ಈ ಬಾರಿ ಅದ್ಧೂರಿ ದಸರಾ ಆಚರಣೆ: ಅ 3 ರಂದು ಉದ್ಘಾಟನೆ, ಅ 12 ಕ್ಕೆ ಜಂಬೂಸವಾರಿ

ವಿಶ್ವವಿಖ್ಯಾತ ಮೈಸೂರು ದಸರಾ ಈ ಬಾರಿ ಅದ್ಧೂರಿಯಾಗಿ ನಡೆಯಲಿದೆ. ದಸರಾ ಮಹೋತ್ಸವ ಉನ್ನತ ಮಟ್ಟದ ಸಮಿತಿ ಸಭೆ ಇಂದು ನಡೆಸಲಾಗಿದೆ. ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಗಳೂರಿನಲ್ಲಿ ಮಾತನಾಡಿ, ಅಕ್ಟೋಬರ್ 3ರಂದು ದಸರಾ ಉದ್ಘಾಟನೆಗೊಳ್ಳಲಿದ್ದು, ಅಕ್ಟೋಬರ್ 12ರಂದು ಜಂಬೂಸವಾರಿ ನಡೆಯಲಿದೆ ಎಂದು ಹೇಳಿದ್ದಾರೆ.

ಈ ಬಾರಿ ಅದ್ಧೂರಿ ದಸರಾ ಆಚರಣೆ: ಅ 3 ರಂದು ಉದ್ಘಾಟನೆ, ಅ 12 ಕ್ಕೆ ಜಂಬೂಸವಾರಿ
ಈ ಬಾರಿ ಅದ್ಧೂರಿ ದಸರಾ ಆಚರಣೆ: ಅ.3 ರಂದು ಉದ್ಘಾಟನೆ, ಅ.12 ಕ್ಕೆ ಜಂಬೂಸವಾರಿ
Follow us
| Updated By: ಗಂಗಾಧರ​ ಬ. ಸಾಬೋಜಿ

Updated on:Aug 12, 2024 | 7:10 PM

ಬೆಂಗಳೂರು, ಆಗಸ್ಟ್​​ 12: ಅಕ್ಟೋಬರ್ 3ರಂದು ವಿಶ್ವವಿಖ್ಯಾತ ಮೈಸೂರು ದಸರಾ (Mysuru Dasara) ಉದ್ಘಾಟನೆಗೊಳ್ಳಲಿದ್ದು, ಅಕ್ಟೋಬರ್ 12ರಂದು ದಸರಾ ಜಂಬೂಸವಾರಿ ನಡೆಯಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ. ವಿಧಾನಸೌಧದಲ್ಲಿ ನಡೆದ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು, ದಸರಾ ಅದ್ದೂರಿಯಾಗಿ ಆಚರಣೆ ಮಾಡಲು ತೀರ್ಮಾನ ಮಾಡಲಾಗಿದೆ. ಕಳೆದ ಬಾರಿ 30 ಕೋಟಿ ರೂ. ಆಗಿತ್ತು. ಈ ಬಾರಿ ಅದಕ್ಕಿಂತ ಹೆಚ್ಚು ಖರ್ಚು ಆಗಬಹುದು ಎಂದಿದ್ದಾರೆ.

ಉದ್ಘಾಟನೆ ಯಾರಿಂದ?

ಮೈಸೂರು ಉದ್ಘಾಟನೆ ಯಾರಿಂದ ಮಾಡಿಸಬೇಕು ಎಂಬುದುನ್ನು ನನಗೆ ಸಭೆಯಲ್ಲಿ ಸರ್ವಾನುಮತದಿಂದ ಅಧಿಕಾರ ನೀಡಿದ್ದಾರೆ. ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ‌ ಮಹದೇವಪ್ಪ ಅವರು ಕೆಲವು ತೀರ್ಮಾನವನ್ನು ಕೈಗೊಳ್ಳುತ್ತಾರೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಮೈಸೂರು ದಸರಾ ಮಹೋತ್ಸವಕ್ಕೆ ಅರಣ್ಯ ಇಲಾಖೆ ಸಿದ್ಧತೆ; 2 ತಿಂಗಳ ಮುಂಚಿತವಾಗಿ ಮೈಸೂರಿಗೆ ಆಗಮಿಸಲಿದೆ ಗಜಪಡೆ

