ಕೃಷಿ ಸಚಿವ ಚೆಲುವರಾಯಸ್ವಾಮಿ ವರ್ತನೆಗೆ ಸಾರ್ವಜನಿಕರು, ವಾಹನ ಸವಾರರು ಆಕ್ರೋಶ; ಯಾಕೆ ಗೊತ್ತಾ?
ಜಿಲ್ಲಾ ಪಂಚಾಯಿತಿ ಸಭೆ ಮುಗಿಸಿ ಐಬಿಯಲ್ಲಿ ಊಟಕ್ಕೆ ತೆರಳುವ ವೇಳೆ ಸಚಿವ ಚೆಲುವರಾಯಸ್ವಾಮಿ ಅವರಿಗೆ ಕೇವಲ ಎರಡು ಕಿ.ಮೀ ಸಂಚಾರಕ್ಕೋಸ್ಕರ ಪ್ರತಿ ರಸ್ತೆಯನ್ನು ಬಂದ್ ಮಾಡಿ, ಪೊಲೀಸರು ಜೀರೋ ಟ್ರಾಫಿಕ್ ವ್ಯವಸ್ಥೆ ಮಾಡಿದ್ದಾರೆ. ಊಟ ಮಾಡಲು ಹೋಗುವುದಕ್ಕೂ ಝೀರೋ ಟ್ರಾಫಿಕ್ ಪಡೆದ ಸಚಿವರ ವಿರುದ್ದ ಆಕ್ರೋಶ ಕೇಳಿಬಂದಿದೆ.

ಕೋಲಾರ, ಸೆ.30: ಕೃಷಿ ಸಚಿವ ಚೆಲುವರಾಯಸ್ವಾಮಿ(N. Chaluvaraya Swamy) ವರ್ತನೆಯಿಂದ ಕೋಲಾರದಲ್ಲಿ ಸಾರ್ವಜನಿಕರು ಹಾಗೂ ವಾಹನ ಸವಾರರು ಕಿರಿಕಿರಿ ಅನುಭವಿಸಿದ್ದು, ಸಚಿವರ ವರ್ತನೆಗೆ ಆಕ್ರೋಶ ವ್ಯಕ್ತವಾಗಿದೆ. ಹೌದು, ಜಿಲ್ಲಾ ಪಂಚಾಯಿತಿ ಕಚೇರಿಯಿಂದ ಐಬಿ ವರೆಗೂ ನಗರದಲ್ಲಿ 2 ಕಿಮೀ ದೂರದಷ್ಟು ಜೀರೋ ಟ್ರಾಫಿಕ್(Zero Traffic) ಮೂಲಕ ಸಚಿವರು ಸಂಚಾರ ಮಾಡಿದ್ದಾರೆ. ಇನ್ನು ಸಚಿವರ ಕಾರಿನ ಜೊತೆ ಅಧಿಕಾರಿಗಳ ಕಾರು ಹಾಗೂ ಕಾಂಗ್ರೆಸ್ ಬೆಂಬಲಿಗರ ಕಾರುಗಳಿಗೂ ಜಿರೋ ಟ್ರಾಫಿಕ್ ನೀಡಿದ್ದು, ಕಾಲೇಜು ವಿದ್ಯಾರ್ಥಿಗಳು, ಶಾಲಾ ಮಕ್ಕಳು ಪರದಾಟ ನಡೆಸುವ ಸ್ಥಿತಿ ನಿರ್ಮಾಣವಾಗಿತ್ತು.
ಪ್ರತಿ ರಸ್ತೆಯನ್ನು ಬಂದ್ ಮಾಡಿ ಪೊಲೀಸರಿಂದ ಸಚಿವರಿಗೆ ಜೀರೋ ಟ್ರಾಫಿಕ್
ಇನ್ನು ಜಿಲ್ಲಾ ಪಂಚಾಯಿತಿ ಸಭೆ ಮುಗಿಸಿ ಐಬಿ ಯಲ್ಲಿ ಊಟಕ್ಕೆ ತೆರಳುವ ವೇಳೆ ಕೇವಲ ಎರಡು ಕಿ.ಮೀ ಸಂಚಾರಕ್ಕೋಸ್ಕರ ಪ್ರತಿ ರಸ್ತೆಯನ್ನು ಬಂದ್ ಮಾಡಿ, ಪೊಲೀಸರು ಸಚಿವರಿಗೆ ಜೀರೋ ಟ್ರಾಫಿಕ್ ವ್ಯವಸ್ಥೆ ಮಾಡಿದ್ದಾರೆ. ಒಂದೇ ಒಂದು ಖಾಸಗಿ ವಾಹನ ಸಂಚಾರ ಮಾಡದಂತೆ ಪೊಲೀಸರು ಕಟ್ಟೆಚ್ಚರ ವಹಿಸಿದ್ದು, ಊಟ ಮಾಡಲು ಹೋಗುವುದಕ್ಕೂ ಝೀರೋ ಟ್ರಾಫಿಕ್ ಸಚಿವ ಚೆಲುವರಾಯಸ್ವಾಮಿ ಪಡೆದಿದ್ದಾರೆ. ಇದರಿಂದ ಸುಮಾರು 15 ನಿಮಿಷಗಳ ಕಾಲ ವಾಹನ ಸವಾರರು ಹಾಗೂ ವಿದ್ಯಾರ್ಥಿಗಳು ಪರದಾಟ ನಡೆಸುವ ಸ್ಥಿತಿ ನಿರ್ಮಾಣವಾಗಿದ್ದು, ಸಚಿವರ ವರ್ತನೆಗೆ ಸಾರ್ವಜನಿಕರು ಕಿಡಿಕಾರಿದ್ದಾರೆ.
ಇನ್ನು ಊಟದ ಬಳಿಕ ಕೃಷಿ ಸಚಿವ ಚೆಲುವರಾಯಸ್ವಾಮಿ ಅವರು ಕೋಲಾರ ತಾಲ್ಲೂಕಿನ ಮೇಡಿಹಾಳ ಬಳಿ ಇರುವ ಸರ್ವೋದಯ ಮತ್ತು ಸರ್ವಮಂಗಳ ಪುಡ್ಸ್ ಇಂಡಸ್ಟ್ರೀಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಸಂಸ್ಕರಣ ಘಟಕ ವೀಕ್ಷಣೆ ಮಾಡಿದರು. ಜೊತೆಗೆ ಟೊಮ್ಯಾಟೊ ಹಾಗೂ ಮಾವು ಸಂಸ್ಕರಣಾ ಘಟಕದಲ್ಲಿ ತಯಾರಾಗುವ ಉತ್ಪನ್ನಗಳ ಬಗ್ಗೆ ಮಾಹಿತಿ ಸಂಗ್ರಹಿಸಿದರು. ಈ ವೇಳೆ ಕೃಷಿ ಸಚಿವರಿಗೆ ಎಂಎಲ್ಸಿ ಅನೀಲ್ ಕುಮಾರ್, ಶಾಸಕರಾದ ಕೊತ್ತೂರು ಮಂಜುನಾಥ್, ಕೆ.ವೈ ನಂಜೇಗೌಡ, ಕಾಂಗ್ರೆಸ್ ಹಿರಿಯ ಮುಖಂಡ ವಿ.ಆರ್ ಸುದರ್ಶನ್ ಸಾಥ್ ನೀಡಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:09 pm, Sat, 30 September 23