ಬರ ಪರಿಹಾರದ ಹಣ ಲೂಟಿ ಹೊಡೆಯಲು ಬಿಡಲ್ಲ: ಕಾವಲು ಕಾಯ್ತೇವೆ ಎಂದ ಆರ್ ಅಶೋಕ್
ಬರ ಪರಿಹಾರಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಟ್ವೀಟ್ ವಿಚಾರವಾಗಿ ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಕೇಂದ್ರದ ಬರ ಪರಿಹಾರ ಹಣ ಲೂಟಿ ಹೊಡೆಯಲು ನಾವು ಬಿಡಲ್ಲ. ಅನುದಾನ ತಾರತಮ್ಯ ಮಾಡಿದ್ದರೆ ನಾವೇ ಬಂದು ಕ್ಷಮಾಪಣೆ ಕೇಳುತ್ತೇವೆ. ಇಲ್ಲ ಅಂದರೆ ಅವರು ಕ್ಷಮಾಪಣೆ ಕೇಳಲಿ ಎಂದು ಕಿಡಿಕಾರಿದ್ದಾರೆ.

ಬೆಂಗಳೂರು, ಏಪ್ರಿಲ್ 27: ಬಿಜೆಪಿ ಸರ್ಕಾರಕ್ಕೆ ಎಚ್ಚರಿಕೆ ನೀಡಿ ಕರ್ನಾಟಕಕ್ಕೆ ಸ್ವಲ್ಪವಾದರೂ ಬರ ಪರಿಹಾರ (Karnataka Drought Relief Fund) ಕೊಡಿಸಿದ ಸುಪ್ರೀಂ ಕೋರ್ಟ್ಗೆ ಸಿಎಂ ಸಿದ್ದರಾಮಯ್ಯ ಧನ್ಯವಾದ ತಿಳಿಸಿದ್ದಾರೆ. ಸದ್ಯ ಈ ವಿಚಾರವಾಗಿ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ವಿರೋಧ ಪಕ್ಷದ ನಾಯಕ ಆರ್. ಅಶೋಕ್ (R. Ashoka), ಕೇಂದ್ರದ ಬರ ಪರಿಹಾರ ಲೂಟಿ ಹೊಡೆಯಲು ನಾವು ಬಿಡಲ್ಲ. ಬರ ಪರಿಹಾರ ಬಂದಿದೆ ಈ ಹಣದ ಕಾವಲು ಕಾಯುತ್ತೇವೆ ನಾವು ಎಂದು ಹೇಳಿದ್ದಾರೆ.
ಲೂಟಿಕೋರರ ಪಕ್ಷ ಕಾಂಗ್ರೆಸ್ 50 ವರ್ಷ ಆಡಳಿತ ಮಾಡಿದೆ. ಯಾವಾಗ ಯಾವಾಗ ಕರ್ನಾಟಕ ಹಣ ಕೇಳಿದೆ? ಎಷ್ಟು ಬಿಡುಗಡೆ ಮಾಡಿದೆ? ಹೇಳಲಿ. ಅನುದಾನ ತಾರತಮ್ಯ ಮಾಡಿದ್ದರೆ ನಾವೇ ಬಂದು ಕ್ಷಮಾಪಣೆ ಕೇಳುತ್ತೇವೆ. ಇಲ್ಲ ಅಂದರೆ ಅವರು ಕ್ಷಮಾಪಣೆ ಕೇಳಲಿ ಎಂದು ಕಿಡಿಕಾರಿದ್ದಾರೆ.
