ಚಾಮರಾಜ ಕ್ಷೇತ್ರಕ್ಕಾಗಿ ಜಟಾಪಟಿ: ಪ್ರತಾಪ್ ಸಿಂಹ–ನಾಗೇಂದ್ರ ನಡುವೆ ಮುಸುಕಿನ ಗುದ್ದಾಟ?

ಟಿ. ನರಸೀಪುರ ಪ್ರತಿಭಟನೆ ವೇಳೆ ಮಾಜಿ ಸಂಸದ ಪ್ರತಾಪ್ ಸಿಂಹ ಹಾಗೂ ಮೈಸೂರು ಬಿಜೆಪಿ ನಗರಾಧ್ಯಕ್ಷ ಎಲ್. ನಾಗೇಂದ್ರ ನಡುವೆ ಮಾತಿನ ಚಕಮಕಿ ನಡೆದಿರೋದೀಗ ರಾಜಕೀಯ ವಿಶ್ಲೇಷಣೆಗಳಿಗೆ ನಾಂದಿ ಹಾಡಿದೆ. ಈ ಘಟನೆ ಬೆನ್ನಲ್ಲೇ ಮೈಸೂರು ನಗರ ಬಿಜೆಪಿಯೊಳಗಿನ ಹಳೆಯ ಅಸಮಾಧಾನ ಮತ್ತೆ ಮುನ್ನೆಲೆಗೆ ಬಂದಿರುವ ನಡುವೆ, ಘಟನೆ ಬಿಜೆಪಿಗರಿಗೆ ಮುಜುಗರವನ್ನೂ ತಂದಿದೆ.

ಚಾಮರಾಜ ಕ್ಷೇತ್ರಕ್ಕಾಗಿ ಜಟಾಪಟಿ: ಪ್ರತಾಪ್ ಸಿಂಹ–ನಾಗೇಂದ್ರ ನಡುವೆ ಮುಸುಕಿನ ಗುದ್ದಾಟ?
ಪ್ರತಾಪ್ ಸಿಂಹ–ನಾಗೇಂದ್ರ ನಡುವೆ ಮುಸುಕಿನ ಗುದ್ದಾಟ?
Image Credit source: Tv9 Kannada
Edited By:

Updated on: Sep 14, 2026 | 8:27 PM

ಮೈಸೂರು, ಸೆಪ್ಟೆಂಬರ್​​ 14: ಟಿ. ನರಸೀಪುರ ಇನ್ಸ್‌ಪೆಕ್ಟರ್ ಧನಂಜಯ ವಿರುದ್ಧ ಬಿಜೆಪಿ ನಡೆಸಿದ ಪ್ರತಿಭಟನೆ ಇದೀಗ ಪೊಲೀಸರ ವಿರುದ್ಧದ ಹೋರಾಟಕ್ಕಿಂತಲೂ ಮೈಸೂರು ನಗರ ಬಿಜೆಪಿಯೊಳಗಿನ ಅಸಮಾಧಾನಕ್ಕೆ ವೇದಿಕೆಯಾದಂತಾಗಿದೆ. ಪ್ರತಿಭಟನಾ ಮೆರವಣಿಗೆಯ ಸಂದರ್ಭದಲ್ಲಿ ನಡೆದ ಒಂದು ಘಟನೆ ಇದೀಗ ಬಿಜೆಪಿಯೊಳಗಿನ ರಾಜಕೀಯ ಲೆಕ್ಕಾಚಾರಕ್ಕೆ ಮತ್ತಷ್ಟು ಪುಷ್ಟಿ ನೀಡಿದ್ದು, ಮಾಜಿ ಸಂಸದ ಪ್ರತಾಪ್​​ ಸಿಂಹ ಮತ್ತು ಮಾಜಿ ಶಾಸಕ ನಾಗೇಂದ್ರ ನಡುವಿನ ಅಸಮಾಧಾನ ಕುರಿತ ಸುದ್ದಿಗೆ ಸಾಕ್ಷಿ ನೀಡಿದಂತಾಗಿದೆ.

