Priyanka Gandhi: ಎಸ್​ಸಿ, ಎಸ್​ಟಿಗೆ ವಿಶೇಷ ಅನುದಾನ, ದೇಶದಲ್ಲಿ ಜಾತಿ ಗಣತಿ ಜಾರಿ ಮಾಡ್ತೇವೆ: ಪ್ರಿಯಾಂಕಾ ಗಾಂಧಿ

ಕರ್ನಾಟಕ ಲೋಕಸಭಾ ಚುನಾವಣಾ ಅಖಾಡಕ್ಕೆ ಇಂದು ಪ್ರಿಯಾಂಕಾ ಗಾಂಧಿ ಇಳಿದಿದ್ದರು. ಚಿತ್ರದುರ್ಗದ ಹಳೇ ಮಾಧ್ಯಮಿಕ ಶಾಲಾ ಮೈದಾನದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಪ್ರಿಯಾಂಕಾ ಗಾಂಧಿ, ಎಸ್​ಸಿ, ಎಸ್​ಟಿಗೆ ವಿಶೇಷ ಅನುದಾನವನ್ನು ನೀಡುತ್ತೇವೆ. ಇಡೀ ದೇಶದಲ್ಲಿ ಜಾತಿ ಗಣತಿಯನ್ನ ಜಾರಿ ಮಾಡುತ್ತೇವೆ ಎಂದು ಹೇಳಿದ್ದಾರೆ. ಜೊತೆಗೆ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.

ಚಿತ್ರದುರ್ಗ, ಏಪ್ರಿಲ್​ 23: ಎಸ್​ಸಿ, ಎಸ್​ಟಿಗೆ ವಿಶೇಷ ಅನುದಾನವನ್ನು ನೀಡುತ್ತೇವೆ. ಇಡೀ ದೇಶದಲ್ಲಿ ಜಾತಿ ಗಣತಿಯನ್ನ ಜಾರಿ ಮಾಡುತ್ತೇವೆ ಎಂದು ಕಾಂಗ್ರೆಸ್​ ನಾಯಕಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ (Priyanka Gandhi) ಹೇಳಿದ್ದಾರೆ. ನಗರದ ಹಳೇ ಮಾಧ್ಯಮಿಕ ಶಾಲಾ ಮೈದಾನದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು, ಕಾಡುಗೊಲ್ಲ ಸಮಾಜವನ್ನು ಎಸ್​ಟಿಗೆ ಸೇರಿಸಲಾಗುತ್ತದೆ. ರೈತರಿಗೆ ಬೆಂಬಲ ಬೆಲೆ, ಕೃಷಿಗೆ GST ಮುಕ್ತಗೊಳಿಸ್ತೇವೆ. ಭೂಮಿ‌ ಇಲ್ಲದವರಿಗೆ ಭೂಮಿ ನೀಡುತ್ತೇವೆ. ಬೆಳೆ ನಷ್ಟವಾದವರಿಗೆ 30 ದಿನದಲ್ಲಿ ವಿಮೆ ಹಣ ಕೊಡುತ್ತೇವೆ. ದೇಶದ ಸಂವಿಧಾನ, ರೈತರ ಉಳುವಿಗೆ ಕಾಂಗ್ರೆಸ್​ ಬೆಂಬಲಿಸಿ ಎಂದು ಹೇಳಿದ್ದಾರೆ.

ಈಗ ದೇಶದ ದೊಡ್ಡ ನಾಯಕ ಸತ್ಯದ ದಾರಿಯಲ್ಲಿ ನಡೆಯುತ್ತಿಲ್ಲ. ವೈಭೋಗ ತೋರಿಸಿ ಓಡಾಡುತ್ತಿದ್ದಾರೆ, ಅಹಂ ತೋರುತ್ತಿದ್ದಾರೆ. ಸತ್ಯದ ಹಾದಿಯಲ್ಲಿ ನಡೆಯೋದು ಹಿಂದೂ ಧರ್ಮದ ಪರಂಪರೆ. ಶ್ರೀರಾಮ, ಗಾಂಧೀಜಿ, ಇತರೆ ಪ್ರಧಾನಿಗಳು ಸೇವಾಭಾವದಿಂದ ನಡೆದರು. ಈಗ ಮೋದಿ ಸರ್ಕಾರದಲ್ಲಿ ಕೇವಲ ಸುಳ್ಳಿನ ಕಂತೆಯೇ ಇದೆ ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ: ಚಿತ್ರದುರ್ಗ ಕಾಂಗ್ರೆಸ್ ಸಮಾವೇಶದಲ್ಲಿ ಪ್ರಿಯಾಂಕಾ ಗಾಂಧಿ ವಾದ್ರಾ ಭಾಗಿ, ಬಿಎನ್ ಚಂದ್ರಪ್ಪ ಪರ ಮತಯಾಚನೆ

ತಪ್ಪು ದಾರಿಯಲ್ಲಿ ವಿವಿಧ ರಾಜ್ಯಗಳಲ್ಲಿ ಸರ್ಕಾರಗಳನ್ನು ಬೀಳಿಸುತ್ತಾರೆ. ನೂರಾರು ಕೋಟಿ ರೂ. ಹಣ ನೀಡಿ ಶಾಸಕರನ್ನು ಖರೀದಿ ಮಾಡುತ್ತಾರೆ. ಚುನಾವಣೆ ವೇಳೆ ಅಭಿವೃದ್ಧಿ ವಿಚಾರ ಬಿಟ್ಟು ಜನರ ಭಾವನೆ ಕೆರಳಿಸುತ್ತಾರೆ.

