
ಬೆಂಗಳೂರು, (ಆಗಸ್ಟ್ 23): ಕರಾವಳಿ ಭಾಗದ ಬಹುದಿನಗಳ ಬೇಡಿಕೆ ಕೊನೆಗೂ ಈಡೇರಿದ್ದು, ಮಂಗಳೂರನ್ನು (Mangaluru) ದಕ್ಷಿಣ ರೈಲ್ವೆಯ ಪಾಲಕ್ಕಾಡ್(Palakkad) ವಿಭಾಗದಿಂದ ಬೇರ್ಪಡಿಸಿ ಮೈಸೂರು ವಿಭಾಗದ(Mysuru Division) ವ್ಯಾಪ್ತಿಗೆ ಸೇರಿಸಲಾಗಿದೆ. ಕೇಂದ್ರ ರೈಲ್ವೆ ಮಂಡಳಿಯ ಈ ತೀರ್ಮಾನವು 2026 ರ ಅಕ್ಟೋಬರ್ 1 ರಿಂದ ಅಧಿಕೃತವಾಗಿ ಜಾರಿಗೆ ಬರಲಿದೆ. ಇದರಿಂದ ಕರಾವಳಿ ಭಾಗಕ್ಕೆ, ಪ್ರಯಾಣಿಕರಿಗೆ ಹಾಗೂ ರಾಜ್ಯದ ಒಟ್ಟಾರೆ ಆರ್ಥಿಕ ಪ್ರಗತಿಗೆ ಸಮಗ್ರ ಲಾಭಗಳು ಸಿಗಲಿದೆ. ಇದಕ್ಕೆ ಕೇರಳ ವಿರೋಧಿಸಿದ್ದು, ಪಾಲಕ್ಕಾಡ್ ವಿಭಾಗಕ್ಕೆ ಭಾರಿ ಆದಾಯ ನಷ್ಟ ಹಾಗೂ ಅಭಿವೃದ್ಧಿಗೆ ಹಿನ್ನಡೆಯಾಗಲಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದೆ. ಅಲ್ಲದೇ ಈ ಬಗ್ಗೆ ಪ್ರಧಾನಿ ಮೋದಿ ಮತ್ತು ರೈಲ್ವೆ ಸಚಿವರಿಗೆ ಪತ್ರ ಬರೆಯುವುದಾಗಿ ಕೇರಳ ಸಿಎಂ ವಿಡಿ ಸತೀಶನ್ ಹೇಳಿದ್ದಾರೆ.
ಮಂಗಳೂರು ರೈಲ್ವೆ ಪಾಲಕ್ಕಾಡ್ ವಲಯದಲ್ಲಿದ್ದಾಗ ಮಂಗಳೂರು ವ್ಯಾಪ್ತಿಯ ಆದಾಯ ಪಾಲಕ್ಕಾಡ್ ವಲಯದ ಪಾಲಾಗುತ್ತಿತ್ತು. ಕರಾವಳಿಗರ ರೈಲ್ವೆ ಬೇಡಿಕೆಗಳು ಕೇರಳಿಗರ ಲಾಬಿಯ ಮುಂದೆ ಮಂಕಾಗುತ್ತಿತ್ತು. ಮಂಗಳೂರು ರೈಲ್ವೆಗೆ ಸಿಗಬೇಕಾದ ಸವಲತ್ತುಗಳು ಪಾಲಕ್ಕಾಟ್ ಲಾಬಿಯಿಂದ ವಂಚಿತವಾಗುತ್ತಿತ್ತು. ಇದನ್ನು ಮನಗಂಡ ಕರಾವಳಿ ರೈಲ್ವೆ ಹೋರಾಟಗಾರರು ಮಂಗಳೂರು ರೈಲ್ವೆಯನ್ನು