ವಾಡಿಕೆ ಮಳೆಗಿಂತ ಹೆಚ್ಚು ಮಳೆಯಾಗಿದೆ. ಹೀಗಾಗಿ ಬೆಳೆ ಚೆನ್ನಾಗಿ ಬರುತ್ತಿದೆ. ಎಲ್ಲಾ ಜಲಾಶಯಗಳು ತುಂಬಿವೆ. ಕಳೆದ ವರ್ಷ ಬರಗಾಲವಿತ್ತು, ಮಳೆ ಸರಿಯಾಗಿ ಆಗಿರಲಿಲ್ಲ. ಹಾಗಾಗಿ ಸರಳವಾಗಿ ಆಚರಣೆ ಮಾಡಲಾಗಿತ್ತು ಎಂದರು.

21 ದಿನ ದೀಪಾಲಂಕಾರ 

ದಸರಾ ಉದ್ಘಾಟನೆ ದಿನವೇ ಸಾಂಸ್ಕೃತಿಕ ಕಾರ್ಯಕ್ರಮ, ದೀಪಾಲಂಕಾರ, ವಸ್ತು ಪ್ರದರ್ಶನ, ಕುಸ್ತಿ ಪ್ರದರ್ಶನ, ಯುವ ಸಂಭ್ರಮ, ಕ್ರೀಡೆಗಳು ಎಲ್ಲವೂ ಆರಂಭವಾಗುತ್ತದೆ. ಅಲ್ಲಿ ಖಾಲಿ ಮಳಿಗೆಗಳು ಇರಬಾರದು. ಅವತ್ತೆ ಎಲ್ಲಾ ಮಳಿಗೆಗಳು ಭರ್ತಿಯಾಗಿರಬೇಕು. ವಸ್ತು ಪ್ರದರ್ಶನದಲ್ಲಿ ಸರ್ಕಾರದ ಕಾರ್ಯಕ್ರಮಗಳ ಸಾಧನೆಗಳನ್ನು ಪ್ರದರ್ಶನ ಮಾಡಬೇಕು. ಜಂಬೂಸವಾರಿ ಮುಗಿದ ಬಳಿಕವೂ 11 ದಿನ ದೀಪಾಲಂಕಾರ ಇರಲಿದೆ. ಒಟ್ಟು 21 ದಿನಗಳ ಕಾಲ ಮಾಡಲಿದ್ದು, ಆಕರ್ಷಣೆಯಿಂದ ಇರಬೇಕು ಎಂದು ಸಂಬಂಧಿಸಿದ ಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ: ಚಾಮುಂಡೇಶ್ವರಿ ದೇವಸ್ಥಾನ ನಮ್ಮ‌ ಆಸ್ತಿ, ಅವಕಾಶ ಕೊಟ್ರೆ ನಾವೇ ನಿರ್ವಹಣೆ ಮಾಡ್ತೇವೆ‌: ಪ್ರಮೋದಾದೇವಿ

ಪ್ರವಾಸಿಗರು ಬಂದಾಗ ಸರಿಯಾದ ರೀತಿಯಲ್ಲಿ ಅವರಿಗೆ ಮಾರ್ಗದರ್ಶನ ಮತ್ತೆ ಭದ್ರತೆ ಹಾಗೂ ಟ್ರಾಫಿಕ್ ನಿಭಾಯಿಸಲು ಸೂಚನೆ ಕೊಟ್ಟಿದ್ದೇನೆ. ಗೋಲ್ಡ್ ಕಾರ್ಡ್ ಮಾಡಲು, ಉಳಿದವರಿಗೆ ಉಚಿತವಾಗಿ ದಸರಾ ನೋಡಲು ಸೂಚಿಸಲಾಗಿದೆ. ಒಟ್ಟಾರೆ ನಾಡ ಹಬ್ಬ ಹಾಗೂ ಜನರ ಉತ್ಸವವಾಗಿ ಇರಬೇಕು. ಈ ಸಂಬಂಧ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ.

ದಸರಾ ಮಹೋತ್ಸವ ಉನ್ನತ ಮಟ್ಟದ ಸಮಿತಿ ಸಭೆ ನಡೆಸಲಾಗಿದೆ. ಮೈಸೂರು, ಚಾಮರಾಜನಗರ,  ಶ್ರೀರಂಗಪಟ್ಟಣ ಕ್ಷೇತ್ರದ ಶಾಸಕರು ಭಾಗವಹಿಸಿದ್ದರು ಎಂದು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 6:51 pm, Mon, 12 August 24