ಕೇಂದ್ರದ ವಿರುದ್ಧ ‘ಕೈ’ ನಾಯಕಿ ಪ್ರಿಯಾಂಕಾ ಗಾಂಧಿ ಕಿಡಿ

ಅನೇಕ ಸಲ ಕರ್ನಾಟಕ ಸರ್ಕಾರ ಅನುದಾನವನ್ನ ಕೇಳಿದೆ. ಕೇಂದ್ರದಿಂದ ಈವರೆಗೂ ಒಂದು ಪೈಸೆ ಬಿಡುಗಡೆ ಆಗಿಲ್ಲ. ರಾಯಚೂರು ನಗರದಲ್ಲಿ ಏಮ್ಸ್ ನಿರ್ಮಾಣದ ಕನಸಿದೆ. ಆದರೆ ಈವಗೂ ಆ ಕನಸು ನನಸಾಗಿಲ್ಲ. ಕಳಸಾ ಬಂಡೂರಿ ಯೋಜನೆ ಈವರೆಗೂ ಮಂಜೂರಾಗಿಲ್ಲ. ಭದ್ರಾ ಯೋಜನೆಗೆ ಕೇಂದ್ರ ಸರ್ಕಾರ ಹಣ ಕೊಡಲಿಲ್ಲ. ರಾಜ್ಯದ ತೆರಿಗೆ ಹಣ ಸಹ ನೀಡದೆ ನಷ್ಟವನ್ನ ಮಾಡಿದ್ದಾರೆ ಎಂದಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್ ಪಕ್ಷದ ಆಡಳಿತ ವೈಖರಿಯಿಂದ ಕರ್ನಾಟಕದ ಜನ ಬೇಸತ್ತಿದ್ದಾರೆ: ಬಿವೈ ವಿಜಯೇಂದ್ರ

ರಾಜ್ಯ ಕಾಂಗ್ರೆಸ್ ಸರ್ಕಾರ ಪಂಚ ಗ್ಯಾರಂಟಿ ಜಾರಿಗೊಳಿಸಿದೆ. ನಿಮ್ಮ ಜೀವನದ ಮೇಲೆ ಪರಿಣಾಮ ಬೀರಿದೆ ಅಲ್ಲವೇ. ಗೃಹಲಕ್ಷ್ಮೀ ಯೋಜನೆಯಿಂದ ಪ್ರತಿ‌ ಮಹಿಳೆಗೆ 2 ಸಾವಿರ ರೂ. ಹಣ, ಉಚಿತ ವಿದ್ಯುತ್, ಅನ್ನಭಾಗ್ಯ, ಶಕ್ತಿ ಯೋಜನೆಯಿಂದ ಉಚಿತ ಪ್ರಯಾಣ, ಯುವನಿಧಿ ಯೋಜನೆ ಜಾರಿ ಮಾಡಲಾಗಿದೆ. ಇನ್ನು ಕೇಂದ್ರದಲ್ಲಿ ನಮ್ಮ ಸರ್ಕಾರ ಬಂದರೆ ಪ್ರತಿ ಕುಟುಂಬದ ಮಹಿಳೆಗೆ 1 ಲಕ್ಷ ರೂ. ಸೇರಿ ಹಲವು ಗ್ಯಾರಂಟಿ ಯೋಜನೆಗಳ ಭರವಸೆ ನೀಡಿದ್ದು, ಇದು ಕೇವಲ ಆರಂಭ ಎಂದು ಹೇಳಿದ್ದಾರೆ.

ಕಳೆದ 45 ವರ್ಷದಲ್ಲಿ ಇಲ್ಲದ‌ ನಿರುದ್ಯೋಗ ಈಗ ಸೃಷ್ಟಿಯಾಗಿದೆ. 75 ಕೋಟಿ ನಿರುದ್ಯೋಗಿಗಳು, ಕೇಂದ್ರದಲ್ಲಿ 30 ಕೋಟಿ ಕೆಲಸ ಖಾಲಿ ಇವೆ. ವರ್ಷಕ್ಕೆ ಎರಡು ಕೋಟಿ ಕೆಲಸ, ರೈತರ ಆದಾಯ ದುಪ್ಪಟ್ಟು ಭರವಸೆ ಹುಸಿ ಆಗಿದೆ. ಬೆಲೆ ಏರಿಕೆ ಎಂಬುದು ದೊಡ್ಡ ಸಮಸ್ಯೆ ಸೃಷ್ಠಿಸಿದೆ. ದುಡಿಮೆ ಮತ್ತು ಖರ್ಚು ತುಂಬಾ ದೊಡ್ಡ ಸಮಸ್ಯೆ ಆಗಿದೆ. ಪೆಟ್ರೋಲ್ 100 ರೂ, ಡೀಸೆಲ್ 90 ರೂ. ದಾಟಿದೆ. ಚಿನ್ನ, ಬೆಳ್ಳಿ ದುಬಾರಿ ಆಗಿದೆ ಎಂದು ಕಿಡಿಕಾರಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 6:22 pm, Tue, 23 April 24

