ಪಬ್ಬಲ್ಲಿ ಎರಡು ಗುಂಪುಗಳ ನಡುವೆ ಗಲಾಟೆ; ಮಹಡಿಯಿಂದ ಬಿದ್ದು ಯುವಕ ಸಾವು!
ಮೈಸೂರು ನಗರದ ಪರ್ಪಲ್ ಹೆಜ್ ರೆಸ್ಟೋರೆಂಟ್ನಲ್ಲಿ ತಡರಾತ್ರಿ ನಡೆದ ಪಬ್ ಗಲಾಟೆ ಒಬ್ಬ ಸಾಫ್ಟ್ವೇರ್ ಇಂಜಿನಿಯರ್ ಸಾವಿನಲ್ಲಿ ಅಂತ್ಯಗೊಂಡಿದೆ. ಏಪ್ರಿಲ್ 19 ರಂದು ವಿಜಯನಗರದಲ್ಲಿ ನಿಶಾಂತ್ ಎಂಬ 32 ವರ್ಷದ ಯುವಕ ಕ್ಷುಲ್ಲಕ ವಿಚಾರಕ್ಕೆ ನಡೆದ ಜಗಳದಲ್ಲಿ ಎರಡನೇ ಮಹಡಿಯಿಂದ ಬಿದ್ದು ಮೃತಪಟ್ಟಿದ್ದಾನೆ. ಇದು ಉದ್ದೇಶಪೂರ್ವಕ ಕೊಲೆ ಎಂಬ ಆರೋಪ ಕೇಳಿಬಂದಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಮೈಸೂರು, ಏಪ್ರಿಲ್ 19: ಜಿಲ್ಲೆಯ ಪಬ್ ಒಂದರಲ್ಲಿ ನಡೆದ ಗಲಾಟೆ ಒಬ್ಬನ ಸಾವಿನಲ್ಲಿ ಅಂತ್ಯಗೊಂಡಿದೆ. ಮೈಸೂರು (Mysuru) ನಗರದ ವಿಜಯನಗರ ಎರಡನೇ ಹಂತದಲ್ಲಿರುವ ಪರ್ಪಲ್ ಹೆಜ್ ರೆಸ್ಟೋರೆಂಟ್ನಲ್ಲಿ ತಡರಾತ್ರಿ ಈ ಘಟನೆ ಸಂಭವಿಸಿದೆ. ಗಲಾಟೆಯಲ್ಲಿ ಗೋಕುಲಂ ನಿವಾಸಿ 32 ವರ್ಷದ ನಿಶಾಂತ್ ಮೃತಪಟ್ಟಿದ್ದು, ಆತ ಬೆಂಗಳೂರಿನಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಎಂಬುದು ತಿಳಿದುಬಂದಿದೆ.
ಪಾರ್ಟಿ ಮುಗಿಸಿ ಹೊರಬರುವ ವೇಳೆ ಘಟನೆ
ನಿಶಾಂತ್ ತನ್ನ ಸ್ನೇಹಿತರಾದ ಸಂದೀಪ್ ಮತ್ತು ದೀಕ್ಷಿತ್ ಜೊತೆ ಪಬ್ನಲ್ಲಿ ಪಾರ್ಟಿ ಮುಗಿಸಿ ಹೊರಬರುತ್ತಿದ್ದ. ಈ ವೇಳೆ ರಾಕಿ ಎಂಬಾತ ಹಾಗೂ ಅವನ ಸ್ನೇಹಿತರು ಎದುರಾಗಿದ್ದು, ಕ್ಷುಲ್ಲಕ ವಿಚಾರಕ್ಕೆ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ, ತಳ್ಳಾಟ, ನೂಕಾಟ ನಡೆದಿದೆ ಎನ್ನಲಾಗಿದೆ. ಗಲಾಟೆಯ ಮಧ್ಯೆ ನಿಶಾಂತ್ ಪಬ್ನ ಎರಡನೇ ಮಹಡಿಯಿಂದ ಕೆಳಗೆ ಬಿದ್ದಿದ್ದಾನೆ. ಪರಿಣಾಮ ನಿಶಾಂತ್ ಗಂಭೀರವಾಗಿ ಗಾಯಗೊಂಡಿದ್ದಾನೆ. ತಕ್ಷಣವೇ ಆತನನ್ನು ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.
ನಿಶಾಂತ್ನ್ನು ಉದ್ದೇಶಪೂರ್ವಕವಾಗಿ ಮಹಡಿಯಿಂದ ತಳ್ಳಿಹಾಕಿ ಕೊಲೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ಸಂಬಂಧ ವಿಜಯನಗರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



