ಮುಡಾ ಹಗರಣ: ಸಿದ್ದರಾಮಯ್ಯ ವಿರುದ್ಧ ಆರೋಪ ಮಾಡಿದ್ದ ಆರ್ಟಿಐ ಕಾರ್ಯಕರ್ತನಿಗೆ ಜೀವ ಬೆದರಿಕೆ
ಮುಡಾದಲ್ಲಿ ನಡೆದಿದೆ ಎನ್ನಲಾಗಿರುವ ಹಗರಣಕ್ಕೆ ಸಂಬಂಧಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಗಂಭೀರ ಆರೋಪ ಮಾಡಿದ್ದ ಆರ್ಟಿಐ ಕಾರ್ಯಕರ್ತ ಗಂಗರಾಜು ಅವರಿಗೆ ಜೀವ ಬೆದರಿಕೆ ಹಾಕಲಾಗಿದೆ. ಓರ್ವ ಗನ್ ಮ್ಯಾನ್ ನೀಡುವಂತೆ ಗಂಗರಾಜು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ.
ಮೈಸೂರು, ಸೆಪ್ಟೆಂಬರ್ 02: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಬದಲಿ ನಿವೇಶನ ಹಂಚಿಕೆ ಹಗರಣಕ್ಕೆ ಸಂಬಂಧಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರ ವಿರುದ್ಧ ಗಂಭೀರ ಆರೋಪ ಮಾಡಿದ್ದ ಆರ್ಟಿಐ (RTI) ಕಾರ್ಯಕರ್ತ ಗಂಗರಾಜು (Gangaraju) ಅವರಿಗೆ ಜೀವ ಬೆದರಿಕೆ ಹಾಕಲಾಗಿದೆ. ಹೀಗಾಗಿ, ಗಂಗರಾಜು ಅವರು ಓರ್ವ ಗನ್ ಮ್ಯಾನ್ ನೀಡುವಂತೆ ಮುಖ್ಯಮಂತ್ರಿಗಳ ಕಾರ್ಯಾಲಯಕ್ಕೆ ಪತ್ರ ಬರೆದು ಮನವಿ ಮಾಡಿದ್ದಾರೆ.
ಆದರೆ, ಗಂಗರಾಜು ಅವರಿಗೆ ಗನ್ ಮ್ಯಾನ್ ನೀಡಲು ನಿರಾಕರಿಸಿದ್ದು, ಗಂಗರಾಜು ಮನೆಯ ಬಳಿ ನಿರಂತರವಾಗಿ ಪೊಲೀಸ್ ಬೀಟ್ ನಿಯೋಜಿಸಲಾಗಿದೆ. ಗಂಗರಾಜು ಮನೆಯ ಬಳಿ ಬೀಟ್ ಸಹಿ ಪುಸ್ತಕ ಇಡಲಾಗಿದೆ. ಅಲ್ಲದೇ, ಜೀವಹಾನಿ ಬಗ್ಗೆ ಮಾಹಿತಿ ಇದ್ದರೆ ಪೊಲೀಸ್ ಠಾಣೆಗೆ ದೂರು ನೀಡಿ. ಒಂದು ವೇಳೆ ನಿಮ್ಮ ಕುಟುಂಬ ಹಾಗೂ ನಿಮಗೆ ಭದ್ರತೆ ಬೇಕಿದ್ದರೇ, ನಿಯಮಾನುಸಾರ ಹಣ ಪಾವತಿಸಿ ಗನ್ ಮ್ಯಾನ್ ಪಡೆಯಿರಿ ಎಂದು ಪೊಲೀಸರು ಗಂಗರಾಜು ಅವರಿಗೆ ಹಿಂಬರಹ ನೀಡಿದ್ದಾರೆ.
