ತುಂಗಭದ್ರಾ ಸೇತುವೆ ಮೇಲಿಂದ ಕೆಳಗೆ ಬಿದ್ದ ಟ್ರ್ಯಾಕ್ಟರ್: 6 ಮಂದಿ ದಾರುಣ ಸಾವು, ಹಲವರ ಸ್ಥಿತಿ ಗಂಭೀರ
ಮುನಿರಾಬಾದ್ ಬಳಿ ತುಂಗಭದ್ರಾ ಸೇತುವೆಯಿಂದ ಟ್ರ್ಯಾಕ್ಟರ್ ಕೆಳಗೆ ಬಿದ್ದು 6 ಮಂದಿ ಸಾವನ್ನಪ್ಪಿದ್ದಾರೆ. ಹಿಂಬದಿಯಿಂದ ಟ್ಯಾಂಕರ್ ಗುದ್ದಿದ ಪರಿಣಾಮ ದುರಂತ ಸಂಭವಿಸಿದ್ದು, ಮೃತರೆಲ್ಲರೂ ಕೂಡ್ಲಿಗಿ ತಾಲೂಕಿನ ಮರ್ಲಾಯನಹಳ್ಳಿಯ ಒಂದೇ ಕುಟುಂಬದವರು ಎನ್ನಲಾಗಿದೆ. ಘಟನೆಯಲ್ಲಿ 10ಕ್ಕೂ ಹೆಚ್ಚುಮಂದಿ ಗಾಯಗೊಂಡಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಕೊಪ್ಪಳ, ಮೇ 15: ಸೇತುವೆ ಮೇಲಿಂದ ಟ್ರ್ಯಾಕ್ಟರ್ ಕೆಳಗೆಬಿದ್ದ ಪರಿಣಾಮ 6 ಜನರು ದುರ್ಮಣ ಹೊಂದಿರುವ ಘಟನೆ ಕೊಪ್ಪಳ ತಾಲೂಕಿನ ಮುನಿರಾಬಾದ್ ಬಳಿ ನಡೆದಿದೆ. ಮುನಿರಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ತುಂಗಭದ್ರಾ ಸೇತುವೆ ಮೇಲಿಂದ ಟ್ರ್ಯಾಕ್ಟರ್ ಕೆಳಗೆಬಿದ್ದು ದುರಂತ ಸಂಭವಿಸಿದ್ದು, ಸ್ಥಳದಲ್ಲೇ ಕೆಂಚಪ್ಪ (35), ಮಹಾಂತೇಶ್ (18) ಭರತ್ (01) ಸವಿತಾ (12) ಮಾರೇಶ್ ಹಾಗೂ ಗೌರಮ್ಮ ಎನ್ನುವರು ಮೃತಪಟ್ಟಿದ್ದಾರೆ. ಇನ್ನು ಘಟನೆಯಲ್ಲಿ ಗಾಯಗೊಂಡಿರುವ ಹತ್ತಕ್ಕೂ ಹೆಚ್ಚು ಜನರನ್ನು ಹೊಸಪೇಟೆ ಹಾಗೂ ಕೊಪ್ಪಳ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.
ಮುಖ್ಯಾಂಶಗಳು
- ಮುನಿರಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಭೀಕರ ಅಪಘಾತ
- ಟ್ಯಾಂಕರ್ ಗುದ್ದಿದ ಪರಿಣಾಮ ಸೇತುವೆಯಿಂದ ಕೆಳಗೆ ಬಿದ್ದ ಟ್ರ್ಯಾಕ್ಟರ್
- ಮಗು ಸೇರಿ ಆರು ಮಂದಿ ದಾರುಣ ಸಾವು, ಹಲವರ ಸ್ಥಿತಿ ಗಂಭೀರ
ಟ್ಯಾಂಕರ್ ಗುದ್ದಿದ ರಭಸಕ್ಕೆ ನಡೆದ ದುರಂತ
ಹುಲಿಗೆಮ್ಮ ಜಾತ್ರೆಗೆ ತೆರಳುತ್ತಿರುವಾಗ ಟ್ರ್ಯಾಕ್ಟರ್ಗೆ ಹಿಂಬದಿಯಿಂದ ಟ್ಯಾಂಕರ್ ಗುದ್ದಿದೆ. ಪರಿಣಾಮ ಟ್ರ್ಯಾಕ್ಟರ್ ನಿಯಂತ್ರಣ ಕಳೆದುಕೊಂಡು ಸೇತುವೆ ಮೇಲಿಂದ ಕೆಳಕ್ಕೆ ಬಿದ್ದಿದೆ. ಮೃತರೆಲ್ಲರೂ ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಮರ್ಲಾಯನಹಳ್ಳಿ ಗ್ರಾಮದವರು ಎಂಬುದು ತಿಳಿದುಬಂದಿದೆ. ಮೃತದೇಹಗಳನ್ನು ಹೊಸಪೇಟೆ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಗಾಯಾಳುಗಳನ್ನು ಹೊಸಪೇಟೆ ಮತ್ತು ಕೊಪ್ಪಳ ಆಸ್ಪತ್ರೆಗಳಿಗೆ ರವಾನಿಸಲಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.
ಇದನ್ನೂ ಓದಿ: ಗಂಗಾವತಿ ಬಿಜೆಪಿ ಮುಖಂಡನ ಹತ್ಯೆ ಪ್ರಕರಣ; ಆರು ಜನ ಹಂತಕರಿಗೆ ಗಲ್ಲು ಶಿಕ್ಷೆ
ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ
ಅಪಘಾತದಲ್ಲಿ ಮೃತಪಟ್ಟವರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಹೊಸಪೇಟೆ ಆಸ್ಪತ್ರೆಯ ಶವಾಗಾರದ ಎದುರು ಮನೆಯವರನ್ನು ಕಳೆದುಕೊಂಡು ತಂದೆ, ಮಗನ ಆಕ್ರಂದನ ಹೇಳತೀರದಾಗಿದೆ. ಶವಾಗಾರದ ಎದುರು ಒಬ್ಬರಿಗೊಬ್ಬರು ತಬ್ಬಿಕೊಂಡು ರೋದಿಸುತ್ತಂತಿರುವ ದೃಶ್ಯ ನೋಡುಗರ ಕಣ್ಣಂಚಲ್ಲೂ ನೀರು ತರಿಸುವಂತಿದೆ. ಹೊಸಪೇಟೆ ಸರ್ಕಾರಿ ಆಸ್ಪತ್ರೆ ಶವಾಗಾರಕ್ಕೆ ಕೊಪ್ಪಳ ಎಸ್ಪಿ ಎಲ್. ಅರಸಿದ್ದಿ ಭೇಟಿ ನೀಡಿದ್ದು, ಗಾಯಾಳುಗಳಿಂದ ಮಾಹಿತಿ ಪಡೆದಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:24 pm, Fri, 15 May 26