ಪಾಲಕ್ಕಾಡ್ನಿಂದ ಬೇರ್ಪಡಿಸಿ ನೈಋತ್ಯಕ್ಕೆ ಸೇರ್ಪಡೆ ಮಾಡಬೇಕೆಂದು ಹೋರಾಟ ಮಾಡುತ್ತಾ ಬಂದಿದ್ದರು. ಕೊನೆಗೆ ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ನಿರಂತರ ಹೋರಾಟ ಮಾಡಿ ಕೊನೆಗೆ ಈ ಭಾಗದ ಜನರು ಬೇಡಿಕೆ ಈಡೇರಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮಂಗಳೂರು ಭಾಗವನ್ನು ದಕ್ಷಿಣ ರೈಲ್ವೆಯ ಪಾಲಕ್ಕಾಡ್ ರೈಲ್ವೆ ವಿಭಾಗದಿಂದ ಬೇರ್ಪಡಿಸಿ ಮೈಸೂರು ವಲಯಕ್ಕೆ ಸೇರಿಸಿದ್ದು, ಬರಿ ಮಂಗಳೂರಿಗೆ ಆದ ಅನುಕೂಲವಲ್ಲ. ಬದಲಿಗೆ, ಇಡೀ ಅರ್ಧ ಕರ್ನಾಟಕಕ್ಕೆ ಆದ ಅನುಕೂಲ. ಈ ಮಂಗಳೂರು ವಿಭಾಗವನ್ನು ಪ್ರತ್ಯೇಕ ಮಾಡಬೇಕು ಅಥವಾ ನೈಋತ್ಯ ರೈಲ್ವೆಗೆ ಸೇರಿಸಬೇಕು ಎಂಬ ಬೇಡಿಕೆ ಕಳೆದ ಹಲವು ದಶಕಗಳಿಂದಲೂ ಇತ್ತು. ಮಂಗಳೂರು ಭಾಗದ ರೈಲ್ವೆ ಬಳಕೆದಾರರು ಈ ಬಗ್ಗೆ ಪ್ರಯತ್ನ ಮಾಡುತ್ತಲೇ ಇದ್ದರು. ಇವರ ಮುಖ್ಯ ಉದ್ದೇಶ, ಆಡಳಿತಾತ್ಮಕವಾಗಿ ರೈಲುಗಳ ಡೆಸ್ಟಿನೇಶನ್ ಅನ್ನು ನಿರ್ಧರಿಸುವುದಕ್ಕೆ ಅನುಕೂಲವಾಗುತ್ತದೆ ಎಂಬುದೇ ಆಗಿತ್ತು. ಅದು ನಿಜವೂ ಕೂಡಾ. ಮಂಗಳೂರಿಗೆ ಹೋಗಬೇಕಿದ್ದ ರೈಲುಗಳನ್ನು ಕೇರಳಕ್ಕೆ ವಿಸ್ತರಿಸಿಕೊಳ್ಳುತ್ತಿದ್ದ ಅವರು, ಮಂಗಳೂರಿನ ಜನರಿಗೆ ಟಿಕೆಟ್ ಸಿಗದ ಹಾಗೆ ಮಾಡುತ್ತಿದ್ದರು. ಇದರಿಂದ ನಮ್ಮವರಿಗೆ ಅನಾನುಕೂಲವಾಗುತ್ತಿತ್ತು. ಆದರೆ, ಇದರಲ್ಲಿ ಇನ್ನೂ ಒಂದು ಅಂಶ ಅತ್ಯಂತ ಮುಖ್ಯವಾಗಿತ್ತು. ಅದು ಆದಾಯದ್ದು.
