ದಸರಾ ಪರೇಡ್​ನಲ್ಲಿ ಸಿಎಂ ಸಿದ್ದರಾಮಯ್ಯ ಜತೆ ಸಚಿವ ಮಹದೇವಪ್ಪ ಮೊಮ್ಮಗ: ಕಾಂಗ್ರೆಸ್ ಹೈಕಮಾಂಡ್ ಗರಂ

ನಾಡ ಹಬ್ಬ ದಸರಾ ಸಂಭ್ರಮ ಮುಗಿದಿದೆ. ಆದರೆ ಅದೊಂದು ವಿಷಯ ಬೆಂಗಳೂರು ಅಲ್ಲ, ದೆಹಲಿ ಮಟ್ಟದಲ್ಲೂ ಕಾಂಗ್ರೆಸ್ ನಾಯಕರ ಕಣ್ಣು ಕೆಂಪಾಗುವಂತೆ ಮಾಡಿದೆ. ದಸರಾ ಉತ್ಸವದ ಮೇಲೆ ಕಣ್ಣಿಟ್ಟಿದ ಕಾಂಗ್ರೆಸ್ ಹೈಕಮಾಂಡ್, ಸಿಎಂ ಪರೇಡ್​​ನಲ್ಲಿ ಕಾಣಿಸಿಕೊಂಡ ಬಾಲಕನ ಬಗ್ಗೆ ಕರ್ನಾಟಕ ಕಾಂಗ್ರೆಸ್​​ ನಾಯಕರಿಂದ ಮಾಹಿತಿ ಕೇಳಿದೆ.

ದಸರಾ ಪರೇಡ್​ನಲ್ಲಿ ಸಿಎಂ ಸಿದ್ದರಾಮಯ್ಯ ಜತೆ ಸಚಿವ ಮಹದೇವಪ್ಪ ಮೊಮ್ಮಗ: ಕಾಂಗ್ರೆಸ್ ಹೈಕಮಾಂಡ್ ಗರಂ
ದಸರಾ ಪರೇಡ್​ನಲ್ಲಿ ಸಿಎಂ ಜತೆ ಮಹದೇವಪ್ಪ ಮೊಮ್ಮಗ
Updated By: Ganapathi Sharma

Updated on: Oct 04, 2025 | 9:49 AM

ಬೆಂಗಳೂರು, ಅಕ್ಟೋಬರ್ 4: ನಾಡ ಹಬ್ಬ ದಸರಾ (Dasara) ಸಂಭ್ರಮಕ್ಕೆ ಶುಕ್ರವಾರ ಅದ್ದೂರಿಯಾಗಿ ತೆರೆ ಬಿದ್ದಿದೆ. ಆದರೆ ಕೊನೆಯ ದಿನ ನಂದಿ ಧ್ವಜ ಪೂಜೆ ಬಳಿಕ ಸಿಎಂ ಸಿದ್ದರಾಮಯ್ಯ (Siddaramaiah), ಡಿಸಿಎಂ ಡಿಕೆ ಶಿವಕುಮಾರ್ , ಸಚಿವರಾದ. ಹೆಚ್ ಸಿ ಮಹದೇವಪ್ಪ, ಶಿವರಾಜ ತಂಗಡಗಿ ತೆರೆದ ಜೀಪ್​ನಲ್ಲಿ ಅರಮನೆ ಆವರಣದಲ್ಲಿ ಪರೇಡ್ ಮಾಡುವ ವೇಳೆ ನಾಯಕರ ಮಧ್ಯೆ ಕೂಲಿಂಗ್ ಗ್ಲಾಸ್ ಧರಿಸಿ ಕಾಣಿಸಿಕೊಂಡ ಬಾಲಕನ ಬಗ್ಗೆ ಸಾಕಷ್ಟು ಚರ್ಚೆ ಹುಟ್ಟಿಕೊಂಡಿದೆ. ಇದು ಕಾಂಗ್ರೆಸ್ (Congress) ಹೈಕಮಾಂಡ್ ನಾಯಕರ ಕಣ್ಣು ಕೆಂಪಗಾಗುವಂತೆ ಮಾಡಿದೆ. ಪರೇಡ್​​ನಲ್ಲಿ ಭಾಗಿಯಾಗಿದ್ದ ಬಾಲಕ ಯಾರು? ಆತ ಯಾಕೆ ನಾಯಕರ ಜೊತೆ ಪರೇಡ್​​ನಲ್ಲಿ ಭಾಗಿಯಾದ? ಪ್ರೋಟೋಕಾಲ್ ಅವನಿಗೆ ಇತ್ತಾ ಎಂಬ ಬಗ್ಗೆ ದೆಹಲಿ ಕಾಂಗ್ರೆಸ್ ನಾಯಕರು ಕರ್ನಾಟಕದ ಎರಡನೇ ಹಂತದ ನಾಯಕರ ಬಳಿ ಮಾಹಿತಿ ಕೇಳಿದ್ದಾರೆ. ಸಚಿವ ಮಹದೇವಪ್ಪ ಮೊಮ್ಮಗ ಸಿಎಂ, ಡಿಸಿಎಂ ಜತೆ ಪರೇಡ್​​ನಲ್ಲಿ ಕಾಣಿಸಿಕೊಂಡಿದ್ದು ಇಷ್ಟಕ್ಕೆಲ್ಲ ಕಾರಣವಾಗಿದೆ.

