ಮಂಡ್ಯದಲ್ಲಿ ಮತ್ತೆ ಹನುಮ ಧ್ವಜ ದಂಗಲ್ ಮುನ್ನೆಲೆಗೆ: ಮತ್ತೊಂದು ಹೋರಾಟಕ್ಕೆ ಮುಂದಾದ ಹಿಂದೂ ಸಂಘಟನೆಗಳು
ಕಳೆದ ವರ್ಷ ಮಂಡ್ಯ ಜಿಲ್ಲೆಯ ಕೆರೆಗೋಡು ಗ್ರಾಮದ 108 ಅಡಿ ಎತ್ತರದ ಕಂಬದ ಮೇಲೆ ಹಾರಾಡುತ್ತಿದ್ದ ಹನುಮಧ್ವಜವನ್ನು ಕೆಳಗಿಳಿಸಿ ತಿರಂಗ ಧ್ವಜ ಹಾರಿಸಲಾಗಿತ್ತು. ಇದು ರಾಜ್ಯದಲ್ಲಿ ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿತ್ತು. ಇದೀಗ ಜಿಲ್ಲೆಯಲ್ಲಿ ಮತ್ತೆ ಹನುಮ ಧ್ವಜ ದಂಗಲ್ ಮುನ್ನೆಲೆಗೆ ಬಂದಿದೆ.

ಮಂಡ್ಯ, ಏಪ್ರಿಲ್ 10: ಜಿಲ್ಲೆಯ ಕೆರೆಗೋಡು ಗ್ರಾಮದ 108 ಅಡಿ ಎತ್ತರದ ಕಂಬದ ಮೇಲೆ ಹನುಮ ಧ್ವಜ (Hanuman Flag) ಹಾರಿಸಲಾಗಿತ್ತು. ಬಳಿಕ ಆ ಧ್ವಜವನ್ನು ಕೆಳಗಿಳಿಸಿ ರಾಷ್ಟ್ರಧ್ವಜ ಹಾರಿಸುತ್ತಿದ್ದಂತೆ ಅಲ್ಲಿ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಹಿಂದೂ ಸಂಘಟನೆಗಳು (Hindu Activist) ರಸ್ತೆಗಿಳಿದು ಪ್ರತಿಭಟಿಸಿದ್ದವು. ಲಾಠಿಚಾರ್ಜ್ ಕೂಡ ನಡೆದಿತ್ತು. ಇದೀಗ ಕೆರಗೋಡು ಹನುಮ ಧ್ವಜ ದಂಗಲ್ ಮತ್ತೆ ಮುನ್ನೆಲೆಗೆ ಬಂದಿದೆ. ಅರ್ಜುನ ಸ್ಥಂಭದಲ್ಲಿ ಹನುಮ ಧ್ವಜ ಹಾರಿಸಲು ಹಿಂದೂ ಸಂಘಟನೆಗಳು ಪಟ್ಟು ಹಿಡಿದಿದ್ದು, ಮತ್ತೊಂದು ಹೋರಾಟಕ್ಕೆ ಮುಂದಾಗಿವೆ.
ಏಪ್ರಿಲ್ 12ರಂದು ಮಂಡ್ಯದಲ್ಲಿ ಕರಾವಳಿ ಮತ್ತು ಮಲೆನಾಡು ಮಾದರಿಯಂತೆ ಇತಿಹಾಸದಲ್ಲೇ ಮೊದಲ ಬಾರಿಗೆ ನಗರದಲ್ಲಿ ಬೃಹತ್ ಶೋಭಯಾತ್ರೆಗೆ ನಿರ್ಧರಿಸಲಾಗಿದೆ. ವಿಹೆಚ್ಪಿ, ಬಜರಂಗದಳ ಹಾಗೂ ಶ್ರೀರಾಮಾಂಜನೇಯ ಮಹೋತ್ಸವ ಸಮಿತಿಯಿಂದ ಈ ಯಾತ್ರೆ ಆಯೋಜನೆ ಮಾಡಲಾಗುತ್ತಿದ್ದು, ಶೋಭಾಯಾತ್ರೆಯಲ್ಲಿ ಟಿಪ್ಪು ಕೊಂದ ಉರಿಗೌಡ ಮತ್ತು ನಂಜೇಗೌಡ ನೆನಪಿಸಲು ಯೋಜನೆ ರೂಪಿಸಲಾಗಿದೆ.
