ಕಸ್ತೂರಿರಂಗನ್ ವರದಿ: ಜನರ ಸಮಸ್ಯೆ ಆಲಿಸಿದ ಸಿಎಂ; ಪಕ್ಷಭೇದ ಮರೆತು ಬೆಂಬಲ ಎಂದ ವಿಪಕ್ಷ ನಾಯಕರು!

ಉಡುಪಿ ಜಿಲ್ಲೆಯ ಹೆಬ್ರಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಇಂದು ಕಸ್ತೂರಿರಂಗನ್ ವರದಿಗೆ ಸಂಬಂಧಪಟ್ಟಂತೆ ಸಿಎಂ ಡಿಕೆ ಶಿವಕುಮಾರ್​ ಸಾರ್ವಜನಿಕರೊಂದಿಗೆ ನೇರವಾಗಿ ಸಭೆ ಮಾಡಿದರು. ಈ ವೇಳೆ ಕಸ್ತೂರಿ ರಂಗನ್ ವರದಿಯ ಕುರಿತು ಸಾರ್ವಜನಿಕ ಅಭಿಪ್ರಾಯ ಸಂಗ್ರಹಿಸಿದರು. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಕಸ್ತೂರಿರಂಗನ್ ವರದಿ: ಜನರ ಸಮಸ್ಯೆ ಆಲಿಸಿದ ಸಿಎಂ; ಪಕ್ಷಭೇದ ಮರೆತು ಬೆಂಬಲ ಎಂದ ವಿಪಕ್ಷ ನಾಯಕರು!
ಡಿಕೆ ಶಿವಕುಮಾರ್​​
Image Credit source: x/DKShivakumar
Edited By:

Updated on: Sep 18, 2026 | 8:41 PM

ಉಡುಪಿ, ಸೆಪ್ಟೆಂಬರ್​​ 18: ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ಬಳಿಕ ಸಿಎಂ ಡಿಕೆ ಶಿವಕುಮಾರ್​​, ಕಸ್ತೂರಿರಂಗನ್ ವರದಿಗೆ ಸಂಬಂಧಪಟ್ಟಂತೆ ಉಡುಪಿ ಜಿಲ್ಲೆಯ ಹೆಬ್ರಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸಾರ್ವಜನಿಕರೊಂದಿಗೆ ನೇರವಾಗಿ ಸಭೆ ಮಾಡಿದರು. ಈ ವೇಳೆ ಸಾರ್ವಜನಿಕರ ಅಭಿಪ್ರಾಯ ಹಾಗೂ ಅಹವಾಲುಗಳನ್ನು ಆಲಿಸಿದ ಸಿಎಂ, ಬಳಿಕ ಮಾತನಾಡಿ ‘ಈ ವಿಚಾರದಲ್ಲಿ ಜನರ ಅಭಿಪ್ರಾಯವೇ ನನ್ನ ಅಭಿಪ್ರಾಯವಾಗಬೇಕು ಎಂದು ಹೇಳಿದ್ದಾರೆ.

ಜನರ ಅಭಿಪ್ರಾಯವೇ ನನ್ನ ಅಭಿಪ್ರಾಯ ಎಂದ ಡಿಕೆ ಶಿವಕುಮಾರ್​​ 

ನಗರದ ಹೆಬ್ರಿಯಲ್ಲಿ ನಡೆದ ಸಮಾವೇಶದಲ್ಲಿ ಸಾರ್ವಜನಿಕ ಅಭಿಪ್ರಾಯ ಕೇಳಿದ ಬಳಿ ಭಾಷಣ ಮಾಡಿದ ಸಿಎಂ ಡಿಕೆ ಶಿವಕುಮಾರ್​, ‘ಕಸ್ತೂರಿ ರಂಗನ್ ವರದಿಯ ಕುರಿತು ವಿವರ ನೀಡಿದ್ದೀರಿ, ಸಮಸ್ಯೆಗಳ ಬಗ್ಗೆ ನನಗೆ ಮನವರಿಕೆಯನ್ನ ಮಾಡಿದ್ದೀರಿ. ಈ ಕುರಿತಾಗಿ ಅಧಿಕಾರಿಗಳ ಜೊತೆ ನಾನು ಚರ್ಚೆ ಮಾಡಿದ್ದೇನೆ. ಸೆ.27ರೊಳಗಾಗಿ ನಾನು ನನ್ನ ಅಭಿಪ್ರಾಯ ತಿಳಿಸಬೇಕು. ಇದು ಕೇವಲ ನನ್ನೊಬ್ಬನ ಅಭಿಪ್ರಾಯ ಆಗಬಾರದು, ಜನರ ಅಭಿಪ್ರಾಯವೇ ನನ್ನ ಅಭಿಪ್ರಾಯ ಆಗಬೇಕು’ ಎಂದರು.

