೆಸಲು ಭಾರತ ಅನುವು ಮಾಡಿಕೊಡಬೇಕಿದೆ.

ಕೊರೊನಾ ರೀತಿ ಯುದ್ಧದ ಪರಿಣಾಮ ಎದುರಿಸಿದ ವಿದ್ಯಾರ್ಥಿಗಳಿಗೆ ವಿಶೇಷ ಆದ್ಯತೆ ನೀಡಬೇಕು. ಕೊರೊನಾ ವೇಳೆ ಖಾಸಗಿ ಮೆಡಿಕಲ್ ಕಾಲೇಜು, ಆಸ್ಪತ್ರೆ ಬೆಡ್ ಕಾಯ್ದಿರಿಸಿತ್ತು. ಇದೇ ರೀತಿ ಎಂಬಿಬಿಎಸ್ ಸೀಟು ಹೆಚ್ಚಳ ಮಾಡಬೇಕಿದೆ. ಪ್ರತಿ ಕಾಲೇಜಿಗೆ 10ರಿಂದ 20 ಮೆಡಿಕಲ್ ಸೀಟು ಈ ವರುಷದಿಂದಲೇ ಹೆಚ್ಚಳ ಮಾಡಬೇಕು. ಉಕ್ರೇನ್ ವೈದ್ಯಕೀಯ ವಿದ್ಯಾರ್ಥಿಗಳ ಸರ್ಟಿಫಿಕೆಟ್, ಕ್ರೆಡಿಟ್ ಸ್ಕೋರ್ ಆಧಾರದ ಮೇಲೆ ನೋಂದಣಿ ಮಾಡಿಕೊಳ್ಳಬೇಕು ಎಂದು ಹೇಳಿದರು.

ಇದನ್ನೂ ಓದಿ: NEET-UG: ನೀಟ್ ಯುಜಿ ಪರೀಕ್ಷೆಗೆ ಗರಿಷ್ಠ ವಯಸ್ಸಿನ ಮಿತಿಯ ಮಾನದಂಡ ರದ್ದುಗೊಳಿಸಿದ ರಾಷ್ಟ್ರೀಯ ವೈದ್ಯಕೀಯ ಆಯೋಗ

ಇದನ್ನೂ ಓದಿ: ಉಕ್ರೇನ್​​ನಲ್ಲಿ ಮೆಡಿಕಲ್ ವಿದ್ಯಾರ್ಥಿ ನವೀನ್ ಸಾವಿನ ಹಿನ್ನೆಲೆ ನೀಟ್ ವಿರುದ್ಧ ಸಮರ ಸಾರಿದ ಜೆಡಿಎಸ್: ಹೆಚ್​ಡಿ ಕುಮಾರಸ್ವಾಮಿ ಟ್ವೀಟ್