ಇದನ್ನೂ ಓದಿ: ಸಿದ್ದರಾಮಯ್ಯ ಪತ್ನಿಯ ಜಮೀನೇ ಇಲ್ಲ, ನಕಲಿ ದಾಖಲೆ ಸೃಷ್ಟಿ ಎಂದ ಆರ್ಟಿಐ ಕಾರ್ಯಕರ್ತ
ಯಾರು ಈ ಗಂಗರಾಜು
ಮುಡಾದ 50 : 50 ಅನುಪಾತದಲ್ಲಿ ಬದಲಿ ನಿವೇಶನ ಹಂಚಿಕೆ ಆಗಿರುವ ಹಗಣರಗಳ ಬಗ್ಗೆ ಆರ್ಟಿಐ ಕಾರ್ಯಕರ್ತರ ಗಂಗರಾಜು ಬಹಿರಂಗಪಡಿಸಿದ್ದಾರೆ. ಕೆಸರೆ ಗ್ರಾಮದಲ್ಲಿನ 3.16 ಎಕರೆ ಜಮೀನಿನ ದಾಖಲೆಗಳನ್ನು ಆರ್ಟಿ ಐ ಮೂಲಕ ತೆಗೆದುಕೊಂಡಿದ್ದಾರೆ. ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಕುಟುಂಬಕ್ಕೆ ಸಂಬಂಧಿಸಿದ್ದ ಮೂಲ ಭೂ ದಾಖಲೆಗಳು ಕಳವಾಗಿರುವ ಬಗ್ಗೆ ದೂರು ನೀಡಿದ್ದಾರೆ. ಅಲ್ಲದೇ, ಮುಡಾದಲ್ಲಿ ಹಗರಣ ನಡೆದಿದೆ ಎಂದು ಮುಡಾ ಆಯುಕ್ತರು, ಅಧ್ಯಕ್ಷರು ಮತ್ತು ಮುಖ್ಯ ಕಾರ್ಯದರ್ಶಿಗೆ ದೂರು ನೀಡಿದ್ದಾರೆ. ಮುಡಾ ಹಗರಣದ ಬಗ್ಗೆ ಸುಮಾರು 2019ರಿಂದ ನಿರಂತರ ಹೋರಾಟ ಮಾಡಿಕೊಂಡು ಬಂದಿದ್ದಾರೆ. ಸಿಎಂ ಸಿದ್ದರಾಮಯ್ಯ, ಶಾಸಕರ ವಿರುದ್ದ ಹೋರಾಟ ನಡೆಸಿದ್ದಾರೆ. ಈ ಎಲ್ಲ ಕಾರಣದಿಂದ ಜೀವ ಬೆದರಿಕೆ ಹಾಕಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ಹಿಂದೆ 2020ರಲ್ಲಿ ಹಲ್ಲೆ ಸಹಾ ನಡೆದಿತ್ತು.
ಗಂಗರಾಜು ವಿರುದ್ಧ ದೂರು
ಆರ್ಟಿಐ ಕಾರ್ಯಕರ್ತ ಗಂಗರಾಜು ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುಟುಂಬದ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದರು. ಅಲ್ಲದೇ, ಇವರನ್ನು ಕೂಡಲೇ ಬಂಧಿಸಬೇಕೆಂದು ಮೈಸೂರು ಜಿಲ್ಲಾ ಪೊಲೀಸ್ ಆಯುಕ್ತರಿಗೆ ಕಾಂಗ್ರೆಸ್ ನಿಯೋಗ ದೂರು ನೀಡಿತ್ತು.
ಸರ್ಕಾರದಿಂದ ಆರ್ಟಿಐ ಕಾರ್ಯಕರ್ತರಿಗೆ ಕಿರುಕುಳ: ಹೆಚ್ಡಿಕೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುಟುಂಬ ಮೈಸೂರಿನ ಮೂಡದಲ್ಲಿ ನಡೆಸಿರುವ ಬದಲಿ ನಿವೇಶನ ಹಗರಣವನ್ನು ಬಯಲಿಗೆಳೆದ ಆರ್ಟಿಐ ಕಾರ್ಯಕರ್ತರಿಗೆ ರಾಜ್ಯ ಸರ್ಕಾರ ಕಿರುಕುಳ ನೀಡುತ್ತಿದೆ ಎಂದು ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಅವರು ಆರೋಪ ಮಾಡಿದ್ದರು.
ಸ್ನೇಹಮಯಿ ಕೃಷ್ಣ ವಿರುದ್ಧ
ತೀರ ಇತ್ತೀಚಿಗೆ ಕಾಂಗ್ರೆಸ್ ನಾಯಕ ಎಂ. ಲಕ್ಷ್ಮಣ ಆರ್ಟಿಐ ಕಾರ್ಯಕರ್ತರ ಸ್ನೇಹಮಯಿ ಕೃಷ್ಣ ಅವರ ವಿರುದ್ಧ ಮೈಸೂರು ಜಿಲ್ಲಾ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದರು. ಸ್ನೇಹಮಯಿ ಕೃಷ್ಣ ಅವರನ್ನು ಗಡಿಪಾರು ಮಾಡುವಂತೆ ಮನವಿ ಮಾಡಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:02 am, Mon, 2 September 24