ಸಿಎಂ ಡಿಕೆ ಶಿವಕುಮಾರ್​ ಟ್ವೀಟ್​

‘ತಜ್ಞರ ಸಮಿತಿ ಮಾಡಬೇಕು ಎಂದು ಸಲಹೆ ನೀಡಿದ್ದಾರೆ. ಕೇರಳದ ಮಾದರಿಯ ಬಗ್ಗೆಯೂ ನನಗೆ ಹೇಳಿದ್ದಾರೆ. ವಿಶೇಷ ಅಧಿವೇಶನದಲ್ಲಿ ಈ ಬಗ್ಗೆ ಚರ್ಚೆ ಮಾಡುತ್ತೇವೆ. ಅಧಿವೇಶನದ ಮೊದಲ ದಿನವೇ ಈ ಬಗ್ಗೆ ಚರ್ಚಿಸ್ತೇವೆ. ಪ್ರತ್ಯೇಕವಾಗಿ ಸರ್ವೆ ಮಾಡಲು ಮನವಿ ಮಾಡಿದ್ದೀರಿ. ಈ ಬಗ್ಗೆ ಕೂಡ ಅಧಿಕಾರಿಗಳ ಜೊತೆ ಚರ್ಚೆ ಮಾಡಿ ತಿಳಿಸುತ್ತೇನೆ. ಚಿಕ್ಕಮಗಳೂರು, ಹಾಸನ, ಶಿವಮೊಗ್ಗಕ್ಕೆ ಹೋಗುತ್ತೇನೆ. ಅಲ್ಲಿಯ ಅಭಿಪ್ರಾಯ ಪಡೆಯುತ್ತೇನೆ’ ಎಂದು ಡಿಕೆ ಶಿವಕುಮಾರ್​ ಹೇಳಿದ್ದಾರೆ.

