ಬೈಕ್ ರೈಡಿಂಗ್ ಹುಚ್ಚಿಗಾಗಿ ಕಳ್ಳತನ: 20 ವರ್ಷದ ಯುವಕನಿಂದ 16 ಬೈಕ್‌ಗಳ ಕಳವು!

ಬೈಕ್ ರೈಡಿಂಗ್ ಹಾಗೂ ಶೋಕಿ ಜೀವನದ ಹುಚ್ಚಿಗಾಗಿ ಬರೋಬ್ಬರಿ 16 ದ್ವಿಚಕ್ರ ವಾಹನಗಳನ್ನು ಕಳವು ಮಾಡಿದ್ದ 20 ವರ್ಷದ ಮೆಕ್ಯಾನಿಕ್‌ನನ್ನು ಕೊಪ್ಪಳ ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ 12 ಲಕ್ಷ ರೂ. ಮೌಲ್ಯದ ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಬೈಕ್​ಗಳನ್ನು ಕದ್ದು ಬಿಡಿ ಭಾಗಗಳನ್ನು ಮಾರಾಟ ಮಾಡಿ ಹಣ ಗಳಿಸುತ್ತಿದ್ದ ಆರೋಪಿ ಅದರಿಂದ ಶೋಕಿ ಮಾಡುತ್ತಿದ್ದ ಎನ್ನಲಾಗಿದೆ.

ಬೈಕ್ ರೈಡಿಂಗ್ ಹುಚ್ಚಿಗಾಗಿ ಕಳ್ಳತನ: 20 ವರ್ಷದ ಯುವಕನಿಂದ 16 ಬೈಕ್‌ಗಳ ಕಳವು!
ಕಳವಾಗಿರುವ ಬೈಕ್​ಗಳನ್ನು ವಶಪಡಿಸಿಕೊಂಡಿರುವುದು ಮತ್ತು ಒಳಚಿತ್ರದಲ್ಲಿ ಆರೋಪಿ ಮಹಮ್ಮದ್ ಇರ್ಫಾನ್
Image Credit source: tv9
Edited By:

Updated on: Sep 04, 2026 | 2:54 PM

ಮುಖ್ಯಾಂಶಗಳು

  • 20 ವರ್ಷದ ಯುವಕನಿಂದ 16 ಬೈಕ್ ಕಳ್ಳತನ
  • ಸಿಸಿ ಕ್ಯಾಮೆರಾ ದೃಶ್ಯದಿಂದ ಆರೋಪಿಯ ಬಂಧನ
  • 12 ಲಕ್ಷ ರೂ. ಮೌಲ್ಯದ ಬೈಕ್‌ಗಳು ಪೊಲೀಸರಿಂದ ವಶ

ಕೊಪ್ಪಳ, ಸೆಪ್ಟೆಂಬರ್ 4: ಬೈಕ್ ರೈಡಿಂಗ್ ಹಾಗೂ ಖಾಸಗಿ ಖರ್ಚುಗಳಿಗಾಗಿ ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ 20 ವರ್ಷದ ಯುವಕನನ್ನು ಕೊಪ್ಪಳ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಬಳ್ಳಾರಿ ಮೂಲದ ಮೊಹಮ್ಮದ್ ಇರ್ಫಾನ್ ಎಂದು ಗುರುತಿಸಲಾಗಿದ್ದು, ಈತನಿಂದ 16 ಬೈಕ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ವೃತ್ತಿಯಲ್ಲಿ ಬೈಕ್ ಮೆಕ್ಯಾನಿಕ್ ಆಗಿದ್ದ ಮೊಹಮ್ಮದ್ ಇರ್ಫಾನ್, ವಾಹನಗಳ ಲಾಕ್ ತೆಗೆಯಲು ತಾನೇ ಪ್ರತ್ಯೇಕ ಮಾಸ್ಟರ್ ಕೀ ಸಿದ್ಧಪಡಿಸಿಕೊಂಡಿದ್ದ. ಕೊಪ್ಪಳ, ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳ ವಿವಿಧೆಡೆ ವಾಹನಗಳನ್ನು ಕಳವು ಮಾಡುತ್ತಿದ್ದ.

ಪೊಲೀಸರ ಬೈಕ್ ಕೂಡ ಕದ್ದಿದ್ದ ಇರ್ಫಾನ್

ಬೈಕ್ ಕಳ್ಳತನಕ್ಕೆ ಇರ್ಫಾನ್ ವಿಶೇಷ ಕೀ ಸಿದ್ಧಪಡಿಸಿಕೊಂಡಿದ್ದ. ಪೊಲೀಸರ ಬೈಕ್ ಕೂಡ ಕಳ್ಳತನ ಮಾಡಿದ್ದಾನೆ ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ ಎಂದು ಪೊಲೀಸರು ಹೇಳಿದ್ದಾರೆ. ಕಳೆದ ತಿಂಗಳು ಕೊಪ್ಪಳ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ನಡೆದಿದ್ದ ಬೈಕ್ ಕಳವು ಪ್ರಕರಣದ ತನಿಖೆ ಕೈಗೆತ್ತಿಕೊಂಡ ಪೊಲೀಸರು, ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬೈಕ್ ಬಿಡಿಭಾಗ ಮಾರಾಟ ಮಾಡಿ ಹಣ ಗಳಿಸುತ್ತಿದ್ದ ಆರೋಪಿ

ಆರೋಪಿಯು ಕದ್ದ ಬೈಕ್‌ಗಳ ಬಿಡಿಭಾಗಗಳನ್ನು ಕೇವಲ 500 ರಿಂದ 1000 ರೂಪಾಯಿಗೆ ಮಾರಾಟ ಮಾಡುತ್ತಿದ್ದ. ಕೆಲವೊಮ್ಮೆ ಮೊಬೈಲ್‌ ಫೋನ್‌ಗಳನ್ನು ಪಡೆದುಕೊಂಡು ಬೈಕ್‌ಗಳನ್ನು ನೀಡುತ್ತಿದ್ದ. ಬಾಲ್ಯದಿಂದಲೇ ಕಳವು ಪ್ರವೃತ್ತಿ ಹೊಂದಿದ್ದ ಈತನ ವಿರುದ್ಧ ವಿವಿಧ ಠಾಣೆಗಳಲ್ಲಿ 8ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ ಎಂದು ಕೊಪ್ಪಳ ಎಸ್‌ಪಿ ಸಾಹಿಲ್ ಬಾಗ್ರಾ ಮಾಹಿತಿ ನೀಡಿದ್ದಾರೆ.

12 ಲಕ್ಷ ರೂ. ಮೌಲ್ಯದ 16 ಬೈಕ್‌ಗಳು ವಶಕ್ಕೆ

ಕಾರ್ಯಾಚರಣೆಯಲ್ಲಿ ಸುಮಾರು 12 ಲಕ್ಷ ರೂಪಾಯಿ ಮೌಲ್ಯದ 16 ಬೈಕ್‌ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಾಹಿಲ್ ಭಾಗ್ಲಾ ಮಾಹಿತಿ ನೀಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:24 pm, Fri, 4 September 26

Loading...
Unable to load recommendations.
Follow Us