ಬಸವರಾಜ ಮುದನೂರ್, ಚಿತ್ರದುರ್ಗ

ಆದ್ಯ ವಚನಕಾರ ದೇವರ ದಾಸಿಮಯ್ಯನ 'ಮುದನೂರು' ನಮ್ಮ ಮೂಲ ಊರು. ಸಂತಗುಣದ ತಾತ ಕಿರಿ ವಯಸ್ಸಿನಲ್ಲೇ ಊರು-ಮನೆ ತೊರೆದು ಬರಿಗೈಲಿ ಬಂದು ಯಾದಗಿರಿ ಜಿಲ್ಲೆಯ ಶಹಾಪುರದಲ್ಲಿ ಸ್ವಾಭಿಮಾನದ ಬದುಕು ಕಟ್ಟಿಕೊಂಡರು. ಅಪ್ಪ ಶಿಕ್ಷಕರಾಗಿ ಬದುಕು ರೂಪಿಸಿಕೊಂಡರು. ನನಗೂ ಜೀವನ ಪಾಠ ಕಲಿಸಿದ 'ಗುರು' & 'ಗಾಡ್ ಫಾದರ್' ನನ್ನಪ್ಪ. ಓದು ಮತ್ತು ಬರವಣಿಗೆ ನನ್ನ ಹವ್ಯಾಸ. ಕೋಟೆ-ಕೊತ್ತಲು‌, ಕಾಡು-ಮೇಡು‌‌‌ ಸುತ್ತಾಟ, ಚಾರಣವೆಂದರೆ ಪ್ರಾಣಪ್ರೀತಿ. ಹಳೇ ಹಿಂದಿ ಹಾಡು, ಗಝಲ್, ಜನಪದ, ಭಾವಗೀತೆಗಳು ಮತ್ತು ಭಜನೆ ನನಗಿಷ್ಟ. ಕಾಲೇಜು ದಿನಗಳಲ್ಲಿದ್ದ ಕ್ರಿಕೆಟ್ ಹುಚ್ಚು ಕಡಿಮೆ ಆಗಿದೆ. ಕೋಟೆನಾಡು‌ ಚಿತ್ರದುರ್ಗ ಜಿಲ್ಲೆಯ ಟಿವಿ9 ಪ್ರತಿನಿಧಿಯಾಗಿ ಒಂದೂವರೆ ದಶಕದಿಂದ ಕಾರ್ಯ ನಿರ್ವಹಿಸುತ್ತಿದ್ದೇನೆ. 'ಹೆಣ್ಣಾಗಿದ್ದೇ ತಪ್ಪಾ?' ಅಭಿಯಾನದ ಮೂಲಕ ಮೌಢ್ಯದ ವಿರುದ್ಧ ಜಾಗೃತಿ, 'ವಿಷಾಮೃತ' ಅಭಿಯಾನದ ಮೂಲಕ ನೀರಿನ ಕುರಿತು ಸರ್ಕಾರದ ಕಣ್ತೆರೆಸುವ ಕಾರ್ಯ, 'ಕೆರೆ ಉಳಿಸಿ' ಅಭಿಯಾನದ ಮೂಲಕ ಜಲಮೂಲಗಳ ಸಂರಕ್ಷಣೆ, 'ಆಪರೇಷನ್ ಚಿನ್ನ' ಸರಣಿ ವರದಿ ಮೂಲಕ ವಂಚಕರ ಜಾಲ ಬೇಧಿಸುವ ಕರ್ತವ್ಯ, ಬುಡಕಟ್ಟು ಸಮುದಾಯಗಳ ಜೀವನ, ಸಂಸ್ಕೃತಿ, ಆಚರಣೆಗಳ ಅನಾವರಣ, ಬಯಲುಸೀಮೆಯ ರೈತರ ಸಂಕಷ್ಟ, ಭದ್ರಾ ಮೇಲ್ದಂಡೆ ಯೋಜನೆ ಅಗತ್ಯತೆ ಕುರಿತು ವರದಿ, ಭ್ರಷ್ಟರ ಮುಖವಾಡ ಬಯಲು, ಕಾವಿಧಾರಿಗಳ ಕಪಟತನ ತೆರೆದಿಡುವುದು ಸೇರಿ ಅನೇಕ ಜೀವಪರ, ಜನಪರ ವರದಿಗಾರಿಕೆಗೆ ಟಿವಿ9 ವಾಹಿನಿಯಲ್ಲಿ ಅವಕಾಶ ಸಿಕ್ಕಿದ್ದು ಹೆಮ್ಮೆಯ ಸಂಗತಿ.

Read More
Follow Us