ಜನವಸತಿ ಪ್ರದೇಶಗಳನ್ನು ಕೈಬಿಟ್ಟು ಭೌತಿಕ ಸರ್ವೆ ನಡೆಸಿ: ಮಾಜಿ ಸಚಿವ ಸುನಿಲ್ ಕುಮಾರ್

ಈ ಕುರಿತಾಗಿ ಮಾಜಿ ಸಚಿವ ಸುನಿಲ್ ಕುಮಾರ್​ ಪ್ರತಿಕ್ರಿಯಿಸಿದ್ದು, ‘2013ರ ಮುಂಚೆಯೇ ವಿವಿಧ ಅರಣ್ಯ ಕಾನೂನುಗಳಿಂದ ನಮ್ಮ ಎರಡು ಜಿಲ್ಲೆಗಳು ತತ್ತರಿಸಿ ಹೋಗಿವೆ. ಈಗ ಕಸ್ತೂರಿರಂಗನ್ ವರದಿ ಮತ್ತಷ್ಟು ಆತಂಕ ಸೃಷ್ಟಿಸಿದೆ. ಕೇಂದ್ರ ಸರ್ಕಾರ 7ನೇ ಅಧಿಸೂಚನೆ ಹೊರಡಿಸಿದ್ದು, ತಿರಸ್ಕರಿಸಲು ಸೂಕ್ತ ಹಾಗೂ ಸ್ಪಷ್ಟ ಕಾರಣಗಳನ್ನು ನೀಡಬೇಕಿದೆ. ಕೇರಳ ಸರ್ಕಾರ ವ್ಯವಸ್ಥಿತವಾಗಿ ಕೆಲಸ ಮಾಡಿ ವಿಸ್ತೀರ್ಣವನ್ನು 13 ಸಾವಿರ ಕಿ.ಮೀ.ನಿಂದ 9 ಸಾವಿರ ಕಿ.ಮೀ.ಗೆ ಇಳಿಸಿಕೊಂಡಿದೆ. ಅದೇ ರೀತಿ ಇಲ್ಲೂ ಪ್ರತಿ ಗ್ರಾಮದಲ್ಲೂ ಸಮಿತಿ ರಚಿಸಿ ಭೌತಿಕ ಸರ್ವೆ ನಡೆಸಬೇಕು. ಕೇವಲ ಅರಣ್ಯ ಪ್ರದೇಶವನ್ನು ಮಾತ್ರ ಕಸ್ತೂರಿರಂಗನ್ ವರದಿ ವ್ಯಾಪ್ತಿಗೆ ತಂದು, ಜನವಸತಿ ಪ್ರದೇಶಗಳನ್ನು ಸಂಪೂರ್ಣವಾಗಿ ಕೈಬಿಡಬೇಕು’ ಎಂದು ಆಗ್ರಹಿಸಿದರು.

ರಾಜ್ಯದ ಹಿತದೃಷ್ಟಿಯಿಂದ ಪಕ್ಷಭೇದ ಮರೆತು ಒಟ್ಟಾಗೋಣ: ಕೋಟ ಶ್ರೀನಿವಾಸ ಪೂಜಾರಿ

ಇನ್ನು ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ‘ಸಮಾಜದ ಹಿತದ ಪ್ರಶ್ನೆ ಬಂದಾಗ ಎಲ್ಲಾ ಪಕ್ಷಗಳು ಒಟ್ಟಾಗಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪರಸ್ಪರ ಆರೋಪ ಮಾಡಿಕೊಳ್ಳುವುದು ಸರಿಯಲ್ಲ. ಪ್ರಸ್ತುತ ರಬ್ಬರ್, ಕಾಫಿ, ಟೀ ತೋಟಗಳನ್ನು ಕಾಡು ಎಂದು ಪರಿಗಣಿಸಲಾಗಿದೆ. ಕೇರಳದಲ್ಲಿ ಉಮರ್ ಸಮಿತಿಯ ಮೂಲಕ ಭೌತಿಕ ಸರ್ವೆ ನಡೆಸಿ, ಕಾಡು ಮತ್ತು ನಾಡನ್ನು ಬೇರ್ಪಡಿಸಿ ಬಫರ್ ಝೋನ್ ಸರಿಯಾಗಿ ಗುರುತಿಸಲಾಗಿದೆ. ಕೇಂದ್ರ ಸರ್ಕಾರವು ಕೇರಳದ ಆ ವರದಿಯನ್ನು ಒಪ್ಪಿಕೊಂಡಿದೆ. ಅದೇ ಮಾದರಿಯಲ್ಲಿ ರಾಜ್ಯದಲ್ಲೂ ತಜ್ಞರ ಸಮಿತಿ ರಚಿಸಿ ಕೇಂದ್ರಕ್ಕೆ ವರದಿ ಕಳುಹಿಸಿದರೆ ಖಂಡಿತ ಪರಿಹಾರ ಸಿಗಲಿದೆ. ರಾಜ್ಯದ ಹಿತದೃಷ್ಟಿಯಿಂದ ನಾವು ಯಾವುದೇ ರಾಜಕಾರಣ ಮಾಡುವುದಿಲ್ಲ. ಮುಖ್ಯಮಂತ್ರಿಗಳು ಕೈಗೊಳ್ಳುವ ಎಲ್ಲಾ ಅಭಿವೃದ್ಧಿ ಕೆಲಸಗಳಿಗೆ ಸಂಪೂರ್ಣ ಸಹಕಾರ ನೀಡುತ್ತೇವೆ’ ಎಂದಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 8:40 pm, Fri, 18 September 26

Loading...
Unable to load recommendations.
Follow Us