ಇದನ್ನೂ ಓದಿ: ಕೆರಗೋಡು ಹನುಮ ಧ್ವಜ ತೆರವು ವಿರೋಧಿಸಿ ಪ್ರತಿಭಟಿಸಿದ್ದ ಹಿಂದೂ ಕಾರ್ಯಕರ್ತರಿಗೆ ಪೊಲೀಸ್ ನೋಟಿಸ್
ಹಿಂದೂಗಳ ಜಾಗೃತಿಗಾಗಿ ಶೋಭಾಯಾತ್ರೆ ಆಯೋಜನೆ ಮಾಡಲಾಗುತ್ತಿದ್ದು, ಡಿಜೆ ಹಾಗೂ ಕಲಾತಂಡಗಳು ಸೇರಿದಂತೆ ಸುಮಾರು 20 ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆ ಇದೆ. ಮಂಡ್ಯದ ಶಕ್ತಿ ದೇವತೆ ಕಾಳಿಕಾಂಭ ದೇವಸ್ಥಾನದಿಂದ ಬೃಹತ್ ಮೆರವಣಿಗೆ ನಡೆಯಲಿದೆ. ಬಳಿಕ ಮಂಡ್ಯ ವಿಶ್ವವಿದ್ಯಾನಿಲಯ ಆವರಣದಲ್ಲಿ ಉರೀಗೌಡ ಮತ್ತು ನಂಜೇಗೌಡ ಹೆಸರಿನಲ್ಲಿ ವೇದಿಕೆ ನಿರ್ಮಾಣವಾಗಲಿದೆ. ಆ ಮೂಲಕ ಟಿಪ್ಪು ಕೊಂದವರೂ ನಮ್ಮ ಹಿಂದೂಗಳು ಎಂದು ಸಾರಲು ನಿರ್ಧರಿಸಲಾಗಿದೆ.
ಇನ್ನು ಈ ಶೋಭಾಯಾತ್ರೆಗೆ ಕೆಂಗೇರಿಯ ವಿಶ್ವ ಒಕ್ಕಲಿಗರ ಮಠದ ನಿಶ್ಚಲಾನಂದ ನಂದನಾಥ ಸ್ವಾಮೀಜಿ ಸಾನಿಧ್ಯವಹಿಸಲಿದ್ದು, ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಹಾಗೂ ಶಾಸಕರುಗಳು ಶೋಭಾಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ.
ಘಟನೆ ಹಿನ್ನಲೆ
2024 ಜನವರಿ 22 ರಂದು ಇಡೀ ದೇಶ ರಾಮಮಂದಿರ ಉದ್ಘಾಟನೆಯ ಸಂಭ್ರಮದಲ್ಲಿತ್ತು. ಅದೇ ದಿನ ಕೆರೆಗೋಡು ಗ್ರಾಮದಲ್ಲಿ 108 ಅಡಿ ಎತ್ತರದ ಧ್ವಜಸ್ತಂಬದ ಮೇಲೆ ಹನುಮ ಧ್ವಜ ಹಾರಾಡಿತ್ತು. ಜನವರಿ 26 ರಂದು ಹನುಮಧ್ವಜ ಇಳಿಸಿ ರಾಷ್ಟ್ರಧ್ವಜ ಹಾರಿಸಲಾಗಿತ್ತು. ಗಣರಾಜೋತ್ಸವ ಮುಗಿಯುತ್ತಿದ್ದಂತೆ ಮತ್ತೆ ಹನುಮಧ್ವಜ ಹಾರಿಸಲಾಗಿತ್ತು. ಆದರೆ ಸಾರ್ವಜನಿಕ ಸ್ಥಳದಲ್ಲಿ ಧಾರ್ಮಿಕ ಧ್ವಜ ಹಾರಾಡುವಂತಿಲ್ಲ ಅನ್ನೋ ಕಾರಣ ನೀಡಿದ್ದ ಜಿಲ್ಲಾಡಳಿತ ಗ್ರಾಮಕ್ಕೆ ಎಂಟ್ರಿಕೊಟ್ಟಿತ್ತು.
ಇದನ್ನೂ ಓದಿ: ಕೆರಗೋಡು ಗ್ರಾಮಕ್ಕೆ ಬರ್ತಿಯಾ, ತಾಕತ್ ಇದ್ಯಾ?: ಶಾಸಕ ರವಿ ಗಣಿಗ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದ ವಿಹೆಚ್ಪಿ ಮುಖಂಡ
ಬೆಳಗಿನಜಾವ 3 ಗಂಟೆ ಸುಮಾರಿಗೆ ಧ್ವಜ ಇಳಿಸಲು ಮುಂದಾಗಿದ್ದರು. ಆದರೆ ಘಟನೆ ಕಾಡ್ಗಿಟ್ಟಿನಂತೆ ಹಬ್ಬಿತ್ತು. ಗ್ರಾಮಸ್ಥರೆಲ್ಲಾ ಆಕ್ರೋಶಗೊಂಡಿದ್ದರು. ಕೊನೆಗೆ ನೂರಾರು ಪೊಲೀಸರ ಭದ್ರತೆ ನಡುವೆ ಹನುಮಧ್ವಜವನ್ನ ಕೆಳಗಿಳಿಸಲಾಗಿತ್ತು. ಬಳಿಕ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿತ್ತು. ನೂರಾರು ಸಂಖ್ಯೆಯಲ್ಲಿ ಹಿಂದೂ ಸಂಘಟನೆ ಕಾರ್ಯಕರ್ತರು, ಸ್ತಂಬದ ಬಳಿ ನುಗ್ಗಲು ಯತ್ನಿಸಿದ್ದರು. ಪರಿಸ್ಥಿತಿ ಕೈಮೀರುತ್ತಿರುವುದು ಗೊತ್ತಾಗ್ತಿದ್ದಂತೆ ಪೊಲೀಸರು ಲಘು ಲಾಠಿಚಾರ್ಜ್ ಮಾಡಲಾಗಿತ್ತು. ಈ ವೇಳೆ ಹತ್ತಾರು ಜನರಿಗೆ ಗಾಯಗಳಾಗಿದ್ದವು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:30 am, Thu, 10 April 25