ಅವರಿಗೆ ಹೇಳಿ ಪಿಚ್ಚರ್ ಅಭಿ ಬಾಕಿ ಹೈ, ಇದು ಕೇವಲ ಟ್ರೈಲರ್ ಅಷ್ಟೇ: ಹರಿಪ್ರಸಾದ್ ಎಚ್ಚರಿಕೆ ಕೊಟ್ಟಿದ್ಯಾರಿಗೆ?
ಡಿಕೆ ಶಿವಕುಮಾರ್ ಅವರ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ಬಿಕೆ ಹರಿಪ್ರಸಾದ್ ಅವರು ತುಂಬಿದ್ದು, ಇಂದು (ಜೂನ್ 04) ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿದರು. ಬಳಿಕ ಮಾತನಾಡಿದ ಅವರು ಪಿಚ್ಚರ್ ಅಭಿ ಬಾಕಿ ಹೈ, ಇದು ಟ್ರೈಲರ್ ಅಷ್ಟೇ ಎಂದು ಎಚ್ಚರಿಕೆ ನೀಡಿದ್ದಾರೆ. ಹಾಗಾದ್ರೆ, ಹರಿಪ್ರಸಾದ್ ಎಚ್ಚರಿಕೆ ಕೊಟ್ಟಿದ್ಯಾರಿಗೆ? ಯಾಕಾಗಿ ಈ ಮಾತನ್ನ ಹೇಳಿದ್ದಾರೆ ಎನ್ನುವ ವಿವರ ಇಲ್ಲಿದೆ.

ಬೆಂಗಳೂರು, (ಜೂನ್ 04): ಹಳೇ ಸಿನಿಮಾಗೆ ಹೊಸ ಪೋಸ್ಟರ್ ಹಾಕಿದ್ದಾರೆ ಎಂಬ ವಿಪಕ್ಷ ನಾಯಕ ಆರ್ ಅಶೋಕ್ (R Ashoka) ಹೇಳಿಕೆಗೆ ಕೆಪಿಸಿಸಿಯ ನೂತನ ಅಧ್ಯಕ್ಷ ಬಿಕೆ ಹರಿಪ್ರಸಾದ್ (BK Hariprasad) ಖಡಕ್ ಎಚ್ಚರಿಕೆ ಮೂಲಕ ನೀಡಿದ್ದಾರೆ. ಬೆಂಗಳೂರಿನಲ್ಲಿಂದು ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯನವರ ಭೇಟಿ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ವಾಟ್ಸಾಪ್ ಯೂನಿವರ್ಸಿಟಿಯಲ್ಲಿ ಹರಿದಾಡುವ ಪ್ರತಿಯೊಂದು ಸುದ್ದಿಗೂ ಉತ್ತರ ನೀಡಲು ಸಾಧ್ಯವಿಲ್ಲ. “ಅಶೋಕ್ಗೆ ಹೇಳಿ, ಪಿಕ್ಚರ್ ಅಭಿ ಬಾಕಿ ಹೈ. ಇದು ಕೇವಲ ಟ್ರೇಲರ್ ಮಾತ್ರ” ಎಂದು ಖಡಕ್ ತಿರುಗೇಟು ನೀಡಿದ್ದಾರೆ.
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭೇಟಿ ಬಳಿಕ ಮಾತನಾಡಿದ ಹರಿಪ್ರಸಾದ್, “ವಾಟ್ಸಾಪ್ ಯೂನಿವರ್ಸಿಟಿಯಲ್ಲಿ ಹರಿದಾಡುವ ಪ್ರತಿಯೊಂದು ಸುದ್ದಿಗೂ ಉತ್ತರ ನೀಡಲು ಸಾಧ್ಯವಿಲ್ಲ” ಎಂದು ಪರೋಕ್ಷವಾಗಿ ವ್ಯಂಗ್ಯವಡಿದರು. ಅಲ್ಲದೇ ವಿಪಕ್ಷ ನಾಯಕ ಆರ್. ಅಶೋಕ್ ಅವರು “ಹಳೇ ಸಿನಿಮಾಗೆ ಹೊಸ ಪೋಸ್ಟರ್ ಹಾಕಿದ್ದಾರೆ” ಎಂಬ ಹೇಳಿಕೆ ನೀಡಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಹರಿಪ್ರಸಾದ್, “ಅವರಿಗೆ ಹೇಳಿ, ಪಿಕ್ಚರ್ ಅಭಿ ಬಾಕಿ ಹೈ. ಇದು ಕೇವಲ ಟ್ರೇಲರ್ ಮಾತ್ರ” ಎಂದು ಗುಡುಗಿದರು.
ಇದನ್ನೂ ಓದಿ: “ಅಧಿಕಾರ ಬೇಕಾದವರು ಡಿಕೆಶಿ ಜತೆ ಹೋಗಿ, ಪಕ್ಷ ಕಟ್ಟುವವರು ನನ್ನೊಂದಿಗೆ ಬನ್ನಿ”: ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಖಡಕ್ ಮಾತು
ಅಷ್ಟಕ್ಕೂ ಅಶೋಕ್ ಹೇಳಿದ್ದೇನು?
