ಮೇಲುಕೋಟೆ ಯೋಗನರಸಿಂಹಸ್ವಾಮಿ ದೇವಸ್ಥಾನದಲ್ಲಿ ಭಾರಿ ಕಳ್ಳತನ ಶಂಕೆ: ದೇಗುಲದ ಸಿಬ್ಬಂದಿ ವಿರುದ್ಧವೇ ದೂರು ದಾಖಲು
ಮಂಡ್ಯದ ಐತಿಹಾಸಿಕ ಮೇಲುಕೋಟೆ ಯೋಗನರಸಿಂಹಸ್ವಾಮಿ ದೇವಸ್ಥಾನದ ಹುಂಡಿ ಹಣ, ಚಿನ್ನಾಭರಣ ಕಳ್ಳತನ ಶಂಕೆ ಹಿನ್ನೆಲೆಯಲ್ಲಿ ಇಒ ದೂರು ನೀಡಿದ್ದು, ಅರ್ಚಕರು ಹಾಗೂ ಸಿಬ್ಬಂದಿ ಸೇರಿದಂತೆ ಹಲವರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಪದೇ ಪದೇ ಸಿಸಿ ಕ್ಯಾಮರಾ ಡಿವಿಆರ್ನ ಕಿಡಿಗೇಡಿಗಳು ಕೆಡಿಸುತ್ತಿದ್ದರು. ದೇವಾಲಯದಲ್ಲಿ ಹಿಂದಿನಿಂದಲೂ ಹುಂಡಿಯಲ್ಲಿನ ಹಣ, ಚಿನ್ನ, ಬೆಳ್ಳಿಯ ವಸ್ತುಗಳು ಕಳ್ಳತನವಾಗುತ್ತಿದ್ದ ಆರೋಪದ ಹಿನ್ನೆಲೆ ರಹಸ್ಯ ಸಿಸಿ ಕ್ಯಾಮರಾ ಅಳವಡಿಕೆ ಮಾಡಲಾಗಿತ್ತು. ಆದರೆ ಅದನ್ನೂ ಕೆಡಿಸಿರೋದು ಗೊತ್ತಾಗಿದೆ.

ಮಂಡ್ಯ, ಜೂನ್ 10: ಮೇಲುಕೋಟೆ ಯೋಗನರಸಿಂಹಸ್ವಾಮಿ ದೇವಸ್ಥಾನದಲ್ಲಿ ಭಾರಿ ಕಳ್ಳತನ ನಡೆದಿರುವ ಆರೋಪ ಕೇಳಿಬಂದಿದೆ. ದೇಗುಲದ ಹುಂಡಿಯಲ್ಲಿದ್ದ ಚಿನ್ನ, ಬೆಳ್ಳಿ ಸೇರಿದಂತೆ ನಗದು ಕಳುವಾಗಿರುವ ಸಂಬಂಧ ದೇವಸ್ಥಾನದ ಇಒ ಶೀಲಾ ಮೇಲುಕೋಟೆ ಪೊಲೀಸರಿಗೆ ದೂರು ನೀಡಿದ್ದಾರೆ. ಅದರನ್ವಯ ದೇವಸ್ಥಾನದ ಪಾರುಪತ್ತೆಗಾರ ಶ್ರೀಧರ್, ಅರ್ಚಕ ನಾರಾಯಣ ಭಟ್ಟ, ಪರಿಚಾರಕ ತಿರುವೆಂಗಡಚಾರ್ , ಕಾವಲುಗಾರರಾದ ಗಂಗಾಧರ್ ಮತ್ತು ಬಸವಾರಾಜ್ ವಿರುದ್ದ ಪ್ರಕರಣ ದಾಖಲಾಗಿದೆ.
ರಹಸ್ಯ ಕ್ಯಾಮರಾವನ್ನೂ ಕೆಡಿಸಿ ಕಳ್ಳಾಟ!
