ವಯನಾಡಿಗೆ ಕರ್ನಾಟಕ ಸರ್ಕಾರದಿಂದ 10 ಕೋಟಿ ರೂ. ವಿಶೇಷ ಅನುದಾನ: ‘ಕೇರಳ ಸಿಎಂ ಸಿದ್ದರಾಮಯ್ಯ’ ಎಂದು ಅಶೋಕ್ ವ್ಯಂಗ್ಯ

ಕರ್ನಾಟಕ ಕಾಂಗ್ರೆಸ್ ಸರ್ಕಾರವು ಕೇರಳದ ವಯನಾಡು ಲೋಕಸಭಾ ಕ್ಷೇತ್ರಕ್ಕೆ ಭೂಕುಸಿತ ಸಂತ್ರಸ್ತರ ಪುನರ್​ವಸತಿಗಾಗಿ 10 ಕೋಟಿ ರೂಪಾಯಿಗಳ ವಿಶೇಷ ಅನುದಾನ ಘೋಷಿಸಿರುವುದು ಬಿಜೆಪಿಯಿಂದ ತೀವ್ರ ಟೀಕೆಗೆ ಗುರಿಯಾಗಿದೆ. ಈ ಹಿಂದೆ ವಯನಾಡಿನಲ್ಲಿ ಆನೆ ದಾಳಿಯಿಂದ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ಪರಿಹಾರ ಘೋಷಿಸಿದ್ದಂತೆ ಇದೂ ರಾಜಕೀಯ ವಿವಾದಕ್ಕೆ ಕಾರಣವಾಗಿದೆ.

ವಯನಾಡಿಗೆ ಕರ್ನಾಟಕ ಸರ್ಕಾರದಿಂದ 10 ಕೋಟಿ ರೂ. ವಿಶೇಷ ಅನುದಾನ: ‘ಕೇರಳ ಸಿಎಂ ಸಿದ್ದರಾಮಯ್ಯ’ ಎಂದು ಅಶೋಕ್ ವ್ಯಂಗ್ಯ
ಆರ್ ಅಶೋಕ್ ಮತ್ತು ಸಿದ್ದರಾಮಯ್ಯ

Updated on: Aug 21, 2025 | 11:09 AM

ಬೆಂಗಳೂರು, ಆಗಸ್ಟ್ 21: ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ (Priyanka Gandhi) ಪ್ರತಿನಿಧಿಸುವ ಕೇರಳದ ವಯನಾಡು (Wayanad) ಲೋಕಸಭಾ ಕ್ಷೇತ್ರಕ್ಕೆ 10 ಕೋಟಿ ರೂಪಾಯಿ ವಿಶೇಷ ಅನುದಾನ ಘೋಷಣೆ ಮಾಡಿರುವ ಕರ್ನಾಟಕ (Karnataka) ಕಾಂಗ್ರೆಸ್ ಸರ್ಕಾರದ ನಡೆಯನ್ನು ಪ್ರತಿಪಕ್ಷ ಬಿಜೆಪಿ ತೀವ್ರವಾಗಿ ಟೀಕಿಸಿದೆ. ಈ ವಿಚಾರವಾಗಿ ವ್ಯಂಗ್ಯವಾಡಿರುವ ವಿಧಾನಸಭೆ ಪ್ರತಿಪಕ್ಷ ನಾಯಕ ಆರ್ ಅಶೋಕ್, ‘‘ಕೇರಳದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಭಿನಂದನೆಗಳು’’ ಎಂದು ಸಾಮಾಜಿಕ ಮಾಧ್ಯಮ ಎಕ್ಸ್​​​​ನಲ್ಲಿ ಸಂದೇಶ ಪ್ರಕಟಿಸಿದ್ದಾರೆ.

ಕರ್ನಾಟಕ ಸರ್ಕಾರದ 2024-25 ನೇ ಸಾಲಿನ ಪೂರಕ ಅಂದಾಜನ್ನು ಬುಧವಾರ ವಿಧಾನಸಭೆಯಲ್ಲಿ ಮಂಡಿಸಲಾಗಿತ್ತು. ಇದೇ ವೇಳೆ, ಕೇರಳದ ವಯನಾಡು ಜಿಲ್ಲೆಯಲ್ಲಿ ಕಳೆದ ವರ್ಷ ಸಂಭವಿಸಿದ್ದ ಭೂಕುಸಿತದ ಸಂತ್ರಸ್ತರಿಗೆ ಮನೆಗಳನ್ನು ಕಟ್ಟಿಕೊಡುವ ಸಲುವಾಗಿ ಎಎಸ್​​ಡಿಆರ್​​ಎಫ್ ಮೂಲಕ 10 ಕೋಟಿ ರೂಪಾಯಿ ಹಣಕಾಸು ನೆರವು ನೀಡುವ ಬಗ್ಗೆ ಉಲ್ಲೇಖಿಸಲಾಗಿತ್ತು. ಕರ್ನಾಟಕ ಕಾಂಗ್ರೆಸ್ ಸರಕಾರದ ಈ ನಡೆಗೆ ಈಗ ಆಕ್ಷೇಪ ವ್ಯಕ್ತವಾಗಿದೆ.

