
ಮೈಸೂರು, ಸೆಪ್ಟೆಂಬರ್ 04: ಸತತ ಆರು ಬಾರಿ ಜಂಬೂ ಸವಾರಿಯಲ್ಲಿ ಚಿನ್ನದ ಅಂಬಾರಿಯನ್ನು ಯಶಸ್ವಿಯಾಗಿ ಹೊತ್ತ ಅಭಿಮನ್ಯು ಆನೆಗೆ 60 ವರ್ಷ ತುಂಬಿದ ಕಾರಣ ನಿವೃತ್ತಿ ನೀಡಿದ್ದ ಬೆನ್ನಲ್ಲೇ, 2026ರ ದಸರಾದಲ್ಲಿ ಅಭಿಮನ್ಯು ಭಾಗವಹಿಸದಿರುವ ವಗ್ಗೆ ಅಭಿಮಾನಿಗಳು ಬೇಸರ ಹೊರಹಾಕಿದ್ದರು. ಅಭಿಮನ್ಯುವನ್ನು ಕೊನೆಯ ಬಾರಿಗೆ 2026ರ ಜಂಬೂ ಸವಾರಿಯಲ್ಲಿ ನಿಶಾನೆ ಆನೆಯಾಗಿ ಕರೆತರಬೇಕು. ಆ ಮೂಲಕ ಅರ್ಜುನ ಆನೆಗೆ ನೀಡಿದಂತೆ ಗೌರವಪೂರ್ಣ ಬೀಳ್ಕೊಡುಗೆ ನೀಡಬೇಕು ಎಂದು ಆಗ್ರಹಿಸಿದ್ದರು. ಈ ಬೆನ್ನಲ್ಲೇ ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಅವರು ಬಹುಜನರ ಬೇಡಿಕೆಗೆ ಸ್ಪಂದಿಸಿದ್ದು ಮಹತ್ವದ ಆದೇಶ ಮಾಡಿದ್ದಾರೆ.
ಮೈಸೂರು ದಸರಾ ಪರಂಪರೆಯಲ್ಲಿ ಅಭಿಮನ್ಯು ಆನೆಯ ಸೇವೆ ಅತ್ಯಂತ ವಿಶೇಷ ಹಾಗೂ ಸ್ಮರಣೀಯವಾಗಿದೆ. ಹಲವು ವರ್ಷಗಳ ಕಾಲ ದಸರಾ ಮಹೋತ್ಸವದಲ್ಲಿ ಭಾಗವಹಿಸಿ, ಅಂಬಾರಿ ಹೊರುವ ಜವಾಬ್ದಾರಿಯನ್ನು ಅತ್ಯಂತ ಶಿಸ್ತು, ಧೈರ್ಯ ಹಾಗೂ ಯಶಸ್ವಿಯಾಗಿ ನಿರ್ವಹಿಸುವ ಮೂಲಕ ಅಭಿಮನ್ಯು ನಾಡಿನ ಜನರ ಪ್ರೀತಿ ಮತ್ತು ಗೌರವಕ್ಕೆ ಪಾತ್ರವಾಗಿದೆ. ಅಭಿಮನ್ಯುವಿನ ದೀರ್ಘಕಾಲದ ಅಮೂಲ್ಯ ಸೇವೆಯನ್ನು ಸ್ಮರಿಸುವ ಉದ್ದೇಶದಿಂದ ಇತ್ತೀಚೆಗೆ ಆಯೋಜಿಸಲಾದ ಅಭಿಮನ್ಯು ಆನೆಯ ನೀಳ್ಕೊಡುಗೆ/ಗೌರವ ಸಮಾರಂಭವು ಅತ್ಯಂತ ಯಶಸ್ವಿಯಾಗಿ ಹಾಗೂ ಅಚ್ಚುಕಟ್ಟಾಗಿ ನೆರವೇರಿತ್ತು. ಹೀಗಿದ್ದರೂ ಮೈಸೂರು ದಸರಾ-2026ರ ಜಂಬೂಸವಾರಿ ಉತ್ಸವದಲ್ಲಿಯೂ ಅಭಿಮನ್ಯುವಿಗೆ ಹೆಮ್ಮೆಯಿಂದ ಗಜಪಡೆಯೊಂದಿಗೆ ನಿಶಾನೆ ಆನೆಯಾಗಿ ಅವಕಾಶ ನೀಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸಚಿವರು ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಸೂಚಿಸಿದ್ದಾರೆ.
ಇದನ್ನೂ ಓದಿ: ಮೈಸೂರು ದಸರಾ 2026: ಶ್ರೀಕಂಠ ಪಟ್ಟದ ಆನೆ, ಏಕಲವ್ಯ ನಿಶಾನೆ ಆನೆಯಾಗಿ ಆಯ್ಕೆ
ಅಭಿಮಾನಿಗಳ ಒತ್ತಾಯಕ್ಕೆ ಕೊನೆಗೂ ರಾಜ್ಯ ಸರ್ಕಾರ ಮಣಿದಿದ್ದು, ನಿಶಾನೆ ಆನೆಯಾಗಿ ಮೈಸೂರು ದಸರಾ ಮೆರವಣಿಗೆಯಲ್ಲಿ ಭಾಗವಹಿಸಲು ಅಭಿಮನ್ಯವಿಗೆ ಅವಕಾಶ ನೀಡುತ್ತಿರುವುದು ಲಕ್ಷಾಂತರ ಮಂದಿಯ ಸಂತಸಕ್ಕೆ ಕಾರಣವಾಗಿದೆ. ಅಭಿಮಾನಿಗಳ ಬೇಡಿಕೆಯಂತೆ ಅಭಿಮನ್ಯವಿಗೆ ಅದ್ದೂರಿ ಗೌರವಗಳೊಂದಿಗೆ ಬೀಳ್ಕೊಡುಗೆ ಸಿಗುತ್ತಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 12:34 pm, Fri, 4 September 26