ಪ್ರತಿಭಟನೆ ವೇಳೆ ನೂರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗಿಯಾಗಿದ್ದರು ಸಹಜವಾಗಿ ನೂಕಾಟ ತಳ್ಳಾಟ ಹೆಚ್ಚಾಗಿತ್ತು. ಈ ವೇಳೆ ಮಾಜಿ‌ ಶಾಸಕ ಹಾಗೂ ಬಿಜೆಪಿ ನಗರಾಧ್ಯಕ್ಷ ನಾಗೇಂದ್ರ ಅವರನ್ನು ಹಿಂದೆಯಿಂದ ನೂಕಲಾಯ್ತು. ನಾಗೇಂದ್ರ ತಿರುಗಿ ನೋಡಿದಾಗ ಹಿಂದೆ ಮಾಜಿ ಸಂಸದ ಪ್ರತಾಪಸಿಂಹ ನಿಂತಿದ್ದರು. ಪ್ರತಾಪಸಿಂಹ ಅವರೇ ತಳ್ಳಿರಬಹುದು‌ ಅಂತಾ ಭಾವಿಸಿದ ನಾಗೇಂದ್ರ ಸಿಟ್ಟಾದ ಕಾರಣ ಮಾತಿನ ಚಕಮಕಿ‌ ನಡೆದಿತ್ತು. ಒಂದು ಹಂತದಲ್ಲಿ ಕೈ ಕೈ ಮಿಲಾಯಿಸುವ ಹಂತಕ್ಕೂ ಪರಿಸ್ಥಿತಿ ತಲುಪಿತ್ತು. ಕೊನೆಗೆ ಘಟನೆಯಿಂದ ಸಿಡಿಮಿಡಿಗೊಂಡ ನಾಗೇಂದ್ರ, ಪ್ರತಿಭಟನೆಯಲ್ಲಿ ಮುಂದುವರಿಯದೆ ಮೈಸೂರಿಗೆ ವಾಪಸ್ಸಾಗಿದ್ದರು.

ಇದನ್ನೂ ಓದಿ: ಪೊಲೀಸ್​​ ಬಸ್​​ನಲ್ಲಿ ಕೂತ ಸಂಸದ ಯದುವೀರ್​​ ಫೋಟೋ ವೈರಲ್: ಮರುಗಿದ ನೆಟ್ಟಿಗರು

ಇಬ್ಬರ ನಡುವೆ ಅಸಮಾಧಾನ ಯಾಕೆ?

ಈ ಘಟನೆ ಬೆನ್ನಲ್ಲೇ ಮೈಸೂರು ನಗರ ಬಿಜೆಪಿಯೊಳಗಿನ ಹಳೆಯ ಅಸಮಾಧಾನ ಮತ್ತೆ ಮುನ್ನೆಲೆಗೆ ಬಂದಿದೆ. ಒಂದು ಕಡೆ ಪಕ್ಷದ ನಗರಾಧ್ಯಕ್ಷ ಎಲ್. ನಾಗೇಂದ್ರ, ಮತ್ತೊಂದೆಡೆ ಮಾಜಿ ಸಂಸದ ಪ್ರತಾಪ್ ಸಿಂಹರ ರಾಜಕೀಯ ಚಟುವಟಿಕೆಗಳು ಮತ್ತು ಬೆಂಬಲಿಗರ ನಡುವಿನ ಅಂತರದ ಬಗ್ಗೆ ಪಕ್ಷದ ವಲಯದಲ್ಲಿ ಹಲವು ದಿನಗಳಿಂದ ಚರ್ಚೆ ನಡೆಯುತ್ತಿದೆ. ಈಗಾಗಲೇ ಮಾಜಿ ಸಂಸದ ಪ್ರತಾಪ್ ಸಿಂಹ ಚಾಮರಾಜ ಕ್ಷೇತ್ರದಿಂದ ರಾಜಕೀಯವಾಗಿ ಸಕ್ರಿಯರಾಗಿದ್ದಾರೆ.‌ ಎಲ್ಲಾ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಚಾಮರಾಜ ಕ್ಷೇತ್ರದ ಮಾಜಿ ಶಾಸಕ ಹಾಗೂ ಹಾಲಿ ಬಿಜೆಪಿ ನಗರಾಧ್ಯಕ್ಷ ಎಲ್. ನಾಗೇಂದ್ರ ಅವರ ರಾಜಕೀಯ ನೆಲೆ ವಿಚಾರವಾಗಿಯೂ ಈ ಬೆಳವಣಿಗೆ ಮಹತ್ವ ಪಡೆದುಕೊಂಡಿದೆ. ಹೀಗಾಗಿ ಚಾಮರಾಜ ಕ್ಷೇತ್ರದ ಭವಿಷ್ಯದ ರಾಜಕೀಯ ಸಮೀಕರಣಗಳೇ ಇಬ್ಬರು ನಾಯಕರ ನಡುವಿನ ಅಸಮಾಧಾನಕ್ಕೆ ಪ್ರಮುಖ ಕಾರಣ ಎನ್ನಲಾಗ್ತಿದೆ.

