Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗೋಂದೋಲು ಆಚರಣೆ: ಬಡವರ ಹಬ್ಬಗಳು ಶ್ರೀಮಂತವಾಗಿರುತ್ತವೆ! ಇಂತಹ ಆಚರಣೆಗಳೇ ನೆಲದ ಸಾಂಸ್ಕೃತಿಕ ಶ್ರೀಮಂತಿಕೆಗೆ ಆಧಾರ

ಇವರೆಲ್ಲಾ ದೂರದ ತುಳಜಾಪುರದಿಂದ ಸಾವಿರ ವರ್ಷಗಳ ಹಿಂದೆಯೇ ವಲಸೆ ಬಂದವರು. ಊರು ಬಿಟ್ಟು ಬಂದವರು, ತಮ್ಮ ಜೊತೆಗೆ ಶ್ರೀಮಂತ ಜನಪದ ಸಂಸ್ಕೃತಿಯನ್ನು ಹೊತ್ತು ತಂದಿದ್ದಾರೆ. ಅದು ಇವತ್ತಿಗೂ ಜೀವಂತವಾಗಿದೆ ಅನ್ನೋದೇ ಸೋಜಿಗ.

ಗೋಂದೋಲು ಆಚರಣೆ: ಬಡವರ ಹಬ್ಬಗಳು ಶ್ರೀಮಂತವಾಗಿರುತ್ತವೆ! ಇಂತಹ ಆಚರಣೆಗಳೇ ನೆಲದ ಸಾಂಸ್ಕೃತಿಕ ಶ್ರೀಮಂತಿಕೆಗೆ ಆಧಾರ
ಗೋಂದೋಲು ಆಚರಣೆ: ಬಡವರ ಹಬ್ಬಗಳು ಶ್ರೀಮಂತವಾಗಿರುತ್ತವೆ!
Follow us
TV9 Web
| Updated By: ಸಾಧು ಶ್ರೀನಾಥ್​

Updated on: Jan 31, 2023 | 4:28 PM

ಬಡವರ ಹಬ್ಬಗಳು ಆಚರಣೆಯಲ್ಲಿ ಶ್ರೀಮಂತವಾಗಿರುತ್ತೆ. ಇಂತಹ ಆಚರಣೆಗಳೇ ಆ ನೆಲದ ಸಾಂಸ್ಕೃತಿಕ ಶ್ರೀಮಂತಿಕೆಗೆ ಕಾರಣವಾಗುತ್ತೆ. ತುಳಜಾಪುರದಿಂದ ಶತಶತಮಾನಗಳ ಹಿಂದೆ ಕರ್ನಾಟಕ ಕರಾವಳಿಗೆ ವಲಸೆ ಬಂದ ಮರಾಠ ಜನಾಂಗದವರ (marathas) ಗೋಂದೊಲು ಹಬ್ಬವೂ ಒಂದು ವಿಶಿಷ್ಟ ಆಚರಣೆ, ಕರಾವಳಿಯ ಸಂಸ್ಕೃತಿಯೊಂದಿಗೆ ಬೆರೆತು ಹೋಗಿರುವ ಗೋಂದೋಲು ಹಬ್ಬದ (Udupi Gondolu festival celebration) ಒಂದು ಝಲಕ್ ನೋಡಿ.

ಹೌದು ನಾಗಸ್ವರದ ಲಯಕ್ಕೆ ಕುಪ್ಪಳಿಸಿ ಹೆಜ್ಜೆ ಹಾಕುವ ವೇಷಧಾರಿಗಳು, ಜೊತೆಯಾಗಿ ಕುಣಿಯುವ ಭಕ್ತ ವರ್ಗ. ಇವರು ದುರ್ಗಾ ದೇವಿಯ ಆರಾಧಕರು. ಕರಾವಳಿ ಭಾಗದಲ್ಲಿ ನಡೆಯುವ ಈ ಆಚರಣೆಯನ್ನು ಗೋಂದೋಲು ಎನ್ನುತ್ತಾರೆ. ಕರಾವಳಿಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಮರಾಠಿ ಜನಾಂಗದವರು ಇದ್ದಾರೆ.