ಈ ನಿರ್ಧಾರವನ್ನು ರೈಲ್ವೆ ಇಲಾಖೆ ಪ್ರಕಟಿಸಿದ ನಂತರದಲ್ಲಿ ಯಾಕೆ ಕೇರಳ ಇಷ್ಟು ವರ್ಷಗಳಿಂದಲೂ ರೈಲ್ವೆಯಿಂದ ಹೆಚ್ಚು ಲಾಭ ಪಡೆದುಕೊಳ್ಳುತ್ತಿದೆ ಎಂಬುದಕ್ಕೆ ಕಾರಣವೂ ಇದೆ. ವಾಸ್ತವ ಸಂಗತಿ ಏನೆಂದರೆ, ಮಂಗಳೂರು ಬಂದರಿನಿಂದ ಸಾಗಾಟವಾಗುತ್ತಿದ್ದ ಸರಕು ಸಾಗಣೆಯ ಆದಾಯವೇ ಪಾಲಕ್ಕಾಡ್ ರೈಲ್ವೆ ವಲಯಕ್ಕೆ ಅತ್ಯಂತ ಮಹತ್ವದ್ದಾಗಿತ್ತು. ಒಂದು ರೈಲ್ವೆ ವಿಭಾಗದಲ್ಲಿ ಉತ್ಪಾದನೆಯಾಗುವ ಆದಾಯವೇ ಆ ವಿಭಾಗದಲ್ಲಿ ರೈಲ್ವೆ ಹೆಚ್ಚು ಸೌಲಭ್ಯವನ್ನು ಒದಗಿಸುವುದಕ್ಕೆ ಅನುಕೂಲವಾಗುತ್ತದೆ. ಕಡಿಮೆ ಆದಾಯ ಬರುವ ವಲಯಕ್ಕೆ ಸಹಜವಾಗಿ ಮೂಲಸೌಕರ್ಯಕ್ಕೆ ಕಡಿಮೆ ಹೂಡಿಕೆಯಾಗುತ್ತದೆ. ಮಂಗಳೂರಿನ ಬಂದರಿನಿಂದ ಪ್ರತಿ ತಿಂಗಳು 50 ಕೋಟಿ ರೂ. ಆದಾಯ ರೈಲ್ವೆಗೆ ಬರುತ್ತಿತ್ತು. ಅಂದರೆ, ವರ್ಷಕ್ಕೆ 600 ಕೋಟಿ ರೂ. ಆದಾಯ ಪಾಲಕ್ಕಾಡ್ ರೈಲ್ವೆ ವಿಭಾಗಕ್ಕೆ ಸಿಗುತ್ತಿತ್ತು. ಪಾಲಕ್ಕಾಡ್ ವಿಭಾಗದ ವಾರ್ಷಿಕ ಆದಾಯ ಅಂದರೆ, ಪ್ರಯಾಣಿಕರ ಟಿಕೆಟ್ ಸೇರಿದಂತೆ ಒಟ್ಟು 1200 ಕೋಟಿ ರೂ. ಆಗಿತ್ತು. ಅಂದರೆ, ಪಾಲಕ್ಕಾಡ್ ರೈಲ್ವೆ ವಿಭಾಗದ ಒಟ್ಟು ಅದಾಯದಲ್ಲಿ ಅರ್ಧಕ್ಕರ್ಧ ಆದಾಯ ಮಂಗಳೂರು ಬಂದರಿನಿಂದಲೇ ಬರುತ್ತಿತ್ತು.
ಇನ್ನು ಈ ಕಡೆ, ಮೈಸೂರು ವಲಯದಲ್ಲಿ ಬೆಂಗಳೂರು ಕೂಡ ಇದೆ. ಬೆಂಗಳೂರು ಇಷ್ಟು ದೊಡ್ಡ ನಗರವಾದರೂ, ಸರಕು ಸಾಗಣೆಯಿಂದ ಮೈಸೂರು ರೈಲ್ವೆ ವಿಭಾಗಕ್ಕೆ ಬರುತ್ತಿರುವ ಆದಾಯ 900 ಕೋಟಿ ರೂ. ಅಷ್ಟೇ. ಮಂಗಳೂರು ಬಂದರಿನಿಂದ ವರ್ಷಕ್ಕೆ ರೈಲ್ವೆಗೆ ಬರುವ ಆದಾಯದ 600 ಕೋಟಿಗೆ ಈ ಬೆಂಗಳೂರಿನ ಆದಾಯ 900 ಕೋಟಿಯನ್ನು ಹೋಲಿಸಿದರೆ, ಮಂಗಳೂರು ಬಂದರು ಒದಗಿಸುತ್ತಿದ್ದ ಆದಾಯದ ಮಹತ್ವ ಎಷ್ಟು ಎಂಬುದನ್ನು ಊಹಿಸಬಹುದು.