ಸಭೆ, ಸಮಾರಂಭ, ಪ್ರತಿಭಟನೆಯಲ್ಲೂ ಭಿನ್ನಾಭಿಪ್ರಾಯ!

ಈ ಹಿಂದೆ ಪಕ್ಷದ ಸಭೆಗಳು, ಸಮಾರಂಭಗಳು ಹಾಗೂ ವಿವಿಧ ಪ್ರತಿಭಟನೆಗಳ ಸಂದರ್ಭದಲ್ಲಿ ಪ್ರತಾಪ್ ಸಿಂಹ ಮತ್ತು ನಾಗೇಂದ್ರ ಹಾಗೂ ಅವರ ಬೆಂಬಲಿಗರ ನಡುವೆ ಹಲವು ಬಾರಿ ಮುಸುಕಿನ ಗುದ್ದಾಟ ನಡೆದಿದೆ. ಬಹಿರಂಗವಾಗಿ ಪಕ್ಷದ ಶಿಸ್ತಿನ ಚೌಕಟ್ಟಿನಲ್ಲೇ ಕಾಣಿಸಿಕೊಂಡು, ಒಳಗೊಳಗೆ ಇಬ್ಬರು ನಾಯಕರು ಹಾಗೂ ಬೆಂಬಲಿಗರ ನಡುವೆ ರಾಜಕೀಯ ಪೈಪೋಟಿ ಇತ್ತು. ಇದೀಗ ಇನ್ಸ್‌ಪೆಕ್ಟರ್ ಧನಂಜಯ ವಿರುದ್ಧದ ಪ್ರತಿಭಟನೆಯ ಬೆಳವಣಿಗೆಗಳು ಮೈಸೂರು ಬಿಜೆಪಿಯೊಳಗಿನ ಭಿನ್ನಮತ ಇವರಿಬ್ಬರ‌ ಪೈಪೋಟಿಗೆ ಹೊಸ ಆಯಾಮ ನೀಡಿದೆ.

ಪೊಲೀಸ್ ವಿರುದ್ಧದ ಹೋರಾಟಕ್ಕೆ ಒಳರಾಜಕೀಯದ ಬಿಸಿ

ಇನ್ನು ಇನ್ಸ್‌ಪೆಕ್ಟರ್ ಧನಂಜಯ ವಿರುದ್ಧ ಪ್ರತಿಭಟನೆ ನಡೆಸಿ ಪೊಲೀಸರ ವಿರುದ್ಧ ಬಿಜೆಪಿ ಒಗ್ಗಟ್ಟಿನ ಹೋರಾಟ ನಡೆಸಬೇಕಿದ್ದ ಸಂದರ್ಭದಲ್ಲಿ, ಪಕ್ಷದೊಳಗಿನ ನಾಯಕತ್ವ ಮತ್ತು ಕ್ಷೇತ್ರದ ರಾಜಕೀಯ ಲೆಕ್ಕಾಚಾರವೇ ಚರ್ಚೆಯ ವಿಷಯವಾಗಿರುವುದು ಬಿಜೆಪಿಗೆ ಮುಜುಗರದ ಬೆಳವಣಿಗೆಯಾಗಿದೆ. ಚಾಮರಾಜ ಕ್ಷೇತ್ರದಲ್ಲಿ ಮುಂದಿನ ದಿನಗಳಲ್ಲಿ ರಾಜಕೀಯ ಸಮೀಕರಣಗಳು ಹೇಗೆ ಬದಲಾಗಲಿವೆ? ನಾಗೇಂದ್ರ–ಪ್ರತಾಪ್ ಸಿಂಹ ನಡುವೆ ಇರುವ ಅಸಮಾಧಾನ ಮುಂದಿನ ದಿನಗಳಲ್ಲಿ ಬಹಿರಂಗ ಸಂಘರ್ಷಕ್ಕೆ ತಿರುಗುತ್ತದೆಯಾ? ಎಂಬ ಪ್ರಶ್ನೆಗಳು ಇದೀಗ ಮೈಸೂರು ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿವೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Loading...
Unable to load recommendations.
Follow Us