ಯಾರು ಜಾಸ್ತಿ ಬಿಡುಗಡೆ ಮಾಡಿದಾರೆ ಜನ ತೀರ್ಮಾನ ಮಾಡಲಿ. ಯಾವುದೇ ಕಾರಣಕ್ಕೂ ಹಣ, ಚೆಕ್ ಮೂಲಕ ಬರದ ಹಣ ಬಿಡುಗಡೆ ಮಾಡಬಾರದು. ಡಿಬಿಟಿ ಮೂಲಕವೇ ವರ್ಗಾಯಿಸಬೇಕು. ಜಾಸ್ತಿ ಬರ ಪರಿಹಾರ ಬಂದರೆ ಜಾಸ್ತಿ ಲೂಟಿ ಹೊಡೆಯಬಹುದು ಅಂತ ಕೇಳುತ್ತಿದ್ದಾರೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಕಾಂಗ್ರೆಸ್ ಏನಾದರೂ ಹೇಳಿಕೊಳ್ಳಲಿ, ರಾಜ್ಯದ ಎಲ್ಲ ಸ್ಥಾನಗಳಲ್ಲಿ ಗೆಲ್ಲೋದು ನಾವೇ: ಬಿಎಸ್ ಯಡಿಯೂರಪ್ಪ
ಇದರಲ್ಲಿ ಪ್ರತಿ ಪೈಸೆಯೂ ರೈತರಿಗೆ ಹೋಗಬೇಕು. ಈ ಹಿಂದೆ ರಾಜ್ಯ ಸರ್ಕಾರ ಲೂಟಿ ಹೊಡೆದು ಈಗಾಗಲೇ ಮಧ್ಯಪ್ರದೇಶ, ರಾಜಸ್ಥಾನಕ್ಕೆ ಹಣ ಕಳಿಸಿದೆ. ಈಗ ಬರ ಪರಿಹಾರ ಲೂಟಿ ಮಾಡಲು ನಾವು ಬಿಡಲ್ಲ ಎಂದು ವಾಗ್ದಾಳಿ ಮಾಡಿದ್ದಾರೆ.
ಇದನ್ನೂ ಓದಿ: ಬರ ಪರಿಹಾರ ಹಣ ಸಾಲದು, ಹೋರಾಟ ಮುಂದುವರಿಯಲಿದೆ: ಸಿಎಂ, ಡಿಸಿಎಂ ಮತ್ತು ಕೃಷಿ ಸಚಿವ
ಈ ಹಣದ ಜತೆ ರಾಜ್ಯ ಸರ್ಕಾರ ಎಷ್ಟು ಸೇರಿಸಿ ಪರಿಹಾರ ಕೊಡುತ್ತೆ ನೋಡೋಣ. ಕೇಂದ್ರದ ಪರಿಹಾರ ಕೊಟ್ಟು ನಾವೇ ಕೊಟ್ಟಿದ್ದು ಅಂತ ಹೇಳುವ ಹಾಗಿಲ್ಲ. ಇದರ ಜತೆ ರಾಜ್ಯವೂ ಪರಿಹಾರ ಸೇರಿಸಿ ಕೊಡಬೇಕು ಎಂದು ಆಗ್ರಹಿಸಿದ್ದಾರೆ.
ಧರ್ಮಾಧಾರಿತ ಮೀಸಲಾತಿ ಕೊಡಬಾರದು ಅಂತ ಸಂವಿಧಾನದಲ್ಲೇ ಇದೆ ಎಂದ ಆರ್ ಅಶೋಕ್
ಮುಸ್ಲಿಮರ ಮೀಸಲಾತಿ ಒಬಿಸಿಯಲ್ಲಿ ಸೇರಿಸಲು ಸರ್ಕಾರ ಮುಂದಾಗಿದೆ. ಮುಸ್ಲಿಮರು ಹಿಂದೂಗಳ ಮೇಲೆ ಹಲ್ಲೆ ಮಾಡಿದರೆ ಮುಚ್ಚಿಡುತ್ತಾರೆ. ಪಾಕ್ ಪರ ಘೋಷಣೆ ಕೂಗಿದವರ ರಕ್ಷಣೆ ಮಾಡುತ್ತಾರೆ. ಮುಸ್ಲಿಮರ ಮೀಸಲಾತಿ ಒಬಿಸಿಗೆ ಸೇರಿಸುವುದು ನೀಚ ಕಾರ್ಯ. ಒಬಿಸಿ ಸಮುದಾಯಕ್ಕೆ, ಎಸ್ಸಿ, ಎಸ್ಟಿ ಸಮುದಾಯಗಳಿಗೆ ಅನ್ಯಾಯ ಮಾಡಿ, ಅವರ ಮತ ಕೇಳಲು ಯಾವ ನೈತಿಕತೆ ಇದೆ? ಇವರು ಮುಸ್ಲಿಮರ ಓಲೈಕೆ ರಾಜಕಾರಣ ಮಾಡುತ್ತಿದ್ದಾರೆ. ಧರ್ಮಾಧಾರಿತ ಮೀಸಲಾತಿ ಕೊಡಬಾರದು ಅಂತ ಸಂವಿಧಾನದಲ್ಲೇ ಇದೆ ಎಂದಿದ್ದಾರೆ.
ವರದಿ: ಈರಣ್ಣ ಬಸವ
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.




