ಸೂರ್ಯಕುಮಾರ್ ಯಾದವ್ಗೆ ಅದೃಷ್ಟ ತಂದುಕೊಟ್ಟ ಕಾಪು ಮಾರಿಯಮ್ಮ: ಟಿ20 ವಿಶ್ವಕಪ್ ಗೆಲುವಿನ ಬೆನ್ನಲ್ಲೇ ವಿಶೇಷ ಪೂಜೆ
ಭಾರತ ಟಿ20 ವಿಶ್ವಕಪ್ ಗೆಲುವಿನ ನಾಯಕ ಸೂರ್ಯಕುಮಾರ್ ಯಾದವ್ ಪತ್ನಿ ಕುಟುಂಬಕ್ಕೂ ಉಡುಪಿಯ ಕಾಪು ಮಾರಿಯಮ್ಮ ದೇವಸ್ಥಾನಕ್ಕೂ ವಿಶೇಷ ನಂಟಿದೆ. SKY ಕ್ರಿಕೆಟ್ ಯಶಸ್ಸಿಗೆ ದೇವಿಯ ಅಶೀರ್ವಾದವೇ ಕಾರಣವೆಂದು ಹೇಳಲಾಗ್ತಿದ್ದು, ಇದಕ್ಕೆ ಪೂರಕವೆಂಬಂತೆ ದೇವಸ್ಥಾನಕ್ಕೆ ಭೇಟಿ ನೀಡಿದ ನಂತರವೇ ಸೂರ್ಯಕುಮಾರ್ಗೆ ನಾಯಕತ್ವ ಲಭಿಸಿತ್ತು. ಈಗ ಅವರ ನೇತೃತ್ವದಲ್ಲಿಯೇ ಭಾರತ ತಂಡ ಟಿ20 ವಿಶ್ವಕಪ್ ಗೆದ್ದಿರುವ ಹಿನ್ನೆಲೆಯಲ್ಲಿ ದೇವಸ್ಥಾನದಲ್ಲಿ ವಿಶೇಷ ಪೂಜೆಗೆ ಸಿದ್ಧತೆ ನಡೆದಿದೆ.

ಉಡುಪಿ, ಮಾರ್ಚ್ 10: ನ್ಯೂಜಿಲೆಂಡ್ ತಂಡದ ವಿರುದ್ಧ ಸೆಣೆಸಾಡಿ ಟಿ20 ವಿಶ್ವಕಪ್ನ ಭಾರತ ಕ್ರಿಕೆಟ್ ತಂಡ ಮತ್ತೊಮ್ಮೆ ತನ್ನ ಮುಡಿಗೇರಿಸಿಕೊಂಡಿದೆ. ಸತತ ಎರಡನೇ ಬಾರಿಗೆ ಕಪ್ ಗೆಲ್ಲುವ ಮೂಲಕ ಹೊಸ ದಾಖಲೆ ಬರೆದಿದೆ. ತಂಡದ ನಾಯಕನಾಗಿರುವ ಸೂರ್ಯಕುಮಾರ್ ಯಾದವ್ ಅವರಿಗೆ ಉಡುಪಿ ಜಿಲ್ಲೆಯ ಕಾಪು ಕ್ಷೇತ್ರದೊಂದಿಗೆ ವಿಶೇಷ ಭಕ್ತಿಭಾವದ ನಂಟಿದ್ದು, ಉಡುಪಿಯ ಅಳಿಯನ ಹೆಸರಲ್ಲಿ ವಿಶೇಷ ಪೂಜೆಗೆ ಕಾಪು ಕ್ಷೇತ್ರದಲ್ಲಿ ಸಿದ್ಧತೆ ಭರದಿಂದ ಸಾಗಿದೆ.