ಇವರೆಲ್ಲಾ ದೂರದ ತುಳಜಾಪುರದಿಂದ ಸಾವಿರ ವರ್ಷಗಳ ಹಿಂದೆಯೇ ವಲಸೆ ಬಂದವರು. ಊರು ಬಿಟ್ಟು ಬಂದವರು, ತಮ್ಮ ಜೊತೆಗೆ ಶ್ರೀಮಂತ ಜನಪದ ಸಂಸ್ಕೃತಿಯನ್ನು ಹೊತ್ತು ತಂದಿದ್ದಾರೆ. ಅದು ಇವತ್ತಿಗೂ ಜೀವಂತವಾಗಿದೆ ಅನ್ನೋದೇ ಸೋಜಿಗ. ಇಂದಿಗೂ ಮಳೆಗಾಲಕ್ಕೆ ಮುನ್ನ ಮರಾಠಿ ಜನಾಂಗದ ಗದ್ದುಗೆಗಳಲ್ಲಿ, ಮನೆಗಳಲ್ಲಿ ಈ ಗೋಂದೋಲು ಆಚರಣೆ ನಡೆಯುತ್ತೆ. ಗದ್ದುಗೆಗಳಲ್ಲಿ ಸಾಮೂಹಿಕ ಸ್ವರೂಪದ ಆರಾಧನೆ ನಡೆದರೆ, ಹರಕೆ ಹೊತ್ತವರು ಮನೆಮನೆಗಳಲ್ಲಿ ಗೋಂದೋಲು ಏರ್ಪಡಿಸುತ್ತಾರೆ.

ಜೀವನದ ಕಷ್ಟ ನಷ್ಟಗಳ ಸಂದರ್ಭದಲ್ಲಿ ಗೋಂದೋಲು ಹರಕೆ ಹೊತ್ತುಕೊಳ್ಳುವುದು ಸಂಪ್ರದಾಯ. ಕತ್ತಲು ಕವಿಯುತ್ತಿದ್ದಂತೆ ಈ ನರ್ತನ ಸೇವೆ ಆರಂಭವಾಗುತ್ತೆ. ಸುಶ್ರಾವ್ಯ ನಾಗಸ್ವರಕ್ಕೆ ನಾನಾ ಬಗೆಯ ವೇಷ ತೊಟ್ಟ ಮರಾಠಿ ಕಲಾವಿದರು ಕುಣಿಯುತ್ತಾರೆ. ಕೈಯಲಿ ಪಂಚ ದೀವಟಿಗೆಯ ಬೆಳಕನ್ನು ಹಿಡಿದು ಹರಕೆ ಹೊತ್ತವರು, ಊರ ಜನ ಸಾಥಿಯಾಗುತ್ತಾರೆ. ನರ್ತನದಿಂದ ದೇವಿಯನ್ನು ಸಂಪ್ರೀತಗೊಳಿಸುವುದು ವಿಶಿಷ್ಟ ಪದ್ಧತಿ.

ಕರಾವಳಿಯ ಯಕ್ಷಗಾನ ಮತ್ತು ಕೋಲದ ಪ್ರಭಾವ ಈ ಆಚರಣೆಯಲ್ಲಿ ಹೇರಳವಾಗಿದ್ದರೂ, ಮರಾಠಿಗರು ತಮ್ಮತನ ಉಳಿಸಿಕೊಂಡಿದ್ದಾರೆ. ಸಂಪ್ರದಾಯಗಳ ನೆಪದಲ್ಲಾದರೂ ಕುಟುಂಬಿಕರು, ಸ್ನೇಹಿತರು ಸೇರೋದು, ದೇವರ ನೆಪದಲ್ಲಿ ಸಂಬಂಧಗಳನ್ನು ಗಟ್ಟಿಗೊಳಿಸೋದು ಈ ಹಬ್ಬಗಳ ವಿಶೇಷ. ಹಾಗಾಗಿಯೇ ತಲೆಮಾರಿನಿಂದ ತಲೆಮಾರಿಗೆ ಈ ಗೋಂದೋಲು ಸಂಸ್ಕೃತಿ ಸಾಗಿ ಬಂದಿದೆ ಎನ್ನುತ್ತಾರೆ ತುಳು ಸಾಂಸ್ಕೃತಿಕ ಚಿಂತಕರಾದ ರಾಜೇಶ್ ಶೆಟ್ಟಿ.

ಒಟ್ಟಾರೆಯಾಗಿ ಕರಾವಳಿಯು ಭೌಗೋಳಿಕವಾಗಿ ಎಷ್ಟು ವಿಭಿನ್ನವಾಗಿದೆಯೋ ಅಷ್ಟೇ ವಿಭಿನ್ನವಾದ ಆಚರಣೆಗಳನ್ನು ಇಲ್ಲಿ ನೋಡಬಹುದಾಗಿದೆ. ದೈವ ದೇವರಗಳ ಹೆಸರಿನಲ್ಲಿ ನಡೆಯುವ ಈ ಆಚರಣೆಗಳಿಗೆ ಇಂದು ಯುವ ಜನಾಂಗ ಕೂಡ ಮತ್ತೆ ಆಕರ್ಷಿತರಾಗುತ್ತಿರುವುದು ಇಲ್ಲಿನ ಮಣ್ಣಿನ ಶಕ್ತಿ ಕಾರಣ ಎಂದರೆ ತಪ್ಪಾಗಲಾರದು

ವರದಿ: ದಿನೇಶ್ ಯಲ್ಲಾಪುರ್, ಟಿವಿ9, ಉಡುಪಿ