ಡಿಕೆ ಶಿವಕುಮಾರ್ ಸರ್ಕಾರದ ಬಗ್ಗೆ ಮಾತನಾಡಿರುವ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಹೊಸ ಸಚಿವ ಸಂಪುಟದಲ್ಲಿ ಹಳೆಯ ಮುಖಗಳೇ ಇವೆ. ಜನರು ಹೊಸ ಶಕ್ತಿ ಮತ್ತು ಹೊಸ ದಿಕ್ಕನ್ನು ನಿರೀಕ್ಷಿಸಿದ್ದರು. ಆದರೆ ಇದು ಒಂದೇ ರೀತಿಯ ನಾಯಕರ ಗುಂಪಾಗಿದೆ. ಹೊಸ ಮುಖಗಳಿಲ್ಲ. ಇದು ಹೊಸ ವೇಷದಲ್ಲಿರುವ ಹಳೆಯ ಸರ್ಕಾರ ವ್ಯಂಗ್ಯವಾಡಿದ್ದರು.
ಕುತೂಹಲ ಕೆರಳಿಸಿದ ಡಿಕೆ-ಬಿಕೆ ಭೇಟಿ
ಬಿಕೆ ಹರಿಪ್ರಸಾದ್ ಅವರು ಅಧ್ಯಕ್ಷರಾಗಿ ನೇಮಕವಾದ ಮರು ದಿನವೇ ಕುಮಾರಕೃಪ ರಸ್ತೆಯಲ್ಲಿನ ಸಿಎಂ ಸರ್ಕಾರಿ ನಿವಾಸದಲ್ಲಿ ಡಿಕೆ ಶಿವಕುಮಾರ್ (DK Shivakumar) ಅವರನ್ನ ಭೇಟಿಯಾಗಿ ಸಭೆ ನಡೆಸಿದ್ದಾರೆ. ʻಅಧಿಕಾರ ಬೇಕಾದವರು ಡಿಕೆಶಿ ಹಿಂದೆ ಹೋಗಿ, ಸಂಘಟನೆ ಮಾಡೋರು ನನ್ನ ಜೊತೆ ಬನ್ನಿʼ ಎಂದು ಬಿ.ಕೆ ಹರಿಪ್ರಸಾದ್ ಅವರು ಹೇಳಿದ ಕೆಲ ಗಂಟೆಗಳಲ್ಲೇ ಉಭಯ ನಾಯಕರ ಭೇಟಿ ಕುತೂಹಲ ಕೆರಳಿಸಿದೆ.
ಇನ್ನು ಡಿಕೆಶಿ ಭೇಟಿ ಬಳಿಕ ಪ್ರತಿಕ್ರಿಯಿಸಿದ ಹರಿಪ್ರಸಾದ್, ಕೆಪಿಸಿಸಿ ಅಧ್ಯಕ್ಷರು, ಸಿಎಂ ಸೌಜನ್ಯದ ಭೇಟಿಯಾಗುವುದು ಸಹಜ. ಅದೇ ರೀತಿಯ ಸೌಜನ್ಯ ಭೇಟಿಯಷ್ಟೇ, ಯಾವುದೇ ಅಜೆಂಡಾ ಇಲ್ಲ. ಖಾತೆ ಯಾರಿಗೆ ಹಂಚಿಕೆ ಮಾಡಬೇಕು ಅನ್ನೋದು ಸಿಎಂ ನೋಡುತ್ತಾರೆ. ಖಾತೆ ಹಂಚಿಕೆ ಪಕ್ಷದ ಚೌಕಟ್ಟಿಗೆ ಬರೋದಿಲ್ಲ ಎಂದು ಹೇಳಿದರು.
ಹರಿಪ್ರಸಾದ್ ಆಯ್ಕೆ ಬಗ್ಗೆ ರಾಜಣ್ಣ ಹೇಳಿದ್ದಿಷ್ಟು
ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಬಿ.ಕೆ.ಹರಿಪ್ರಸಾದ್ ಆಯ್ಕೆ ಮಾಡಿರುವ ಬಗ್ಗೆ ಕೆಎನ್ ರಾಜಣ್ಣ ಮಾತನಾಡಿದ್ದು, ಈ ಆಯ್ಕೆ ಬಹಳ ಸಂತಸ. ನಾವಿಬ್ಬರು ಯುವ ಕಾಂಗ್ರೆಸ್ನಲ್ಲಿ ಜೊತೆಯಾಗಿ ಕೆಲಸ ಮಾಡಿದ್ದೇವೆ. ಹೋರಾಟಗಾರ ಬಿ.ಕೆ.ಹರಿಪ್ರಸಾದ್ಗೆ ಸಾಕಷ್ಟು ಅನುಭವ ಇದೆ.ಬಿ.ಕೆ.ಹರಿಪ್ರಸಾದ್ ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿದ್ದವರು. ಬೇರೆ ಬೇರೆ ರಾಜ್ಯಗಳ ಉಸ್ತುವಾರಿಯಾಗಿಯೂ ಕೆಲಸ ಮಾಡಿದ್ದಾರೆ. ಹರಿಪ್ರಸಾದ್ ಹರಿಯಾಣ ರಾಜ್ಯ ಕಾಂಗ್ರೆಸ್ ಉಸ್ತುವಾರಿಯಾಗಿದ್ದು, ಕೇಂದ್ರದ ರಾಜಕೀಯ ವಿದ್ಯಮಾನಗಳ ಬಗ್ಗೆ ಅರಿವಿದೆ. ಅನುಭವಿ, ಹಿಂದುಳಿದ ವರ್ಗದ ವ್ಯಕ್ತಿಗೆ ಹೈಕಮಾಂಡ್ ಅವಕಾಶ ನೀಡಿದ್ದು, ಪಕ್ಷ ಸಂಘಟನೆ ಮಾಡುತ್ತಾರೆಂಬ ವಿಶ್ವಾಸವಿದೆ ಎಂದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