ಮಾರಿಯಮ್ಮನ ದರ್ಶನದ ಬಳಿಕ ಬದಲಾದ ಅದೃಷ್ಟ
ಸೂರ್ಯಕುಮಾರ್ ಯಾದವ್ ಅವರ ಪತ್ನಿ ದೇವಿಶಾ ಶೆಟ್ಟಿ ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಮೂಲದವರು. ಇವರ ಕುಟುಂಬ ಸದ್ಯ ಮುಂಬೈನಲ್ಲಿ ವಾಸವಾಗಿದೆ. ಆದರೆ ಕಾಪು ಹೊಸ ಮಾರಿಯಮ್ಮ ದೇವಸ್ಥಾನವು ಸೂರ್ಯಕುಮಾರ್ ಯಾದವ್ ಪತ್ನಿಯ ಕುಟುಂಬದ ಆರಾಧ್ಯ ಕ್ಷೇತ್ರವಾಗಿದೆ. ಸೂರ್ಯಕುಮಾರ್ ಯಾದವ್ ಮತ್ತು ದೇವಿಶಾ ಶೆಟ್ಟಿ ದಂಪತಿ ಈಗಾಗಲೇ ಎರಡು ಬಾರಿ ಕಾಪು ಮಾರಿಗುಡಿಗೆ ಭೇಟಿ ನೀಡಿ ದೇವಿಯ ಆಶೀರ್ವಾದ ಪಡೆದಿದ್ದಾರೆ. 2024ರ ಜುಲೈ 9ರಂದು ಅವರು ಕಾಪು ಮಾರಿಗುಡಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದರು. ದೇವಾಲಯಕ್ಕೆ ಕಂಬವನ್ನು ದಾನವಾಗಿ ನೀಡಿದ್ದರು. ಅದಾದ ನಂತರ ಕೇವಲ 9 ದಿನಗಳಲ್ಲಿ, ಜುಲೈ 18ರಂದು ಸೂರ್ಯಕುಮಾರ್ ಯಾದವ್ ಅವರನ್ನು ಭಾರತೀಯ ಟಿ20 ಕ್ರಿಕೆಟ್ ತಂಡದ ನಾಯಕನಾಗಿ ಘೋಷಿಸಲಾಗಿತ್ತು.
ಇದನ್ನೂ ಓದಿ: ಟಿ20 ವಿಶ್ವಕಪ್ ಗೆದ್ದು ಇತಿಹಾಸವನ್ನೇ ಬುಡಮೇಲು ಮಾಡಿದ ಟೀಂ ಇಂಡಿಯಾ
ದೇವಸ್ಥಾನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅರ್ಚಕರು, ಮುಂದಿನ ದಿನಗಳಲ್ಲಿ ಸೂರ್ಯಕುಮಾರ್ ಭಾರತೀಯ ತಂಡದ ನಾಯಕನಾಗಲೆಂದು ಆಶೀರ್ವಾದ ಮಾಡಿದ್ದರು. ದೇವಿಯ ಸನ್ನಿಧಿಯಲ್ಲಿ ಅವರಾಡಿದ್ದ ಮಾತು ಸತ್ಯವಾಗಿತ್ತು. ವಿಶ್ವಕಪ್ ಗೆಲುವಿನ ಬೆನ್ನಲ್ಲೇ ಇದೀಗ ಸೂರ್ಯಕುಮಾರ್ ಯಾದವ್ ದಂಪತಿ ಮತ್ತೆ ಕ್ಷೇತ್ರಕ್ಕೆ ಭೇಟಿ ನೀಡಬೇಕು ಎಂದು ದೇವಸ್ಥಾನದ ಪ್ರಮುಖರು ಸಂಕಲ್ಪ ಮಾಡಿಕೊಂಡಿದ್ದಾರೆ. ಇದೇ ವೇಳೆ ದೇವಿಗೆ ಬೆಲ್ಲ ಮತ್ತು ಸಕ್ಕರೆಯ ತುಲಾಭಾರ ನಡೆಸುವ ಸಂಕಲ್ಪವನ್ನೂ ಭಕ್ತರು ಮಾಡಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 11:49 am, Tue, 10 March 26