ಡಿಕೆ ಶಿವಕುಮಾರ್ ಹೊಸ ದಾಳ: ಸಿಎಂ ಸಿದ್ದರಾಮಯ್ಯ ಬಣಕ್ಕೆ ಸಂದೇಶ ರವಾನಿಸಿದ್ರಾ?
ಕರ್ನಾಟಕ ರಾಜ್ಯ ಕಾಂಗ್ರೆಸ್ನಲ್ಲಿ ಪಟ್ಟದ ಪಗಡೆಯಾಟದ ನಡುವೆ ಸಿಡಿಯಿತಾ ಮತ್ತೊಂದು ದಾಳ? ಸಿಎಂ ಕುರ್ಚಿ, ಕೆಪಿಸಿಸಿ ಅಧ್ಯಕ್ಷಗಾದಿ ಸಮರದ ನಡುವೆ ಮತ್ತೊಂದು ಬೆಳವಣಿಗೆಗಳ ಬಿರುಗಾಳಿ ಎದ್ದಿತಾ? ಹೀಗೆ ಹತ್ತು ಹಲವು ಪ್ರಶ್ನೆ ಸದ್ಯ ಕಾಂಗ್ರೆಸ್ ಮನೆಯ ಸುತ್ತಲೂ ಗಿರಕಿ ಹೊಡೆಯುತ್ತಿವೆ. ಇಷ್ಟು ದಿನ ವಾಗ್ಯುದ್ಧಗಳಿಂದ ರಣರಣ ಅಂತಿದ್ದ ಇದೇ ಕೈ ಮನೆಯಲ್ಲಿ, ಇಂದು ಮತ್ತೊಂದು ಸದ್ದು ಶುರುವಾಗಿದೆ. ಇದಕ್ಕೆ ಕಾರಣವೇ ಡಿಸಿಎಂ ಡಿಕೆ ಶಿವಕುಮಾರ್ ಬಿಟ್ಟಂತಹ ಮಾತಿನ ಬಾಣಗಳು.

ಬೆಂಗಳೂರು, (ಫೆಬ್ರವರಿ 21): ಪಟ್ಟದ ಫೈಟ್ ನಡುವೆ ಡಿಸಿಎಂ ಡಿಕೆ ಶಿವಕುಮಾರ್, ಅಗ್ರೆಸ್ಸೀವ್ ಆಗಿದ್ದಕ್ಕೆ ಹೆಚ್ಚಾಗಿ ಮಾರ್ಮಿಕವಾಗಿ ರಿಯಾಕ್ಷನ್ ಕೊಟ್ಟಿದ್ದಾರೆ.. ಎಲ್ಲವನ್ನೂ ಕೂಲ್ ಆಗಿ ಹ್ಯಾಂಡಲ್ ಮಾಡ್ತಿದ್ದಾರೆ.. ಇಂಥಾ ಬೆಳವಣಿಗೆ ನಡುವೆ ನಿನ್ನೆ ಸರ್ಕಾರಿ ನೌಕರರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಡಿಕೆ, ನಾವು ನಮ್ಮ ಪ್ರಣಾಳಿಕೆಯಲ್ಲಿ ತಿಳಿಸಿದಂತೆ ಒಪಿಎಸ್ ಜಾರಿ ಮಾಡುತ್ತೇವೆ ಎಂದು ಹೇಳಿದ್ದಾರೆ. ಇದು ಇಷ್ಟಕ್ಕೆ ಮುಗಿದಿದ್ರೆ ಇಂದು ಮತ್ತೊಂದು ವಿಷಯ ಚರ್ಚೆಗೆ ಬರುತ್ತಿರಲಿಲ್ಲ. ಆದ್ರೆ ಡಿಸಿಎಂ ಮಾತಿಗೆ ಕೇಕೆ ಹಾಕಿದ ಸರ್ಕಾರಿ ನೌಕರರು ಡಿಕೆ ಡಿಕೆ ಅಂತ ಕೂಗಿದ್ದೇ ತಡ, ಬಂಡೆ ಬಾಯಲ್ಲಿ ಮತ್ತೆ ಮೊಳಗಿದ್ದು ಮತ್ತದೇ ಮಾರ್ಮಿಕ ಮಾತುಗಳು.
ಇಂದು (ಫೆಬ್ರವರಿ 21) ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ರಾಜ್ಯ ಸರ್ಕಾರಿ ನೌಕರರ ಕಾರ್ಯಕ್ರಮದಲ್ಲಿ ನೌಕರರನ್ನ ಉದ್ದೇಶಿಸಿ ಮಾತನಾಡಿದ ಡಿಕೆ ಶಿವಕುಮಾರ್, ನೋಡ್ರಪ್ಪಾ ಮುಂದೆ ನಾನು ಚುನಾವಣೆ ನಿಂತಾಗ, ನೀವು ಈ ಡಿಕೆ ಡಿಕೆ ಎನ್ನುವ ಪದ ಉಪಯೋಗಿಸಿ. ನಾನು ಬಿಟ್ಟು ಹೋಗಲ್ಲ. ಇನ್ನು 8-10 ವರ್ಷ ಗಟ್ಟಿಯಾಗಿರುತ್ತೇನೆ ಎಂದು ಹೇಳಿದ್ದಾರೆ. ಇದು ಕರ್ನಾಟಕ ಕಾಂಗ್ರೆಸ್ನಲ್ಲಿ ತರಹೇವಾರಿ ಚರ್ಚೆ ಹುಟ್ಟು ಹಾಕಿದೆ. ಡಿಸಿಎಂ ಡಿಕೆ ಶಿವಕುಮಾರ್ ಹೀಗೆ ಹೇಳುತ್ತಿದ್ರೆ, ಈ ಹಿಂದೆ ಮಾತನಾಡಿದ್ದ ಸಿದ್ದರಾಮಯ್ಯ ಆಪ್ತ ಸಚಿವರ ಮಾತುಗಳು ಮತ್ತೊಮ್ಮೆ ರಾಜ್ಯ ರಾಜಕೀಯದಲ್ಲಿ ಮೆಲುಕು ಹಾಕುತ್ತಿವೆ.