ವಜ್ರಾಂಗಿ ಆಭರಣ ಕಳ್ಳತನದ ಬಳಿಕ ದೊಡ್ಡ ಪ್ರಮಾಣದ ಕಳ್ಳತನ ನಡೆದಿರುವ ಶಂಕೆ ವ್ಯಕ್ತವಾಗಿದ್ದು, ಪದೇ ಪದೇ ಸಿಸಿ ಕ್ಯಾಮರಾ ಡಿವಿಆರ್ನ ಕಿಡಿಗೇಡಿಗಳು ಕೆಡಿಸುತ್ತಿದ್ದರು. ದೇವಾಲಯದಲ್ಲಿ ಹಿಂದಿನಿಂದಲೂ ಹುಂಡಿಯಲ್ಲಿನ ಹಣ, ಚಿನ್ನ, ಬೆಳ್ಳಿಯ ವಸ್ತುಗಳು ಕಳ್ಳತನವಾಗುತ್ತಿದ್ದ ಆರೋಪದ ಹಿನ್ನೆಲೆ ರಹಸ್ಯ ಸಿಸಿ ಕ್ಯಾಮರಾ ಅಳವಡಿಕೆ ಮಾಡಲಾಗಿತ್ತು. ಆದರೆ ಅದನ್ನೂ ಕೆಡಿಸಿರೋದು ಗೊತ್ತಾಗಿದೆ. ಈ ರಹಸ್ಯ ಸಿಸಿ ಕ್ಯಾಮರಾ ಅಳವಡಿಸಿರುವ ವಿಚಾರ ದೇವಾಲಯ ಆಡಳಿತ ಸಿಬ್ಬಂದಿಗೆ ಮಾತ್ರ ಗೊತ್ತಿತ್ತು. ಹೀಗಾಗಿ ಕಳ್ಳತನ ಉದ್ದೇಶದಿಂದ ಸಿಬ್ಬಂದಿ ಹಾಗೂ ಅರ್ಚಕರೇ ಕೃತ್ಯ ಎಸಗಿರಬಹುದು. ಅಥವಾ ಇವರ ಸಹಕಾರದಿಂದ ಬೇರೆಯವರು ಕಳ್ಳತನ ಮಾಡಿರಬಹುದೆಂಬ ಶಂಕೆಯನ್ನು ದೂರಲ್ಲಿ ವ್ಯಕ್ತಪಡಿಸಲಾಗಿದೆ.
ಇದನ್ನೂ ಓದಿ: ಪತ್ನಿಗೆ ಶ್ರೀಮಂತಿಕೆ ತೋರಿಸಲು ಕಳ್ಳತನಕ್ಕಿಳಿದ ಪತಿ! ಕೃತ್ಯ ನಿಲ್ಲಿಸಿದ ವರ್ಷದ ಬಳಿಕ ಮೂವರು ಸಹಚರರೊಂದಿಗೆ ಅಂದರ್
ಹುಂಡಿ ಹಣದ ಎಣಿಕೆಗೂ ಮುನ್ನ ಈ ಕೃತ್ಯ ಎಸಗಿರುವ ಕಾರಣ ಇಂತಿಷ್ಟೇ ಹಣ ಅಥವಾ ಬೆಳ್ಳಿ, ಬಂಗಾರದ ವಸ್ತುಗಳನ್ನು ಕಳವು ಮಾಡಲಾಗಿದೆ ಎಂದು ನಿಖರವಾಗಿ ಹೇಳಲು ಸಾಧ್ಯವಿಲ್ಲ. ಈ ಸಂಬಂಧ ಕಾವಲುಗಾರರಿಗೆ ಅಂಚೆ ಮೂಲಕ ಕಾರಣ ಕೇಳಿ ನೋಟಿಸ್ ಜಾರಿಮಾಡಲಾಗಿತ್ತು. ಆದರೆ ಅವರಿಂದ ಈವರೆಗೂ ಉತ್ತರ ಬಾರದ ಕಾರಣ ತಡವಾಗಿ ಘಟನೆ ಬಗ್ಗೆ ದೂರು ನೀಡುತ್ತಿರೋದಾಗಿ ಇಒ ಶೀಲಾ ತಿಳಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮಕ್ಕೆ ಅವರು ಆಗ್ರಹಿಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.