ಸದ್ಯ ಈ ವಿಚಾರ ರಾಜಕೀಯ ತಿರುವು ಪಡೆದುಕೊಂಡಿದ್ದು, ರಾಜಕೀಯ ಪಕ್ಷಗಳು ಕೂಡ ಇದೇ ವಿಚಾರವಾಗಿ ಕಿಡಿಕಾರಿವೆ. ನಾಡ ಹಬ್ಬದ ಸರಾ ಸರ್ಕಾರಿ ಕಾರ್ಯಕ್ರಮ. ಈ ಕಾರ್ಯಕ್ರಮದಲ್ಲಿ ಕುಟುಂಬದ ಪ್ರವೇಶ ಯಾಕೆ ಎಂಬ ಪ್ರಶ್ನೆ ಎದ್ದಿದೆ. ಮೈಸೂರು ಜಿಲ್ಲಾಡಳಿತದಿಂದ ತೆರೆದ ಜೀಪ್​​ನಲ್ಲಿ ಪರೇಡ್ ಸಿಎಂ ಪ್ರೋಟೋಕಾಲ್ ಆಗಿತ್ತಾ ಆಗಿದ್ದರೆ ಆ ಬಾಲಕ ಭಾಗಿಯಾಗಿದ್ದು ನಿಯಮ ಉಲ್ಲಂಘನೆ ಅಲ್ಲವೇ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಅಷ್ಟೇ ಅಲ್ಲದೆ, ಪ್ರೋಟೋಕಾಲ್ ಅಲ್ಲ ಎಂದಾದರೆ ಆ ಬಾಲಕನಿಗೆ ಮಾತ್ರ ಯಾಕೆ ಅವಕಾಶ ಎಂಬ ಟೀಕೆಗಳು ಕೂಡ ಜೋರಾಗಿವೆ.

ಎಲ್ಲ ಕಡೆ ಮೊಮ್ಮಕ್ಕಳದ್ದೇ ದರ್ಬಾರು: ಛಲವಾದಿ ನಾರಾಯಣಸ್ವಾಮಿ ಕಿಡಿ

ಇದೇ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಮುಖ್ಯಮಂತ್ರಿಗಳು ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಮಹದೇವಪ್ಪನವರನ್ನು ನೋಡಿದರೆ ಎಲ್ಲಾ ಕಡೆ ಮೊಮ್ಮಕ್ಕಳದೇ ದರ್ಬಾರು ಆಗಿದೆ. ಸಿಎಂ ಮೊಮ್ಮಗ, ಮಹದೇವಪ್ಪನವರ ಮೊಮ್ಮಗ ಇವರಿಗೆಲ್ಲಾ ಗದೆ ಕೊಟ್ಟು ವಿಜೃಂಭಿಸುವ ಕೆಲಸ ಆಗುತ್ತಿದೆ. ಇವರಷ್ಟೇ ಲೂಟಿ ಮಾಡುತ್ತಿಲ್ಲ, ಮಕ್ಕಳಿಂದಲೂ ಲೂಟಿ ಮಾಡಿಸುತ್ತಿದ್ದಾರೆ. ಇವರಿಗೆ ಜನರ ಚಿಂತೆ ಇಲ್ಲ, ಮೊಮ್ಮಕ್ಕಳ ಚಿಂತೆ. ಇದು ರಿಯಲ್ ಎಸ್ಟೇಟ್ ಸರ್ಕಾರ ಆಗಿದೆ ಎಂದು ವಾಗ್ದಾಳಿ ನೆಡೆಸಿದ್ದಾರೆ.