ಇದನ್ನೂ ಓದಿ: ನೋಟಿಸ್ ಬಳಿಕ ಮೊದಲ ಬಾರಿಗೆ ಸಭೆ ಸೇರಿದ ಬಿಜೆಪಿ ಭಿನ್ನರ ಬಣ: ವಿಜಯೇಂದ್ರ ನೋಟಿಸ್ ಕೊಡಿಸಿದ್ದಾರೆಂದು ಯತ್ನಾಳ್ ಕೆಂಡಾಮಂಡಲ
ಒಂದು ಕಡೆ ಕೆಪಿಸಿಸಿ ಅಧ್ಯಕ್ಷ ಸ್ಥಾನದಿಂದ ಶಿವಕುಮಾರ್ ಅವರನ್ನು ಕೆಳಗೆ ಇಳಿಸಬೇಕು ಎಂಬ ಉದ್ದೇಶದಲ್ಲಿ ದಲಿತ ಸಚಿವರು ಒಂದೊಂದೆ ಹೇಳಿಕೆ ನೀಡುತ್ತಿದ್ದಾರೆ. ಇನ್ನೊಂದು ಕಡೆ ಎರಡೂವರೆ ವರ್ಷದ ಬಳಿಕ ಮುಖ್ಯಮಂತ್ರಿ ಬದಲಾಗುತ್ತಾರೆ ಎಂಬ ಸುದ್ದಿಗಳು ಹರಿದಾಡುತ್ತಿದೆ. ಈ ಸಮಯಲ್ಲೇ ತಮ್ಮ ನಾಯಕತ್ವದಲ್ಲಿ ಮುಂದಿನ ಚುನಾವಣೆ ನಡೆಯಲಿದೆ ಎನ್ನುವ ಮೂಲಕ ಡಿಕೆಶಿ ಸಿಎಂ ಆಪ್ತರಿಗೆ ನೇರ ಸಂದೇಶ ರವಾನಿಸಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.
ಕಳೆದ ಗುರುವಾರವಷ್ಟೇ ಪಟ್ಟದ ಗುದ್ದಾಟಕ್ಕೆ ಬಗ್ಗೆ ಮಾತನಾಡಿದ್ದ ಸಚಿವ ಎಂ.ಬಿ ಪಾಟೀಲ್,, ಸಿಎಂ ಸಿದ್ದರಾಮಯ್ಯ ಪೂರ್ಣಾವಧಿ ಪೂರೈಸುತ್ತಾರೆ.. ಅವರ ನೇತೃತ್ವದಲ್ಲಿಯೇ ಚುನಾವಣೆ ಆಗುತ್ತೆ ಅಂತ ಭವಿಷ್ಯ ನುಡಿದಿದ್ದರು. ಎಂಬಿ ಪಾಟೀಲ್ ಭವಿಷ್ಯದ ನಡುವೆಯೇ ಡಿಕೆ ಕೂಡ ನಾಯಕತ್ವದ ದಾಳ ಉರುಳಿಸಿದ್ದು ಒಂದು ತಂತ್ರವೇ ಎನ್ನುವುದು ಮೂಲಗಳ ಮಾತು.
ಡಿಕೆ ಮಾತಿಗೆ ಉತ್ತರಿಸಿದ ಗೃಹ ಸಚಿವ ಪರಮೇಶ್ವರ್, ಡಿಕೆ ಮಾತನಾಡಿದ್ದರಲ್ಲಿ ತಪ್ಪೇನಿದೆ.. ನಮಗೆ ಎಚ್ಚರಿಕೆ ಕೊಡೋ ಪ್ರಶ್ನೆಯೇ ಇಲ್ಲ ಎಂದಿದ್ದರೆ, ಇತ್ತ ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ.ಸಿ ಚಂದ್ರಶೇಖರ್ ಮಾತನಾಡಿ, ಡಿಕೆ ಕೆಪಿಸಿಸಿ ಅಧ್ಯಕ್ಷರು ಆಗಿದ್ದಾರೆ.. ಅವರು ಹೇಳಿದರಲ್ಲಿ ತಪ್ಪೇನು ಇಲ್ಲ ಎಂದು ಹೇಳಿದರು.
ಕರ್ನಾಟಕ ರಾಜ್ಯ ಕಾಂಗ್ರೆಸ್ನಲ್ಲಿ ಈ ಪಟ್ಟದ ಆಟ ಎನ್ನುವುದು ಬೂದಿ ಮುಚ್ಚಿದ ಕೆಂಡ ಆಗಿದೆ. ಒಂದಿಷ್ಟು ನಾಯಕರು ಮೌನ ತಂತ್ರ ಅನುಸರಿಸ್ತಿದ್ರೆ, ಡಿಕೆ ಮಾರ್ಮಿಕ ಮಾತುಗಳಿಂದಲೇ ಬಿಗ್ ಟ್ವಿಸ್ಟ್ ಕೊಡುತ್ತಿದ್ದಾರೆ.