‘‘ಕೇರಳದ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯನವರಂತಹ ಹೃದಯ ವೈಶಾಲ್ಯ ಇರುವ, ಸಂವೇದನಾಶೀಲ ಮುಖ್ಯಮಂತ್ರಿ ಕರ್ನಾಟಕದಲ್ಲೂ ಇದ್ದಿದ್ದರೆ, ಎಲ್ಲ ಕ್ಷೇತ್ರಗಳಿಗೂ ಭರಪೂರ ಅನುದಾನ ಸಿಕ್ಕುತ್ತಿತ್ತು. ನತದೃಷ್ಟ ಕನ್ನಡಿಗರು ಮಲಯಾಳಿಗಷ್ಟು ಅದೃಷ್ಟವಂತರಲ್ಲ ಬಿಡಿ!’’ ಎಂದು ಎಕ್ಸ್​ ಸಂದೇಶದ ಮೂಲಕ ಅಶೋಕ್ ತಿವಿದಿದ್ದಾರೆ.

ಇದನ್ನೂ ಓದಿ
ಪೂರಕ ಅಂದಾಜು ಮಂಡನೆ: ಸಾಧನಾ ಸಮಾವೇಶಕ್ಕೆ 10 ಕೋಟಿ ರೂ. ಖರ್ಚು
ಕೇರಳ ವ್ಯಕ್ತಿಗೆ ಪರಿಹಾರ: ಬಿಜೆಪಿಯ ಟೀಕಿಗಳಿಗೆ ಸ್ಪಷ್ಟನೆ ಕೊಟ್ಟ ಖರ್ಗೆ
ರಾಹುಲ್ ಗಾಂಧಿ ಸಲಹೆಯಂತೆ ಕರ್ನಾಟಕದ ತೆರಿಗೆದಾರರ ಹಣ ದುರುಪಯೋಗ: ವಿಜಯೇಂದ್ರ
ಆನೆ ದಾಳಿಗೆ ಬಲಿಯಾದ ವಯನಾಡ್ ವ್ಯಕ್ತಿಗೆ ಕರ್ನಾಟಕದ ಪರಿಹಾರ: ಬಿಜೆಪಿ ಕಿಡಿ

ಆರ್ ಅಶೋಕ್ ಎಕ್ಸ್ ಸಂದೇಶ

ಈ ಹಿಂದೆ ವಯನಾಡು ಕ್ಷೇತ್ರವನ್ನು ರಾಹುಲ್ ಗಾಂಧಿ ಪ್ರತಿನಿಧಿಸುತ್ತಿದ್ದರು. ಆ ಸಂದರ್ಭದಲ್ಲಿ ವಯನಾಡಿನಲ್ಲಿ ಆನೆ ದಾಳಿಗೆ ವ್ಯಕ್ತಿಯೊಬ್ಬರು ಬಲಿಯಾಗಿದ್ದರು. ದಾಳಿ ಮಾಡಿದ್ದ ಆನೆ ಕರ್ನಾಟಕದ ಚಾಮರಾಜನಗರ ಕಡೆಯಿಂದ ಹೋಗಿತ್ತು ಎಂಬ ವಿಚಾರ ಮುಂದಿಟ್ಟುಕೊಂಡು ಕರ್ನಾಟಕ ಕಾಂಗ್ರೆಸ್ ಸರ್ಕಾರ 15 ಲಕ್ಷ ರೂ. ಪರಿಹಾರ ಘೋಷಿಸಿತ್ತು. ಆ ನಡೆ ಕೂಡ ತೀವ್ರ ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿತ್ತು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಯನಾಡ್ ಸಂಸದರಾಗಿರುವ ಹಿನ್ನೆಲೆಯಲ್ಲಿ ಅವರನ್ನು ಮೆಚ್ಚಿಸಲು ಕರ್ನಾಟಕದ ಸಿದ್ದರಾಮಯ್ಯ ಸರ್ಕಾರ ತೆರಿಗೆದಾರರ ಹಣ ದುರುಪಯೋಗಪಡಿಸಿಕೊಂಡಿದೆ ಎಂದು ಬಿಜೆಪಿ ಟೀಕಿಸಿತ್ತು. ಪರಿಹಾರದ ವಿಚಾರ ವಿವಾದಕ್ಕೀಡಾದ ನಂತರ, ಸಂತ್ರಸ್ತನ ಕುಟುಂಬದವರು ಹಣ ಪಡೆಯಲು ನಿರಾಕರಿಸಿದ್ದರು.

ಇದನ್ನೂ ಓದಿ: ರಾಹುಲ್ ಗಾಂಧಿ ಸಲಹೆ ಮೇರೆಗೆ ಕರ್ನಾಟಕದ ತೆರಿಗೆದಾರರ ಹಣ ದುರುಪಯೋಗ: ವಿಜಯೇಂದ್ರ ಆಕ್ರೋಶ

ಕಳೆದ ವರ್ಷ ವಯನಾಡಿನ ಮೇಪಾಡಿಯಲ್ಲಿ ಸಂಭವಿಸಿದ್ದ ಭೀಕರ ಭೂಕುಸಿತದಿಂದ ಅನೇಕ ಮನೆಗಳು ನಾಶವಾಗಿದ್ದವು. 250ಕ್ಕೂ ಜನ ಮೃತಪಟ್ಟು ಸಾವಿರಾರು ಜನ ಸಂಕಷ್ಟಕ್ಕೆ ಸಿಲುಕಿದ್ದರು. ಕರ್ನಾಟಕದ 6 ಮಂದಿ ಕೂಡ ದುರಂತದಲ್ಲಿ ಮೃತಪಟ್ಟಿದ್ದರು. ಕೇರಳ ಹಿಂದೆಂದೂ ಕಂಡರಿಯದ ಭೀಕರ ದುರಂತ ಅದಾಗಿತ್ತು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