ಸಿಎಂ ಪರೇಡ್​​ನಲ್ಲಿ ಬಾಲಕ ಕಾಣಿಸಿಕೊಂಡ ಬಗ್ಗೆ ಮೈಸೂರು ಜಿಲ್ಲಾಡಳಿತ ಆಗಲಿ, ಸಿಎಂ ಕಛೇರಿಯಿಂದ ಆಗಲಿ ಉಸ್ತುವಾರಿ ಸಚಿವರಾಗಲಿ ಯಾವುದೇ ಸ್ಪಷ್ಟನೆ ನೀಡಿಲ್ಲ. ಪ್ರೋಟೋಕಾಲ್ ಇರಲಿಲ್ಲ ಎಂದು ಹೇಳಿಲ್ಲ ಮತ್ತು ಉಲ್ಲಂಘನೆಯ ಬಗ್ಗೆಯೂ ಉತ್ತರ ನೀಡಿಲ್ಲ.

ಇದನ್ನೂ ಓದಿ: ಮತ್ತೊಂದು ಎಡವಟ್ಟು ಮಾಡಿಕೊಂಡ ಕಾಂಗ್ರೆಸ್​​​​, ದಸರಾ ಪರೇಡ್​​​ನಲ್ಲಿ ಸಚಿವ ಮಹದೇವಪ್ಪ ಮೊಮ್ಮಗ ಭಾಗಿ

ಇದರ ಜೊತೆಗೆ ದಸರಾ ಸಂಭ್ರಮದಲ್ಲಿ ಬೇರೆ ಬೇರೆ ವಿಚಾರಗಳೂ ಸದ್ದು ಮಾಡಿದೆ. ಪಾಸ್ ಇದ್ದರೂ ಜನರನ್ನ ಒಳಗಡೆ ಬಿಡಲಿಲ್ಲ, ಸಾವಿರಾರು ರೂಪಾಯಿ ಹಣ ಕೊಟ್ಟು ಪಾಸ್ ಪಡದಿದ್ದರೂ ಅರಮನೆಯೊಳಗೆ ಪ್ರವೇಶ ನೀಡಲಿಲ್ಲ ಅನ್ನು ಆರೋಪ ಕೂಡ ಕೇಳಿಬಂದಿದೆ. ಹೀಗಾಗಿ ಸಾರ್ವಜನಿಕರು ಹೊರಗಡೆ ಇದ್ದು ಯಾರೋ ಒಂದಿಬ್ಬರ ಕುಟುಂಬಸ್ಥರಿಗೆ ರಾಯಲ್ ಟ್ರೀಟ್ಮೆಂಟ್ ಪಡೆದ ಬಗ್ಗೆ ಸಾಕಷ್ಟು ಟಿಕೆ ವ್ಯಕ್ತವಾಗಿದೆ. ಆರ್ಸಿಬಿ ತಂಡ ಕಪ್ ಗೆದ್ದು ಬೆಂಗಳೂರಿಗೆ ಬಂದಾಗ ಸರ್ಕಾರದ ಇದೇ ರೀತಿ ಕಾರ್ಯಕ್ರಮದಲ್ಲಿ ಕೆಲ ನಾಯಕರ ಕುಟುಂಬಸ್ಥರು ಭಾಗಿಯಾಗಿದ್ದು ಸಾಕಷ್ಟು ಟೀಕೆ ಮತ್ತು ಚರ್ಚೆ ಗ್ರಾಸವಾಗಿತ್ತು. ಅದರ ಬೆನ್ನಲ್ಲೇ ದಸರಾ ಕಾರ್ಯಕ್ರಮದಲ್ಲಿ ಸಿಎಂ ಸೇರಿ ನಾಯಕರ ಜೊತೆ ಬಾಲಕ ಭಾಗಿಯಾಗಿದ್ದು ಕಾಂಗ್ರೆಸ್ ಹೈಕಮಾಂಡ್ ನಾಯಕರ ಆಕ್ರೋಶಕ್ಕೆ ಕಾರಣವಾಗಿದ್ದು, ತಕ್ಷಣ ಘಟನೆ ಬಗ್ಗೆ ಮಾಹಿತಿ ಕೇಳಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:07 am, Sat, 4 October 25