ಈಗ ಮಂಗಳೂರು ಕೂಡ ಮೈಸೂರು ವಿಭಾಗಕ್ಕೆ ಸೇರುವುದರಿಂದಾಗಿ ಮೈಸೂರು ರೈಲ್ವೆ ವಿಭಾಗದ ಸರಕು ಸಾಗಣೆ ಆದಾಯವೇ 1500 ಕೋಟಿ ರೂ. ದಾಟಲಿದೆ. ಇದು, ಸಹಜವಾಗಿ ಇಡೀ ನೈಋತ್ಯ ವಲಯಕ್ಕೆ ಅನುಕೂಲ. ನೈಋತ್ಯ ವಲಯದ ಹಣದ ಹರಿವಿನಲ್ಲಿ ಅಪಾರ ಏರಿಕೆಯಾಗುತ್ತದೆ. ಇದರಿಂದ, ಇಡೀ ಅರ್ಧ ಕರ್ನಾಟಕಕ್ಕೆ ರೈಲ್ವೆ ವಿಸ್ತರಣೆಗೆ ನೆರವಾಗಲಿದೆ. ಹೀಗಾಗಿ, ಇದು ಬರಿ ಮಂಗಳೂರಿಗರ ಜಯವಲ್ಲ. ಇಡೀ ಅರ್ಧ ಕರ್ನಾಟಕ ಖುಷಿ ಪಡುವಂಥದ್ದು.
ಪಾಲಕ್ಕಾಡ್ ಪಾಲಿನ ಚಿನ್ನದ ಮೊಟ್ಟೆ ಇಡುವ ಕೋಳಿಯನ್ನು ಕಳೆದ ಕೊಂಡಿದ್ದಕ್ಕೆ ಕೇರಳ ಸಿಎಂ ಪ್ರತಿಕ್ರಿಯಿಸಿದ್ದು,”ಪಾಲಕ್ಕಾಡ್ ರೈಲ್ವೆ ವಿಭಾಗದಿಂದ ಮಂಗಳೂರು ಸೇರಿದಂತೆ ಪ್ರಮುಖ ಪ್ರದೇಶಗಳನ್ನು ಕೈಬಿಡುವ ರೈಲ್ವೆ ಮಂಡಳಿಯ ನಿರ್ಧಾರವು ಸಂಪೂರ್ಣ ಏಕಪಕ್ಷೀಯವಾಗಿದೆ. ಈ ನಿರ್ಧಾರವನ್ನು ಹಿಂಪಡೆಯಬೇಕು ಎಂಬುದು ನಮ್ಮ ರಾಜ್ಯದ ಒಮ್ಮತದ ನಿಲುವಾಗಿದೆ. ಈ ಸಮಸ್ಯೆಯ ಪರಿಹಾರಕ್ಕಾಗಿ ನಾವು ಕೇಂದ್ರ ಸರ್ಕಾರವನ್ನು ಸಂಪರ್ಕಿಸಲಿದ್ದು, ರಾಜ್ಯದ ಸಂಸದರ ಸಹಯೋಗದೊಂದಿಗೆ ಕೇಂದ್ರದ ಮೇಲೆ ಒತ್ತಡ ಹೇರಲಿದ್ದೇವೆ,” ಎಂದು ಹೇಳಿದ್ದಾರೆ.
Published On - 8:56 pm, Sun, 23 August 26